ಮಣಿಪುರದ ಮೋರೆ ಎಂಬ ಪಟ್ಟಣದಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿಯನ್ನು ಇಂದು ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
SDPO ಚಿಂಗ್ತಮ್ ಆನಂದ್ ಅವರು ಮೊರೆಹ್ನಲ್ಲಿ ಹೊಸದಾಗಿ ನಿರ್ಮಿಸಲಾದ ಹೆಲಿಪ್ಯಾಡ್ನ್ನು ಪರಿಶೀಲಿಸುತ್ತಿದ್ದಾಗ ಬೆಳಿಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಗುಂಡೇಟಿನ ಗಾಯಗಳೊಂದಿಗೆ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಆನಂದ್ ನೇತೃತ್ವದ ಪೊಲೀಸ್ ತಂಡದ ಮೇಲೆ ದಾಳಿ ನಡೆಸಲು ರೈಪಲ್ಗಳನ್ನು ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯಲ್ಲಿ ಕುಕಿ ಬಂಡುಕೋರರ ಕೈವಾಡವಿದೆ ಎಂದು ಪೊಲೀಸ್ ಮೂಲಗಳು ಶಂಕಿಸುತ್ತಿವೆ ಆದರೆ ಈ ಬಗ್ಗೆ ಇನ್ನು ಕೂಡ ದೃಡೀಕರಿಸಲಾಗಿಲ್ಲ.
ಗಡಿ ಪಟ್ಟಣವಾದ ಮೋರೆಯಿಂದ ಮಣಿಪುರ ಪೊಲೀಸರನ್ನು ವಾಪಾಸ್ಸು ಕಳುಹಿಸಬೇಕು ಎಂದು ಹಲವಾರು ಬುಡಕಟ್ಟು ಸಂಘಟನೆಗಳು ಒತ್ತಾಯಿಸಿದ ಒಂದು ದಿನಗಳ ನಂತರ ಈ ಘಟನೆ ನಡೆದಿದೆ. ಗಡಿ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವಾರು ಮ್ಯಾನ್ಮಾರ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬುಡಕಟ್ಟು ಜನಾಂಗದವರನ್ನು ಗುರಿಯಾಗಿಸಿಕೊಂಡು ಪೋಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಬುಡಕಟ್ಟು ಸಂಘಟನೆಗಳು ಆರೋಪಿಸಿವೆ.
ಮೇ ತಿಂಗಳಿನಲ್ಲಿ ನಡೆದ ಮೈತೈ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ನಡೆದ ಘರ್ಷಣೆಯಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 60,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಸಿಎಂ ಎನ್ ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಸರಕಾರ ಪೊಲೀಸ್ ಅಧಿಕಾರಿಯ ಹತ್ಯೆಯ ಬೆನ್ನಲ್ಲೇ ತುರ್ತು ಸಂಪುಟ ಸಭೆ ಕರೆದಿದ್ದು, ಅಧಿಕಾರಿಯ ಹತ್ಯೆಯನ್ನು ಖಂಡಿಸಿದೆ. ಶಸ್ತ್ರಸಜ್ಜಿತ ಕುಕಿ ಗುಂಪು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಆನಂದ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ವಿಶೇಷ ಪ್ರದೇಶದಲ್ಲಿ ನಿರ್ವಹಿಸಿದ ಕರ್ತವ್ಯವನ್ನು ಪರಿಗಣಿಸಿ ಕುಮಾರ್ ಅವರ ಕುಟುಂಬಕ್ಕೆ ಮಣಿಪುರ ಸರಕಾರ 50 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ ಮತ್ತು ಅವರ ಕುಟುಂಬಸ್ಥರಿಗೆ ಸರಕಾರಿ ಉದ್ಯೋಗದ ಭರವಸೆ ನೀಡಲಾಗಿದೆ.
ಇದನ್ನು ಓದಿ: ಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು
State has gone to dogs