Homeಮುಖಪುಟಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ

ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ

ಮನೆಯೊಳಗಿನ ಅನುಮಾನ, ಅಪನಂಬಿಗಳು ಬಗೆಹರಿದರೆ - ಇದು ನಮ್ಮ ಮನೆ, ನಾವೆಲ್ಲ ಒಂದಾಗಿ ಹೊರಗಿನ ಶತ್ರುಗಳಿಂದ ಮನೆಯನ್ನು ರಕ್ಷಿಸಿಕೊಳ್ಳಬೇಕೆಂಬ ಜವಬ್ದಾರಿ ಮತ್ತೆ ಹುಟ್ಟುತ್ತದೆ. ಅದಕ್ಕೆ ಮೊದಲು ಒಳಮೀಸಲಾತಿ ಜಾರಿಯಾಗಬೇಕು.

- Advertisement -
- Advertisement -

ಸುಮಾರು ಹದಿನೈದು ವರ್ಷಗಳದ ಹಿಂದೆ, ನಾವು ತುಮಕೂರಿನ ಎಮ್.ಜಿ ರೋಡ್ ಸೈನ್ಸ್ ಹಾಸ್ಟೆಲ್‍ನಲ್ಲಿ ಪಿಯುಸಿ ಓದುತ್ತಿದ್ದೆವು. ರಾತ್ರಿಯಾದರೆ ಸಾಕು ಒಂದಿಲ್ಲೊಂದು ಸಂಘಟನೆಯವರು ಬಂದು ವಿದ್ಯಾರ್ಥಿಗಳಿಗೆ ಸಿದ್ಧಾಂತಗಳನ್ನು ಹೇಳಿ ಸಂಘಟಿಸಿ ಹೋಗುತ್ತಿದ್ದರು. ಅದರಲ್ಲಿ ಕೆಲವೇ ಸಂಖ್ಯೆಯಲ್ಲಿ ಬರುತ್ತಿದ್ದ ಮಾದಿಗ ದಂಡೋರದವರು ಸ್ಪೃಶ್ಯ ಅಸ್ಪೃಶ್ಯ ವಿಷಯಗಳ ಜೊತೆಗೆ ಬಲಗೈನವರಿಂದ ಹೇಗೆ ಅನ್ಯಾಯವಾಗುತ್ತಿದೆ, ಒಳಮೀಸಲು, ಆಂಧ್ರ ಮಾದರಿ ಎಂದೆಲ್ಲ ಹೇಳಿ ಹೋಗುತ್ತಿದ್ದರು. ಹಿಂದೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಡಿಎಸ್‍ಎಸ್‍ನವರು ಮಾದಿಗ ದಂಡೋರದವರನ್ನ ಬೈದು, “ಅವ್ರ ಮಾತ್ನ ಕೇಳ್ಬೇಡಿ, ಅವರು ಮನೆ ಮುರುಕರು, ಅವರಿಗೊಂದು ತತ್ವ ಸಿದ್ಧಾಂತ ಇಲ್ಲ” ಎಂದು ಹೇಳುತ್ತಿದ್ದರು. ಆಶ್ಚರ್ಯ ಎಂದರೆ ಡಿಎಸ್‍ಎಸ್ ಹೆಸರಿನಲ್ಲಿ ಬರುತ್ತಿದ್ದವರೂ ಮಾದಿಗರೇ ಆಗಿರುತ್ತಿದ್ದರು. ನಮಗೆ ಕೆಲವೊಮ್ಮೆ ಗೊಂದಲವಾಗುತ್ತಿತ್ತು – ಇನ್ನು ಕೆಲವೊಮ್ಮೆ ಎರೆಡೂ ಸರಿ ಎನಿಸುತ್ತಿತ್ತು.

ಆಶ್ಚರ್ಯವೆಂದರೆ ಯಾವ ಡಿಎಸ್‍ಎಸ್‍ನವರು ಅಂದು ಮಾದಿಗ ದಂಡೋರದವರನ್ನ ಕಂಡರೆ ಉರಿದುಬೀಳುತ್ತಿದ್ದರೋ, ಅದೇ ಹೋರಾಟಗಾರರು ಇಂದು ಸದಾಶಿವ ಆಯೋಗದ ವರದಿಯ ಜಾರಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಗಂಟೆಗಟ್ಟಲೆ ಸಮರ್ಥಿಸುತ್ತಿದ್ದಾರೆ. ವ್ಯತ್ಯಾಸವೆಂದರೆ ಇವರೀಗ ಎಪ್ಪತ್ತು ಎಂಭತ್ತರ ಆಸುಪಾಸಿನಲ್ಲಿದ್ದಾರೆ.

