HomeಮುಖಪುಟCloud Seeding: ಮೋಡ ಬಿತ್ತನೆ ಎಂದರೇನು? ಇದು ನಿಜಕ್ಕೂ ಕೆಲಸ ಮಾಡುತ್ತದೆಯೇ? ದುಷ್ಪರಿಣಾಮಗಳೇನು?

Cloud Seeding: ಮೋಡ ಬಿತ್ತನೆ ಎಂದರೇನು? ಇದು ನಿಜಕ್ಕೂ ಕೆಲಸ ಮಾಡುತ್ತದೆಯೇ? ದುಷ್ಪರಿಣಾಮಗಳೇನು?

ತೀವ್ರ ಬರದಿಂದ ತತ್ತರಿಸಿದ್ದ ಥೈಲೆಂಡ್ ದೇಶದ ರಾಜ 1955ರಲ್ಲಿ ರಾಯಲ್ ರೈನ್‌ಮೇಕಿಂಗ್ ಪ್ರಾಜೆಕ್ಟ್ ಶುರು ಮಾಡಿದರು. 1983ರಲ್ಲಿ ಭಾರತವು ಮೋಡಬಿತ್ತನೆಗೆ ಮುಂದಾಯಿತು.

- Advertisement -
- Advertisement -

ಕರ್ನಾಟಕದಲ್ಲಿ ಮುಂಗಾಳು ವಿಳಂಬವಾಗಿದೆ. ಜೂನ್ ಮೊದಲ ವಾರದಲ್ಲಿಯೇ ಸುರಿಯಬೇಕಿದ್ದ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ರಾಜ್ಯದ ಜಲಾಶಯಗಳು ಬರಿದಾಗುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ಸರ್ಕಾರ ಮೋಡ ಬಿತ್ತನೆಯ ಮೊರೆ ಹೋಗಲು ನಿರ್ಧರಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರು ಮೋಡ ಬಿತ್ತನೆಯ ಮಾತುಗಳನ್ನಾಡಿದ್ದಾರೆ. ನಿಜಕ್ಕೂ ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ? ಮೋಡ ಬಿತ್ತನೆ ಮಾಡಿ ಮಳೆ ಬರಿಸುವುದಾದರೆ ಇಷ್ಟು ದಿನ ಬರ ಇದ್ದಾಗ ಏಕೆ ಮಾಡಲಿಲ್ಲ? ಮನುಷ್ಯರಿಗೆ ಪ್ರಕೃತಿಯನ್ನು ನಿಯಂತ್ರಿಸಲು ಸಾಧ್ಯವೇ ಎಂಬ ಪ್ರಶ್ನೆಗಳು ಮೂಡುತ್ತವೆ. ಹಾಗಾದರೆ ಮೋಡ ಬಿತ್ತನೆ (Cloud Seeding) ಎಂದರೇನು? ಇದು ನಿಜಕ್ಕೂ ಕೆಲಸ ಮಾಡುತ್ತದೆಯೇ? ಇದರ ದುಷ್ಪರಿಣಾಮಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮೋಡಗಳು

