ರಾಜ್ಯ ಕಾಂಗ್ರೆಸ್ ಸರ್ಕಾರದ 5 ಜನಪ್ರಿಯ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಜೂನ್ 18ರಿಂದ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೊದಲ ಎರಡು ದಿನ ಸರ್ವರ್ ಡೌನ್ ಆಗಿ, ಗ್ರಾಹಕರು ಪರದಾಡಿದ್ದರು. ಆದರೆ, ಈಗ ಸರ್ವರ್ ಸಮಸ್ಯೆ ಸ್ವಲ್ಪ ಒಂದು ಹಂತಕ್ಕೆ ಸರಿಯಾಗಿದ್ದು, ಆನ್ಲೈನ್ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೇರಿ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ನೀವು ಅರ್ಜಿ ಸಲ್ಲಿಸಬಹುದು.
ನಿಮ್ಮ ಮೊಬೈಲ್ನಿಂದಲೇ ಅರ್ಜಿ ಸಲ್ಲಿಸಬಹುದು
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸರಳವಾಗಿದ್ದು, ಸರ್ವರ್ ಡೌನ್ ಆಗಿಲ್ಲ ಎಂದರೆ ನಿಮ್ಮ ಮೊಬೈಲ್ ಅಥವಾ ನಿಮ್ಮ ಲ್ಯಾಪ್ಟಾಪ್ನಲ್ಲಿಯೂ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ನಿಮ್ಮ ಬಳಿ ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಮತ್ತು ಒಟಿಪಿ ನಮೂದಿಸಲು ಮೊಬೈಲ್ ಇರಬೇಕು.
1 ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಗೂಗಲ್ ಕ್ರೋಮ್ ಅಥವಾ ಫೈರ್ಫಾಕ್ಸ್ ಬ್ರೌಸರ್ ಅನ್ನು ಓಪನ್ ಮಾಡಿ. ಅಲ್ಲಿನ ಯುಆರ್ಎಲ್ ಬಾರ್ನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿಯೇ ರೂಪಿಸಲಾದ ಸೇವಾಸಿಂಧು ಪೋರ್ಟಲ್ನ ಪ್ರತ್ಯೇಕ ವೆಬ್ಸೈಟ್ sevasindhugs.karnataka.gov.in ಎಂದು ಟೈಪ್ ಮಾಡಿ ಸರ್ಚ್ ಮಾಡಿ. ಅದಾದ ಬಳಿಕ ನಿಮಗೆ ಈ ರೀತಿ ವೆಬ್ಪೇಜ್ ಒಪನ್ ಆಗುತ್ತದೆ. ಇಲ್ಲಿ ಅನ್ನಭಾಗ್ಯ ಹೊರತುಪಡಿಸಿ ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಸದ್ಯ ಗೃಹಜ್ಯೋತಿಗೆ ಮಾತ್ರ ಅರ್ಜಿ ಸಲ್ಲಿಸುವ ಆಯ್ಕೆ ಇದೆ.
2 ಗೃಹಜ್ಯೋತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಅರ್ಜಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಹಲವು ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
3 ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
4 ಬಳಿಕ ನಿಮ್ಮ ವ್ಯಾಪ್ತಿಯ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಆರು ಎಸ್ಕಾಂಗಳು ಇದ್ದು, BESCOM, CHESCOM, HESCOM, GESCOM, MESCOM ಹಾಗೂ ಹುಕ್ಕೇರಿ ಸೊಸೈಟಿ ಎಂಬ ಆಯ್ಕೆಗಳು ಇವೆ. ಅದರಲ್ಲಿ ನಿಮ್ಮ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
5 ನಿಮ್ಮ ಅಕೌಂಟ್ ನಂಬರ್ ನಮೂದಿಸಿ! ಬೆಸ್ಕಾಂ ಆಯ್ಕೆ ಮಾಡಿಕೊಂಡ ತಕ್ಷಣ ನಿಮ್ಮ ವಿದ್ಯುತ್ ಮೀಟರ್ನ ಅಕೌಂಟ್ ನಂಬರ್ ಅನ್ನು ನಮೂದಿಸಿ. ಆರ್ಆರ್ ಸಂಖ್ಯೆಯನ್ನು ನೀವು ಇಲ್ಲಿ ನಮೂದಿಸಬಾರದು. ಆರ್ಆರ್ ಸಂಖ್ಯೆಯೇ ಬೇರೆ, ಅಕೌಂಟ್ ಸಂಖ್ಯೆಯೇ ಬೇರೆ. ಈ ಸಂಖ್ಯೆ ನಿಮ್ಮ ಕರೆಂಟ್ ಬಿಲ್ನಲ್ಲಿ ಆರ್ಆರ್ ಸಂಖ್ಯೆಯ ಕೆಳಗಡೆ ಇರುತ್ತದೆ. ನೀವು ಅಕೌಂಟ್ ನಂಬರ್ ನಮೂದಿಸಿದ ಬಳಿಕ ವಿದ್ಯುತ್ ಮೀಟರ್ ಯಾರ ಹೆಸರಿನಲ್ಲಿದೆಯೋ ಅವರ ಹೆಸರು ಹಾಗೂ ವಿಳಾಸ ಆಟೋಮ್ಯಾಟಿಕ್ ಆಗಿ ಅಪ್ಡೇಟ್ ಆಗಲಿದೆ.