ಒಳಮೀಸಲಾತಿ ಹೋರಾಟ ಕೇವಲ ಮಾದಿಗರ ಕಣ್ಣನ್ನಷ್ಟೆ ತೆರೆಸಲಿಲ್ಲ. ಸಾಮಾಜಿಕ ಏರುಪೇರುಗಳನ್ನ ನೋಡುವ, ಸರಿಪಡಿಸುವ ಹೊಸಬಗೆಯ ನೋಟವನ್ನೆ ಕಲಿಸಿಕೊಟ್ಟಿತು ಎಂಬುದು ನಿಧಾನಕ್ಕೆ ತಿಳಿಯುತ್ತಾ ಬಂದಿದೆ.

ಇಂದು ಮಾದಿಗರಿಗೆ ಆಗಿರುವ ಅನ್ಯಾಯವನ್ನ ಒಕ್ಕೊರಲಿನಿಂದ ಎಲ್ಲ ಜಾತಿಯವರು ಮಾತಾಡುವಂತಾಗಿದೆ. ಹೌದು ಇಲ್ಲಿನ ಅನ್ಯಾಯವನ್ನ ಸರಿಪಡಿಸಬೇಕು, ತಿಂದವರೇ ತಿನ್ನುವುದಲ್ಲ ಎಂದು ಎಲ್ಲರೂ ಇಂದು ಮಾತಾಡುವಂತಾಗಿದೆ. ಸಮಾಜದ ಅಸಮಾನತೆಯನ್ನು ನೋಡುವ ಹೊಸ ಕ್ರಮ ಹಾಕಿಕೊಟ್ಟ ಮಾದಿಗ ಮೀಸಲಾತಿ ಹೋರಾಟವನ್ನು ಸ್ಮರಿಸಲೇಬೇಕಿದೆ.

photo courtesy : Udayavani

ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಮೂರ್ತಿಗಳ ಪೀಠ ಒಳಮೀಸಲಾತಿಗೆ ಒಲವು ತೋರಿರುವ ಐತಿಹಾಸಿಕ ತೀರ್ಪಿನ ಈ ಹೊತ್ತಿನಲ್ಲಿ ಎಂದಿನಂತೆಯೇ ಹಲವು ಊಹಾಪೋಹಗಳು ಎದ್ದಿವೆ. ಅದರಲ್ಲಿ ಪ್ರಮುಖವಾದುದು ಮೀಸಲಾತಿಯ ಮೇಲೆ ಕಣ್ಣಿಟ್ಟಿರುವ ಆರ್‌ಎಸ್‍ಎಸ್ ಈ ವಿಷಯಕ್ಕೆ ಮುತುವರ್ಜಿ ವಹಿಸುತ್ತಿರುವುದೇಕೆ ಎಂಬುದು ಒಂದಾದರೆ ದಲಿತರ ಐಕ್ಯತೆಯ ಒಡಕಿನ ಪ್ರಶ್ನೆ, ಸದಾಶಿವ ವರದಿಯ ಮೇಲೆ ಮೊದಲು ಚರ್ಚೆ ನಡೆಯಲಿ ಇತ್ಯಾದಿ..

ಹಿಂದಿನಿಂದಲೂ ಒಳಮೀಸಲಾತಿಯನ್ನ ವಿರೋಧಿಸಿಕೊಂಡು ಬಂದವರು ಇಂದು ಆರ್‌ಎಸ್‍ಎಸ್ ಮೂಗು ತೂರಿಸುತ್ತಿರುವುದರತ್ತ ಬೊಟ್ಟುಮಾಡಿ ಮಾದಿಗ ಮೀಸಲಾತಿ ಹೋರಾಟಗಾರರನ್ನು ಅನುಮಾನಿಸಲು ಪ್ರಚೋದಿಸುತ್ತಿದ್ದಾರೆ.

