Homeಸಾಮಾಜಿಕನ್ಯಾಯಾಲಯಕ್ಕೆ ಜಾತಿವಾದಿಗಳ ‘ಅತಿರೇಕದ ದೌರ್ಜನ್ಯ’ ಕಾಣಲಿಲ್ಲವೇಕೆ?

ನ್ಯಾಯಾಲಯಕ್ಕೆ ಜಾತಿವಾದಿಗಳ ‘ಅತಿರೇಕದ ದೌರ್ಜನ್ಯ’ ಕಾಣಲಿಲ್ಲವೇಕೆ?

- Advertisement -
- Advertisement -

ಗುಜರಾತಿನ ಊನಾದಲ್ಲಿ ಗೋಭಯೋತ್ಪಾದಕರು ದಲಿತರನ್ನು ಹೀನಾಯವಾಗಿ ಕಬ್ಬಿಣದ ರಾಡುಗಳಿಂದ ಥಳಿಸಿ ವಿಡಿಯೋ ಮಾಡಿ ಬಹಿರಂಗವಾಗಿ ಪ್ರಚಾರ ಮಾಡಿದರು. ತುಮಕೂರಿನ ಗುಬ್ಬಿಯ ಅಭಿಷೇಕ್ ಎಂಬ ದಲಿತ ಹುಡುಗನನ್ನು ವಿವಸ್ತ್ರಗೊಳಿಸಿ ಥಳಿಸಿ ಆ ವಿಡಿಯೋವನ್ನು ಪ್ರಚಾರ ಮಾಡಲಾಯಿತು. ತಮಿಳುನಾಡಿನಲ್ಲಿ ವಾಚ್ ಕಟ್ಟಿದ್ದಕ್ಕೆ ದಲಿತನ ಕೈ ಕಡಿಯಲಾಯಿತು. ಪುಣೆಯಲ್ಲಿ ಅಂಬೇಡ್ಕರ್ ರಿಂಗ್ ಟೋನ್ ಹಾಕಿಕೊಂಡದ್ದಕ್ಕೆ ದಲಿತ ಯುವಕನನ್ನು ಅಪಹರಣಗೈದು ಕೊಲೆ ಮಾಡಲಾಯಿತು. ರಾಜಸ್ತಾನದಲ್ಲಿ ಅಂತರ್ಜಾತಿ ವಿವಾಹವಾದದ್ದಕ್ಕೆ ದಂಪತಿಗಳನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಯಿತು. ಮೊನ್ನೆ ತಾನೇ ಉತ್ತರಪ್ರದೇಶದಲ್ಲಿ ಕುದುರೆ ಸವಾರಿ ಮಾಡಿದ್ದಕ್ಕಾಗಿ ತಲೆ ಜಜ್ಜಿ ದಲಿತ ಯುವಕನನ್ನು ಕೊಲ್ಲಲಾಗಿದೆ. ಈ ಘಟನೆಗಳಾವುವೂ ಪ್ರಾಚೀನ ಭಾರತದಲ್ಲಿ ನಡೆದದ್ದಲ್ಲ. 21 ನೇ ಶತಮಾನದ ಭಾರತದಲ್ಲಿ. ಹೀಗೆ ಅದೆಷ್ಟು ಅಮಾನವೀಯ, ಕ್ರೂರ, ಕರುಳುಹಿಂಡುವ ದೌರ್ಜನ್ಯಗಳು ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿವೆ.

ಗುಜರಾತ್ ಊನಾದಲ್ಲಿ ದಲಿತರಿಗೆ ಸಾರ್ವಜನಿಕವಾಗಿ ರಾಡ್ ಗಳಿಂದ ಥಳಿಸುತ್ತಿರುವ ಸೋ ಕಾಲ್ಡ್ ಗೋ ರಕ್ಷಕರ ಆರ್ಭಟ

ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಎಸ್.ಸಿ ಮತ್ತು ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ಅಟ್ರಾಸಿಟಿ ತಡೆ ಕಾಯ್ದೆ) ಮತ್ತು ತಿದ್ದುಪಡಿ 2015 ಇದನ್ನು ದಲಿತರು ‘ಅತಿರೇಕದ ದುರ್ಬಳಕೆ’ ಮಾಡಿಕೊಳ್ಳುತ್ತಿದ್ದಾರೆ ಎಂದು ತೀರ್ಪು ನೀಡುತ್ತದೆ. ದುರ್ಬಲ ಜನಾಂಗದವರ ಬೆನ್ನೆಲುಬಾಗಿ ನಿಲ್ಲಬೇಕಾದ ನ್ಯಾಯಾಲಯ ಇಂತಹ ತೀರ್ಪು ನೀಡಿರುವುದು ಕಳವಳ ಉಂಟುಮಾಡಿದೆ.

ಇದರ ಪರಿಣಾಮವಾಗಿ ದಲಿತರು ನಡೆಸಿದ ಭಾರತ್ ಬಂದ್ ಪ್ರತಿಭಟನೆ ವೇಳೆ ಗೋಲಿಬಾರ್‍ನಿಂದಾಗಿ 9 ದಲಿತರು ಪ್ರಾಣ ಕಳೆದುಕೊಂಡಿದ್ದಾರೆ. ಆಶ್ಚರ್ಯವೆಂದರೆ, 9 ದಲಿತರನ್ನು ಕೊಂದಿರುವ ಸರ್ಕಾರಗಳೆಲ್ಲವೂ ಬಿಜೆಪಿ ನೇತೃತ್ವದಲ್ಲಿವೆ. ಆದರೆ ಕೇಂದ್ರ ಸರ್ಕಾರ ನಾವು ದಲಿತರ ರಕ್ಷಣೆಗೆ ಬದ್ಧ ಎನ್ನುತ್ತಿದೆ. ಮತ್ತೊಂದು ಕಡೆ ಸುಪ್ರೀಂಕೋರ್ಟ್ `ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ’ ಎಂದು ಕೇಂದ್ರ ಸರ್ಕಾರದ ದ್ವಂದ್ವ ನಿಲುವನ್ನು ಪ್ರಶ್ನಿಸಿದೆ. ಇದು ಕೇಂದ್ರದ ದಲಿತ ವಿರೋಧಿ ನಿಲುವನ್ನು ಜಗಜ್ಜಾಹೀರು ಮಾಡಿದೆ. ಹೀಗಿರುವಾಗ ದಲಿತರು ಇಷ್ಟು ಆಕ್ರೋಷಭರಿತರಾಗಲು ಕಾರಣಗಳನ್ನು ಹುಡುಕುವುದು ಕಷ್ಟವೇ?

ಈ ತೀರ್ಪಿನ ಪ್ರಕಾರ ಸದರಿ ಕಾಯ್ದೆಯನ್ನು ದಲಿತರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇನ್ನು ಮುಂದೆ ಈ ಕಾಯ್ದೆ ಅಡಿ ನೌಕರ ಅಥವಾ ಯಾರನ್ನೇ ಬಂಧಿಸುವ ಮೊದಲು ಡಿವೈಎಸ್‍ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು 7 ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿ ಒಪ್ಪಿಗೆ ನೀಡುವುದು ಕಡ್ಡಾಯ. ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ. ಒಂದು ವೇಳೆ ಬಂಧನ ಅನಿವಾರ್ಯವಾದರೆ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಹೀಗೆ ತನ್ನ 89 ಪುಟಗಳ ತೀರ್ಪಿನಲ್ಲಿ ಕಾಯ್ದೆ ಜಾರಿ ಮಾಡಲು ನ್ಯಾಯಾಧೀಶರಾದ ಆದರ್ಶ ಗೋಯಲ್ ಮತ್ತು ಉದಯ್ ಲಲಿತ್ ಅವರ ಪೀಠ ಷರತ್ತುಗಳನ್ನು ಸೂಚಿಸಿದೆ. ಜೊತೆಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನೂ ತೀರ್ಪಿನಲ್ಲಿ ನಮೂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಅಟ್ರಾಸಿಟಿ ತಡೆ ಕಾಯ್ದೆಯ ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು ಹಾಗೂ ನಿರೀಕ್ಷಣಾ ಜಾಮೀನಿನ ದಾರಿ ಕಠಿಣ. ಆದರೆ ಈ ತೀರ್ಪಿನ ಪ್ರಕಾರ ಇವೆರಡೂ ಕಾಗದದ ಮೇಲಿನ ಅಕ್ಷರಗಳಾಗಿ ಉಳಿಯುವ ಎಲ್ಲಾ ಸಾಧ್ಯತೆಗಳಿವೆ. ಇಂದು ಈ ಷರತ್ತುಗಳು ಕೇವಲ ಜಾತಿನಿಂದನೆ ಪ್ರಕರಣಗಳಿಗೆ ಸೀಮಿತ ಎಂದು ಹೇಳಿದರೂ ಇದೇ ತೀರ್ಪಿನ ಆಧಾರದಲ್ಲಿ ಮುಂದೆ ಇಡೀ ಕಾಯ್ದೆಯನ್ನೇ ಮತ್ತಷ್ಟು ದುರ್ಬಲಗೊಳಿಸಬಹುದಾಗಿದೆ.

