ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದ ಅಸ್ಸಾಮಿ ಸಾಹಿತಿ ಸೈಯದ್ ಅಬ್ದುಲ್ ಮಲಿಕ್ ಅವರನ್ನು “ಬೌದ್ಧಿಕ ಜಿಹಾದಿ” ಎಂದು ಕರೆದಿದ್ದ ಅಸ್ಸಾಂನ ವಿವಾದಾತ್ಮಕ ಬಿಜೆಪಿ ಶಾಸಕ ಶಿಲಾದಿತ್ಯ ದೇವ್ ವಿರುದ್ಧ ವಿವಿಧ ಸಂಸ್ಥೆಳಿಂದ ಹಲವಾರು ದೂರುಗಳು ದಾಖಲಾಗಿದೆ.
ಸೈಯ್ಯದ್ ಅಬ್ದುಲ್ ಮಲಿಕ್ ಅಸ್ಸಾಮಿ ಸಾಹಿತ್ಯದ ಪ್ರಸಿದ್ದ ಬರಹಗಾರರಾಗಿದ್ದು, 1977 ರಲ್ಲಿ ಅಭಯಪುರಿಯಲ್ಲಿ ನಡೆದ ಅಸಮ್ ಸಾಹಿತ್ಯ ಸಭೆಯ ಅಧ್ಯಕ್ಷರಾಗಿದ್ದರು. ಅವರಿಗೆ ಪದ್ಮಶ್ರೀ, ಪದ್ಮ ಭೂಷಣ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಬಿಜೆಪಿ ಮುಖಂಡ ಮತ್ತು ಅಸ್ಸಾಂ ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅವಾಲ್ ಈ ಹೇಳಿಕೆಯನ್ನು ಖಂಡಿಸಿ ಶಿಲಾದಿತ್ಯ ಅವರನ್ನು ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಶಿಲಾದಿತ್ಯ ದೇವ್ ಅವರನ್ನು “ಹುಚ್ಚು ವ್ಯಕ್ತಿ” ಎಂದು ಕರೆದಿದೆ. ಆಗಾಗ್ಗೆ ವಿವಾದಾತ್ಮಕ ಮತ್ತು ಕೋಮು-ಸೂಕ್ಷ್ಮ ಹೇಳಿಕೆ ಕೊಡುತ್ತಿರುವ ಅವರನ್ನು “ಮಾನಸಿಕ ಆಶ್ರಯ” ಕ್ಕೆ ಕಳುಹಿಸಬೇಕು ಎಂದಿದೆ. ಅಲ್ಲದೆ ವಿವಾದಾತ್ಮಕ ಟೀಕೆಗಳಿಗೆ ಹೆಸರುವಾಸಿಯಾದ ಬಾಲಿವುಡ್ ನಟಿಯನ್ನ ಉಲ್ಲೇಖಿಸಿ, ಅವರು “ಬಿಜೆಪಿಯ ರಾಖಿ ಸಾವಂತ್” ಎಂದು ಕಾಂಗ್ರೆಸ್ ಬಣ್ಣಿಸಿದೆ.
ಶಿಲಾದಿತ್ಯ ದೇವ್ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಗುವಾಹಟಿಯ ಹಟಿಗಾಂವ್ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದು, ಶಾಸಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದೆ.
ಸದೌ ಅಸೋಮ್ ಗೋರಿಯಾ ದೇಶಿ ಜತಿ ಪರಿಷತ್ ಬಾರ್ಪೇಟಾ, ಧುಬ್ರಿ ಮತ್ತು ಮೊರಿಗಾಂವ್ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದೆ. ಸದೌ ಅಸೋಮ್ ಗೋರಿಯಾ ಯುವ-ಛಾತ್ರ ಪರಿಷತ್ ಗುವಾಹಟಿಯ ಜಲುಕ್ಬರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
ಅಸೋಮ್ ಸೋಂಗ್ರಾಮಿ ಯುವ ಮಂಚ್ ಕೂಡ ಹತಿಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
“ಶಿಲಾದಿತ್ಯ ಹೇಳಿದ್ದನ್ನು ನಾನು ವಿರೋಧಿಸುತ್ತೇನೆ ಮತ್ತು ಅದನ್ನು ಬಲವಾಗಿ ಖಂಡಿಸುತ್ತೇನೆ” ಎಂದು ಬಿಜೆಪಿ ನಾಯಕ ಅವಾಲ್ ಹೇಳಿದ್ದಾರೆ. “ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಬಲವಾದ ನಿಲುವನ್ನು ಯಾವಾಗಲೂ ತೆಗೆದುಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.