ನಾವು ಮೋಡ ಬಿತ್ತನೆ ಬಗ್ಗೆ ತಿಳಿದುಕೊಳ್ಳುವ ಮುನ್ನ ಮೋಡ ಮತ್ತು ಮಳೆಯ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಭೂಮಿಯ ಮೇಲೆ ನೀರು ಮೂರು ರೀತಿಯಲ್ಲಿ ಅಸ್ತಿತ್ವದಲ್ಲಿದೆ. ಆವಿಯ (Vapor) ರೂಪದಲ್ಲಿ, ನೀರಿನ (Water) ರೂಪದಲ್ಲಿ ಮತ್ತು ಮಂಜುಗೆಡ್ಡೆಯ (Ice) ರೂಪದಲ್ಲಿ ನೀರು ಇರುತ್ತದೆ. ವಾತಾವರಣದಲ್ಲಿನ ಆವಿಯು ನಿಧಾನವಾಗಿ ಮೇಲಕ್ಕೆ ಚಲಿಸುತ್ತಿರುತ್ತದೆ. ಅದು ಭೂಮಿಯಿಂದ ಮೇಲು ಮೇಲಕ್ಕೆ ಚಲಿಸುದಂತೆ ತಂಪಾದ ವಾತಾವರಣದ ಕಾರಣಕ್ಕೆ ಘನೀಕರಣಗೊಂಡು (Condensation) ಆವಿಯು ಸಣ್ಣ ಸಣ್ಣ ನೀರಿನ ಕಣಗಳಾಗಿ ಬದಲಾಗುತ್ತದೆ. ಆ ನೀರಿನ ಕಣಗಳು ಒಂದಕ್ಕೊಂದು ಸೇರಿ ಕೋಟ್ಯಾಂತರ ಕಣಗಳಾಗಿ ಮೋಡಗಳಾಗುತ್ತವೆ. ಈ ಮೋಡಗಳು ಮತ್ತಷ್ಟು ಮೇಲಕ್ಕೆ ಹೋದಂತೆ ಮತ್ತಷ್ಟು ತಂಪಾದ ವಾತವಾರಣ ಇರುವುದರಿಂದ ಮತ್ತುಷ್ಟು ಗಟ್ಟಿಯಾಗಿ (freeze) ಸಣ್ಣ ಸಣ್ಣ ಮಂಜುಗೆಡ್ಡೆಯ ಹರಳುಗಳಾಗಿ ಪರಿವರ್ತನೆಯಾಗುತ್ತವೆ. ಇವು ಎತ್ತರದಲ್ಲಿರುವ ಮೋಡಗಳಾಗಿವೆ.

ಮಳೆ ಹೇಗೆ ಬರುತ್ತದೆ?

ಮೋಡಗಳಲ್ಲಿ ಸಣ್ಣ ಸಣ್ಣ ನೀರಿನ ಹನಿಗಳು ಸೇರಿ ದೊಡ್ಡ ಹನಿಗಳಾಗುತ್ತವೆ. ಅವು ಮತ್ತಷ್ಟು ಮೇಲೆ ಹೋದಾಗ ತಂಪಾದ ವಾತಾವರಣದಿಂದಾಗಿ ಘನೀಕರಿಸಿ ಮಂಜುಗೆಡ್ಡೆಯ ಹರಳುಗಳಾಗುತ್ತವೆ. ಸಣ್ಣ ಸಣ್ಣ ಮಂಜಿನ ಹರಳುಗಳು ಸೇರಿ ದೊಡ್ಡ ಹರಳುಗಳಾಗುತ್ತವೆ. ಈ ಪ್ರಕ್ರಿಯೆ ಮುಂದುವರಿದಂತೆ ಅವುಗಳ ಭಾರ ತುಂಬಾ ಹೆಚ್ಚಾಗಿ ಭೂಮಿಗೆ ಬೀಳಲು ಆರಂಭಿಸುತ್ತವೆ. ಆ ಸಂದರ್ಭದಲ್ಲಿ ಭೂಮಿಯ ತಾಪಮಾನ ತಂಪಾಗಿದ್ದರೆ ಹಿಮದ ರೀತಿ ಬೀಳುತ್ತವೆ. ಉಷ್ಣಾಂಶ ಹೆಚ್ಚಾಗಿದ್ದರೆ ಕರಗಿ ನೀರಾಗಿ ಬೀಳುತ್ತದೆ. ಈ ರೀತಿಯಾಗಿ ಮಳೆ ಬರುವುದನ್ನು ನಾವು ಕಾಣಬಹುದು. ಭೂಮಿಯ ಉಷ್ಣಾಂಶ ತೀರಾ ಕಡಿಮೆಯಿದ್ದಾಗ ನಾವು ಆಲೀಕಲ್ಲು (ಮಂಜು ಕರಗದೆ) ಬೀಳುವುದನ್ನು ಸಹ ನೋಡಬಹುದು.

