ಕೇಂದ್ರದ ಹೊಸ ಕೃಷಿಕಾನೂನನ್ನು ವಿರೋಧಿಸಿ ನಿರಂತರವಾಗಿ ಹದಿನೈದು ದಿನದಿಂದ ರೈತರು ದೇಶದಾದ್ಯಂತ ಹೋರಾಟ ನಡೆಸುತ್ತಿದ್ದು, ನಿನ್ನೆ ಮುಂಜಾನೆ ದೆಹಲಿಯ ಇಂಡಿಯಾ ಗೇಟ್ ಬಳಿ ನಡೆದ ಪ್ರತಿಭಟನೆಯಲ್ಲಿ ಟ್ರಾಕ್ಟರ್ ಒಂದನ್ನು ಸುಟ್ಟು, ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ನೇಣಿಗೇರಿಸಿ ತಮ್ಮ ಆಕ್ರೋಶದ ತೀವ್ರತೆಯನ್ನು ವ್ಯಕ್ತಪಡಿಸಿದ್ದರು.
ಟ್ರಾಕ್ಟರ್ ಸುಟ್ಟ ರೈತರ ವಿರುದ್ದ ಈಗಾಗಲೆ ಕೇಸು ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ, “ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುವವರು ನಿಜವಾಗಿ ರೈತರನ್ನು ಅವಮಾನಿಸುತ್ತಿದ್ದಾರೆ. ಪ್ರತಿಭಟನಾಕಾರರು ರೈತರು ಗೌರವಿಸುವ ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಸುಟ್ಟು ರೈತರನ್ನು ಅವಮಾನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ರೈತರ ಬಗ್ಗೆ ಪ್ರಧಾನಿ ನೀಡಿರುವ ಹೇಳಿಕೆಗೆ ಹಲವಾರು ರೈತ ಹೋರಾಟಗಾರರು ಪ್ರತಿಕ್ರಿಯೆ ನೀಡಿದ್ದು ಪ್ರಧಾನಿಯೆ ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗೆ ವಿರೋಧ: ದೆಹಲಿಯ ಇಂಡಿಯಾ ಗೇಟ್ ಬಳಿ ಟ್ರಾಕ್ಟರ್ ಸುಟ್ಟು ರೈತರ ದಿಟ್ಟ ಪ್ರತಿಭಟನೆ
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ರೈತರ ಬದುಕನ್ನು ಕಿತ್ತು ತಮ್ಮ ಗೆಳೆಯರಿಗೆ ಹಾಗೂ ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ನೀಡಿರುವ ಮೋದಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ” ಎಂದು ಹೇಳಿದರು.
“ಪ್ರಧಾನಿಯಾಗಿರುವ, ತನ್ನಲ್ಲಿ ಐವತ್ತಾರಿಂಚು ಎದೆಯಿದೆಯೆಂದು ತೋರಿಸಿಕೊಳ್ಳುವ ದೊಡ್ಡ ಮನುಷ್ಯ, ರೈತರನ್ನು ಕರೆದು ಮಾತನಾಡುವುದೋ, ಅವರ ಕೂಗಿಗೆ ಸ್ಪಂದಿಸುವುದೋ, ಅವರಿಗೆ ಸಾಂತ್ವನ ಮಾಡುವುದೋ ಮಾಡುತ್ತಿಲ್ಲ. ನಿಜವಾಗಿ ಮೋದಿಯೇ ರೈತರಿಗೆ ಅವಮಾನ ಮಾಡಿದ್ದಾರೆ. ಅದರಲ್ಲೂ ರೈತರ ಜೊತೆ ಸೌಜನ್ಯಕ್ಕೂ ಚರ್ಚೆ ಮಾಡದೆ ಮಸೂದೆಗಳನ್ನು ಪಾಸ್ ಮಾಡಿರುವವರು ರೈತರ ಬಗ್ಗೆ ಕನಿಕರ ತೋರಿಸುವುದು ಖಂಡನೀಯ” ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, “ಪ್ರಧಾನಿ ಒಬ್ಬ ಸುಳ್ಳುಗಾರ, ಸುಳ್ಳನ್ನೇ ಸತ್ಯವೆಂದು ನಂಬಿಸುವಲ್ಲಿ ಇದುವರೆಗೂ ಅವರು ಯಶಸ್ವಿಯಾಗಿದ್ದಾರೆ. ನಲವತ್ತು ವರ್ಷದ ಹಿಂದೆ ಏನೂ ಅಲ್ಲದೆ ಸಂಘಟನೆ ಈಗ ಬಲಾಡ್ಯಗೊಂಡು ದೇಶದ ಆಡಳಿತ ಹಿಡಿದಿದ್ದಾರೆಂದರೆ ಅದಕ್ಕೆ ಕಾರಣ ಈ ಸುಳ್ಳುಗಳೇ. ಆದರೆ ಅವರ ಸಾಧನೆ ಏನು?” ಎಂದು ಪ್ರಶ್ನಿಸಿದರು.
“ರೈತ ಹೋರಾಟಗಾರರು ಟ್ರಾಕ್ಟರ್ ಸುಟ್ಟಿದ್ದು ಸರ್ಕಾರದ ಗಮನ ಸೆಳೆಯಲು, ಕೃಷಿ ಕ್ಷೇತ್ರಕ್ಕೆ ಸರ್ಕಾರ ಮಾಡಿದ ದ್ರೋಹವನ್ನು ತಿಳಿಸಲು, ಅದಕ್ಕೆ ಪ್ರಧಾನಿ ಉತ್ತರ ಕೊಡಬೇಕು. ರೈತರು ಕ್ರಿಮಿನಲ್ಗಳಲ್ಲ, ಕೃಷಿಯನ್ನು ನಾಶಮಾಡಲು ಹೊರಟಿದ್ದಕ್ಕೆ, ಕೃಷಿ ಮಾರುಕಟ್ಟೆಯನ್ನು ದಿವಾಳಿ ಮಾಡಲು ಹೊರಟಿದ್ದಕ್ಕೆ ರೈತರು ಪ್ರತಿಭಟನೆ ಮಾಡಿದ್ದಾರೆ. ಸರ್ಕಾರ ರೈತರ ಬಾಯಿಗೆ ವಿಷ ಹಾಕಿ, ರೈತರ ಮೇಲೆ ಕ್ರಿಮಿನಲ್ ಕೇಸು ಹಾಕಿ ಕಾರ್ಪೊರೇಟ್ಗಳಿಗೆ ಲಾಭ ಮಾಡಲು ಹೊರಟಿದೆ. ರೈತರು ಟ್ರಾಕ್ಟರ್ಗೆ ಬೆಂಕಿ ಹಾಕಿರುವುದು ಪ್ರಧಾನಿ ಮಾತನಾಡಲಿ ಎಂದಾಗಿದೆ. ಅದನ್ನು ಬಿಟ್ಟು ರೈತರಿಗೆ ಅವಮಾನ ಎಂದರೆ ಏನರ್ಥ ? ರೈತರಿಗೆ ಅವಮಾನ ಯಾರು ಮಾಡುತ್ತಿದ್ದಾರೆ ಎಂದು ಇಡಿ ದೇಶಕ್ಕೆ ಗೊತ್ತಿದೆ” ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಬಂದ್: ರೈತ ಪರ ಹೋರಾಟಕ್ಕೆ ಬೆಂಗಳೂರಿನಲ್ಲಿ ಅಭೂತಪೂರ್ವ ಬೆಂಬಲ