ಅಪ್ರಾಪ್ತ ಬಾಲಕನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದ ದೆಹಲಿ ಪೊಲೀಸ್ ಪೇದೆಯನ್ನು ಅಮಾನತು ಮಾಡಿದ್ದು, ಆತನ ವಿರುದ್ಧ ಡಿಪಾರ್ಟ್ಮೆಂಟ್ ವಿಚಾರಣೆ ನಡೆಸಲು ಪೊಲೀಸ್ ಇಲಾಖೆ ಆದೇಶಿಸಿದೆ. ದೆಹಲಿಯ ಆರ್.ಕೆ.ಪುರಂನಲ್ಲಿ ಪೊಲೀಸ್ ಪೇದೆಯೊಬ್ಬರು ಅಪ್ರಾಪ್ತ ಬಾಲಕನ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಜನ ಆಕ್ರೋಶ ವ್ಯಕ್ತಪಡಿಸಿದ ಮೇಲೆ ಇಲಾಖೆ ಈ ಕ್ರಮ ಕೈಗೊಂಡಿದೆ.
ಘಟನೆ ನಮ್ಮ ಗಮನಕ್ಕೆ ಬಂದ ಕೂಡಲೇ ಪೇದೆಯನ್ನು ಅಮಾನತು ಮಾಡಿ ಆತನ ಮೇಲೆ ವಿಚಾರಣೆಗೆ ಆದೇಶಸಲಾಗಿದೆ. ತನಿಖೆಯ ಆಧಾರದಲ್ಲಿ ಘಟನೆಯಲ್ಲಿ ಭಾಗಿಯಾದ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಇಂಗಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
#Delhi: A policeman seen assaulting a young boy, in a video that surfaced from RK Puram. The boy was allegedly wandering on the streets late at night in search of food. He is seen pleading #innocence. pic.twitter.com/RqCEPE8tpP
— Mojo Story (@themojo_in) August 24, 2020
ಆಗಸ್ಟ್ 22ರ ರಾತ್ರಿ 2.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸ್ ಪೇದೆ ರಾತ್ರಿ ಪಾಳಿಯಲ್ಲಿದ್ದಾಗ, ರಸ್ತೆಯಲ್ಲಿ ಮಲಗಿದ್ದ ಬಾಲಕನೊಬ್ಬನನ್ನು ಅಲ್ಲಿಂದ ಹೋಗುವಂತೆ ತಿಳಿಸಿದ್ದಾರೆ. ಆದರೆ, ಅರ್ಧ ಗಂಟೆ ಕಳೆದ ನಂತರವೂ ಆ ಬಾಲಕ ಅಲ್ಲೇ ಇರುವುದನ್ನು ಕಂಡು ಪೇದೆ ಮನಬಂದಂತೆ ಲಾಠಿ ಬೀಸಿದ್ದಾರೆ. ಅದನ್ನು ಪಾದಚಾರಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಕೆಲ ದಿನಗಳಿಂದ ಸುಲಿಗೆ, ಕಳ್ಳತನ ನಡೆಯುತ್ತಿತ್ತು. ಈ ಸ್ಥಳದಲ್ಲೇ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದ್ದ ಶಂಕೆ ಕೂಡ ಇತ್ತು. ಈ ಬಗ್ಗೆ ಅನೇಕ ದೂರುಗಳು ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಪೊಲೀಸ್ ಪೇದೆಯೊಬ್ಬ ಮಾಡಿದ ಅಮಾನವೀಯ ಹಲ್ಲೆಯ ದಿಕ್ಕುತಪ್ಪಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ವರದಿಯ ಪ್ರಕಾರ ಬಾಲಕ ಹಸಿದಿದ್ದನು. ಊಟ ಇಲ್ಲದೇ ರಸ್ತೆಯಲ್ಲಿ ನಿಶಕ್ತನಾಗಿ ಮಲಗಿದ್ದಾಗ ಪೊಲೀಸ್ ಪೇದೆ ಹಲ್ಲೆ ಮಾಡಿದ್ದಾರೆ. ಬಾಲಕ ಬೇಡಿಕೊಂಡರು ಬಿಡಲಿಲ್ಲ. ಮತ್ತೊರ್ವ ಪೊಲೀಸ್ ಇದನ್ನು ನೋಡುತ್ತಿದ್ದನು ಎಂದು ಆರೋಪಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಕೌಶಿಕ್ ಮಾತನಾಡಿ, “ಘಟನೆಯ ಕುರಿತು ಸತ್ಯಶೋಧನೆ ನಡೆಸಲಾಗುವುದು. ನಂತರ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಬರೋಬ್ಬರಿ 18 ತಿಂಗಳ ನಂತರ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