ಬಿಜೆಪಿಯವರು ನನ್ನ ದೇಹವನ್ನು ಬಂಧಿಸಲು ಸಾಧ್ಯವೇ ಹೊರತು ನನ್ನ ಆಲೋಚನೆಗಳನ್ನಲ್ಲ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಜಾರಿ ನಿರ್ದೇಶನಾಲಯವು(ಇಡಿ) ಇತ್ತೀಚೆಗೆ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಬಿಲಾಸ್ಪುರದ ಅಕಲ್ತಾರಾದಲ್ಲಿ ರೋಡ್ಶೋ ನಡೆಸುತ್ತಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ”ಎಎಪಿ ನಿಷ್ಠಾವಂತ ಪ್ರಾಮಾಣಿಕತೆ, ದೇಶಭಕ್ತಿ ಮತ್ತು ಮಾನವೀಯತೆಯನ್ನು ಆಧರಿಸಿದೆ” ಎಂದು ಹೇಳಿದರು.
ಆಪ್ನ ಅಕಲ್ತಾರಾ ಅಭ್ಯರ್ಥಿ ಆನಂದ್ ಪ್ರಕಾಶ್ ಮಿರಿ ಅವರನ್ನು ಬೆಂಬಲಿಸಿ ರೋಡ್ ಶೋ ನಡೆಸಲಾಗಿದ್ದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಭಾಗವಹಿಸಿದ್ದರು.
”ಬಿಜೆಪಿಯು ಕೇಜ್ರಿವಾಲ್ ಅವರನ್ನು ಬಂಧಿಸುವುದಾಗಿ ಪ್ರತಿದಿನ ಬೆದರಿಕೆ ಹಾಕುತ್ತಿದೆ, ನೀವು ಕೇಜ್ರಿವಾಲ್ ಅವರ ದೇಹವನ್ನು ಬಂಧಿಸಬಹುದು ಆದರೆ ನೀವು ಕೇಜ್ರಿವಾಲ್ ಅವರ ಆಲೋಚನೆಗಳನ್ನು ಹೇಗೆ ಬಂಧಿಸುತ್ತೀರಿ?” ಎಂದು ಅವರು ಕೇಳಿದ್ದಾರೆ.
”ಹತ್ತು ವರ್ಷಗಳ ಹಿಂದೆ ದೆಹಲಿಯ ಜನರು ದೇಶದ ರಾಜಕೀಯವನ್ನು ಬದಲಾಯಿಸಿದ್ದರು (ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು) ದೆಹಲಿಯಲ್ಲಿ ನಮ್ಮ ಕೆಲಸವನ್ನು ನೋಡಿ, ಪಂಜಾಬ್ ಕೂಡ ನಮಗೆ ಆಶೀರ್ವಾದ ಮಾಡಿದೆ. ಈಗ ಪಂಜಾಬ್ನಲ್ಲಿ ದೆಹಲಿಯಂತಹ ಕೆಲಸ ನಡೆಯುತ್ತಿದೆ. ಉತ್ತಮ ಶಾಲೆಗಳು ಮತ್ತು ಆಸ್ಪತ್ರೆಗಳು ನಿರ್ಮಿಸಲಾಗುತ್ತಿದೆ, ಮೊಹಲ್ಲಾ ಚಿಕಿತ್ಸಾಲಯಗಳನ್ನು ತೆರೆಯಲಾಗುತ್ತಿದೆ” ಎಂದು ಅವರು ಹೇಳಿದರು.
ಅಕಲ್ತಾರಾದಲ್ಲಿ ನವೆಂಬರ್ 17ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ನವೆಂಬರ್ 7ರಂದು ಮೊದಲ ಹಂತದಲ್ಲಿ ಇಪ್ಪತ್ತು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಛತ್ತೀಸ್ಗಢದಲ್ಲಿ ಮತಗಳನ್ನು ಎಣಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಕೇಜ್ರಿವಾಲ್ ಬಂಧನ ಸಾಧ್ಯತೆ, ಜೈಲಿಗೆ ಹೋಗಲು ನಾವು ಹೆದರಲ್ಲ ಎಂದ ಅತಿಶಿ