ಗೌರವಾನ್ವಿತ ಕವಿ, ಕಾದಂಬರಿಕಾರ ಮತ್ತು ಸಣ್ಣಕಥೆಗಾರ ಮಲಿಕ್ ವಿರುದ್ಧ ಶಿಲಾದಿತ್ಯ ನೀಡಿದ ಅವಹೇಳನಕಾರಿ ಹೇಳಿಕೆಗಳನ್ನು ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ತೀವ್ರವಾಗಿ ಖಂಡಿಸಿದರು.
ಕಾಂಗ್ರೆಸ್ ಲೋಕಸಭಾ ಸಂಸದ ಅಬ್ದುಲ್ ಖಲೇಕ್ ಅವರು ಬಿಜೆಪಿ ಶಾಸಕರನ್ನು “ಮಾನಸಿಕ ಆಶ್ರಯಕ್ಕೆ ಕಳುಹಿಸಬೇಕಾದ ಹುಚ್ಚು ವ್ಯಕ್ತಿ” ಎಂದು ಬಣ್ಣಿಸಿದ್ದಾರೆ.
ಕಾಂಗ್ರೆಸ್ನ ಮತ್ತೊಬ್ಬರಾದ ಮುಖಂಡ ಕಮಲ್ ಕುಮಾರ್ ಮೇಧಿ, “ಶಿಲಾದಿತ್ಯ ದೇವ್ ಬಿಜೆಪಿಯ ರಾಖಿ ಸಾವಂತ್. ಅಸ್ಸಾಮೀ ಸಮಾಜ ಅವರಿಗೆ ಯಾವುದೇ ಪ್ರಾಮುಖ್ಯತೆ ನೀಡಬಾರದು” ಎಂದಿದ್ದಾರೆ.
ಅಸ್ಸಾಮ್ ಸಾಹಿತ್ಯ ಸಭೆಯ ಅಧ್ಯಕ್ಷ ಕುಲಾಧರ್ ಸೈಕಿಯಾ ಸಾಹಿತ್ಯ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಮಲಿಕ್ ವಿರುದ್ಧದ “ವಿವಾದಾತ್ಮಕ ಹೇಳಿಕೆಗಳನ್ನು” ಖಂಡಿಸಿದರು.
ಕವಿ ಮಲಿಕ್ ಅವರನ್ನು “ಬೌದ್ಧಿಕ ಜಿಹಾದ್” ನಲ್ಲಿ ತೊಡಗಿಸಿಕೊಂಡಿದ್ದರು ಎಂದು ಶಿಲಾದಿತ್ಯ ದೇವ್ ಕಳೆದ ಶುಕ್ರವಾರ ಹೇಳಿದ್ದರು. ರಾಮ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ ದಿನದಂದು ಸೋನಿತ್ಪುರ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಕುರಿತು ಪ್ರತಿಕ್ರಿಯಿಸುವಾಗ ಅವರು ಈ ಮಾತುಗಳನ್ನಾಡಿದರು.
ರಾಜಕೀಯ ಸಂಬಂಧಗಳಾಚೆ ಇದು ರಾಜ್ಯಾದ್ಯಂತ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು ಅನೇಕ ಸಂಘಟನೆಗಳು ಅವರ ವಿರುದ್ದ ಪ್ರತಿಭಟನೆ ನಡೆಸಿವೆ.
ಶಿಲಾದಿತ್ಯ ಕಳೆದ ತಿಂಗಳಷ್ಟೆ, ಬಿಜೆಪಿ ನಾಯಕರ ನಿರ್ಲಕ್ಷ್ಯ ಮತ್ತು ಗುಂಪುಗಾರಿಕೆಯನ್ನು ಆರೋಪಿಸಿ ಜುಲೈ 14 ರಂದು ಬಿಜೆಪಿಯಿಂದ ಹೊರಗುಳಿಯುವುದಾಗಿ ಹೇಳಿದ್ದರು. ಆದರೆ ನಂತರ ಅವರು ಯು-ಟರ್ನ್ ರಾಜೀನಾಮೆ ನೀಡಲಿಲ್ಲ.
ಈ ಹಿಂದಿನಿಂದಲೂ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಶಿಲಾದಿತ್ಯ ಸುದ್ದಿಯಲ್ಲಿದ್ದಾರೆ. ಅಸ್ಸಾಮೀ ಮತ್ತು ಬಂಗಾಳಿಗಳನ್ನು ವಿಭಜಿಸಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ 2018 ರಲ್ಲಿ ಸಿಲ್ಚಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು.
ಓದಿ: ಬಿಜೆಪಿ ತೊರೆಯುವುದಾಗಿ ಘೋಷಿಸಿದ ಅಸ್ಸಾಂ ಶಾಸಕ ಶಿಲಾದಿತ್ಯ ದೇವ್