ಇಲ್ಲೀವರೆಗೆ ಈ ಕಾಯ್ದೆಯಿಂದ ದಲಿತರಿಗೆ ನ್ಯಾಯ ದೊರಕಿದೆಯೇ ಎಂದು ಪ್ರಶ್ನಿಸಿದರೆ ಉತ್ತರ ನಿರಾಶದಾಯಕವಾಗಿದೆ. ಏಕೆಂದರೆ ಇಲ್ಲಿಯವರೆಗೆ ಈ ಕಾಯ್ದೆಯಿಂದ ಗಮನಾರ್ಹ ನ್ಯಾಯ ದಲಿತರಿಗೆ ಸಿಕ್ಕಿಲ್ಲ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕೆಲವು ಪ್ರಕರಣಗಳ ಹಣೆ ಬರಹ ನೋಡಿದರೆ ಇದು ನಮಗೆ ಸ್ಪಷ್ಟವಾಗುತ್ತದೆ. ಆಂದ್ರ ಪ್ರದೇಶದಲ್ಲಿ ಐವರು ದಲಿತರನ್ನು ಕೊಂದುಹಾಕಿದ ಕಾರಂಚೇಡು ಪ್ರಕರಣದಲ್ಲಿ ಸೆಷನ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಹೈ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಚುಂಡೂರು ಪ್ರಕರಣದಲ್ಲಿ 8 ದಲಿತರನ್ನು ಕಡಿದು ಕೊಲ್ಲಲಾಗಿತ್ತು. ಸೆಷನ್ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಆದರೆ ಮತ್ತದೇ ಹೈ ಕೋರ್ಟ್, ಸುಪ್ರೀಂ ಕೋರ್ಟುಗಳು ಆರೋಪಿಗಳನ್ನು ಖುಲಾಸೆಗೊಳಿಸಿದವು. ಬತಾನಿ ತೋಲ ಮತ್ತು ಲಕ್ಷ್ಮಣಪುರ ಬಾಥೆ ಸೇರಿದಂತೆ ಬಿಹಾರದ 6 ಪ್ರಕರಣಗಳಲ್ಲೂ ಇದೇ ಕಥೆ. ಅವೆಲ್ಲವೂ ಸುಪ್ರೀಂ ಕೋರ್ಟಿನಲ್ಲಿ ಧೂಳು ಹಿಡಿಯುತ್ತಿವೆ. ನಮ್ಮದೇ ರಾಜ್ಯದ ಕಂಬಾಲಪಲ್ಲಿ ಮತ್ತು ನಾಗಲಾಪಲ್ಲಿ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಟ್ಟವರು ಬಹಿರಂಗವಾಗಿ ನಮಗೆ ರಕ್ಷಣೆ ಕೊಡಿ ಸತ್ಯ ಹೇಳುತ್ತೇವೆ ಎಂದರು. ನ್ಯಾಯಾಲಯಕ್ಕೆ ಈ ಕೂಗು ಕೇಳಲೇ ಇಲ್ಲ. ಈಗ ಸಾಕ್ಷಿ ಹೇಳಲು ಆ ಜೀವವೂ ಇಲ್ಲ. ಅವೆರಡೂ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿವೆ. ಹೀಗೆ ದಲಿತರ ಮೇಲಿನ ಹತ್ಯಾಕಾಂಡ, ದೌರ್ಜನ್ಯಗಳ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. ಆದರೆ ಇದುವರೆವಿಗೂ ಅವರೆಲ್ಲರನ್ನು ಕೊಂದವರಾರು ಎಂಬುದಕ್ಕೆ ಈ ದೇಶದ ತನಿಖಾ ಮತ್ತು ನ್ಯಾಯಾಂಗ ವ್ಯವಸ್ಥೆ ಇದುವರೆಗೂ ಉತ್ತರ ಕೊಟ್ಟೇ ಇಲ್ಲ.