ಮೋಡ ಬಿತ್ತನೆ

ನಮ್ಮ ಬಾಯಿಂದ ಚಳಿಗಾಲದಲ್ಲಿ ಆವಿ ಬರುವುದನ್ನು ನೀವು ಗಮನಿಸಿರಬಹುದು. ಅವು ಘನೀಕರಿಸಿ ಸಣ್ಣ ಸಣ್ಣ ಕಣ್ಣಿಗೆ ಕಾಣದ ನೀರಿನ ಕಣಕಗಳಾಗುತ್ತವೆ. 1943ರಲ್ಲಿ ಅಮೆರಿಕದ ವಿಜ್ಞಾನಿ ಡಾ.ವಿನ್ಸಂಟ್ ಶೇಫರ್ ಎಂಬುವವರು ಒಂದು ಪ್ರಯೋಗ ಮಾಡಿದರು. ತಮ್ಮ ಮನೆಯ ಪ್ರಿಡ್ಜ್‌ನಂತಹ ಉಪಕರಣದಲ್ಲಿ ಆಕಸ್ಮಿಕವಾಗಿ ಬಾಯಿಯಿಂದ ಆವಿಯನ್ನು ಊದಿದಾಗಿ ಅಲ್ಲಿನ ತಂಪಾದ ವಾತವಾರಣಕ್ಕೆ ಅವು ಬೇಗ ಘನೀಕರಿಸಿ ನೀರು ಆಗುವುದನ್ನು ಅವರು ಗಮನಿಸಿದರು. ಮತ್ತಷ್ಟು ತಂಪು ಮಾಡಿದರೆ ಆದಷ್ಟು ಬೇಗ ಮಂಜುಗೆಡ್ಡೆಯಾಗುತ್ತದೆ ಎಂಬುದನ್ನು ಕಂಡುಕೊಂಡರು. ಅದೇ ಸೂತ್ರವನ್ನು ಮೋಡಗಳು ಮೇಲೂ ಪ್ರಯೋಗಿಸಿದರೆ ಅಂದರೆ ಅವುಗಳನ್ನು ಆದಷ್ಟು ಬೇಗ ತಂಪಿನಿಂದ ಘನೀಕರಿಸಿದರೆ ನೀರಿನ ಕಣಗಳು ಬೇಗ ಮಂಜುಗೆಡ್ಡೆಯಾಗಿ ಪರಿವರ್ತನೆಯಾಗಿ ಭಾರ ತಡೆಯಲಾರದೆ ಮಳೆಯಾಗಿ ಸುರಿಯುತ್ತದೆ ಎಂಬುದನ್ನು ಕಂಡುಕೊಂಡರು.

ಅಂದರೆ ಮಳೆ ಬರುವುದು ಈ ಸರಣಿಯ ಕೊನೆಯ ಪ್ರಕ್ರಿಯೆಯ ಭಾಗ. ಹಾಗಾಗಿ ಡ್ರೈ ಐಸ್ (ಕಾರ್ಬನ್ ಡೈ ಆಕ್ಸೈಡ್‌ನ ಘನ ರೂಪ, ಇದನ್ನು ಫ್ರಿಡ್ಜ್‌ಗಳಲ್ಲಿ ಬಳಸುತ್ತಾರೆ) ಬಳಸಿದರೆ ಈ ಪ್ರಕ್ರಿಯೆ ಬೇಗ ಆಗುತ್ತದೆ ಎಂದು ಡಾ. ವಿನ್ಸಂಟ್ ಶೇಫರ್ ಗ್ರಹಿಸಿದರು. ಹಾಗಾಗಿ ಅವರು ಹತ್ತಿರದಲ್ಲಿರುವ ಮೋಡಗಳನ್ನು ಡ್ರೈ ಐಸ್ ಬಳಸಿ ಮತ್ತುಷ್ಟು ತಂಪುಕರೀಸಿದರೆ ನೀರಿನ ಕಣಗಳು ಒಟ್ಟುಗೂಡಿ ಬೇಗನೇ ಮಂಜುಗೆಡ್ಡೆಗಳಾಗಿ ಬದಲಾಗಿ ಮಳೆಯಾಗಿ ಸುರಿಯುತ್ತದೆ ಎಂಬುದನ್ನು ಅವರು 13 ನವೆಂಬರ್ 1946ರಂದು ಪ್ರಯೋಗ ಮಾಡಿದರು. ಅವರು 2.5 ಕೆಜಿಯ ಡ್ರೈ ಐಸ್‌ಅನ್ನು ವಿಮಾನದಲ್ಲಿ ಹೊಯ್ದು ನ್ಯೂಯಾರ್ಕ್‌ನ ಮೌಂಟ್ ಗ್ರೇಲಾಕ್ ಎಂಬಲ್ಲಿ ಮೋಡಗಳ ಮೇಲೆ ಐಸ್‌ ಅನ್ನು ಪುಡಿ ಮಾಡಿ ಎಸೆದರು. ಆಗ ಮೋಡಗಳು ಘನೀಕರಿಸಿ ಸ್ವಲ್ಪ ಹೊತ್ತಿನಲ್ಲೇ ಮಳೆ ಸುರಿಸಿದವು! ಈ ರೀತಿಯಾಗಿ ಡಾ.ವಿನ್ಸಂಟ್ ಮೋಡಬಿತ್ತನೆಯನ್ನು ಮೊದಲ ಬಾರಿಗೆ ಕಂಡು ಹಿಡಿದರು.

