ಒಂಬತ್ತು ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಬಿರೆನ್ ಸಿಂಗ್ ನೇತೃತ್ವದ ಮಣಿಪುರದ ಬಿಜೆಪಿ ಸರ್ಕಾರ ವಿರುದ್ಧ ಕಾಂಗ್ರೆಸ್ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಿದೆ. ಸರ್ಕಾರವು ಉರುಳಿದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚಿಸುವ ಸಾಧ್ಯತೆಯಿದೆ.
ಮಣಿಪುರದ ಬಿಜೆಪಿ ನೇತೃತ್ವದ ಬಿರೆನ್ ಸಿಂಗ್ ಸರ್ಕಾರದಿಂದ ಕನಿಷ್ಠ ಒಂಬತ್ತು ಶಾಸಕರು ಬೆಂಬಲ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದರಿಂದ ಬಿಜೆಪಿ ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿದೆ ಎಂದು ರಾಜ್ಯ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದು ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ದೊಡ್ಡ ತೊಂದರೆಯಾಗಲಿದೆ.
ಈಶಾನ್ಯದ ಪ್ರಮುಖ ಬಿಜೆಪಿ ಮಿತ್ರಪಕ್ಷವಾದ ಕಾನ್ರಾಡ್ ಸಾಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯು (ಎನ್ಪಿಪಿ) ಮಣಿಪುರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ನಂತರ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.
ಸೆಕ್ಯುಲರ್ ಪ್ರೋಗ್ರೆಸ್ಸಿವ್ ಫ್ರಂಟ್ (ಎಸ್ಪಿಎಫ್) ಎಂದು ಕರೆಯಲ್ಪಡುವ ಕಾಂಗ್ರೆಸ್ ನೇತೃತ್ವದ ಹೊಸ ಒಕ್ಕೂಟಕ್ಕೆ ಒಬ್ಬ ತೃಣಮೂಲ ಕಾಂಗ್ರೆಸ್ ಮತ್ತು ಒಬ್ಬ ಸ್ವತಂತ್ರ ಶಾಸಕರ ಬೆಂಬಲವೂ ಇದೆ.
ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ನೇತೃತ್ವದ ಎಸ್ಪಿಎಫ್, ಬಹುಮತ ಪರೀಕ್ಷೆಗೆ ವಿಶೇಷ ವಿಧಾನಸಭೆ ಅಧಿವೇಶನ ಕರೆಯುವಂತೆ ರಾಜ್ಯಪಾಲರನ್ನು ಒತ್ತಾಯಿಸಿದೆ.
ಇದನ್ನೂ ಓದಿ: 9 ಶಾಸಕರ ಬಂಡಾಯ: ಮಣಿಪುರದಲ್ಲಿ ಬಿಜೆಪಿ ಸರ್ಕಾರ ಪತನಕ್ಕೆ ಕ್ಷಣಗಣನೆ!