Homeಅಂಕಣಗಳುಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

ಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

- Advertisement -
- Advertisement -

ಸಾಮಾಜಿಕ-ರಾಜಕೀಯ ವ್ಯಾಖ್ಯಾನಕಾರ ಪ್ರೊ.ಯೋಗೇಂದ್ರ ಯಾದವ್ ಅವರು ಈ ವ್ಯಥೆಯ ವಿದ್ಯಮಾನವನ್ನು ಸರ್ಕಾರಿ ಕೃಪಾಪೋಷಿತ ಒತ್ತೆಯಾಳು ಪ್ರಹಸನ ಎಂದು ಬಣ್ಣಿಸಿದ್ದಾರೆ. ಮಹಾನಗರಗಳ ಆರ್ಥಿಕ ಚಟುವಟಿಕೆಗಳ ದೈತ್ಯಚಕ್ರವನ್ನು ತಿರುಗಿಸಲೆಂದು ವಲಸೆ ಕಾರ್ಮಿಕರನ್ನು ಕೈಗಾರಿಕೋದ್ಯಮಗಳ ಒತ್ತೆಯಾಳುಗಳನ್ನಾಗಿ ಕೈವಶ ಮಾಡಿಕೊಳ್ಳಲಾಗುತ್ತಿದೆ. ಈ ಕ್ರೂರ ಮಸಲತ್ತಿನಲ್ಲಿ ಸರ್ಕಾರವೇ ಮುಖ್ಯ ಪಾತ್ರಧಾರಿ. ನೈತಿಕ ದಿಕ್ಸೂಚಿಯನ್ನೇ ಕಳೆದುಕೊಂಡಿರುವ ಸಮಾಜ, ಅಶ್ಲೀಲ ಹಂತ ತಲುಪಿರುವ ವರ್ಗ ಅಸಮಾನತೆಗಳು, ಪಾಶ್ರ್ವವಾಯುಪೀಡಿತ ರಾಜಕಾರಣ ಹಾಗೂ ನಂಜುಭರಿತ ಮೀಡಿಯಾ ಸರ್ಕಾರದೊಂದಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಕೈ ಕಲೆಸಿರುವ ಅಪರಾಧಿಗಳು.

ಲಾಕ್ ಡೌನ್ ಕಾರಣ ನೇರವಾಗಿ ಉದ್ಯೋಗ ಕಳೆದುಕೊಂಡಿರುವವರ ಸಂಖ್ಯೆ 12 ಕೋಟಿಗೂ ಅಧಿಕ. ಈ ಪೈಕಿ ವಲಸೆ ಕಾರ್ಮಿಕರು ನಾಲ್ಕು ಕೋಟಿ ಮಂದಿ. ತ್ರಿಶಂಕುಗಳಾಗಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಕುರಿತು SWAN (Stranded Workers Action Network) ನಡೆಸಿದ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಅಂಶಗಳು ಸಮಾಜದ ಆತ್ಮಸಾಕ್ಷಿಯನ್ನೂ ಚುಚ್ಚಿಲ್ಲ, ಇತ್ತ ಸರ್ಕಾರದ ಕಣ್ಣನ್ನೂ ತೆರೆಸಿಲ್ಲ. ದೀನದಲಿತರ ಪಾಲಿಗೆ ಸರ್ಕಾರದ ಕಣ್ಣುಗಳು ಶಾಶ್ವತವಾಗಿ ಕುರುಡಾಗಿವೆ ಎಂಬ ಹಳೆಯ ಸತ್ಯವನ್ನು ಈ ಪ್ರಹಸನ ಮತ್ತೊಮ್ಮೆ ಬಯಲಿಗೆಳೆದಿದೆ.

