ಹೈದರಾಬಾದ್ನಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಕೇಂದ್ರ ಸಚಿವ ಕೈಲಾಶ್ ಚೌಧರಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ರಾಷ್ಟ್ರೀಯವಾದಿ ಚಿಂತನೆಯ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಭಾರತ್ ಮಾತಾ ಕಿ ಜೈ ಘೋಷಣೆ ಕೂಗದವರು ನರಕಕ್ಕೆ ಹೋಗಬೇಕು ಎಂದು ಹೇಳಿದ್ದಾರೆ.
ಭಾರತದಲ್ಲಿ ನೀವು ಇರಲು ಬಯಸುವುದಾದರೆ, ಭಾರತದಲ್ಲಿ ಜೀವಿಸಬೇಕಿದ್ದರೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಬೇಕು. ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಹೇಳುತ್ತೀರಾ? ಭಾರತ್ ಮಾತಾಕೀ ಜೈ ಮತ್ತು ವಂದೇ ಮಾತರಂ ಹೇಳುವವರಿಗೆ ಮಾತ್ರ ಭಾರತದಲ್ಲಿ ನೆಲಸಲು ಅವಕಾಶ ಇದೆ ಎಂದು ಹೇಳಿದ್ದಾರೆ.
ಭಾರತ್ ಮಾತಾಕೀ ಜೈ ಎಂದು ಹೇಳದ, ಹಿಂದೂಸ್ಥಾನ್ ಮತ್ತು ಭಾರತದ ಮೇಲೆ ನಂಬಿಕೆ ಇಲ್ಲದ, ಪಾಕಿಸ್ತಾನ ಜಿಂದಾಬಾದ್ ಮೇಲೆ ಯಾರಿಗೆ ವಿಶ್ವಾಸ ಇದೆಯೋ ಅವರು ಪಾಕಿಸ್ತಾನಕ್ಕೆ ಹೋಗಬಹುದು, ಇಲ್ಲಿ ಇರುವುದು ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ದೇಶಕ್ಕೆ ರಾಷ್ಟ್ರೀಯತೆಯ ಸಿದ್ಧಾಂತ ಅಗತ್ಯವಾಗಿದೆ. ಸಾಮೂಹಿಕ ಪ್ರಯತ್ನದಿಂದ ದೇಶವನ್ನು ಬಲಪಡಿಸಬೇಕು ಎಂದು ಹೇಳಿದರು.
ಕೈಲಾಶ್ ಚೌಧರಿ ಅವರು INDIA ಮೈತ್ರಿಕೂಟದ ಹೆಸರಿನ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್ ಹೆಸರುಗಳನ್ನು ಕದಿಯುತ್ತಿದೆ. ಅವರು ಮೈತ್ರಿಗೆ INDIA ಎಂಬ ಹೆಸರನ್ನು ಇಟ್ಟಿದ್ದಾರೆ. ಆದರೆ ಹೆಸರುಗಳನ್ನು ಕದಿಯುವ ಕೆಲಸ ಅವರು ಇಂದಿನಿಂದ ಮಾಡುತ್ತಿಲ್ಲ. ಅವರು ಹೆಸರು ಕದಿಯುವ ಕೆಲಸವನ್ನು ಮೊದಲಿನಿಂದಲೇ ಮಾಡಿದ್ದಾರೆ. ಕಾಂಗ್ರೆಸ್ ಮೊದಲು ಮಹಾತ್ಮ ಗಾಂಧಿಯವರ ಹೆಸರನ್ನು ಕದ್ದಿದ್ದಾರೆ. ಇಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಗಾಂಧಿಯನ್ನು ಕದಿಯುವ ಮೂಲಕ ಅವರು ಗಾಂಧೀಜಿಯಂತಾಗಲು ಬಯಸುತ್ತಾರೆ. ಅದೇ ರೀತಿ ಅವರು ಭಾರತದ ಹೆಸರನ್ನು ಸಹ ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ವಿಕಲಚೇತನ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