ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ರೈತರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ವೇದಿಕೆಯ ಸ್ಥಳದಲ್ಲಿ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸರ್ಪಗಾವಲು ಹಾಕಿದ್ದು ಭದ್ರತೆಯ ದೃಷ್ಟಿಯಿಂದ ಕಾರ್ಯಕ್ರಮ ನಡಯುವ ಸ್ಥಳಕ್ಕೆ ಯಾರನ್ನೂ ಬಿಡುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಮಕೂರಿಗೆ ಬಂದರೂ ಅವರನ್ನೂ ಕೂಡ ಕಾಲೇಜು ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಿಲ್ಲ.
ನಗರಕ್ಕೆ 10 ಗಂಟೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಸ್ಥಳೀಯ ಮುಖಂಡರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಸಚಿವರಾದ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್. ಬಸವರಾಜು ಮತ್ತು ಬಿಜೆಪಿ ಶಾಸಕರೊಂದಿಗೆ ಚರ್ಚೆ ನಡೆಸಿದರು. ಆನಂತರ ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಲಾಯಿತು. ಸುಮಾರು 20 ನಿಮಿಷ ನಡೆದ ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ ಮಾತನಾಡಿದ್ದು ಕೇವಲ 6 ನಿಮಿಷ ಮಾತ್ರ. ಅದೂ 1.5 ಲಕ್ಷ ಜನ ರೈತರು ಕಾರ್ಯಕ್ರಮಕ್ಕೆ ಬರುತ್ತಾರೆ. ಮಧ್ಯಾಹ್ನ 2.15ಕ್ಕೆ ಪ್ರಧಾನಿ ಮಠಕ್ಕೆ ಆಗಮಿಸುತ್ತಾರೆ. ಮಕ್ಕಳೊಂದಿಗೆ 10 ನಿಮಿಷ ಮಾತುಕತೆ ಮಾಡುತ್ತಾರೆ. ವಾಹನ ಸಂಚಾರಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಯಾವುದೇ ತೊಂದರೆಯಾಗದಂತೆ ಸಮಾವೇಶ ನಡೆಯಲಿದೆ ಎಂದಷ್ಟೇ ಹೇಳಿ ಪತ್ರಿಕಾಗೋಷ್ಟಿಯಿಂದ ಹೊರಟರು.
ಎಂದಿನ ಯಡಿಯೂರಪ್ಪನವರ ಗತ್ತು ಇಂದು ಮರೆಯಾಗಿತ್ತು. ನಿಧಾನದ ಧ್ವನಿಯಲ್ಲಿ ಮಾತನಾಡಿದರು. ಮುಖದಲ್ಲಿ ಗೆಲುವು ಕಂಡುಬರಲಿಲ್ಲ. ಜೋರಾಗಿ ಮಾತನಾಡಿ ಎಂದು ಪತ್ರಕರ್ತರು ಹೇಳಿದಾಗ ಒಂದೆರಡು ಮಾತುಗಳನ್ನು ಧ್ವನಿ ಎತ್ತರಿಸಿ ಮಾತನಾಡಿದರು. ಆದರೆ ಆ ಮಾತುಗಳು ತುಂಬ ಪೇಲವವಾಗಿ ಕಂಡುಬಂದವು.
ತುಮಕೂರಿನಲ್ಲಿ ರಾಜ್ಯಮಟ್ಟದ ರೈತರ ಸಮಾವೇಶ ನಡೆಯುತ್ತಿದೆ. ಆಪ್ತ ಇಬ್ಬರು ಸ್ವಜಾತಿಯ ಸಚಿವರನ್ನು ಬಿಟ್ಟರೆ, ಸರ್ಕಾರ ಪ್ರಮುಖ ಖಾತೆಗಳನ್ನು ಹೊಂದಿರುವ ಯಾವ ಸಚಿವರೂ ಕೂಡ ಯಡಿಯೂರಪ್ಪ ಅವರ ಜೊತೆಗೆ ಇಲ್ಲದಿರುವುದು ಕಂಡು ಬಂತು. ಹೀಗಾಗಿಯೇ ಅವರ ಮುಖದಲ್ಲಿ ಬೇಸರದ ಛಾಯೆ ಎದ್ದು ಕಾಣುತ್ತಿತ್ತು.
ಬಿಜೆಪಿ ಶಾಸಕರಾದ ಬಿ.ಸಿ.ನಾಗೇಶ್, ಮಸಾಲಾ ಜಯರಾಂ ಒಂದಿಬ್ಬರು ಶಾಸಕರನ್ನು ಬಿಟ್ಟರೆ ಹಿಂದೆ ಇರುತ್ತಿದ್ದಂತೆ ಗುಂಪು ಇರಲಿಲ್ಲ. ಪತ್ರಿಕಾಗೋಷ್ಠಿಯುದ್ದಕ್ಕೂ ಹೆಚ್ಚು ಮೌನಕ್ಕೆ ಶರಣಾಗಿದ್ದರು. ಪತ್ರಕರ್ತರು ಏನೋ ಪ್ರಶ್ನೆಗಳನ್ನು ಕೇಳಲು ಮುಂದಾದರು. ಆದರೆ ಉತ್ತರಿಸದೆ ಸ್ವಲ್ಪ ಹೊತ್ತೂ ತಡಮಾಡದೆ ಹೊರಟೇ ಹೊದರು.