ಹಸಿವು ನೀಗಿಸಿಕೊಳ್ಳಲು ಪ್ರಸಾದ ಪಡೆಯಲೆಂದು ದೇವಸ್ಥಾನ ಪ್ರವೇಶಿಸಿದ ದಲಿತ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಹರಿಯಾಣದಲ್ಲಿ ಮಾರಣಾಂತಿಕವಾಗಿ ಥಳಿಸಲಾಗಿತ್ತು

ದಲಿತರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳೆದ ಹತ್ತು ವರ್ಷಗಳಲ್ಲಿ ಅದರ ಪ್ರಮಾಣ ಶೇ. 66 ಕ್ಕೆ ಏರಿದೆ. 2006 ರಲ್ಲಿ ದಾಖಲಾದ ದೌರ್ಜನ್ಯಗಳು 27,070. 2016 ರಲ್ಲಿ ದಾಖಲಾದ ಪ್ರಕರಣಗಳು 47,338. ಅಂದರೆ ಪ್ರತಿ 15 ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ. 2016 ರಲ್ಲಿ ದಲಿತ ಮಹಿಳೆಯರ ಮೇಲಿನ ಹಲ್ಲೆ 3172. ಮಾರಣಾಂತಿಕ ಹಲ್ಲೆ 1071. ಅಪಹರಣ ಮತ್ತು ಕಿರುಕುಳ 855. ಕೊಲೆ 786. ಅತ್ಯಾಚಾರ 2541. ಗಲಭೆ 1725. ಆದರೆ ಶಿಕ್ಷೆ ನೀಡಿರುವ ಪ್ರಮಾಣ ಗುಜರಾತಿನಲ್ಲಿ ಶೇ.3, ಕರ್ನಾಟಕದಲ್ಲಿ ಶೇ.3.46, ಒರಿಸ್ಸಾದಲ್ಲಿ ಶೇ.3.45, ಆಂದ್ರಪ್ರದೇಶದಲ್ಲಿ ಶೇ.6, ರಾಜಸ್ಥಾನದಲ್ಲಿ ಶೇ.7, ಮಹಾರಾಷ್ಟ್ರದಲ್ಲಿ ಶೇ.7. ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ಗಮನಾರ್ಹ ಶಿಕ್ಷೆಗಳಾಗಿರುವ ಕಾರಣ ಇಡೀ ದೇಶದಲ್ಲಿ ಕೇವಲ ಶೇ.28. ಇನ್ನು ವಿಚಾರಣೆ ನಡೆಯುತ್ತಾ ಬಾಕಿ ಇರುವ ಪ್ರಕರಣಗಳು ಶೇ. 89. ಇದು ದಲಿತರಿಗೆ ನ್ಯಾಯಾಂಗ ನೀಡಿರುವ ನ್ಯಾಯ. ಅಟ್ರಾಸಿಟಿ ತಡೆ ಕಾಯ್ದೆ ಇಲ್ಲದಿದ್ದರೆ ಈ ಕನಿಷ್ಠ ನ್ಯಾಯವೂ ದಲಿತರಿಗೆ ಸಿಗುತ್ತಿರಲಿಲ್ಲ. ಇದಕ್ಕೆ 1989 ಕ್ಕೂ ಹಿಂದಿನ ಬೆಲ್ಚಿ, ಪಿಪ್ರ, ಕಿಲ್ವೇನ್ಮಣಿ, ಕೆಸ್ತಾರ ಮುಂತಾದ ನರಮೇಧಗಳೇ ಸಾಕ್ಷಿ.