SWAN ಸಮೀಕ್ಷೆಯ ಪ್ರಕಾರ ಶೇ.78ರಷ್ಟು ವಲಸೆ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯಲ್ಲಿ ಸಂಬಳ ಸಿಕ್ಕಿಲ್ಲ. ಶೇ.82ರಷ್ಟು ಮಂದಿಗೆ ಸರ್ಕಾರದಿಂದ ಯಾವುದೇ ಬಗೆಯ ದಿನಸಿ ದೊರೆತಿಲ್ಲ. ಶೇ.64ರಷ್ಟು ಕಾರ್ಮಿಕರ ಜೇಬುಗಳಲ್ಲಿ ಉಳಿದಿದ್ದ ಹಣ ನೂರು ರುಪಾಯಿಗೂ ಕಡಿಮೆ. ಯಾವ ಆಸರೆಯೂ ಇಲ್ಲದೆ ಹಸಿದು ಕಂಗೆಟ್ಟವರು ಸಾಯುವುದಿದ್ದರೂ ಅದು ಸ್ವಂತ ಊರಿನಲ್ಲೇ ಎಂದು ಹಂಬಲಿಸುವುದು ಅಪರಾಧವೇ? ಕೋಟಿ ಮಂದಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನೋಂದಣಿ ಮಾಡಿಸಿಕೊಂಡಿದ್ದಾರೆ.

ತಾನು ಚಹಾ ಮಾರಿದ ಬಡವನೆಂದು ಹೇಳಿಕೊಳ್ಳುತ್ತಲೇ ಸುಖ ಸುಪ್ಪತ್ತಿಗೆಗಳಲ್ಲಿ ಓಲಾಡುವ ಪ್ರಧಾನಮಂತ್ರಿಯವರು ಬಡ ಕಾರ್ಮಿಕರನ್ನು ಲೆಕ್ಕಕ್ಕೇ ಇಡದಿರುವುದು ಅತ್ಯಂತ ಸೋಜಿಗದ ಮತ್ತು ಆಘಾತಕಾರಿ ಅಂಶ. ಈ ವಿಶಾಲ ದೇಶದಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು ನಾನಾ ರಾಜ್ಯಗಳಲ್ಲಿ ಹೊಟ್ಟೆಪಾಡಿಗಾಗಿ ಹರಡಿ ಹಬ್ಬಿದ್ದಾರೆ. ಆರ್ಥಿಕ ಚಟುವಟಿಕೆಯ ರಥಚಕ್ರಗಳನ್ನು ತಿರುಗಿಸುತ್ತಿದ್ದಾರೆ ಎಂಬ ಕಿಂಚಿತ್ ಅರಿವು ಅವರಿಗೆ ಇದ್ದಿದ್ದರೆ ಲಾಕ್ ಡೌನ್ ಅನ್ನು ಯೋಜಿಸಿಕೊಂಡು ಘೋಷಿಸುತ್ತಿದ್ದರು. ಟ್ರಂಪ್‍ಗೆ ರತ್ನಗಂಬಳಿ ಹಾಸಲೆಂದು, ಮಧ್ಯಪ್ರದೇಶದ ಸರ್ಕಾರ ಕೆಡವಲೆಂದು ಕರೋನಾ ಮಹಾಮಾರಿಯನ್ನು ನಿರ್ಲಕ್ಷಿಸಿದ್ದು ಸರ್ಕಾರದ ಅಪರಾಧ. ಇಲ್ಲವಾದರೆ ಲಾಕ್ ಡೌನನ್ನು ಮುಂಚಿತವಾಗಿಯೇ ಯೋಜಿಸಿ ವಲಸೆ ಕಾರ್ಮಿಕರು ಬಯಸಿದರೆ ಅವರ ರಾಜ್ಯಗಳು- ಊರುಗಳಿಗೆ ಮರಳಲು ವಾರದೊಪ್ಪತ್ತು ಅವಕಾಶ ಕಲ್ಪಿಸಬಹುದಿತ್ತು. ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ಕೋಟ್ಯಂತರ ಕಾರ್ಮಿಕರು ಯಾಕೆ ಬೆಲೆ ತೆರಬೇಕಿತ್ತು? ಲಾಕ್ ಡೌನ್ ಘೋಷಣೆಗೆ ಮುನ್ನ ಮೋದಿಯವರು ನೀಡಿದ ಕಾಲಾವಕಾಶ ನಾಲ್ಕು ದಿನಗಳಲ್ಲ, ಬದಲಾಗಿ ಕೇವಲ ನಾಲ್ಕು ತಾಸುಗಳು!

