ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ ಬಳಿಕ ತಮ್ಮ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ದೇಶದ ರೈತರು ಹಾಗೂ ಸಾರ್ವಜನಿಕರಿಗೆ ಕಾಮನ್ವೆಲ್ತ್ ಕ್ರಿಡಾಕೂಟದ ಚಿನ್ನದ ಪದಕ ವಿಜೇತ ಬಜರಂಗ್ ಪುನಿಯಾ ವಿನಂತಿ ಮಾಡಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದನೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ಒಬ್ಬ ಅಪ್ರಾಪ್ತ ಸೇರಿದಂತೆ ಏಳು ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಏಪ್ರಿಲ್ 23ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆ(ಬುಧವಾರ) ರಾತ್ರಿ 11 ಗಂಟೆಯ ಸುಮಾರಿಗೆ ಜಂತರ್ ಮಂತರ್ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳು ತಮ್ಮ ರಾತ್ರಿ ತಂಗಲು ಮಡಚುವ ಹಾಸಿಗೆಗಳನ್ನು ತರುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಆಗ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಆ ಬಗ್ಗೆ ವಿಚಾರಣೆ ಮಾಡಲು ಪ್ರಾರಂಭಿಸಿದರು.
ಕುಸ್ತಿಪಟುಗಳ ಪ್ರಕಾರ, ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ಮಹಿಳಾ ಕುಸ್ತಿಪಟುಗಳನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತ ಬಜರಂಗ್ ಪೊನಿಯಾ ಮಾತನಾಡಿ, ರೈತರು ಮತ್ತು ಸಾರ್ವಜನಿಕರು ಜಂತರ್ ಮಂತರ್ಗೆ ಬಂದು ತಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಬಜರಂಗ್ ಪುನಿಯಾ ಕೇಳಿಕೊಂಡರು.
”ಎಲ್ಲರೂ ಬೆಳಿಗ್ಗೆಯೊಳಗೆ ದೆಹಲಿ ತಲುಪಲು ನಾನು ವಿನಂತಿಸುತ್ತೇನೆ. ಇದು ಸರಿಯಾದ ಸಮಯ, ಈಗಲ್ಲದಿದ್ದರೆ, ನಂತರ ಯಾವಾಗ ಒಟ್ಟಾಗೋದು? ಇದು ನಮ್ಮ ಹೆಣ್ಣುಮಕ್ಕಳ ಘನತೆಯ ಪ್ರಶ್ನೆಯಾಗಿದೆ. ಬ್ರಿಜ್ ಭೂಷಣ್ (ಡಬ್ಲ್ಯುಎಫ್ಐ ಅಧ್ಯಕ್ಷ) ನಂತಹ ಜನರು ಅಪರಾಧಿಯಾಗಿದ್ದರೂ, ಅವರು ಸ್ವತಂತ್ರವಾಗಿ ತಿರುಗುತ್ತಿದ್ದಾರೆ. ಆದರೆ ನಮಗೆ ಈ ಶಿಕ್ಷೆ ನೀಡುತ್ತಿದ್ದಾರೆ” ಎಂದು ಬಜರಂಗ್ ಹೇಳಿದರು.
ಘಟನೆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವಂತೆ ಕೇಳಿದಾಗ, ”ಸಿಸಿಟಿವಿ ಕ್ಯಾಮೆರಾಗಳು ಇಲ್ಲಿ ಇರುತ್ತವೆ, ಅದರ ದೃಶ್ಯಾವಳಿಗಳು ಸ್ಪಷ್ಟಪಡಿಸುತ್ತವೆ” ಎಂದು ಬಜರಂಗ್ ಹೇಳಿದರು.
ದೆಹಲಿ ಪೊಲೀಸರು ಹೇಳುವಂತೆ ಎಎಪಿ ನಾಯಕ ಸೋಮನಾಥ್ ಭಾರ್ತಿ ಅವರು ಮಡಚುವ ಹಾಸಿಗೆಗಳನ್ನು ತಂದಿದ್ದಾರೆಯೇ? ಎಂದು ಪತ್ರಕರ್ತರು ಪ್ರಶ್ನಿಸಿದಾಗ, ”ನೀವು ಸಿಸಿಟಿವಿ ದೃಶ್ಯಾವಳಿಗಳನ್ನೇ ನೋಡಿ, ಆ ಘಟನೆ ನಡೆದಾಗ ಅವರು ಇರಲಿಲ್ಲ ಎಂಬುದು ನಿಮಗೆ ಅರ್ಥವಾಗುತ್ತದೆ. ನಾವೇ ಹಾಸಿಗೆಗಳನ್ನು ಆರ್ಡರ್ ಮಾಡಿದ್ದೇವು, ಅವುಗಳನ್ನು ಒಳಗೆ ತರುತ್ತಿದ್ದೆವು” ಎಂದು ಉತ್ತರಿಸಿದರು.
ಈ ವೇಳೆ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತರು ವಿನೇಶ್ ಫೋಗಟ್ ಮಾತನಾಡಿ, ”ಮಹಿಳಾ ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಪುರುಷ ಅಧಿಕಾರಿಗಳು ನಮ್ಮನ್ನು ಹೇಗೆ ತಳ್ಳುತ್ತಾರೆ. ನಾವು ಅಪರಾಧಿಗಳಲ್ಲ, ಅಂತಹ ವರ್ತನೆ ತೋರಲು ನಾವು ಅರ್ಹರಲ್ಲ. ಕುಡಿದು ಬಂದ ಪೊಲೀಸ್ ಅಧಿಕಾರಿ ನನ್ನ ಸಹೋದರನಿಗೆ ಹೊಡೆದರು” ಎಂದು ಹೇಳಿದರು.
”ನಿಜಕ್ಕೂ ಪೊಲೀಸರ ವರ್ತನೆಯಿಂದ ನಮಗೆ ಆಘಾತವಾಗಿದೆ. ಏಕೆಂದರೆ ನಾವು ಅಪರಾಧಿಗಳಲ್ಲ ಮತ್ತು ಅಂತಹ ಅಗೌರವಕ್ಕೆ ಅರ್ಹರಲ್ಲ” ಎಂದರು.
”ನೀವು ನಮ್ಮನ್ನು ಕೊಲ್ಲಲು ಬಯಸಿದರೆ, ನಮ್ಮನ್ನು ಕೊಲ್ಲಿ” ಎಂದು ಅಳುತ್ತಾ ವಿನೇಶ್ ಫೋಗಟ್ ತಡರಾತ್ರಿಯ ಮಾಧ್ಯಮ ಸಂವಾದದಲ್ಲಿ ಹೇಳಿದರು.
”ನಾವು ಈ ದಿನ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ? ನಾವು ನಮ್ಮ ಆಹಾರವನ್ನು ಸಹ ತಿನ್ನಲಿಲ್ಲ. ಪ್ರತಿಯೊಬ್ಬ ಪುರುಷನಿಗೆ ಮಹಿಳೆಯರನ್ನು ನಿಂದಿಸುವ ಹಕ್ಕು ಇದೆಯೇ? ಈ ಪೊಲೀಸರು ಬಂದೂಕು ಹಿಡಿದಿದ್ದಾರೆ, ಅವರು ನಮ್ಮನ್ನು ಕೊಲ್ಲಬಹುದು” ಎಂದು ಭಾವುಕರಾದ ವಿನೇಶ್ ಕಣ್ಣೀರಿಟ್ಟರು.