ಕೊರೊನಾ ಲಾಕ್ಡೌನ್ ವೇಳೆ ದೇಶದ ಹೆದ್ದಾರಿಗಳಲ್ಲಿ ರಕ್ತಸುರಿಸುತ್ತಾ ತಮ್ಮ ಮನೆಗೆ ಹೊರಟವರಲ್ಲಿ, ಮೃತಪಟ್ಟ ವಲಸಿಗರ ಕುರಿತು ತನ್ನ ಬಳಿ ಯಾವುದೇ ಮಾಹಿತಿ ಇಲ್ಲ, ಆದ್ದರಿಂದ ಮೃತಪಟ್ಟವರಿಗೆ ಪರಿಹಾರ ಒದಗಿಸುವ ಪ್ರಶ್ನೆಯು ಏಳುವುದಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
ಈ ಕುರಿತು ಪ್ರಶ್ನೆಯನ್ನು ಸದಸ್ಯರೊಬ್ಬರು ಕೇಳಿದ್ದು, ಲಭ್ಯವಿದ್ದರೆ ವಲಸಿಗರ ರಾಜ್ಯವಾರು ಮಾಹಿತಿಯನ್ನೂ ನೀಡುವಂತೆ ಕೋರಿದ್ದರು.
ಇದನ್ನೂ ಓದಿ: ಯಾವೊಬ್ಬ ವಲಸೆ ಕಾರ್ಮಿಕರೂ ಆಹಾರವಿಲ್ಲದೆ ಸಾವನ್ನಪ್ಪಿಲ್ಲ: ನಳಿನ್ ಕುಮಾರ್ ಕಟೀಲ್
ವಲಸಿಗ ಕಾರ್ಮಿಕರು ಲಾಕ್ಡೌನ್ ವೇಳೆ ಎದುರಿಸಬಹುದಾದ ಸಂಕಷ್ಟವನ್ನು ಅಂದಾಜಿಸಲು ಕೇಂದ್ರ ಸರ್ಕಾರ ವಿಫಲವಾಗಿತ್ತೇ ಎಂಬ ಕುರಿತಾದ ಪ್ರಶ್ನಗೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್, “ಕೊರೊನಾ ಸಮಸ್ಯೆ ಹಾಗೂ ಲಾಕ್ಡೌನ್ನಿಂದಾಗಿ ಎದುರಾದ ಸಂಕಷ್ಟಗಳಿಗೆ ಕೇಂದ್ರ, ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಸರಕಾರೇತರ ಸಂಘಟನೆಗಳು ಸ್ಪಂದಿಸಿವೆ” ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕೇವಲ ಕೆಲವೆ ಗಂಟೆಗಳ ಅಂತರದಲ್ಲಿ ದೇಶದಾದ್ಯಂತ ಲಾಕ್ಡೌನ್ ಘೋಷಿಸಿದ ಪರಿಣಾಮದಿಂದಾಗಿ ಕೋಟ್ಯಾಂತರ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ತಮ್ಮ ಊರುಗಳಿಗೆ ತಲುಪಲು ಹರಸಾಹಸ ಪಡುವಂತಾಗಿತ್ತು.
ಇದರ ನಂತರ ದೇಶದ ಮಹಾವಲಸೆ ಪ್ರಾರಂಭವಾಗಿ ನೂರಾರು ಮಂದಿ ವಲಸೆ ಕಾರ್ಮಿಕರು ದೇಶದ ಹೆದ್ದಾರಿಗಳಲ್ಲಿ, ರೈಲುಗಳಲ್ಲಿ, ರೈಲಿನ ಹಳಿಗಳಲ್ಲಿ, ಅಫಘಾತ, ದಣಿವು ಹಾಗೂ ಹಸಿವಿನಿಂದ ಪ್ರಾಣ ಬಿಡುವಂತಾಯಿತು.
ಇದನ್ನೂ ಓದಿ: ಎಲ್ಲಾ ವಲಸೆ ಕಾರ್ಮಿಕರು ತಮ್ಮೂರು ತಲುಪಿದ್ದಾರೆಯೇ? ಎಷ್ಟು ಜನ ಉಳಿದುಕೊಂಡಿದ್ದಾರೆ? ಇಲ್ಲಿದೆ ಮಾಹಿತಿ