ಅವರ ನಂತರ ಮತ್ತೊಬ್ಬ ವಿಜ್ಞಾನಿ ಡಾ.ಬೇರ್ಹಾಡ್ ವೋಂಗೌಟ್ ಎಂಬುವವರು ಮತ್ತೊಂದು ದೃಷ್ಟಿಕೋನದಲ್ಲಿ ಮೋಡಬಿತ್ತನೆ ಮೇಲೆ ಕೆಲಸ ಮಾಡಿದರು. ಅವರು ಆವಿಯು ನೀರಿನ ಕಣಗಳಾಗಿ ಬದಲಾಗಲು ಒಂದು ಮೇಲ್ಮೈ ಬೇಕು ಎಂಬುದನ್ನು ನಿರೂಪಿಸಿದರು. ಭೂಮಿಯ ಮೇಲಿನ ಧೂಳಿನ ಕಣಗಳು ಮೇಲಕ್ಕೆ ಚಲಿಸಿ ಮೇಲ್ಮೈ ರೀತಿ ವರ್ತಿಸಿ ನೀರು ಘನೀಕರಿಸಲು ಸಹಾಯ ಮಾಡುತ್ತವೆ ಎಂಬುದನ್ನು ಕಂಡುಕೊಂಡರು. ಹಾಗಾಗಿ ಅದಕ್ಕಿಂತ ಉತ್ತಮ ರೀತಿಯ ಮೇಲ್ಮೈಯನ್ನು ರೂಪಿಸಿದ್ದಲ್ಲಿ ಆದಷ್ಟು ಬೇಗ ಘನೀಕರಿಸಿ ಮಳೆ ಬರಿಸಬಹುದು ಎಂಬುದು ಇವರ ವಾದವಾಗಿತ್ತು. (ಸ್ನಾನದ ಮನೆಯಲ್ಲಿ ಸುತ್ತಲೂ ಗ್ಲಾಸ್‌ ಇದ್ದಲ್ಲಿ ಬಿಸಿ ನೀರಿನ ಸ್ನಾನದ ಸಮಯದಲ್ಲಿ ಸುತ್ತಲೂ ಆವಿಯು ಘನೀಕರಿಸುವುದನ್ನು, ಕನ್ನಡಿ ಇದ್ದಲ್ಲಿ ಅಲ್ಲಿ ನೀರು ಹರಿಯುವುದನ್ನು ನಾವು ಗಮನಿಸಿದ್ದೇವೆ).

ಡಾ.ಬೇರ್ಹಾಡ್ ವೋಂಗೌಟ್ ಸಿಲ್ವರ್ ಅಯೋಡೈಡ್ ಅನ್ನು ಮೋಡಗಳ ಮೇಲೆ ಸೇರಿಸಿ ಆ ಮೇಲ್ಮೈಯನ್ನು ಸೃಷ್ಟಿಸಬಹುದು ಎಂಬುದನ್ನು ಕಂಡು ಹಿಡಿದರು. ಅದು ಆವಿಯನ್ನು ಬೇಗ ಆಕರ್ಷಿಸುವುದಲ್ಲದೇ ಅದನ್ನು ಶೀಘ್ರವಾಗಿ ನೀರಿನ ಕಣಗಳಾಗಿ ಬದಲಿಸುತ್ತದೆ. ಕಣಗಳು ಬೇಗ ಮಂಜಾಗುತ್ತವೆ. ಹಾಗಾಗಿ ಸಿಲ್ವರ್ ಅಯೋಡೈಡ್ ಅನ್ನು ಮೋಡಗಳ ಮೇಲೆ ಸಿಂಪಡಿಸಿದರೆ ಅದು ಮೇಲ್ಮೈಯಾಗಿ ಕೆಲಸ ಮಾಡಿ ನೀರಿನ ಕಣಗಳನ್ನು ಆಕರ್ಷಿಸಿ ಮಳೆ ಸುರಿಸುತ್ತದೆ ಎಂದು ಕಂಡು ಹಿಡಿದರು ಮತ್ತು ಪ್ರಯೋಗ ಮಾಡಿದರು.

