ಮಾರುತಿ ಮಾನ್ಪಡೆಯವರ ಸಾವಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಕಾರಣ ಎಂದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರವರ ಹೇಳಿಕೆಯನ್ನು ಐಕ್ಯಹೋರಾಟ ಸಮಿತಿ ಖಂಡಿಸಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ರೈತವಿರೋಧಿ, ಬಡಜನ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದ ಸರ್ಕಾರವೇ ಅದಕ್ಕೆ ನೇರ ಹೊಣೆ ಎಂದು ಸಮಿತಿ ತಿಳಿಸಿದೆ.
ಇಂದು ನಗರದ ಗಾಂಧಿಭವನದಲ್ಲಿ ನಡೆದ ಅಗಲಿದ ಹೋರಾಟಗಾರ ಮಾರುತಿ ಮಾನ್ಪಡೆಯವರಿಗೆ ಶ್ರಧ್ಧಾಂಜಲಿ ಮತ್ತು ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ಸಭೆಯಲ್ಲಿ ಉಪಚುನಾವಣೆಯಲ್ಲಿ ರೈತರ ವಿಷಯ ಮುನ್ನೆಲೆಗೆ ಬರಲಿ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು.
ನಿನ್ನೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸದಾನಂದಗೌಡರು, “ಹಳ್ಳಿಗಳಿಂದ ರೈತರನ್ನು ಬಲವಂತವಾಗಿ ಬೆಂಗಳೂರಿಗೆ ಕರೆ ತಂದು ಪ್ರತಿಭಟನೆ ನಡೆಸಲಾಯಿತು. ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೊತೆಗೆ ಕಾರ್ಮಿಕ ಹೋರಾಟಗಾರರಾದ ಮಾರುತಿ ಮಾನ್ಪಡೆಯವರು ಭಾಗವಹಿಸಿದ್ದರು. ಹಾಗಾಗಿ ಅವರಿಗೆ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದರೆ” ಎಂದು ಹೇಳಿದ್ದರು.
“ಇಡೀ ದೇಶವೇ ಕೊರೊನಾ ಮಹಾ ಪಿಡುಗಿನ ಹೊಡೆತಕ್ಕೆ ಸಿಕ್ಕಿ ಕೈ, ಕಾಲು, ಬಾಯಿ ಕಟ್ಟಿ ಬಿದ್ದಿರುವಾಗ
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ನೋಟಿನ ರಾಜಕೀಯ’ಕ್ಕಾಗಿ ಕಾರ್ಪೋರೇಟ್ ವಲಯಕ್ಕೆ ತಲೆಬಾಗಿ ಉಳ್ಳವರಿಗೆ ಮಣೆ ಹಾಕುವ, ರೈತರ ಭೂಮಿ ಕಬಳಿಸುವ, ಕೃಷಿ ಮಾರುಕಟ್ಟೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸುವ, ಭೂಮಿಯ ಹಂಚಿಕೆಯಲ್ಲಿ ದಲಿತರನ್ನು ಪೂರ್ತಿ ವಂಚಿಸುವ, ಕಾರ್ಮಿಕರ ಉದ್ಯೋಗದ ಹಕ್ಕು ಕಸಿಯುವ ಹುನ್ನಾರದಲ್ಲಿ ತೊಡಗಿವೆ” ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.
“ಸದಾ ಕಾಲವೂ ಸಮೃದ್ಧ ಆಹಾರ, ಹಾಲು, ಹಣ್ಣು, ತರಕಾರಿಗಳನ್ನು ದೇಶಕ್ಕೆ ಒದಗಿಸುವ ರೈತಾಪಿ ವರ್ಗಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡುವ ಬದಲು ಅನಗತ್ಯ ಆತಂಕ, ಅಸಮಾಧಾನ ಉಂಟು ಮಾಡಿ, ಅವರು ಬೀದಿಗಿಳಿಯುವಂತೆ ಮಾಡಿದೆ. ಪರಿಣಾಮವಾಗಿ ಕಾಮ್ರೆಡ್ ಮಾರುತಿ ಮಾನ್ಪಡೆಯವರಂತಹ ಹಿರಿಯ ರೈತ ಮುಖಂಡರು ಕೊರೊನಾಕ್ಕೆ ತುತ್ತಾಗಿ ಅಮೂಲ್ಯ ಜೀವ ತೆರುವಂತಾದುದಕ್ಕೆ ಸರ್ಕಾರವೇ ನೇರ ಹೊಣೆಗಾರನಾಗಿದೆ” ಎಂದು ಸಮಿತಿ ಪ್ರತಿಪಾದಿಸಿದೆ.
ಈ ಎಲ್ಲ ವಿಚಾರಗಳು ಈಗ ಬಂದಿರುವ ಉಪ ಚುನಾವಣೆಯಲ್ಲಿ ಮುಖ್ಯವಾಗಿ ಮತಪಟ್ಟಿಗೆಯಲ್ಲಿ ಅಭಿವ್ಯಕ್ತವಾಗಬೇಕು. ಸರ್ಕಾರ ಭೂಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ಸುಗ್ರೀವಾಜ್ಞೆಗಳನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಅಥವಾ ಮರು ಹೊರಡಿಸಬಾರದು. ಈ ಕಾಯ್ದೆಗಳಿಗಿಂತ ಹಿಂದಿನ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕು, ಭೂಸುಧಾರಣೆಯ ಮೂಲ ಆಶಯವಾದ ‘ಹೊಲದ ಒಡೆತನವನ್ನು ಉಳುವವನ ಕೈಯಿಂದ ಕಿತ್ತುಕೊಳ್ಳಕೂಡದು’. ಹಾಗೆ, ದಲಿತರು, ಭೂರಹಿತರು, ಕೃಷಿ ಕಾರ್ಮಿಕರಿಗೆ ಹೆಚ್ಚುವರಿ ಭೂಮಿ ಹಂಚಿಕೆ ಮೊದಲು ಆಗಬೇಕು ಎಂದು ಸಮಿತಿ ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಚಾಮರಸಮಾಲಿ ಪಾಟೀಲ್, ಕೃಷಿ ಬೆಲೆ ನಿಗಧಿ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ದಸಸಂ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ಭೂಮಿ ವಸತಿ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಮುಂತಾದವರು ಸಭೆಯಲ್ಲಿದ್ದರು.
ಇದನ್ನೂ ಓದಿ: ಮುಖ್ಯಮಂತ್ರಿಯನ್ನು ಕಂಡಕಂಡಲ್ಲಿ ಘೇರಾವ್ ಮಾಡಿ: ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