ತುಂಡು ಭೂಮಿಗೆ ಸರ್ಕಾರದಿಂದ ಪಟ್ಟಾ ಪಡೆದುಕೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಥಳಿಸಿ, ಬಲವಂತವಾಗಿ ಮೂತ್ರ ಕೂಡಿಸಲಾಗಿತ್ತು

ಪರಿಸ್ಥಿತಿ ಹೀಗಿರುವಾಗ ನ್ಯಾಯಾಲಯ ಕಾಯ್ದೆಯನ್ನು ಚುರುಕುಗೊಳಿಸಲು ಶಿಫಾರಸ್ಸು ಮಾಡಬೇಕೋ ಅಥವಾ ಕಾಯ್ದೆ ಜಾರಿಯಾಗಲು ಷರತ್ತುಗಳನ್ನು ವಿಧಿಸಬೇಕೋ? ಅಟ್ರಾಸಿಟಿ ತಡೆ ಕಾಯ್ದೆ ಹೇಳುವಂತೆ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ರಚನೆಯಾಗಿಲ್ಲ. ಸಾಕ್ಷಿಗಳಿಗೆ ರಕ್ಷಣೆ ಕೊಡುವ ಕೆಲಸವಾಗಿಲ್ಲ. ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಡುವವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಸ್ಪøಶ್ಯತೆ ಜೀವಂತವಾಗಿರುವುದಕ್ಕೆ ಸರ್ಕಾರಗಳಿಗೆ ಛೀಮಾರಿ ಹಾಕಿಲ್ಲ. ಪರಿಶಿಷ್ಟರಿಗೆ ರಕ್ಷಣೆ ದೊರಕುತ್ತಿದೆಯೇ ಎಂಬುದನ್ನು ಖಾತ್ರಿಗೊಳಿಸಿಕೊಂಡಿಲ್ಲ. ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳು ಕೌಂಟರ್ ಪ್ರಕರಣ ದಾಖಲಿಸುವುದಕ್ಕೆ ಯಾವುದೇ ಪರಿಶೀಲನೆಗಳಿಲ್ಲ. ಆದರೆ ದುರ್ಬಲರ ಮೇಲೆಸಗುವ ಅನ್ಯಾಯಗಳಿಗೆ ‘ಅತಿರೇಕದ ದುರ್ಬಳಕೆ’ ಎಂಬ ಹಣೆಪಟ್ಟಿ ಕಟ್ಟಿ ಷರತ್ತು ವಿಧಿಸುವುದು ಅತಿ ಸುಲಭದ ಕೆಲಸವಲ್ಲವೇ? ನಮ್ಮ ನ್ಯಾಯಾಲಯಗಳಿಗೆ ದಲಿತರನ್ನು ಸುಟ್ಟು, ಕೊಚ್ಚಿ ಕೊಲ್ಲುವುದು, ಮಹಿಳೆ ಎದೆ ಸೀಳುವುದು, ಶವಕ್ಕೂ ಅತ್ಯಾಚಾರವೆಸಗುವುದು ಯಾವತ್ತೂ ‘ಅತಿರೇಕದ ದೌರ್ಜನ್ಯ’ ಎನಿಸಲೇ ಇಲ್ಲ. ಅದಕ್ಕೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲೇ ಇಲ್ಲ.

