ರಾಷ್ಟ್ರಪತಿಗಳ ಒಪ್ಪಿಗೆ ಇಲ್ಲದೆ ಸುಗ್ರೀವಾಜ್ಞೆ ಅಂಗೀಕರಿಸಲು ಕಾನೂನು ಅನುಮತಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡರವರು ಬಹಿರಂಗ ಪತ್ರ ಬರೆದಿದ್ದಾರೆ.
ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಬಿಜೆಪಿ ಆಳ್ವಿಕೆಯ ರಾಜ್ಯಗಳನ್ನು ಅನುಸರಿಸಿ ಕರ್ನಾಟಕ ಸರ್ಕಾರವೂ ಸಹ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿಗೆ ಮುಂದಾಗಿರುವುದನ್ನು ಗ್ರಹಿಸಿ ಅವರು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಮಾತುಕತೆ ನಡೆಸುತ್ತಿರುವುದು ಕಾನೂನುಬಾಹಿರವಾಗಿದ್ದು, ರಾಷ್ಟ್ರಪತಿಗಳ ಒಪ್ಪಿಗೆ ಇಲ್ಲದೆ ಸುಗ್ರೀವಾಜ್ಞೆಯನ್ನು ಅಂಗೀಕರಿಸಲು ಕಾನೂನು ಅನುಮತಿಸುವುದಿಲ್ಲ. ಇದು ಕೇಂದ್ರ ಶಾಸನದೊಂದಿಗೆ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ಸರ್ಕಾರಗಳು ಬಿಗಿಯಾಗಿದ್ದ ಕಾರ್ಮಿಕ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಅಂಗೀಕರಿಸುತ್ತಿರುವುದು ಸಂವಿಧಾನಬಾಹಿರವಾಗಿದೆ ಎಂದು ಹೇಳಿದ್ದಾರೆ.
ಈ ಸುಗ್ರೀವಾಜ್ಞೆಗಳು ಅಂತಾರಾಷ್ಟ್ರೀಯ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರು ಸುಗ್ರೀವಾಜ್ಞೆ ಅಂಗೀಕರಿಸಲು ಕಾನೂನು ಅನುಮತಿಸುವುದಿಲ್ಲ. ಒಂದೊಮ್ಮೆ ಅಂಗೀಕರಿಸಿದರೆ ಸಂಸತ್ತು ಅಂಗೀಕರಿಸಿರುವ ರಾಷ್ಟ್ರಪತಿಗಳ ಸಮ್ಮತಿಯೊಂದಿಗೆ ಎಂಬ ಕೇಂದ್ರ ಶಾಸನಗಳೊಂದಿಗೆ ಸಂಘರ್ಷ ಏರ್ಪಡುತ್ತದೆ ಎಂದಿದ್ದಾರೆ.
ಸಂವಿಧಾನದ 213(1)ರಂತೆ ರಾಜ್ಯಪಾಲರು ಸುಗ್ರಿವಾಜ್ಞೆ ಹೊರಡಿಸಬೇಕೆಂದಿದ್ದರೆ ಈ ಅವಧಿಯಲ್ಲಿ ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನ ಇಲ್ಲದಿದ್ದಾಗ ಅವರು/ಳು ಇದು ಸೂಕ್ತ ಸಂದರ್ಭವೆಂದು ನಿರೂಪಿಸಲು ಅವಶ್ಯಕತೆ ಇದೆಯೆಂದು ಕಂಡುಬಂದರೆ ತಕ್ಷಣವೇ ಕ್ರಮ ಕೈಗೊಳ್ಳಬಹುದು.
ಇದೆ ವಿಧಿಯಂತೆ ರಾಜ್ಯಪಾಲರು ರಾಷ್ಟ್ರಪತಿಗಳ ಸೂಚನೆಗಳನ್ನು ಪಡೆಯದೇ ಸುಗ್ರಿವಾಜ್ಞೆ ಪ್ರಕಟಿಸಿದ್ದರೆ ರಾಜ್ಯ ವಿಧಾನ ಸಭೆಯಲ್ಲಿ ಅದನ್ನು ಅಂಗೀಕರಿಸಿರಬೇಕು ಎಂದು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಓದಿ: ಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ
ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