ಆದರೆ ಅವರು ತಿಳಿಯಬೇಕಾಗಿರುವುದು ಏನೆಂದರೆ ಒಳಮೀಸಲಾತಿ ಹೋರಾಟ ಪ್ರಾರಂಭವಾಗಿ ಇಪ್ಪತ್ತೈದು ವರ್ಷಗಳೇ ಸಂದಿವೆ. ಆಗ ಇದು ಮಾದಿಗರ ಹಸಿವಿನ ಪ್ರಶ್ನೆಯಾಗಿ ಮಾತ್ರವೇ ಹುಟ್ಟಿತ್ತು ಬಿಟ್ಟರೆ ಇನ್ನಾವುದೇ ಪ್ರಚೋದನೆಗಳಿಂದಲ್ಲ.

ಈ ನಿರಂತರ ಹೋರಾಟದಲ್ಲಿ ರಾಜಕೀಯ ಏಳುಬೀಳುಗಳು ಬೆರೆತುಹೋಗಿವೆ. ಅಷ್ಟಕ್ಕೂ ಇದು ರಾಜಕಾರಣದಿಂದಲೇ ಬಗೆಹರಿಯಬೇಕಾದ್ದರಿಂದ ಅದನ್ನು ಹೊರಗಿಟ್ಟು ನೋಡುವಂತದ್ದೆ ಅಲ್ಲ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೇ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಆರ್‌ಎಸ್‍ಎಸ್‍ನವರನ್ನು ಕಟುವಾಗಿ ಟೀಕಿಸುವ ಸಿದ್ದರಾಮಯ್ಯನವರು “ನಾನು ಇದರ ಪರವಾಗಿದ್ದೇನೆ” ಎಂದು ಬಹಿರಂಗವಾಗಿ ಹಲವು (ಹುಬ್ಬಳ್ಳಿ ಸೇರಿಸಿ) ಸಭೆಗಳಲ್ಲಿ ಹೇಳಿದ್ದರು. ಕ್ಯಾಬಿನೆಟ್‍ನಲ್ಲಿ ಚರ್ಚೆಗೂ ತಂದಿದ್ದರು. ಎಡಬಲದ ಒಕ್ಕೊರಲ ಅಭಿಮತ ಬರದೆ ಕೈಚೆಲ್ಲಿದ್ದರು. ಅವರು ತಮ್ಮ ಸೋಲಿನ ಪರಾಮರ್ಶೆಯ ಸಂದರ್ಭದಲ್ಲಿ (ದೆಹಲಿಯಲ್ಲಿ) ಒಳಮೀಸಲಾತಿ ಹಂಚದಿರುವುದೂ ಕಾರಣವಾಯಿತು ಎಂದಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ನೀಡುವುದನ್ನು ಒಳಗೊಂಡಿತ್ತು. ಸುಪ್ರೀಂ ಕೋರ್ಟ್ ಪಂಚ ನ್ಯಾಯಮೂರ್ತಿಗಳ ಪೀಠ ತೀರ್ಪುಕೊಟ್ಟು, ಒಳಮೀಸಲಾತಿ ಪರವಾಗಿ ಅಭಿಪ್ರಾಯಪಟ್ಟ ಸಮಯದಲ್ಲಿ ಹೆಚ್.ಡಿ ಕುಮಾರಸ್ವಾಮಿಯವರು ಸಾಮಾಜಿಕ ನ್ಯಾಯದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ಸರ್ವೋದಯ ಪಕ್ಷದ ರೈತ ಮುಖಂಡ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರು ಅವರದೇ ಆದ ಬಗೆಯಲ್ಲಿ (ಬೆಳೆ ಎಲ್ಲಿ ಕುಲ್ಟು ಬಿದ್ದಿರುತ್ತೊ ಅಲ್ಲಿ ಹೆಚ್ಚು ಗೊಬ್ಬರ ಹಾಕಬೇಕು) ಒಳಮೀಸಲಾತಿಯನ್ನ ಸಮರ್ಥಿಸಿದ್ದರು.

ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನದಾಸ್, ಖ್ಯಾತ ವಕೀಲರಾದ ಸಿ.ಎಸ್ ದ್ವಾರಕನಾಥ್, ಸ್ವಾಮೀಜಿಗಳಾದ ಗದುಗಿನ ತೋಂಟರಾಧ್ಯರು ಹಾಗೂ ಪ್ರಗತಿಪರ ಸಾಹಿತಿಗಳ ದೊಡ್ಡ ದಂಡೇ ಒಳಮೀಸಲಾತಿ ಪರವಾಗಿ ಮಾತನಾಡಿದ್ದಾರೆ. ಕೆ.ಎಸ್ ಭಗವಾನ್ ಮುಂತಾದವರು ಬಹಿರಂಗ ಹೋರಾಟಗಳಲ್ಲು ಪಾಲ್ಗೊಂಡಿದ್ದಿದೆ.

ಇಲ್ಲಿ ನಾನು ಹೇಳ ಬಯಸುತ್ತಿರುವುದು ಇವರ್ಯಾರು ಆರ್‌ಎಸ್‍ಎಸ್‍ನವರಲ್ಲ ಎಂಬುದರ ಜೊತೆಗೆ ಆರ್‌ಎಸ್‍ಎಸ್ ನವರ ನಡೆಯನ್ನ ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಲೇ ಬಂದವರು. ಈಗ ಅಧಿಕಾರದ ಚುಕ್ಕಾಣಿ ಇರುವುದು ಬಿಜೆಪಿ ಕೈಯಲ್ಲಿ ಅದರ ರಿಮೋಟ್ ಇರುವುದು ಆರ್‍ಎಸ್‍ಎಸ್ ಕೈಯಲ್ಲಿ. ಆರ್‌ಎಸ್‍ಎಸ್‍ನವರಿಗೆ ಮೀಸಲಾತಿಯೊಳಗೆ ಆಗಿಂದಾಗ್ಗೆ ಕೈಯಾಡಿಸುವುದರಲ್ಲಿ ಎಲ್ಲಿಲ್ಲದ ಉತ್ಸಾಹ. ಈಗ ಅದು ಒಳಮೀಸಲಾತಿಯ ಮೂಲಕವಿರಬಹುದು. ಆದರೆ ಮಾದಿಗರು ನಾವು ಒಳಮೀಸಲಿಗಷ್ಟೆ ಸೀಮಿತ, ಒಟ್ಟಾರೆ ಮೀಸಲಾತಿ ರಕ್ಷಣೆಯ ವಿಷಯ ಬಂದಾಗ ಕೈಕಟ್ಟಿ ಕೂರುತ್ತೇವೆ ಎಂದು ಎಲ್ಲಾದರೂ ಹೇಳಿದ್ದಾರ? ಹಾಗೆ ಇರುವ ಜಾಯಮಾನ ಇವರದಲ್ಲ. ಹಿಂದಿನಿಂದಲೂ ಹೋರಾಟವನ್ನೆ ಉಸಿರಾಗಿಸಿಕೊಂಡಿರುವ ಈ ಸಮುದಾಯ ಬೇರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಂತೆ ಸಂವಿಧಾನ ರಕ್ಷಣೆಗಿಳಿಯುತ್ತದೆ. ಅದು ಯಾರಿಗೂ ತಿಳಿಯದ ವಿಷಯವೇನಲ್ಲ. ಆದರೆ ಸುಖಾ ಸುಮ್ಮನೆ ಒಳಮೀಸಲಾತಿ ವಿರೋಧಿಗಳು ಇಂಥದೊಂದು ಅಸಂಭದ್ದವನ್ನು ಕ್ರಿಯೇಟ್ ಮಾಡಿಬಿಟ್ಟಿದ್ದಾರೆ.

