ಪ್ರತಿನಿತ್ಯ ಲಕ್ಷ ಲಕ್ಷ ಉದ್ಯೋಗ ನಷ್ಟದ ಸುದ್ದಿ ಕೇಳುತ್ತಿದ್ದೇವೆ. ನೂರು ಉದ್ಯೋಗಗಳಿಗೆ ಲಕ್ಷಾಂತರ ಯುವಜನರು ಪರೀಕ್ಷೆ ಬರೆಯುತ್ತಿದ್ದಾರೆ. ವಿವಿಧ ಬಗೆಯ ಸ್ವಂತ ವೃತ್ತಿ, ವ್ಯವಹಾರಗಳಲ್ಲಿರುವವರ ಸಂಪಾದನೆ ಇಳಿದಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ಉದ್ಯೋಗ ನಷ್ಟದ ಮೊದಲ ಬಲಿಪಶುಗಳಾಗಿದ್ದಾರೆ. ನಿರುದ್ಯೋಗದ ಟೈಂ ಬಾಂಬ್ ಕರ್ನಾಟಕದಲ್ಲಿ ಸ್ಫೋಟ ಆಗುವ ಮುಂಚೆಯೇ ಎಚ್ಚೆತ್ತುಕೊಳ್ಳದಿದ್ದರೆ ಸಮಾಜದಲ್ಲಿ ಉಂಟಾಗುವ ಅಶಾಂತಿ, ಅರಾಜಕತೆ, ಅಪರಾಧಗಳಿಗೆ ನಾವೂ ಕಾರಣರಾಗುತ್ತೇವೆ ಎಂದು ಉದ್ಯೋಗಕ್ಕಾಗಿ ಯುವಜನರು ಸಂಚಾಲಕರಾದ ಸರೋವರ್ ಬೆಂಕೀಕೆರೆ ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಕುಸಿತದ ಉಂಟಾಗುತ್ತಿರುವ ಉದ್ಯೋಗ ಕಡಿತದ ವಿರುದ್ಧ ನಡೆದ ಬಹಿರಂಗ ಸಹಿ ಸಂಗ್ರಹ ಮತ್ತು ಯುವಜನರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ, ಸ್ಥಳೀಯರಿಗೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿ ಮಾಡುವುದೇ ಇದಕ್ಕೆ ಪರಿಹಾರ. ಕರ್ನಾಟಕದಲ್ಲಿ 50 ಲಕ್ಷ ಹೊಸ ಉದ್ಯೋಗ ಸೃಷ್ಟಿ, ಇರುವ 1 ಕೋಟಿ ಉದ್ಯೋಗಗಳಿಗೆ ಸ್ಥಿರತೆ ಕಲ್ಪಿಸುವ ಯೋಜನೆಯಾದ ‘ಯುವಜನರ ಪ್ರಣಾಳಿಕೆ’ಯನ್ನು ಜಾರಿ ಮಾಡಲು ಸರ್ಕಾರಗಳ ಮೇಲೆ ಒತ್ತಾಯಿಸೋಣ ಎಂದರು.
ಬೆಂಗಳೂರಿನ ಎಸ್.ಜೆ.ಪಿ ಪಾಲಿಟೆಕ್ನಿಕ್ ಕಾಲೇಜು ಮುಂದೆ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ಸಹಿ ಮಾಡಿದರು.
ಹಕ್ಕೊತ್ತಾಯಗಳು
- ಸರ್ಕಾರದ ನೀತಿಗಳಿಂದ ಉದ್ಯೋಗ ನಷ್ಟ ಉಂಟಾಗುತ್ತಿರುವುದರಿಂದ, ಉದ್ಯೋಗ ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಸಿಗುವವರೆಗೆ ಸರ್ಕಾರ ವೇತನ ನೀಡಬೇಕು.
- ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯ ಯೋಜನೆ ಜಾರಿ ಮಾಡುವವರೆಗೆ ನಿರುದ್ಯೋಗ ಭತ್ಯೆ ಕೊಡಬೇಕು.
- ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು.
- ಶಿಕ್ಷಣಕ್ಕೆ ತಕ್ಕ ಉದ್ಯೋಗ, ಉದ್ಯೋಗಕ್ಕೆ ತಕ್ಕ ವೇತನ, ಭದ್ರತೆ ಮತ್ತು ಘನತೆ ಪ್ರತಿಯೊಬ್ಬರ ಹಕ್ಕಾಗಬೇಕು.
ಸಂಚಾಲಕರಾದ ನರಸಿಂಹಮೂರ್ತಿಯವರು ಮಾತನಾಡಿ ಈ ಆಂದೋಲನವನ್ನು ನಾವು ಮುಂದುವರೆಸುತ್ತೇವೆ. ಸೆಪ್ಟೆಂಬರ್ 8ರಿಂದ ರಾಜ್ಯದೆಲ್ಲೆಡೆ ಸಮಾಲೋಚನಾ ಸಭೆಗಳು, ವಿಚಾರಗೋಷ್ಠಿಗಳು ಮತ್ತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯ ಸಾಧ್ಯತೆಯ ಕುರಿತು ಅಧ್ಯಯನ ಕಾರ್ಯಕ್ರಮಗಳು ನಡೆಯಲಿದ್ದು, ಸೆಪ್ಟೆಂಬರ್ 16ರಂದು ಬೆಂಗಳೂರಿನಲ್ಲಿ ಆಂದೋಲನದ ಮುಂದಿನ ನಡೆಗಳ ಕುರಿತು ರಾಜ್ಯಮಟ್ಟದ ಸಮಾಲೋಚನಾ ಸಭೆ ನಡೆಸಲಿದ್ದೇವೆ ಎಂದರು.
ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಬಿ.ಶ್ರೀಪಾದ್ ಭಟ್, ವಾಸು ಎಚ್.ವಿ, ರಾಜಶೇಖರ್ ಅಕ್ಕಿ, ಮಲ್ಲಿಗೆ, ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ನ ಮಹಮ್ಮದ್ ನವಾಜ್ ಮತ್ತಿತರರು ಇದ್ದರು.