ರಾಜ್ಯ ಸರ್ಕಾರದ ಭೂ ಸ್ವಾಧೀನ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ಆಕ್ರೋಶಗೊಂಡ ವಿರೋಧ ಪಕ್ಷದ ಶಾಸಕರು ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಸದನದಿಂದ ಹೊರನಡೆದಾಗ ರಾಜ್ಯ ಸರ್ಕಾರ ಮಸೂದೆಯನ್ನು ಅಂಗೀಕರಿಸಿದೆ.
ಸದನದಲ್ಲಿ ಮಸೂದೆಯ ಪ್ರಾಸ್ತಾವಿಕ ತಿದ್ದುಪಡಿಗಳನ್ನು ವಿರೋಧಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಬಿಜೆಪಿ ಸರ್ಕಾರ ರಾಜ್ಯದ ಸ್ವಾಭಿಮಾನಿ ರೈತರನ್ನು ಗುಲಾಮರನ್ನಾಗಿಸಲು ಹೊರಟಿದೆ. ರೈತರ ಜಮೀನುಗಳನ್ನು ಯಾರೂ ಬೇಕಾದರೂ ಖರೀದಿ ಮಾಡಬಹುದು ಎಂಬದು ಅತ್ಯಂತ ಕೆಟ್ಟ ತಿದ್ದುಪಡಿಯಾಗಿದೆ. ಈ ಮೂಲಕ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು ರೈತರ ಭೂಮಿಯನ್ನು ಖರೀದಿಸುತ್ತಾರೆ. ರೈತರನ್ನು ಗುಲಾಮರನ್ನಾಗಿಸುವ ಕಾರಣದಿಂದಲೇ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿಯನ್ನು ಕಂಡಕಂಡಲ್ಲಿ ಘೇರಾವ್ ಮಾಡಿ: ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ
“ರೈತ ವಿರೋಧಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮತಿ ನೀಡುತ್ತಾರೆ ಎಂದು ನಾವು ಎಣಿಸಿರಲಿಲ್ಲ. ನಾವು ಈ ದೇಶದ ರೈತರನ್ನು ರಕ್ಷಿಸಲು ಬಯಸುತ್ತೇವೆ. ಕಾಂಗ್ರೆಸ್ ಪಕ್ಷವು ಯಾವಾಗಲೂ ರೈತರ ಹಿತದೃಷ್ಟಿಯ ಪರವೇ ನಿಂತಿದೆ. ದಶಕಗಳ ಹಿಂದೆ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಎಲ್ಲಾ ರೈತರಿಗೂ ಭೂಮಿ ಸಿಗುವಂತೆ ನಾವು ಮಾಡಿದ್ದೆವು. ಇದಲ್ಲದೆ, ರೈತರಿಗೆ ಭೂಮಿ ಸಿಗಲು ವಿವಿಧ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ. ಆದರೆ, ಇದೀಗ ಬಿಜೆಪಿ ಸರ್ಕಾರದ ಈ ನಡೆ ದುರಾದೃಷ್ಟಕರ” ಎಂದು ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಯಡಿಯೂರಪ್ಪ, “ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕವು ಇಂದು ವಿಧಾನಸಭೆಯಲ್ಲಿ ಚರ್ಚೆ ನಂತರ ಅಂಗೀಕೃತಗೊಂಡಿದೆ. ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಕೃಷಿಕರಿಗೆ ಯಾವ ರೀತಿಯ ಸಮಸ್ಯೆಯೂ ಉಂಟಾಗುವುದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ರಾಜ್ಯಸರ್ಕಾರ ಬದ್ಧವಾಗಿದೆ.” ಎಂದು ಹೇಳಿದ್ದಾರೆ.
ಪ್ರಸಕ್ತ ಭೂಸುಧಾರಣಾ ತಿದ್ದುಪಡಿ ಮಸೂದೆಯು ಕರ್ನಾಟಕದ ರೈತರ ಪಾಲಿಗೆ ಆಶಾದಾಯಕ ಮಸೂದೆಯಾಗಿದೆ. ಇದು ಸುಧಾರಣಾ ಪರವಾಗಿ, ಕಾಲಕ್ಕನುಗುಣವಾಗಿದ್ದು, ರೈತರ ಹಿತದೃಷ್ಟಿಯನ್ನೇ ಆದ್ಯತೆಯನ್ನಾಗಿಸಿಕೊಂಡಿದೆ. ರೈತರ ಅನಾನುಕೂಲಗಳನ್ನು ಪರಿಹರಿಸಿ, ತಂತ್ರಜ್ಞಾನದ ನೆರವು, ಉತ್ತಮ ಸೌಕರ್ಯಗಳ ಅನುಕೂಲತೆ ಒದಗಿಸುವ ಉದ್ದೇಶ ಹೊಂದಿದೆ. (2/2)
— B.S. Yediyurappa (@BSYBJP) September 26, 2020
ಇದನ್ನೂ ಓದಿ: ರೈತ ವಿರೋಧಿ ಕಾಯ್ದೆ ವಿರುದ್ದ ರಾಜ್ಯದಾದ್ಯಂತ ಪ್ರತಿಭಟನೆ; ಹೋರಾಟದ ಝಲಕ್