ನಿನ್ನೆ ಆರಂಭವಾಗಿರುವ ಸಂಸತ್ ಅಧಿವೇಶನದಲ್ಲಿ “ಲಾಕ್ಡೌನ್ ಸಮಯದಲ್ಲಿ ತಮ್ಮೂರುಗಳಿಗೆ ತಲುಪಲು ನಡೆಯುತ್ತಲೇ ಪ್ರಾಣಬಿಟ್ಟ ವಲಸೆ ಕಾರ್ಮಿಕರ ಮಾಹಿತಿ ನಮ್ಮ ಬಳಿ ಇಲ್ಲ” ಎಂದು ಉತ್ತರಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ನೀವು ಲೆಕ್ಕ ಹಾಕಿಲ್ಲದಿದ್ದರಿಂದ ಯಾರು ಮೃತಪಟ್ಟಿಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಲಾಕ್ಡೌನ್ ಸಮಯದಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಮೃತಪಟ್ಟರು, ಎಷ್ಟು ಜನ ಉದ್ಯೋಗ ಕಳೆದುಕೊಂಡರು ಎಂಬುದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ. ನೀವು ಲೆಕ್ಕ ಹಾಕಿಲ್ಲದಿದ್ದರಿಂದ ಯಾರು ಮೃತಪಟ್ಟಿಲ್ಲವೆ? ಅವರು ಸಾಯುತ್ತಿರುವುದನ್ನು ಇಡೀ ಪ್ರಪಂಚವೇ ನೋಡಿದೆ. ಆದರೆ ಮೋದಿ ಸರ್ಕಾರಕ್ಕೆ ಮಾತ್ರ ಅದರ ಬಗ್ಗೆ ತಿಳಿದಿರಲಿಲ್ಲ. ಜನರ ಜೀವಗಳ ಬಗ್ಗೆ ಈ ಸರ್ಕಾರ ಕಾಳಜಿ ವಹಿಸದಿರುವುದು ದುಃಖದ ವಿಷಯ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
मोदी सरकार नहीं जानती कि लॉकडाउन में कितने प्रवासी मज़दूर मरे और कितनी नौकरियाँ गयीं।
तुमने ना गिना तो क्या मौत ना हुई?
हाँ मगर दुख है सरकार पे असर ना हुई,
उनका मरना देखा ज़माने ने,
एक मोदी सरकार है जिसे ख़बर ना हुई।— Rahul Gandhi (@RahulGandhi) September 15, 2020
ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24ರ ರಾತ್ರಿ ಕೇವಲ ನಾಲ್ಕು ಗಂಟೆಗಳ ಸಮಯ ನೀಡಿ ಏಕಾಏಕಿ ಲಾಕ್ಡೌನ್ ವಿಧಿಸಿದ್ದರು. ಉದ್ಯೋಗವೂ ಇಲ್ಲದೆ, ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಲಕ್ಷಾಂತರ ವಲಸೆ ಕಾರ್ಮಿಕರು ಮಹಾನಗರಗಳಿಂದ ತಮ್ಮ ಸ್ವಂತ ಊರುಗಳಿಗೆ ಉರಿವ ಬಿಸಿಲಿನ ನಡುವೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಈ ವೇಳೆ ಊಟ-ನೀರು ಸಿಗದೇ ಸಾವಿರಾರು ಜನ ಮೃತಪಟ್ಟಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.
ಈ ಕುರಿತು ಸಂಸತ್ ಸದಸ್ಯರೊಬ್ಬರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ “ಕೊರೊನಾ ಲಾಕ್ಡೌನ್ ವೇಳೆ ದೇಶದ ಹೆದ್ದಾರಿಗಳಲ್ಲಿ ರಕ್ತ ಸುರಿಸುತ್ತಾ ತಮ್ಮ ಮನೆಗೆ ಹೊರಟವರಲ್ಲಿ, ಮೃತಪಟ್ಟ ವಲಸಿಗರ ಕುರಿತು ತನ್ನ ಬಳಿ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಒದಗಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.
ಈ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ “ಕೊರೊನಾ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಲಸೆ ಕಾರ್ಮಿಕರನ್ನು ಕೀಳಾಗಿ ನಡೆಸಿಕೊಂಡಿದೆ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಸಮಯದಲ್ಲಿ ಮೃತಪಟ್ಟ ವಲಸಿಗರ ಮಾಹಿತಿ ಇಲ್ಲ: ಕೇಂದ್ರ ಸರ್ಕಾರ