ಆದರೆ ಈ ಮೇಲಿನ ಎರಡು ವಿಧಾನಗಳು ಸಹ ಬಹಳ ಖರ್ಚುದಾಯಕವಾದವು. ರಾಕೆಟ್ ಉಡಾಯಿಸಿ ಮಳೆ ಬರಿಸುವ ಪ್ರಯೋಗಗಳೂ ನಡೆದಿವೆ. ತೀವ್ರ ಬರದಿಂದ ತತ್ತರಿಸಿದ್ದ ಥೈಲೆಂಡ್ ದೇಶದ ರಾಜ 1955ರಲ್ಲಿ ರಾಯಲ್ ರೈನ್‌ಮೇಕಿಂಗ್ ಪ್ರಾಜೆಕ್ಟ್ ಶುರು ಮಾಡಿದರು. 1983ರಲ್ಲಿ ಭಾರತವು ಮೋಡಬಿತ್ತನೆಗೆ ಮುಂದಾಯಿತು. ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಈ ಪ್ರಯೋಗ ನಡೆಸಿವೆ.

ಮಳೆ ಬಾರದಂತೆ ತಡೆಯಬಹುದು!

ಮೋಡ ಬಿತ್ತನೆಯನ್ನು ಮಳೆ ತರಿಸಲು ಮಾಡುವುದಾದರೆ, ಮಳೆ ಬಾರದಂತೆ ತಡೆಯಲು ಸಹ ಮೋಡಬಿತ್ತನೆ ಮಾಡುವುದುಂಟು! ಇದೇಗಪ್ಪ ಅಂದರೆ ನಾವೀಗಾಗಲೇ ಮಳೆ ತರಿಸುವ ವಿಧಾನ ಕಂಡುಕೊಂಡಿದ್ದೇವೆ. ಮೋಡಗಳಲ್ಲಿನ ನೀರಿನ ಕಣಗಳು ಬೇಗ ಘನೀಕರಿಸಿ ಮಳೆಯಾಗಿ ಬೀಳಿಸುವುದು. ಅದೇ ಮಾದರಿಯಲ್ಲಿ ಇಂತಹ ನಿಗಧಿತ ದಿನ ಮಳೆ ಬಾರದಂತೆ ತಡೆಯಬೇಕಾದರೆ ಅದಕ್ಕೂ ಒಂದಷ್ಟು ದಿನಗಳ ಮೊದಲೇ ಮೋಡಗಳ ಮೇಲೆ ಸಿಲ್ವರ್ ಅಯೋಡೈಡ್ ಸುರಿದು ಮಳೆ ಬರಿಸುವಂತೆ ಮಾಡಿ ಎಲ್ಲಾ ಮೋಡಗಳನ್ನು ಖಾಲಿ ಮಾಡಿಬಿಟ್ಟರೆ ನಂತರ ನಾವು ಬಯಸಿದ ದಿನ ಮಳೆ ಬರುವುದಿಲ್ಲ ಎಂಬುದೇ ಈ ಐಡಿಯಾ ಆಗಿದೆ. 2008ರಲ್ಲಿ ಚೀನಾ ದೇಶವು ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ದಿನ ಮಳೆ ಬಾರದಂತೆ ತಡೆಯಲು ಅದಕ್ಕೂ ಮೊದಲೇ ಮೋಡ ಬಿತ್ತನೆ ಮಾಡಿ ಮಳೆ ಸುರಿಸಿತ್ತು!

