ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ನಾಮನಿರ್ದೇಶನದ ಬಗ್ಗೆ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.
ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುತ್ತಿದ್ದಂತೆಯೇ ಎಲ್ಲಾ ಕಡೆ ಅವರು ನ್ಯಾಯಮೂರ್ತಿಗಳಾಗಿದ್ದಾಗ ಮೋದಿ ಸರ್ಕಾರಕ್ಕೆ ಮಾಡಿದ ಸಹಾಯಗಳಿಗೆ ಇದು ಪ್ರತಿಫಲ ಎಂಬರ್ಥದಲ್ಲಿ ಟೀಕೆಗಳನ್ನು ಮಾಡಿದ್ದರು.
“ಬಹುಶಃ ನಾಳೆ ದೆಹಲಿಗೆ ಹೋಗುತ್ತೇನೆ. ಮೊದಲು ಪ್ರಮಾಣವಚನ ಸ್ವೀಕರಿಸುತ್ತೇನೆ, ನಂತರ ನಾನು ಇದನ್ನು ಏಕೆ ಒಪ್ಪಿಕೊಂಡೆ ಎಂದು ಮಾಧ್ಯಮಗಳೊಂದಿಗೆ ವಿವರವಾಗಿ ಮಾತನಾಡುತ್ತೇನೆ …” ಎಂದು ರಂಜನ್ ಗೊಗೊಯ್ ಅಸ್ಸಾಂನ ಗುವಾಹಟಿಯಲ್ಲಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸುಮಾರು 13 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ ಗೊಗೊಯ್ ಕಳೆದ ವರ್ಷ ನವೆಂಬರ್ನಲ್ಲಿ ನಿವೃತ್ತರಾಗಿದ್ದರು.
2018 ರ ಜನವರಿಯಲ್ಲಿ ದೀಪಕ್ ಮಿಶ್ರಾ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಲ್ಲಿ ಗೊಗೊಯ್ ಕೂಡಾ ಸೇರಿದ್ದರು. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಆಯ್ದ ಆದ್ಯತೆಯ ನ್ಯಾಯಾಧೀಶರಿಗೆ ಪ್ರಕರಣಗಳ ನಿಯೋಜನೆ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಕಿರಿಯ ನ್ಯಾಯಾಧೀಶರಿಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮತ್ತು ಕಲಾವಿದರು ಪ್ರಾಬಲ್ಯ ಹೊಂದಿರುವ ರಾಜ್ಯಸಭೆಗೆ ಇದುವರೆಗೆ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನಾಮಕರಣ ಮಾಡಿದ ಉದಾಹರಣೆಯಿಲ್ಲ.