ಈ ಬೇಜವಾಬ್ದಾರಿ ಘೋಷಣೆಯ ನಂತರ ಕಾರ್ಮಿಕರಿಗೊಂದು ಕನಿಷ್ಠ ಭದ್ರತೆ ಒದಗಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ಆದರೆ ಈ ಕೋಟ್ಯಂತರ ಕಾರ್ಮಿಕರು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ನಡೆದುಕೊಂಡಿತು ಮೋದಿ ಸರ್ಕಾರ. ಅಂತಹ ಜೀವಿಗಳು ನಮ್ಮ ನಡುವೆ ಇದ್ದಾರೆಂದೂ, ಹಸಿವು ನಿದ್ರೆ ನೀರಡಿಕೆಗಳು ಅವರನ್ನೂ ಬಾಧಿಸುತ್ತವೆಂದೂ ಸರ್ಕಾರ ಮತ್ತು ಸಮಾಜ ಗಮನಿಸಿದ್ದು ಅವರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೆದ್ದಾರಿಗಳಿಗೆ ಇಳಿದಾಗಲೇ. ಆಗಲೂ ಅವರ ಘನತೆಯನ್ನು ಕಾಲಕಸವಾಗಿ ಕಾಣಲಾಯಿತು. ಅಂದು ಶುರುವಾದ ಪೊಲೀಸರ ಲಾಠಿ ಬೂಟುಗಳ ಹೊಡೆತಗಳು, ಅಮ್ಮ ಅಕ್ಕ ಪತ್ನಿಯ ಪ್ರಸ್ತಾಪಿಸಿ ಬೈಯ್ಯುವ ಕೆಟ್ಟ ಬೈಗಳು ಈಗಲೂ ನಿಂತಿಲ್ಲ. ಯಾವ ಅಪರಾಧಕ್ಕೆ ಅವರಿಗೆ ಇಂತಹ ಶಿಕ್ಷೆ?

ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯ ಪಾಠವನ್ನು ಪ್ರಧಾನಿ ಹೇಳಿದ್ದಾರೆ. ಆದರೆ ತಮ್ಮನ್ನು ಸದಾ ತುಳಿದು ಅಂಚಿಗೆ ಅಟ್ಟುತ್ತಿರುವ ಅಸಮಾನ ವ್ಯವಸ್ಥೆಯ ವಿರುದ್ಧ ನಿರ್ಗತಿಕ ಶ್ರಮಿಕ ವರ್ಗ ತನ್ನ ಅಸ್ತಿತ್ವಕ್ಕಾಗಿ ಸೆಣೆಸುತ್ತಲೇ ಬಂದಿದೆ. ಅದು ಆರಂಭದಿಂದಲೂ ಸ್ವಾವಲಂಬಿ. ಅಳಿದುಳಿದ ತನ್ನ ಪಾಪಪ್ರಜ್ಞೆಯನ್ನು ತೊಳೆದುಕೊಳ್ಳಲು ಈ ವರ್ಗಕ್ಕೆ ಭಿಕ್ಷೆಯ ಕಾಸು ಎಸೆಯುತ್ತ ಬಂದಿರಬಹುದು ಸರ್ಕಾರಗಳು.

ಈ ದೇಶದ ಬಂಡವಾಳಶಾಹಿ ಕಾರ್ಪೊರೇಟ್ ವಲಯಕ್ಕೆ ವರ್ಷ ವರ್ಷ ಬಜೆಟ್ಟಿನಲ್ಲಿ ಬಿಟ್ಟುಕೊಡಲಾಗುವ ಲಕ್ಷಾಂತರ ಕೋಟಿ ತೆರಿಗೆಗಳಿಗೆ ಹೋಲಿಸಿದರೆ ಶ್ರಮಿಕ ವರ್ಗಕ್ಕೆ ಸರ್ಕಾರ ನೀಡುವುದು ಬಿಡಿಗಾಸಲ್ಲದೆ ಇನ್ನೇನೂ ಅಲ್ಲ. ಮನೆಗಳಿಗೆ ಮರಳಲು ಈ ಜನವರ್ಗ ರೇಲುಗಾಡಿಯ ಟಿಕೆಟ್ ದರವನ್ನು ಕಾಸಿಗೆ ಕಾಸು ತೆತ್ತು ಭರಿಸಿದೆ ಎಂಬುದು ನೆನಪಿರಲಿ.

