ಭಾರತೀಯ ಜೀವವಿಮಾ ನಿಗಮದ ಶೇರು ಮಾರಾಟಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಅಖಿಲ ಭಾರತ ಜೀವವಿಮಾ ನೌಕರರ ಸಂಘ, ಅಭಿವೃದ್ಧಿ ಅಧಿಕಾರಿಗಳ ಸಂಘ ಮತ್ತು ಅಧಿಕಾರಿಗಳ ಸಂಘಟನೆಗಳು ನೇತೃತ್ವದಲ್ಲಿ ತುಮಕೂರಿನ ಜಿಲ್ಲೆಯಾದ್ಯಂತ ಎಲ್ಲಾ ಶಾಖೆಗಳ ಮುಂದೆ ನೌಕರರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಡಸ್ವಾಮಿ ಮಾತನಾಡಿ “ಬಜೆಟ್ನಲ್ಲಿ ಎಲ್ಐಸಿ ಶೇರು ವಿಕ್ರಯಕ್ಕೆ ತೀರ್ಮಾನಿಸಿರುವುದು ಆಘಾತಕಾರಿ ಬೆಳವಣಿಗೆ. ಸದ್ಯಕ್ಕೆ ಗ್ರಾಹಕರ ಹಣಕ್ಕೆ ಭಯವಿಲ್ಲ. ಆದರೆ ಭಾರತೀಯ ಜೀವ ವಿಮಾ ನಿಗಮ ಖಾಸಗೀಕರಣಗೊಳಿಸಿದರೆ ಸಾರ್ವಜನಿಕರ ಹಣಕ್ಕೆ ಭದ್ರತೆ ಇರುವುದಿಲ್ಲ ಎಂದು ಹೇಳಿದರು.
ಭಾರತೀಯ ಜೀವ ವಿಮಾನ ನಿಗಮ ಇದುವರೆಗೂ ಸಾವಿರಾರು ಕೋಟಿ ರೂಪಾಯಿ ಲಾಭವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತ ಬಂದಿದೆ. 2017ರಲ್ಲಿ, 2206 ಕೋಟಿ, 2018ರಲ್ಲಿ 2430 ಕೋಟಿ, 2019ರಲ್ಲಿ 2611 ಕೋಟಿ ರೂಪಾಯಿ ಲಾಭಾಂಶವನ್ನು ಸರ್ಕಾರದ ಬೊಕ್ಕಸಕ್ಕೆ ನೀಡಿದೆ. ಎಲ್ಐಸಿ ಲಾಭದಲ್ಲಿದ್ದು ಗ್ರಾಹಕರ ವಿಶ್ವಾಸ ಗಳಿಸಿದೆ. ಸಂಸ್ಥೆ ಇಷ್ಟು ಸುದೀರ್ಘ ವರ್ಷಗಳಲ್ಲಿ ಒಬ್ಬ ಪಾಲಿಸಿದಾರನಿಗೂ ಮೋಸ ಮಾಡಿಲ್ಲ. ಪಾಲಿಸಿದಾರರು ಸಂಸ್ಥೆಯ ಮೇಲೆ ಪಾಲಿಸಿದಾರರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ ಎಂದರು.
ಖಾಸಗಿಯವರು ಎಲ್ಐಸಿಯಲ್ಲಿ ಹೂಡಿಕೆ ಮಾಡುವುದು ಲಾಭದ ಉದ್ದೇಶವಿಟ್ಟುಕೊಂಡು ಮಾತ್ರ. ಅವರಿಗೆ ಜನರ ನಂಬಿಕೆಗಳು ಮುಖ್ಯವಲ್ಲ. ಸಾರ್ವಜನಿಕ ಸಂಸ್ಥೆಗಳಲ್ಲಿ ಲಾಭ ಪಡೆಯುವುದೇ ಖಾಸಗಿಯವರ ಮುಖ್ಯ ಉದ್ದೇಶ. ಇಲ್ಲಿನ ಸಾವಿರಾರು ಕೋಟಿ ಹಣವನ್ನು ಕಂಪನಿಗಳಲ್ಲಿ ಹೂಡಿ ನಂತರ ನಷ್ಟವಾಯಿತೆಂದು ಜನರ ಹಣವನ್ನು ಲೂಟಿ ಮಾಡುತ್ತಾರೆ. ಆದ್ದರಿಂದ ಖಾಸಗೀಕರಣಗೊಳಿಸುವುದು ಬೇಡ. ಪಾಲಿಸಿದಾರರು ತಮ್ಮ ಹಣ ರಕ್ಷಣೆಗೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ, ಕುಣಿಗಲ್, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಸೇರಿದಂತೆ ಎಲ್ಲಾ ತಾಲೂಕು ಶಾಖೆಗಳ ಮುಂದೆ ಅಧಿಕಾರಿಗಳು, ಕ್ಷೇತ್ರ ಅಧಿಕಾರಿಗಳು, ದ್ವಿತೀಯ, ತೃತೀಯ, ಡಿ ದರ್ಜೆ ನೌಕರರು ಇಂದು ಮಧ್ಯಾಹ್ನ 12.30ರಿಂದ 1.30ರವರೆಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ನಿಲುವನ್ನು ಖಂಡಿಸಿದರು.