ಲೈಂಗಿಕ ಕಿರುಕುಳದ ಆರೋಪಿ, ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ)ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಭಾಗವಾಗಿ ತನ್ನ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಕುಸ್ತಿಪಟು ವಿನೇಶ್ ಫೋಗಟ್ ಘೋಷಿಸಿದ್ದಾರೆ.
ಕುಸ್ತಿ ಫೆಡರೇಶನ್ಗೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಬೇಸರಗೊಂಡು ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ಮತ್ತೊಬ್ಬ ಕುಸ್ತಿಪಟು ಬಜರಂಗ್ ಪೂನಿಯಾ ತನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಇನ್ನೋರ್ವ ಕುಸ್ತಿಪಟು ವಿರೇಂದರ್ ಸಿಂಗ್ ಕೂಡ ತನ್ನ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುತ್ತೇನೆ ಎಂದಿದ್ದಾರೆ. ಈ ಬೆನ್ನಲ್ಲೇ ವಿನೇಶ್ ಫೋಗಟ್ ಕೂಡ ಪ್ರಶಸ್ತಿ ಮರಳಿಸುವ ಘೋಷಣೆ ಮಾಡಿದ್ದಾರೆ.
ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನದ ಪದಕ ಗೆದ್ದಿರುವ ವಿನೇಶ್ ಫೋಗಟ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾವನಾತ್ಮಕ ಬಹಿರಂಗ ಪತ್ರ ಬರೆದಿದ್ದು, “ಮಹಿಳಾ ಕುಸ್ತಿಪಟುಗಳು ಸರ್ಕಾರಿ ಜಾಹೀರಾತಿಗಾಗಿ ಮಾತ್ರ ಸೀಮಿತರಾ? ಎಂದು ಪ್ರಶ್ನಿಸಿದ್ದಾರೆ. ತನ್ನ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ” ಎಂದು ಹೇಳಿರುವುದಾಗಿ ಎನ್ಡಿವಿ ವರದಿ ಮಾಡಿದೆ.
ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ವಿನೇಶ್ ಫೋಗಟ್, “ನಾನು ನನ್ನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತೇನೆ. ನನ್ನನ್ನು ಈ ಸ್ಥಿತಿಗೆ ತಂದ ಸರ್ವಶಕ್ತನಿಗೆ ತುಂಬಾ ಧನ್ಯವಾದಗಳು.” ಎಂದು ಬರೆದುಕೊಂಡಿದ್ದಾರೆ.
मैं अपना मेजर ध्यानचंद खेल रत्न और अर्जुन अवार्ड वापस कर रही हूँ।
इस हालत में पहुँचाने के लिए ताकतवर का बहुत बहुत धन्यवाद 🙏 pic.twitter.com/KlhJzDPu9D
— Vinesh Phogat (@Phogat_Vinesh) December 26, 2023
ಖ್ಯಾತ ಕುಸ್ತಿಪಟುಗಳು ಒಬ್ಬರ ಹಿಂದೆ ಒಬ್ಬರಂತೆ ಪ್ರಶಸ್ತಿ ಹಿಂದಿರುಗಿಸುತ್ತಿರುವ ನಡುವೆ ಕೇಂದ್ರ ಕ್ರೀಡಾ ಸಚಿವಾಲಯ ಡಬ್ಲ್ಯುಎಫ್ಐನ ನೂತನ ಆಡಳಿತ ಮಂಡಳಿಯನ್ನು ವಜಾಗೊಳಿಸಿದೆ ಎಂದು ಸುದ್ದಿಯಾಗಿದೆ. ಆದರೆ, ಕೇಂದ್ರ ಸರ್ಕಾರ ಸುಳ್ಳು ಹೇಳ್ತಿದೆ. ಡಬ್ಲ್ಯುಎಫ್ಐ ಆಡಳಿತ ಮಂಡಳಿ ಅಮಾನತ್ತಾಗಿಲ್ಲ. ಗೊಂದಲ ಸೃಷ್ಟಿಸಲು ಸರ್ಕಾರ ಹೀಗೆ ಹೇಳ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ : ನಿರ್ಮಲಾ ಸೀತಾರಾಮನ್, ಆರ್ಬಿಐ ಗವರ್ನರ್ ರಾಜೀನಾಮೆಗೆ ಒತ್ತಾಯಿಸಿ ಬಾಂಬ್ ಬೆದರಿಕೆ