ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ.2ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಆ ದಿನವೇ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಅಮ್ ಅದ್ಮ ಪಕ್ಷದ (ಎಎಪಿ) ಮೂಲಗಳ ತಿಳಿಸಿವೆ.
ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ.2ರಂದು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯವು ಅರವಿಂದ ಕೇಜಿವಾಲ್ ಅವರಿಗೆ ಸೋಮವಾರ ಸಮನ್ಸ್ ಜಾರಿ ಮಾಡಿತ್ತು.
ಕೇಜಿವಾಲ್ ಅವರಿಗೆ ಪಿಎಂಎಲ್ಎ ಕಾಯ್ದೆಯಡಿ ಸಮನ್ಸ್ ನೀಡಲಾಗಿದೆ. ತನಿಖಾ ಸಂಸ್ಥೆಯು ಅಂದು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿದ್ದವು.
ಈ ಬಗ್ಗೆ ಮಾತನಾಡಿರುವ ದೆಹಲಿ ಸಚಿವ ಅತಿಶಿ, ”ನಮ್ಮ ಪಕ್ಷದ ಅಧ್ಯಕ್ಷರನ್ನು (ಕೇಜಿವಾಲ್) ಬಂಧಿಸುವ ಮೂಲಕ ಅವರನ್ನು ಮುಗಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
”ಚುನಾವಣೆಯಲ್ಲಿ ಕೇಜಿವಾಲ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಿರುವ ಕಾರಣ ಎಎಪಿಯನ್ನು ಗುರಿಯಾಗಿಸಲು ಬಿಜೆಪಿ ಈ ತಂತ್ರಗಳನ್ನು ಬಳಸುತ್ತಿದೆ” ಎಂದಿದ್ದಾರೆ.
”ನ. 2ರಂದು ಕೇಜಿವಾಲ್ ಅವರನ್ನು ಬಂಧಿಸುವ ಸಾಧ್ಯತೆ ಕುರಿತು ವರದಿಗಳಿವೆ. ಒಂದು ವೇಳೆ ಅವರನ್ನು ಬಂಧಿಸಿದರೆ, ಅದು ಭ್ರಷ್ಟಾಚಾರದ ಕಾರಣಕ್ಕಲ್ಲ. ಹೊರತುಪಡಿಸಿ ಕೇಜಿವಾಲ್ ಅವರು ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂಬುದೇ ಬಂಧನಕ್ಕೆ ಮುಖ್ಯ ಕಾರಣ” ಎಂದು ಅತಿಶಿ ವಾಗ್ದಾಳಿ ನಡೆಸಿದ್ದಾರೆ.
”ಪ್ರಧಾನಿ ನರೇಂದ್ರ ಮೋದಿ ಅವರು ಅರವಿಂದ್ ಕೇಜಿವಾಲ್ಗೆ ಹೆದರುತ್ತಾರೆ. ಚುನಾವಣೆಯಲ್ಲಿ ಎಎಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ತಿಳಿದಿದೆ, ಹಾಗಾಗಿ ಈ ಕುತಂತ್ರ ನಡೆಸಿದ್ದಾರೆ” ಎಂದು ಅತಿಶಿ ಕಿಡಿಕಾರಿದ್ದಾರೆ.
ಈಗಾಗಲೇ ಎಎಪಿಯ ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಸೇರಿದಂತೆ ಎಎಪಿಯ ಪ್ರಮುಖ ನಾಯಕರ ಬಂಧನವನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಅತಿಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಇದೀಗ ಕೇಜಿವಾಲ್ರನ್ನು ಬಂಧಿಸುತ್ತಾರೆ. ಆ ಬಳಿಕ ಬಿಜೆಪಿಯವರು ಸಿಬಿಐ ಮತ್ತು ಇ.ಡಿ ಬಳಸಿಕೊಂಡು ‘INDIA’ ಮೈತ್ರಿಕೂಟದ ಇತರ ನಾಯಕರು ಮತ್ತು ಅದರ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಿದ್ದಾರೆ” ಎಂದು ಅತಿಶಿ ಹೇಳಿದ್ದಾರೆ.
”ಎಎಪಿ ನಾಯಕರು ಜೈಲಿಗೆ ಹೋಗಲು ಹೆದರುವುದಿಲ್ಲ, ತಮ್ಮ ಕೊನೆಯ ಉಸಿರು ಇರುವವರೆಗೂ ಸಂವಿಧಾನವನ್ನು ಉಳಿಸಲು ಹೋರಾಡುತ್ತಲೇ ಇರುತ್ತೇವೆ” ಎಂದು ಅತಿಶಿ ಗುಡುಗಿದ್ದಾರೆ.
ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಸಿಎಂ ಕೇಜ್ರಿವಾಲ್ಗೆ ಇಡಿ ಸಮನ್ಸ್
Arrest is a big tool to ruling partys