ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಮಸೂದೆಗಳು ಅವರಿಗೆ ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ರಾಷ್ಟ್ರಾದ್ಯಂತ ರೈತರು ವ್ಯಾಪಕ ಪ್ರತಿಭಟನೆ ನಡೆಸುತ್ತಿರುವುದರ ಬೆನ್ನಲ್ಲೇ ಈ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್ನ ಶಿರೋಮಣಿ ಅಕಾಲಿ ದಳ ಪಕ್ಷವು ಎನ್ಡಿಎ ಮೈತ್ರಿಕೂಟ ತೊರೆದು ಹೊರನಡೆದಿದೆ.
ಅಕಾಲಿ ದಳವು ಎನ್ಡಿಎ ಮೈತ್ರಿಕೂಟದ ಹಳೆಯ ಗೆಳೆಯನಾಗಿತ್ತು. ಆದರೆ ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ಅಂಗೀಕರಿಸಲು ಹೊರಟಾಗ ಮುಖ್ಯವಾಗಿ ಪಂಜಾಬ್ ರೈತರು ಬೀದಿಗಿಳಿದು ಹೋರಾಟ ಮಾಡಿದ್ದರು. ಆಗ ಅಕಾಲಿ ದಳದಿಂದ ಕೇಂದ್ರ ಆಹಾರ ಸಂಸ್ಕರಣ ಸಚಿವೆಯಾಗಿದ್ದ ಹರ್ಸಿಮ್ರತ್ ಕೌರ್ ಬಾದಲ್ರವರು ಮಸೂದೆಗಳನ್ನು ವಿರೋಧಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶಿರೋಮಣಿ ಅಕಾಲಿ ದಳದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಉನ್ನತ ಸಮಿತಿಯಾದ ಕೋರ್ ಕಮಿಟಿ ಶನಿವಾರ ರಾತ್ರಿ ಸಭೆ ಸೇರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ.
ಈ ಮಸೂದೆಗಳನ್ನು “ರೈತರ ಪಾಲಿಗೆ ಮಾರಕ ಮತ್ತು ಹಾನಿಕಾರಕ” ಎಂದು ಕರೆದಿರುವ ಅಕಾಲಿ ದಳ ಮುಖ್ಯಸ್ಥ ಸುಖ್ಬಿರ್ ಸಿಂಗ್ ಬಾದಲ್, ‘ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಆಶ್ವಾಸನೆ ರಕ್ಷಿಸಲು ಶಾಸನಬದ್ಧ ಶಾಸಕಾಂಗ ಖಾತರಿಗಳನ್ನು ನೀಡಲು ಹಠಮಾರಿ ಕೇಂದ್ರ ಸರ್ಕಾರ ನಿರಾಕರಿಸಿದ್ದರಿಂದ ಪಂಜಾಬ್ ಮತ್ತು ರೈತರ ಹಿತಾಸಕ್ತಿ ರಕ್ಷಿಸಲು ಮೈತ್ರಿಕೂಟದಿಂದ ಹೊರನಡೆಯುತ್ತಿದ್ದೇವೆ’ ಎಂದಿದ್ದಾರೆ.
ಪಂಜಾಬ್ನ ರೈತರನ್ನು, ಸಿಖ್ ರೈತರ ಹಿತಕಾಯುವ ಮತ್ತು ಶಾಂತಿ ಸೌಹಾರ್ದತೆ ನೆಲೆಸುವ ಕೆಲಸವನ್ನು ಅಕಾಲಿ ದಳ ಮುಂದುವರೆಸುತ್ತದೆ. ರೈತರು, ಪಂಜಾಬ್ನ ಜನತೆ, ಪಕ್ಷದ ಕಾರ್ಯಕರ್ತರೊಡನೆ ಚರ್ಚಿಸಿಯೇ ಮೈತ್ರಿಕೂಟದಿಂದ ಹೊರಬರುವ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಆಂಧ್ರದ ತೆಲುಗು ದೇಶಂ ಪಕ್ಷ ಮತ್ತು ಮಹಾರಾಷ್ಟ್ರದ ಶಿವಸೇನೆ ನಂತರ ಎನ್ಡಿಎ ತೊರೆಯುತ್ತಿರುವ ಮೂರನೇ ಪಕ್ಷ ಶಿರೋಮಣಿ ಅಕಾಲಿ ದಳವಾಗಿದೆ. ಇದು ಬಿಜೆಪಿಯು ಮಿತ್ರಪಕ್ಷಗಳ ಅಭಿಪ್ರಾಯಕ್ಕೆ ಬೆಲೆ ನೀಡುತ್ತಿಲ್ಲ ಎಂಬುದರ ಸೂಚನೆಯಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಇದನ್ನೂ ಓದಿ: ಗದ್ದಲದ ನಡುವೆ ವಿವಾದಾತ್ಮಕ ಭೂ ಸ್ವಾಧೀನ ತಿದ್ದುಪಡಿ ಮಸೂದೆ ಅಂಗೀಕಾರ