ದುಷ್ಪರಿಣಾಮಗಳು

ಇದರಿಂದ ನಮ್ಮ ಹವಾಮಾನದ ಮೇಲೆ ದೂರಗಾಮಿ ಪರಿಣಾಮಗಳೇನು ಎಂಬ ಪ್ರಶ್ನೆ ಎದುರಾಗುತ್ತದೆ. ಆಶ್ಚರ್ಯವೆಂದರೆ ಈ ಮೋಡ ಬಿತ್ತನೆಯಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ! ಏಕೆಂದರೆ ನಾವು ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಾವು ಇರುವ ಮೋಡಗಳನ್ನೇ ಬೇಗ ಘನೀಕರಿಸಿ ಶೀಘ್ರ ಮಳೆಯಾಗುವಂತೆ ಮಾಡುತ್ತಿದ್ದೇವೆ ಅಷ್ಟೇ ಹೊರತು ನಾವೇ ಮೋಡಗಳನ್ನು ಸೃಷ್ಟಿಸುತ್ತಿಲ್ಲ. ಅಂದರೆ ನಾಳೆ ಅಥವಾ ಒಂದು ವಾರಕ್ಕೆ ಮಳೆಯಾಗುವುದನ್ನು ಇಂದೇ ಸುರಿಯವಂತೆ ಮಾಡುತ್ತಿದ್ದೇವೆ. ಇನ್ನೊಂದು ರೀತಿಯಲ್ಲಿ ದಾವಣಗೆರೆಯಲ್ಲಿ ಸುರಿಯುವ ಮಳೆಯನ್ನು ಬೆಂಗಳೂರಿನಲ್ಲಿಯೇ ಸುರಿಯವಂತೆ ಮಾಡಬಹುದಾಗಿದೆ.

ಆದರೆ ಮನುಷ್ಯರೇ ಮೋಡಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ವಾತಾವರಣದಲ್ಲಿ ಸ್ವಾಭಾವಿಕವಾಗಿ ನೀರಿನ ಆವಿ ಇದ್ದರೆ ಮಾತ್ರ ಅದು ಮೋಡವಾಗಲು ಸಾಧ್ಯ. ಮೋಡಗಳಿದ್ದರೆ ಮಾತ್ರ ಮಳೆ ಸುರಿಸಲು ಸಾಧ್ಯ. ಹಾಗಾಗಿ ಬಹಳಷ್ಟು ಜನರು ಈ ಮೋಡಬಿತ್ತನೆ ಎಂಬುದು ಕೆಲಸ ಮಾಡುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಅಂದರೆ ಒಟ್ಟು ಮೋಡಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಮೋಡಬಿತ್ತನೆ ಯಶಸ್ವಿಯಾಗಿದೆಯೇ ಇಲ್ಲವೇ ಎಂಬುದನ್ನು ನಾವು ತೀರ್ಮಾನಿಸುವಷ್ಟು ನಿಖರ ದಾಖಲೆಗಳು ಲಭ್ಯವಿಲ್ಲ. ಇನ್ನು ಮಳೆ ತರಿಸಲು ಬಳಸುವ ಸಿಲ್ವರ್ ಅಯೋಡೈಡ್ ಪ್ರಮಾಣವು ಅತ್ಯಲ್ಪವಾಗಿರುವುದರಿಂದ ಪರಿಸರಕ್ಕೆ ನಾಶವಾಗುತ್ತದೆ ಎಂದು ಸಹ ಹೇಳಲು ಬರುವುದಿಲ್ಲ.

ಈ ತಂತ್ರಜ್ಞಾನದ ಮಿತಿ

ನಮ್ಮ ಭಾರತದಲ್ಲಿ ಮಳೆಗಾಲದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಮಾರುತಗಳು ಬೀಸುತ್ತವೆ. ಅಂದರೆ ಕೇರಳ-ಕರ್ನಾಟಕದಲ್ಲಿನ ಮೋಡಗಳು ದಿಲ್ಲಿ, ಕಾಶ್ಮಿರದವರೆಗೂ ಚಲಿಸುತ್ತವೆ. ಹಾಗಾಗಿ ನಾವು ಮೋಡಬಿತ್ತನೆಯ ತಂತ್ರಜ್ಞಾನ ಬಳಸಿ ಇಲ್ಲಿನ ಮೋಡಗಳು ಇಲ್ಲಿಯೇ ಮಳೆ ಸುರಿಸುವಂತೆ ಮಾಡಬಹುದು. ಇಲ್ಲದಿದ್ದರೆ ಅದು ಉತ್ತರ ಪ್ರದೇಶದಲ್ಲಿಯೋ ಅಥವಾ ದೆಹಲಿಯಲ್ಲಿಯೋ ಮಳೆ ಆಗಿಯೇ ಆಗುತ್ತದೆ. ಹಾಗಾಗಿ ನಾವು ಈ ತಂತ್ರಜ್ಞಾನ ಬಳಸಿ ಇಂದೇ ಮಳೆಯಾಗುವಂತೆ, ಇಲ್ಲಿಯೇ ಮಳೆಯಾಗುವಂತೆ ಕೆಲ ಮೋಡಗಳ ಮೇಲೆ ನಿಯಂತ್ರಣ ಸಾಧಿಸಬಹುದಷ್ಟೇ. ಆದರೆ ಕರ್ನಾಟಕದಲ್ಲಿ ಮೋಡಗಳೆ ಇಲ್ಲದಿದ್ದರೆ ಮೋಡ ಸೃಷ್ಟಿಸಲು ನಮಗೆ ಸಾಧ್ಯವಿಲ್ಲ.

