ಡಿಜೆ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ಮಾಧ್ಯಮಗಳು ಕೇವಲ ವಾಸ್ತವಾಂಶಗಳನ್ನು ಮಾತ್ರ ವರದಿ ಮಾಡುವಂತೆ ಮತ್ತು ಉದ್ರಿಕ್ತತೆಯನ್ನು ಇನ್ನಷ್ಟು ಹೆಚ್ಚಿಸುವ ಅಭಿಪ್ರಾಯಗಳನ್ನು ಹಂಚಿಕೊಳ್ಳಬಾರದೆಂದು ಮನವಿ ಮಾಡುತ್ತೇವೆ ಎಂದು ನಾವು ಭಾರತೀಯರು ಸಂಘಟನೆ ತಿಳಿಸಿದೆ.
ಪ್ರವಾದಿ ಮುಹಮ್ಮದರ ಮೇಲೆ ಮಾಡಿದ ಅವಹೇಳನಕಾರಿ, ಅವಮಾನಕರ ಸಾಮಾಜಿಕ ಮಾಧ್ಯಮದ ಪೋಸ್ಟನ್ನು ನಾವು ಖಂಡಿಸುತ್ತೇವೆ. ಕಾನೂನುರೀತಿ ಕ್ರಮ ಜರುಗಲಿ ಎಂದು ನಾವು ಭಾರತೀಯರು ಸಂಘಟನೆ ಹೇಳಿಕೆಯಲ್ಲಿ ಒತ್ತಾಯಿಸಿದೆ.
ಪ್ರವಾದಿ ಮುಹಮ್ಮದರ ಕುರಿತ ಅತ್ಯಂತ ಖಂಡನೀಯ ಅವಹೇಳನಕಾರಿ ಸಾಮಾಜಿಕ ಮಾಧ್ಯಮ ಪೋಸ್ಟಿನ ಕಾರಣದಿಂದ ಗಲಭೆ ನಡೆಯಿತು ಎಂದು ಹೇಳಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯವು ಅಸ್ವೀಕಾರಾರ್ಹ ಮತ್ತು ಶಾಂತಿಗೆ ಹಾನಿಕಾರಕವಾಗಿದ್ದು, ಕಾನೂನು ಅನುಷ್ಟಾನ ಸಂಸ್ಥೆಗಳು ಅಂತವುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಾ ಧರ್ಮಗಳನ್ನು ಗೌರವಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಾವೀಗ ಶಾಂತಿಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಇಡೀ ಬೆಂಗಳೂರು ಕೊರೋನ ಪಿಡುಗು ಮತ್ತು ಅಯೋಜಿತ ಲಾಕ್ಡೌನ್ ಕಾರಣದಿಂದ ಈಗಾಗಲೇ ಕಷ್ಟಕ್ಕೆ ಗುರಿಯಾಗಿರುವಾಗ, ಈ ರೀತಿಯ ಘಟನೆಗಳು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತವೆ. ನಾವು ಎಲ್ಲಾ ಬೆಂಗಳೂರಿಗರಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತೇವೆ. ಪ್ರಜಾಸತ್ತಾತ್ಮಕ ಸಮಾಜವೊಂದರಲ್ಲಿ ಹಿಂಸಾಚಾರವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ; ಹಸಿದ ಮಾಧ್ಯಮಗಳಿಗೆ ತಿಳಿಗೇಡಿಗಳು ಕೊಟ್ಟ ಅಸ್ತ್ರ: ಡಿ.ಜೆ ಹಳ್ಳಿ ಪ್ರಕರಣ ಎತ್ತುತ್ತಿರುವ ಪ್ರಶ್ನೆಗಳು
ಮೌಲಾನಾ ಮಝಾಮಿಲ್ ಸಾಬ್, ಅಮೀರ್ ಎ ಶರಿಯತ್ ಮೌಲಾನಾ ಹಜ್ರತ್ ಸಗೀರ್ ಆಹ್ಮದ್ ಸಾಬ್ ಅವರಂತಹ ಹಲವಾರು ಹಿರಿಯ ಧಾರ್ಮಿಕ ನಾಯಕರು, ಹಲವಾರು ಜನ ಸಾಮಾನ್ಯರು ಮತ್ತು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಕೂಡಾ ನಿನ್ನೆ ರಾತ್ರಿಯೇ ಶಾಂತಿಗಾಗಿ ಕರೆಗಳನ್ನು ನೀಡಿದ್ದಾರೆ. ಹಲವಾರು ಮುಸ್ಲಿಮ್ ಯುವಕರು ಇತರ ಧಾರ್ಮಿಕ ಸ್ಥಳಗಳನ್ನು ಕೂಡ ರಕ್ಷಿಸಲು ಮಾನವ ಸರಪಳಿಗಳನ್ನು ರಚಿಸಿದ್ದಾರೆ ಈ ಮಾದರಿ ನಮ್ಮದಾಗಲಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವದಂತಿಗಳು ಮತ್ತು ಪ್ರಚೋದನೆಗಳಿಗೆ ಬಲಿ ಬೀಳಬಾರದು ಎಂದು ಜನರಿಗೆ ಮನವಿ ಮಾಡುತ್ತೇವೆ. ಮತ್ತು ನಿನ್ನೆಯ ಎಲ್ಲಾ ಘಟನೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಹಾಗೂ ಯಾವುದೇ ಮುಗ್ಧ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸದಂತೆ ಖಾತರಿಗೊಳಿಸಬೇಕು ಎಂದು ಪೊಲೀಸರಿಗೆ ನಾವು ಮನವಿ ಮಾಡುತ್ತೇವೆ. ನಾವೆಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಎಲ್ಲವೂ ತಕ್ಷಣ ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ಶ್ರಮಿಸೋಣ. ನಾವೆಲ್ಲರೂ ಜೊತೆಸೇರಿ ಸಾಂಕ್ರಾಮಿಕ ಪಿಡುಗು ಮತ್ತು ಯಾವುದೇ ವಿಭಜನಕಾರಿ ಪ್ರಯತ್ನಗಳ ವಿರುದ್ಧ ಹೋರಾಡೋಣ. ಯಾವುದೇ ಹಿಂಸಾಚಾರವು ನಮ್ಮ ಸಮಾಜದ ಶಾಂತಿಯ ಹಾದಿಯಲ್ಲಿ ಅಡ್ಡನಿಲ್ಲಲು ಬಿಡದಿರೋಣ ದಯವಿಟ್ಟು ಶಾಂತಿಗಾಗಿ ಕೈಜೋಡಿಸಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಡಿಜೆ ಹಳ್ಳಿ ಘಟನೆ ಅಕ್ಷಮ್ಯ; ತಪ್ಪು ಮಾಡಿದವರಿಗೆ ಶಿಕ್ಷಯಾಗಬೇಕು: ಹೆಚ್. ಡಿ. ಕುಮಾರಸ್ವಾಮಿ