ಕೋವಿಡ್-19 ವಿರುದ್ಧ ಹೋರಾಡಲು ಬೆಂಬಲವಾಗಿ ಮತ್ತು ಬಡವರಿಗೆ, ದುರ್ಬಲ ಕುಟುಂಬಗಳಿಗೆ ಸಹಾಯಹಸ್ತ ಚಾಚುವ ಉದ್ದೇಶದಿಂದ ಭಾರತಕ್ಕೆ ವಿಶ್ವಬ್ಯಾಂಕ್ ಒಂದು ಬಿಲಿಯನ್ ಡಾಲರ್ ಅನುಮೋದನೆ ನೀಡಿದೆ. ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್ ಭಾರತಕ್ಕೆ ಹಣಕಾಸು ನೆರವು ನೀಡಿರುವುದಾಗಿ ತಿಳಿಸಿದೆ.
ಕಳೆದ ತಿಂಗಳು ಭಾರತಕ್ಕೆ ಕೋವಿಡ್-19ರ ವಿರುದ್ದ ಹೋರಾಡಲು ವಿಶ್ವಬ್ಯಾಂಕ್ ತುರ್ತಾಗಿ ಒಂದು ಬಿಲಿಯನ್ ಡಾಲರ್ ಬಿಡುಗಡೆ ಮಾಡಿತ್ತು. ಈಗ ಮತ್ತೆ ಒಂದು ಬಿಲಿಯನ್ ಡಾಲರ್ ಬಿಡುಗಡೆ ಮಾಡಿದ್ದು ಬಾರತಕ್ಕೆ ವಿಶ್ವಬ್ಯಾಂಕ್ 2 ಬಿಲಿಯನ್ ಡಾಲರ್ ಬಿಡುಗಡೆ ಮಾಡಿದಂತಾಗಿದೆ.
ವಿಶ್ವಬ್ಯಾಂಕ್ ನಿರ್ದೇಶಕ ಜುನೈದ್ ಅಹಮದ್ ಮಾತನಾಡಿ, ಭಾರತದೊಂದಿಗೆ ಮೂರು ಕ್ಷೇತ್ರಗಳಲ್ಲಿ ಪಾಲುದಾರನಾಗಿ ವಿಶ್ವಬ್ಯಾಂಕ್ ಕೆಲಸ ಮಾಡುತ್ತಿದೆ. ಆರೋಗ್ಯ, ಸಾಮಾಜಿಕ ರಕ್ಷಣೆ ಹಾಗೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕ್ಷೇತ್ರದಲ್ಲಿ ವಿಶ್ವಬ್ಯಾಂಕ್ ಪಾಲುದಾರನಾಗಿದ್ದು ಈ ಕಾರಣಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಭಾರತದ ಸಾಮಾಜಿಕ ರಕ್ಷಣೆಗೆ ಅಂದರೆ ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರನ್ನು ವ್ಯವಸ್ಥೆಯೊಂದಿಗೆ ಸಂಯೋಜಿಸುವುದು ವಿಶ್ವಬ್ಯಾಂಕ್ ಉದ್ದೇಶವಾಗಿದೆ. ದೇಶದಲ್ಲಿ ಆಧಾರ್ ಮತ್ತು ಮೊಬೈಲ್ ಸಂಪರ್ಕ ಹೊಂದಿರುವ ಸಾರ್ವಜನಿಕ ವತರಣಾ ವ್ಯವಸ್ಥೆ, ಜನ್ ಧನ್ ಯೋಜನೆಗೆ ಸೌಲಭ್ಯವನ್ನು ಹೆಚ್ಚಿಸುವುದು ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿ ರೋಗ ವಿಶ್ವವ್ಯಾಪಿ ಹರಡಿದ್ದು ಪ್ರತಿಯೊಂದು ದೇಶದ ಸರ್ಕಾರಗಳು ಕೂಡ ಲಾಕ್ ಡೌನ್ ಮುಂದುವರಿಸುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಜುನೈದ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.
ಕೊರೊನ ಸೋಂಕು ಆರ್ಥಿಕತೆ ಮತ್ತು ಅನೌಪಚಾರಿಕ ವಲಯದ ಉದ್ಯೋಗಗಳ ಮೇಲೆ ಭಾರೀ ಪರಿಣಾಮ ಬೀರಿದ್ದು ಲಾಕ್ ಡೌನ್ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳಿಂದ ಸ್ವಲ್ಪಮಟ್ಟಿಗೆ ತಡೆಯಬಹುದು. ಭಾರತವು ದೊಡ್ಡ ಪ್ರಮಾಣದಲ್ಲಿ ಲಾಕ್ ಡೌನ್ ಮಾಡಿದ್ದು ಇದರಿಂದ ಹೊರತಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯವರ 20 ಲಕ್ಷ ಕೋಟಿ ರೂ ಪ್ಯಾಕೇಜ್ನಲ್ಲಿ 65% ಈ ಮೊದಲೇ ಘೋಷಿಸಿದ್ದು ಸೇರಿದೆ!
ಇಂಗ್ಲಿಷ್ ನ್ಯೂಸ್ಗಳಿಗಾಗಿ ಫಾಲೋ ಮಾಡಿ: GauriLankeshNews