ಆ ನಂತರ ನೀವು ಬಾಡಿಗೆದಾರರೋ ಅಥವಾ ಮನೆ ಮಾಲೀಕರೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಎರಡು ಆಯ್ಕೆಗಳಿದ್ದು, ನಿಮಗೆ ಸರಿ ಹೊಂದಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ.
7 ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್ ಸಂಖ್ಯೆಯನ್ನು ನಮೂದಿಸಿದ ಬಳಿಕ ನಿಮಗೆ ಆಧಾರ್ ದೃಢೀಕರಣದ ಆಯ್ಕೆಗಳು ಕಾಣುತ್ತವೆ. ಆಧಾರ್ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಒಂದು ವೇಳೆ ಈಗಾಗಲೇ ಆಧಾರ್ ದೃಢೀಕರಣ ಆಗಿದ್ದರೆ, ನೀವು ಆಧಾರ್ ಸಂಖ್ಯೆ ನಮೂದಿಸಿದ ತಕ್ಷಣ ನಿಮ್ಮ ಹೆಸರು ಕೂಡ ಅಲ್ಲಿ ಆಟೋಮ್ಯಾಟಿಕ್ ಆಗಿ ಬರಲಿದೆ.
8 ಮೊಬೈಲ್ ನಂಬರ್ ನಮೂದಿಸಿ! ಆಧಾರ್ ದೃಢೀಕರಣದ ಬಳಿಕ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ. ಇದಾದ ಬಳಿಕ ನಿಮ್ಮ ಮೊಬೈಲ್ಗೆ ಒಂದು ಒಟಿಪಿ ಬರಲಿದೆ. ಆ ಒಟಿಪಿಯನ್ನು ನಮೂದಿಸಿ.
9 ಒಟಿಪಿ ನಮೂದಿಸಿದ ಬಳಿಕ ಕೆಳಗಡೆ ಡಿಕ್ಲರೇಷನ್ ಎಂಬ ವಿಭಾಗ ಇದ್ದು, ಅಲ್ಲಿ ಐ ಅಗ್ರಿ ಎಂಬ ಟಿಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಕು. ಅದಾದ ನಂತರ ವರ್ಡ್ ವೆರಿಫಿಕೇಷನ್ ಕೇಳುತ್ತದೆ. ಅಲ್ಲಿರುವ ಸಂಖ್ಯೆಯನ್ನು ನೀವು ಕೊಟ್ಟಿರುವ ಬಾಕ್ಸ್ನಲ್ಲಿ ಸರಿಯಾಗಿ ನಮೂದಿಸಬೇಕು.
ಬಳಿಕ ಕೆಳಗಡೆ ಸಬ್ಮಿಟ್, ಕ್ಯಾನ್ಸಲ್ ಹಾಗೂ ಕ್ಲೋಸ್ ಎಂಬ ಮೂರು ಆಯ್ಕೆಗಳಿದ್ದು, ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಇದರ ಬಳಿಕ ಮತ್ತೊಂದು ವೆಬ್ಪೇಜ್ಗೆ ನೀವು ಹೋಗುತ್ತೀರಿ. ಅಲ್ಲಿ ನೀವು ನಮೂದಿಸಿರುವ ಮಾಹಿತಿಯನ್ನು ಮತ್ತೊಂದು ಸಲ ವೆಬ್ಸೈಟ್ ತೋರಿಸುತ್ತದೆ. ಎಲ್ಲ ಸರಿ ಇದೆ ಎಂದು ಖಚಿತಪಡಿಸಿಕೊಂಡ ಬಳಿಕ ನೀವು ಮತ್ತೊಂದು ಸಲ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಎಡಿಟ್ ಮಾಡಲು ಕೂಡ ಅವಕಾಶ ಇದೆ.
ಕೊನೆಗೆ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ಬಳಿಕ ನಿಮಗೆ ಒಂದು ಸ್ವೀಕೃತಿ ಪತ್ರ ಅಥವಾ ಅಕ್ನಾಲೇಜ್ಮೆಂಟ್ ಬರಲಿದೆ. ಅದನ್ನು ನೀವು ಎಕ್ಸ್ಪೋರ್ಟ್ ಪಿಡಿಎಫ್ ಎಂದು ಆಯ್ಕೆ ಕೊಟ್ಟರೆ ಸ್ವೀಕೃತಿ ಪತ್ರ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಸೇವ್ ಆಗಲಿದೆ. ಮುಂದೆ ಅರ್ಜಿಯನ್ನು ಪರಿಶೀಲಿಸಲಿರುವ ಸರ್ಕಾರ ನಿಮಗೆ ಉಚಿತವಾಗಿ ವಿದ್ಯುತ್ ಅನ್ನು ನೀಡಲಿದೆ. ಸದ್ಯಕ್ಕೆ ಯಾವುದೇ ರೀತಿಯ ದಾಖಲೆಗಳನ್ನು ಅಪ್ಲೋಡ್ ಮಾಡುವಂತಿಲ್ಲ. ಮುಂದೆ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್ನಲ್ಲೇ ಅರ್ಜಿ ಸಲ್ಲಿಸಲು ಪ್ರತ್ಯೇಕ ಆ್ಯಪ್: ಡಿ.ಕೆ ಶಿವಕುಮಾರ್
OK