ಹೊಸ ತಂತ್ರಜ್ಞಾನಗಳು

ಸಿಲ್ವರ್ ಅಯೋಡೈಡ್ ಬದಲಿಗೆ ಮೋಡಗಳ ಮೇಲೆ ವಿದ್ಯುತ್ ಹರಿಸಿ ನೀರಿನ ಹನಿಗಳು ಘನೀಕರಿಸಿ ಮಳೆ ಬರುವಂತೆ ಮಾಡುವ ತಂತ್ರಜ್ಞಾನವನ್ನು ಯುಎಇ ದೇಶ ಪ್ರಯೋಗಿಸುತ್ತಿದೆ. ಇದನ್ನು ಕ್ಲೌಡ್ ಜಾಪಿಂಗ್ ಎಂದು ಕರೆಯುತ್ತಾರೆ. ಕೆಲ ದೇಶಗಳು ಸಿಲ್ವರ್ ಅಯೋಡೈಡ್ ಮತ್ತು ವಿದ್ಯುತ್ ಎರಡನ್ನೂ ಏಕಕಾಲಕ್ಕೆ ಪ್ರಯೋಗಿಸುವ ಪ್ರಯತ್ನ ಮಾಡುತ್ತಿವೆ. ಆಗ ಬೇಗ ಮಳೆ ಬರುತ್ತದೆ ಎನ್ನಲಾಗಿದೆ. ಇನ್ನು ಈ ಮೋಡ ಬಿತ್ತನೆ ತಂತ್ರಜ್ಞಾನವನ್ನು ಅಮೆರಿಕ ದೇಶವು 1970ರ ದಶಕದಲ್ಲಿ ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪಗಳಿವೆ. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಏರ್‌ಫೋರ್ಸ್‌ ವಿಯೆಟ್ನಾಂನಲ್ಲಿ ಮೋಡಬಿತ್ತನೆ ಮಾಡಿ ಹೆಚ್ಚು ಮಳೆ ಬರುವಂತೆ ಮಾಡಿ ವಿಯೆಟ್ನಾಂ ಮಿಲಿಟರಿ ವಿಚಲಿತವಾಗುವಂತೆ ಮಾಡಿತ್ತು. ಆದರೆ ಆನಂತರ ಈ ರೀತಿಯ ದುರ್ಬಳಕೆಯಾದ ಉದಾಹರಣೆಗಳಿಲ್ಲ.

ಇನ್ನು ಬರ ಹೋಗಲಾಡಿಸಲು, ಹವಾಮಾನ ವೈಪರಿತ್ಯ ತಡೆಯಲು ಈ ಮೋಡಬಿತ್ತನೆ ತಂತ್ರಜ್ಞಾನ ಉಪಯೋಗವಾಗುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಒಟ್ಟಾರೆಯಾಗಿ ಇದೊಂದು ಸೀಮಿತ ತಂತ್ರಜ್ಞಾನವಾಗಿದೆ ಎಂದು ಹೇಳಬಹುದು.

ಮೂಲ – ಧ್ರುವ್‌ರಾಠೀ

ಕನ್ನಡಕ್ಕೆ: ಮುತ್ತುರಾಜು

ಇದನ್ನೂ ಓದಿ; ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆಂಬುದು ಸತ್ಯವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...