ಮರದ ಕೆಳಗೆ ಹಾಸಿಗೆಯ ಮೇಲೆ ಮಲಗಿರುವ ಕೊರೊನಾ ಸೋಂಕಿತ ರೋಗಿಗಳು, ಮರದ ಕೊಂಬೆಯಿಂದ ನೇತಾಡುವ ಗ್ಲೂಕೋಸ್ ಬಾಟಲ್ಗಳು, ಸುತ್ತಲೂ ಮೇಯುತ್ತಿರುವ ಹಸುಗಳು, ನೆಲದ ಮೇಲೆ ಅಲ್ಲಲ್ಲಿ ಬಿದ್ದಿರುವ ಸಿರಂಜ್ಗಳು ಮತ್ತು ಖಾಲಿ ಔಷಧಿ ಬಾಟಲ್ಗಳು…ಇಂತಹ ಒಂದು ದೃಶ್ಯಕ್ಕೆ ಸಾಕ್ಷಿಯಾಗಿರುವುದು ಉತ್ತರ ಪ್ರದೇಶದ ಹಳ್ಳಿ.
ಕೊರೊನಾ ತೀವ್ರವಾಗಿ ಆವರಿಸಿರುವ ಉತ್ತರ ಪ್ರದೇಶದಲ್ಲಿ ಹಳ್ಳಿಗಳ ಸ್ಥಿತಿ ನಿಜಕ್ಕೂ ದಾರುಣವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ 90 ನಿಮಿಷಗಳ ಪ್ರಯಾಣದ ದೂರವಿರುವ ಮೇವ್ಲಾ ಗೋಪಾಲ್ಗಢದಲ್ಲಿ ವೈದ್ಯರು ಮತ್ತು ಆರೋಗ್ಯ ಸೌಲಭ್ಯ ಯಾವುದೂ ಇಲ್ಲ.
ಈ ಹಳ್ಳಿಗೆ ಹತ್ತಿರದಲ್ಲಿ ಸರ್ಕಾರಿ ಆಸ್ಪತ್ರೆ ಇದೆ ಆದರೆ ಅದರಲ್ಲಿ ಕೊರೊನಾ ಸೋಂಕಿತರಿಗೆ ಹಾಸಿಗೆಗಳು ಲಭ್ಯವಿಲ್ಲ ಎನ್ನಲಾಗಿದೆ. ಇತ್ತ ಹಳ್ಳಿಯ ಗ್ರಾಮಸ್ಥರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ತಾವು ಆರ್ಥಿಕವಾಗಿ ಗಟ್ಟಿಯಾಗಿಲ್ಲ ಎಂದು ಹೇಳುತ್ತಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಒಂದೇ ಹಳ್ಳಿಯಲ್ಲಿ ತಿಂಗಳಲ್ಲಿ 60ಕ್ಕೂ ಹೆಚ್ಚು ಸಾವು, ಕಡೆ ಪಕ್ಷ ಕೊರೊನಾ ಟೆಸ್ಟ್ ಕೂಡ ಮಾಡಿಸದ ಅಧಿಕಾರಿಗಳು!
ಸರ್ಕಾರಿ ವೈದ್ಯರು ಇಲ್ಲ, ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಆಗದ ಇಲ್ಲಿನ ಜನರಿಗೆ ಹಳ್ಳಿಯ ವೈದ್ಯರೇ ತೆರೆದ ಚಿಕಿತ್ಸಾಲಯವನ್ನು (open-air clinic) ಸ್ಥಾಪಿಸಿದ್ದಾರೆ. ಅಲ್ಲಿ ಈ ವೈದ್ಯರು ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಗ್ಲೂಕೋಸ್ ಮತ್ತು ಇತರ ಚಿಕಿತ್ಸೆಗಳನ್ನು ನೀಡುತ್ತಾರೆ.
ಔಷಧೀಯ ಗುಣಗಳಿಗೆ ಹೆಸರುವಾಸಿಯಾದ ಬೇವಿನ ಮರದ ಕೆಳಗೆ ಮಲಗಿರುವುದು ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ. ಈ ನಂಬಿಕೆಗೆ ಅಥವಾ ಇತರ ಕೆಲವು ಪರಿಹಾರಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
ಇದನ್ನೂ ಓದಿ: ‘ಭಾರತದಲ್ಲಿ ಕೊರೊನಾ ಇಳಿಮುಖ’- ಅಂಕಿ ಅಂಶ ವಿಶ್ವಾಸಾರ್ಹವಲ್ಲವೆಂದ WHO ವಿಜ್ಞಾನಿ
ಕೆಲವು ದಿನಗಳ ಹಿಂದೆ ಜ್ವರದಿಂದ ತಮ್ಮ 74 ವರ್ಷದ ತಂದೆಯನ್ನು ಕಳೆದುಕೊಂಡಿರುವ ಗ್ರಾಮಸ್ಥ ಸಂಜಯ್ ಸಿಂಗ್, ತನ್ನ ತಂದೆಗೆ ಕೊರೊನಾ ಟೆಸ್ಟ್ ಮಾಡಲಿಲ್ಲ. ಜ್ವರ ಬಂದು ಎರಡು ದಿನಗಳಲ್ಲಿ ನಿಧನರಾದರು. ಜನರು ಸಾಯುತ್ತಿದ್ದಾರೆ. ಆದರೆ, ನಮ್ಮನ್ನು ನೋಡಿಕೊಳ್ಳಲು ಇಲ್ಲಿ ಯಾರೂ ಇಲ್ಲ” ಎಂದು ಹೇಳಿದ್ದಾರೆ.
“ಸತ್ಯವೇನೆಂದರೇ, ಹಳ್ಳಿಯಲ್ಲಿ ಯಾವುದೇ ಕೊರೊನಾ ಪರೀಕ್ಷೆ ನಡೆದಿಲ್ಲ. ನಾವು ಟೆಸ್ಟ್ ಮಾಡಿಸಲು ಪ್ರಯತ್ನಿಸಿದ್ದೇವೆ. ಆದರೆ ಅಧಿಕಾರಿಗಳು ಸಾಕಷ್ಟು ಸಿಬ್ಬಂದಿ ಇಲ್ಲ ಎಂದು ನಮಗೆ ತಿಳಿಸಿದ್ದಾರೆ” ಎಂದು ಗ್ರಾಮದ ಮಾಜಿ ಮುಖ್ಯಸ್ಥ 48 ವರ್ಷದ ಯೋಗೇಶ್ ತಲನ್ ಮಾಹಿತಿ ನೀಡಿದ್ದಾರೆ.
ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಮಾಡಿದ ಭಾಷಣದಲ್ಲಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿದೆ ಮತ್ತು ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಎಂದು ಜನರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ಕಾಣಿಸದಂತೆ ಸ್ಮಶಾನಕ್ಕೆ ಶೀಟ್ ಗೋಡೆ ಹಾಕಿಸಿದ ಉತ್ತರ ಪ್ರದೇಶ ಸರ್ಕಾರ!