“ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕೃಷಿ ಕಾನೂನನ್ನು ಅಂಗೀಕರಿಸದಿರಲು ಸಂವಿಧಾನದ 254(2)ನೇ ವಿಧಿಯನ್ವಯ ಸಾಧ್ಯತೆಗಳನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಅನ್ವೇಷಿಸಲು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಅಧ್ಯಕ್ಷೆ ಸೋನಿಯಾ ಗಾಂಧಿ ಸಲಹೆ ನೀಡಿದ್ದಾರೆ” ಎಂದು ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೊಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗೆ ವಿರೋಧ: ದೆಹಲಿಯ ಇಂಡಿಯಾ ಗೇಟ್ ಬಳಿ ಟ್ರಾಕ್ಟರ್ ಸುಟ್ಟು ರೈತರ ದಿಟ್ಟ ಪ್ರತಿಭಟನೆ
“ಬೆಂಬಲ ಬೆಲೆಯ (MSP) ನಿರ್ಮೂಲನೆ ಮತ್ತು ಎಪಿಎಂಸಿಗಳಿಗೆ ತೊಂದರೆ ಸೇರಿದಂತೆ, ಕೇಂದ್ರ ಜಾರಿಗೆ ತರುತ್ತಿರುವ 3 ಕಠಿಣ ಕೃಷಿ ಕಾನೂನುಗಳಲ್ಲಿ ಸ್ವೀಕಾರಾರ್ಹವಲ್ಲದ ರೈತವಿರೋಧಿ ನಿಬಂಧನೆಗಳನ್ನು ತೆಗೆದುಹಾಕಲು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಸಾಧ್ಯವಿದೆ. ರೈತರಿಗೆ ಮೋದಿ ಸರ್ಕಾರ ಮತ್ತು ಬಿಜೆಪಿ ಮಾಡಿದ ಅನ್ಯಾಯಕ್ಕೆ ಇದು ಸ್ವಲ್ಪ ನಿವಾರಣೆ ನೀಡಬಹುದು” ಎಂದು ಅವರು ಹೇಳಿದರು.
ಕೃಷಿ ಮಸೂದೆಗಳು ರಾಜ್ಯಸಭೆಯಲ್ಲಿ ಹೆಚ್ಚಿನ ವಿವಾದಗಳ ನಡುವೆ ಅಂಗೀಕರಿಸಲ್ಪಟ್ಟು, ರಾಷ್ಟ್ರಪತಿಗಳು ಭಾನುವಾರ ಅದಕ್ಕೆ ಸಹಿ ಹಾಕಿದರು. ಇದರ ನಡುವೆ, ದೇಶದಾದ್ಯಂತ ರೈತರು ಈ ಹೊಸ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗಳ ವಿರುದ್ಧ ಆಕ್ರೋಶ: ರಾಜ್ಯದ್ಯಂತ ಕರ್ನಾಟಕ ಬಂದ್ ಆರಂಭ – ವಿಡಿಯೋ ನೋಡಿ
ಹೊಸ ಕಾನೂನುಗಳನ್ನು ಸಾಂವಿಧಾನಿಕವಾಗಿ ಮತ್ತು ಕಾನೂನುಬದ್ಧವಾಗಿ ಪ್ರಶ್ನಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಕೇರಳದ ತ್ರಿಶೂರ್ನ ಕಾಂಗ್ರೆಸ್ ಸಂಸದ ಟಿ.ಎನ್.ಪ್ರತಾಪನ್, ಸೋಮವಾರ ಕಾಯಿದೆಗಳ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?
ಹಲವಾರು ರೈತ, ದಲಿತ, ಕಾರ್ಮಿಕ ಮತ್ತು ಕನ್ನಡಪರ ಸಂಘಟನೆಗಳೂ ಸೇರಿದಂತೆ ಕರ್ನಾಟಕದಲ್ಲಿ ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಈ ಬಂದ್ ಬಹುತೇಕ ಯಶಸ್ವಿಯೂ ಆಗಿದೆ. ಉತ್ತರಪ್ರದೇಶದಲ್ಲಿಯೂ ಕಾಂಗ್ರೆಸ್ ಮತ್ತು ಇತರೆ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಗೋವಾ ಮತ್ತು ತಮಿಳುನಾಡಿನಿಂದಲೂ ಪ್ರತಿಭಟನಾ ವರದಿಗಳು ದಾಖಲಾಗಿವೆ.
ಇದನ್ನೂ ಓದಿ: ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಎನ್ಡಿಎ ಮೈತ್ರಿಕೂಟ ತೊರೆದ ಪಂಜಾಬ್ನ ಅಕಾಲಿ ದಳ!