ಸಮಾನತೆಯ ಆಧಾರದ ಮೇಲೆ ಕಟ್ಟಲಾದ ಸಮಾಜಗಳಲ್ಲಿ ಬಂಡವಾಳದ ಹೆಗಲನ್ನು ಬೆವರು ಸವಾರಿ ಮಾಡಬೇಕು. ಆದರೆ ವಾಸ್ತವವಾಗಿ ಬೆವರಿನ ಬಡ ಹೆಗಲುಗಳು ಬಂಡವಾಳದ ಒಜ್ಜೆಯಡಿ ತತ್ತರಿಸಿವೆ.

ದೇಶದ 45 ಕೋಟಿ ಕಾರ್ಮಿಕರ ಪೈಕಿ ಸಂಘಟಿತ ವಲಯದ ಶ್ರಮಿಕರ ಸಂಖ್ಯೆ ಕೇವಲ 1.10 ಕೋಟಿ. ಉಳಿದವರಿಗೆ ಕಾಯಿದೆ ಕಾನೂನುಗಳ ರಕ್ಷಣೆ ಇಲ್ಲ. ಈಗ ಮಹಾಮಾರಿಯ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು, ಸಂಘಟಿತ ವಲಯದ ಕಾರ್ಮಿಕರಿಗೂ ಕಾನೂನು ರಕ್ಷಣೆಯ ನೆರಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಕಾರ್ಮಿಕರ ಹಿತದ ವಿರುದ್ಧ ಬಗ್ಗಿಸಲಾಗುತ್ತಿದೆ. ಈಗಾಗಲೆ ಜರ್ಝರಿತಗೊಂಡಿರುವ ಶ್ರಮಿಕ ಶಕ್ತಿಯ ಹೊಟ್ಟೆ ಮತ್ತು ಬೆನ್ನುಗಳ ಮೇಲೆ ಬಾರಿಸಲಾಗುತ್ತಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆ, ಜೀತದಾಳು ಪದ್ಧತಿ ರದ್ದು ಕಾಯಿದೆ ಹಾಗೂ ಸಕಾಲಕ್ಕೆ ಕೂಲಿ ಪಾವತಿ ಮಾಡುವ ಕಾನೂನನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕ ರಕ್ಷಣಾ ಕಾಯಿದೆ ಕಾನೂನುಗಳನ್ನು ಉತ್ತರಪ್ರದೇಶ ಸರ್ಕಾರ ಮೂರು ವರ್ಷಗಳ ಕಾಲ ರದ್ದು ಮಾಡಿದೆ. ಗುಜರಾತ್ ಸರ್ಕಾರ 1,200 ದಿನಗಳ ಕಾಲ ಈ ಕಾಯಿದೆಗಳಿಂದ ಕೈಗಾರಿಕೆಗಳಿಗೆ ವಿನಾಯಿತಿ ಘೋಷಿಸಿದೆ. ಹಾಲಿ ಎಂಟು ತಾಸುಗಳ ದುಡಿಮೆ ಹನ್ನೆರಡು ತಾಸುಗಳಿಗೆ ಹೆಚ್ಚಲಿದೆ. ಮಧ್ಯಪ್ರದೇಶ ಸರ್ಕಾರ ಮುಂದಿನ ಸಾವಿರ ದಿನಗಳ ಅವಧಿಯಲ್ಲಿ ಅರಂಭಿಸುವ ಕೈಗಾರಿಕೆಗಳಿಗೆ ಎಲ್ಲ ಕಾರ್ಮಿಕ ಕಲ್ಯಾಣ ಕಾನೂನುಗಳಿಂದ ವಿನಾಯಿತಿ ನೀಡಿದೆ.

ರಾಜಸ್ತಾನ, ಪಂಜಾಬ್, ಮಧ್ಯಪ್ರದೇಶ, ಹರಿಯಾಣ ಇದೇ ಹಾದಿ ತುಳಿದಿವೆ. ಮುಂಬರುವ ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ಹೆಚ್ಚು ಹೆಚ್ಚು ರಾಜ್ಯಗಳು ಈ ಸಾಲನ್ನು ಸೇರಲಿವೆ.

ಬಡ ಕಾರ್ಮಿಕ ವರ್ಗವನ್ನು ಬಂಡವಾಳಕ್ಕೆ ಒತ್ತೆಯಾಳಾಗಿ ಇರಿಸಲು ಸರ್ಕಾರವೇ ಮುಂದಾಗಿರುವುದು ವಿಕಟ ವಿಡಂಬನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...