ಇನ್ನು ದಲಿತರ ಐಕ್ಯತೆಯ ವಿಷಯಕ್ಕೆ ಬಂದರೆ, ಎಡ – ಬಲ ಈಗ ಐಕ್ಯವಾಗಿದೆ ಎಂದು ಭಾವಿಸಿದರೆ ಅದು ಮೂರ್ಖತನದ್ದಾಗುತ್ತೆ. ಇಲ್ಲವೆ ಪ್ರಜ್ಞಾಪೂರ್ವಕವಾಗಿ ಸುಳ್ಳೇ ಹೇಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಇವರ ಐಕ್ಯತೆ ಮುರಿದು ಬಿದ್ದು ದಶಕಗಳೆ ಸಂದಿವೆ. ಹೊಸ ತಲಮಾರಿನ ಹೊಲೆ – ಮಾದಿಗ ಯುವಕರು ಒಟ್ಟಿಗೆ ಕೂತು ಗುಂಡಾಕುವುದಿರಲಿ ಒಂದು ಟೀ ಕುಡಿಯುವುದೂ ಸಹ ನಡೆಯುತ್ತಿಲ್ಲ. ಅವರು ಅವರೇ ಇರುತ್ತಾರೆ. ಇವರು ಇವರೇ ಸೇರುತ್ತಾರೆ. ಈರ್ವರ ನಡುವಿನ ಮೀಸಲಾತಿ ಕುರಿತಾದ ಅನುಮಾನ ಅಪನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಈ ಅಸ್ಪೃಶ್ಯ ಜಾತಿಗಳ ಐಕ್ಯತೆ ಮತ್ತೆ ಸಾಧ್ಯವಿದೆ. ಒಬ್ಬರು ಹೆಚ್ಚು ಕಬಳಿಸಿದರೆಂಬ ಅನುಮಾನ ಅಪನಂಬಿಕೆ ದೂರಾಗಬೇಕು. ಅದು ಅವರವರ ಪಾಲನ್ನು ಅವರವರಿಗೆ ಕೊಟ್ಟಾಗ ಮಾತ್ರ ಸಾಧ್ಯ. ಇದಕ್ಕೆ ಮೀಸಲಾತಿಯಲ್ಲಿನ ಒಳ ವರ್ಗೀಕರಣ ಜಾರಿಯಾಗಬೇಕು.

ಇದು ಮನೆಯೊಳಗಿನ ಸಮಸ್ಯೆಯಾಗಿದ್ದಾಗ ಇದನ್ನು ಬಗೆಹರಿಸಿಕೊಳ್ಳುವುದು ಮನೆಯ ಹಿರಿಯ ಸದಸ್ಯರ ಕೈಯಲ್ಲಿತ್ತು. ಯಾವಾಗ ಹಿರಿಯರೆನಿಸಿದವರು ಕೈಚೆಲ್ಲಿ ಸ್ವಾರ್ಥಪರರೆನಿಸಿದರೋ, ವಂಚನೆಗೊಳಗಾದವರು ಅನಿವಾರ್ಯವಾಗಿ ನ್ಯಾಯಕ್ಕಾಗಿ ಇನ್ನೊಬ್ಬರ ಮನೆ ಕದಬಡಿಯಬೇಕಾಯಿತು.

ಈಗಲೂ ಏನೂ ಆಗಿಲ್ಲ. ಮನೆಯೊಳಗಿನ ಅನುಮಾನ, ಅಪನಂಬಿಗಳು ಬಗೆಹರಿದರೆ – ಇದು ನಮ್ಮ ಮನೆ, ನಾವೆಲ್ಲ ಒಂದಾಗಿ ಹೊರಗಿನ ಶತ್ರುಗಳಿಂದ ಮನೆಯನ್ನು ರಕ್ಷಿಸಿಕೊಳ್ಳಬೇಕೆಂಬ ಜವಬ್ದಾರಿ ಮತ್ತೆ ಹುಟ್ಟುತ್ತದೆ. ಅದಕ್ಕೆ ಮೊದಲು ಒಳಮೀಸಲಾತಿ ಜಾರಿಯಾಗಬೇಕು.

  • ಗುರುಪ್ರಸಾದ್ ಕಂಟಲಗೆರೆ

ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಗುರುಪ್ರಸಾದ್ ಹೊಸತಲೆಮಾರಿನ ಶಕ್ತ ಬರಹಗಾರ. ಹಲವು ದಿನಪತ್ರಿಕೆಗಳ ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ಛಾಪು ಮೂಡಿಸಿದ ಗುರುಪ್ರಸಾದ್ ಅವರ ಚೊಚ್ಚಲ ಕಥಾಸಂಕಲನ ‘ಗೋವಿನ ಜಾಡು’ ಗಮನ ಸೆಳೆದ ಪುಸ್ತಕ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಎಂಬ ಪುಸ್ತಕವನ್ನೂ ರಚಿಸಿದ್ದಾರೆ.


ಇದನ್ನೂ ಓದಿ: ಮೀಸಲಾತಿ ಮತ್ತು ಒಳಮೀಸಲಾತಿ ಎರಡೂ ಒಂದೆ..: ಬೆಟ್ಟಯ್ಯ ಕೋಟೆ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read