ಶಾಲೆಯಲ್ಲಿ ಅಡುಗೆ ಮಾಡುವ ಸರ್ಕಾರಿ ಕೆಲವನ್ನು ಮೇಲ್ಜಾತಿಗಳ ಒತ್ತಾಯ ಮಾಡಿದರೂ ತ್ಯಜಿಸದಿದ್ದುದಕ್ಕೆ ಆಕೆಯನ್ನು ಮತ್ತು ಅವಳ ಎಳೆಯ ಮಗನನ್ನು ಗುಜರಾತ್ ನಲ್ಲಿ ಅಮಾನುಷವಾಗಿ ಥಳಿಸಿದ್ದರು
ಉತ್ತರಪ್ರದೇಶದಲ್ಲಿ ತಾವು ಕೊಟ್ಟ ದೂರನ್ನು ಸ್ವೀಕರಿಸುವಂತೆ ಮಾಡಲು ಇಡೀ ದಲಿತ ಕುಟುಂಬ (ಇಬ್ಬರು ಮಹಿಳೆಯರು ಒಳಗೊಂಡಂತೆ) ಪೊಲೀ ಸ್ ಠಾಣೆಯ ಮುಂದೆ ಬೆತ್ತಲಾಗಿ ಪ್ರತಿಭಟಿಸಬೇಕಾಗಿ ಬಂದಿತ್ತು

ಎಲ್ಲಾ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಇರುತ್ತಾರೆ. ಹಾಗೆಂದು ಕಾನೂನನ್ನೇ ದುರ್ಬಲಗೊಳಿಸುವುದು ಎಷ್ಟು ಸರಿ? ಕಣ್ಣಿಗೆ ಗಾಯವಾದರೆ ತಲೆಯನ್ನೇ ತೆಗೆಯಬೇಕೆ? ಜಾತಿವಾದಿಗಳಿಗೆ 7 ದಿನಗಳಲ್ಲ, ಒಂದು ಕ್ಷಣ ಸಿಕ್ಕರೂ ಸಾಕು ಬೆದರಿಕೆ ಒಡ್ಡಿ ದಲಿತರ ಬಾಯಿ ಮುಚ್ಚಿಸುತ್ತಾರೆ. ಹೀಗಿರುವಾಗ ಸಂವಿಧಾನದ ಕಲಂ 46 ದಲಿತರಿಗೆ ಎಲ್ಲಾ ರೀತಿಯ ದೌರ್ಜನ್ಯಗಳಿಂದ ರಕ್ಷಣೆ ನೀಡಬೇಕೆಂದು ಹೇಳುತ್ತದೆಯೇ ಹೊರತು ಇರುವ ಕಾನೂನನ್ನು ದುರ್ಬಲಗೊಳಿಸಲೆಂದಲ್ಲ. ಆ ಕಾರಣಕ್ಕಾಗಿಯೇ 1989 ರಲ್ಲಿ ಈ ಕಾಯ್ದೆಯನ್ನು ರಚಿಸಲಾಗಿತ್ತು. ಆದರೆ ಇಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದಲಿತರನ್ನು ಶೋಷಿಸಲು ಸವರ್ಣಿಯರಿಗೆ ಮತ್ತಷ್ಟು ಧೈರ್ಯ ಕೊಡುತ್ತದೆ. ದಲಿತೇತರರ ಫ್ಯೂಡಲ್ ಮನಸ್ಥಿತಿ ವಿರುದ್ಧ ದಲಿತರಿಗಿರುವ ಚಿಕ್ಕದೊಂದು ರಕ್ಷಣೆಯನ್ನೇ ಮೊಟಕುಗೊಳಿಸಿದಂತಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೆ ಇಂತಹ ದುರ್ಘಟನೆ ಜರುಗುತ್ತಿರಲಿಲ್ಲ. 9 ಜೀವಗಳು ನೆಲಕ್ಕೊರಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಸ್ವತಃ ಅಟಾರ್ನಿ ಜನರಲ್ ಅವರಿಂದಲೇ ವಿಶೇಷ ಮುತುವರ್ಜಿ ವಹಿಸಿ ಕಾಯ್ದೆಯನ್ನು ಉಳಿಸಬೇಕಿದೆ. ದುರ್ಬಲರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಉಳಿಸಬೇಕಿದೆ. ಆದರೆ ಜನರ ಮುಂದೆ ಒಂದು ಮಾತು, ಕೋರ್ಟ್ ಮುಂದೆ ಇನ್ನೊಂದು ಮಾತನ್ನಾಡುವ ಕೇಂದ್ರ ಸರ್ಕಾರ ಈ ಕೆಲಸವನ್ನು ಮಾಡಬಲ್ಲದೆ?

ವಿಕಾಸ್ ಆರ್ ಮೌರ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....