ಭೀಮಾ-ಕೋರೆಗಾಂವ್ ಪ್ರಕರಣದ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಲ್ಪಟ್ಟ 83 ವರ್ಷದ ಫಾದರ್ ಸ್ಟಾನ್ ಸ್ವಾಮಿ, ಕುಡಿಯಲು ನೆರವಾಗುವ ಸಿಪ್ಪರ್ ಕಪ್ ಮತ್ತು ಸ್ಟ್ರಾ ಬಳಸುವ ಅನುಮತಿಗಾಗಿ ಮುಂಬೈನ ವಿಶೇಷ ನ್ಯಾಯಾಲಯವನ್ನು ಕೋರಿದ್ದಾರೆ. ಜೈಲಿನ ಹೊರಗಿನಿಂದ ವಸ್ತುಗಳನ್ನು ಒಯ್ಯಲು ನ್ಯಾಯಾಲಯದ ಅನುಮತಿ ಬೇಕಾಗಿದ್ದು, ಆದರೆ ಎನ್ಐಎ ಕೋರಿಕೆಯ ವಿಚಾರಣೆ ನವೆಂಬರ್ 26 ರಂದು ನಡೆಯಲಿದೆ ಎಂದಿದೆ.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಸ್ಟಾನ್ ಸ್ವಾಮಿಯನ್ನು ಅಕ್ಟೋಬರ್ 8 ರಂದು ರಾಂಚಿಯಲ್ಲಿರುವ ಅವರ ನಿವಾಸದಿಂದ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಬಂಧಿಸಿತ್ತು.
ಇದನ್ನೂ ಓದಿ: ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ
ಪಾರ್ಕಿನ್ಸನ್ ಕಾಯಿಲೆಯು ನರಮಂಡಲವನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದ್ದು, ಅಸ್ಥಿರವಾಗಿ ನಡುಕ ಅಥವಾ ಸ್ನಾಯು ಸೆಳೆತಕ್ಕೆ ಕಾರಣವಾಗುತ್ತದೆ. ಇದು ದೈನಂದಿನ ಕ್ರಿಯೆಗಳಾದ ಕುಡಿಯುವುದು ಸೇರಿದಂತೆ ನುಂಗಲು, ಅಥವಾ ಜಗಿಯಲು ಸಮಸ್ಯೆಯನ್ನು ಉಂಟು ಮಾಡುತ್ತದೆ.
ಇದನ್ನೂ ಓದಿ: ’ಬಿಜೆಪಿಯದ್ದು ಕೊಳಕು ರಾಜಕೀಯ’-ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ
“ಪಾರ್ಕಿನ್ಸನ್ ಕಾರಣದಿಂದಾಗಿ ನನ್ನ ಕೈಗಳು ಅಸ್ಥಿರವಾಗಿರುವುದರಿಂದ ನನಗೆ ಲೋಟವನ್ನು ಹಿಡಿದಿಡಲು ಸಾಧ್ಯವಿಲ್ಲ” ಎಂದು ತಾಲೋಜಾ ಸೆಂಟ್ರಲ್ ಜೈಲಿನಲ್ಲಿದ್ದ ಮತ್ತು ಪ್ರಸ್ತುತ ಜೈಲು ಆಸ್ಪತ್ರೆಯಲ್ಲಿರುವ ಸ್ಟಾನ್ ಸ್ವಾಮಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಕಾರಣಗಳಿಗಾಗಿ ಸಲ್ಲಿಸಲಾಗಿದ್ದ ಸ್ಟಾನ್ ಸ್ವಾಮಿಯ ಜಾಮೀನು ಅರ್ಜಿಯನ್ನು ವಿಶೇಷ ಎನ್ಐಎ ನ್ಯಾಯಾಲಯವು ಕಳೆದ ತಿಂಗಳು ತಿರಸ್ಕರಿಸಿತ್ತು. ಅವರ ವಿರುದ್ಧ ಕಠಿಣ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳು-ತಡೆಗಟ್ಟುವಿಕೆ-ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆದ್ದರಿಂದ ಜಾಮೀನು ನೀಡಬಾರದು ಎಂದು ಜಾಮೀನು ನೀಡುವುದನ್ನು ಎನ್ಐಎ ವಿರೋಧಿಸಿತ್ತು.
ಭೀಮಾ-ಕೋರೆಗಾಂವ್ ಪ್ರಕರಣವು ಜನವರಿ 1, 2018 ರಂದು ಯುದ್ಧ ಸ್ಮಾರಕದ ಸುತ್ತಮುತ್ತ ಭುಗಿಲೆದ್ದ ಹಿಂಸಾಚಾರವನ್ನು ಉಲ್ಲೇಖಿಸುತ್ತದೆ. ಅದರ ಹಿಂದಿನ ದಿನ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದ ಹಿಂಸಾಚಾರದ ನಡೆಯಿತು ಎಂದು ಎನ್ಐಎ ಆರೋಪಿಸಲಾಗಿದೆ.
ಇದನ್ನೂಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA
ಮಾವೋವಾದಿ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಇವರ ಪಾತ್ರವಿದೆ ಎಂದು ಎನ್ಐಎ ಹೇಳಿಕೊಂಡಿದೆ.
ಅವರ ಬಂಧನಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೇಂದ್ರ ಸರ್ಕಾರವು “ಎಲ್ಲ ಮಿತಿಗಳನ್ನು ಮೀರಿದೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದರು. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮತ್ತು ಡಿಎಂಕೆ ನಾಯಕಿ ಕನಿಮೋಳಿ ಸೇರಿದಂತೆ ಹಲವಾರು ಈ ಬಂಧನವನ್ನು ನಾಗರಿಕ ಸ್ವಾತಂತ್ರ್ಯಗಳ ಮೇಲಿನ ದಾಳಿ ಎಂದು ಕರೆದಿದ್ದರು.
ಕ್ಯಥೋಲಿಕ್ ಪಾದ್ರಿಯಾಗಿರುವ ಸ್ಟ್ಯಾನ್ ಸ್ವಾಮಿ ಕೇರಳ ಮೂಲದವರಾಗಿದ್ದು 50 ವರ್ಷದಿಂದ ಮಾನವ ಹಕ್ಕು ಮತ್ತು ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಭೀಮಾ ಕೋರೆಗಾಂವ್ ಪ್ರಕರಣದ ಸಂಬಂಧ ಬಂಧನಕ್ಕೊಳಗಾದ 16 ನೇ ವ್ಯಕ್ತಿಯಾಗಿದ್ದು, ಇದುವರೆಗೂ ಬಂಧಿಸಿದವರಲ್ಲಿ ಹಿರಿಯರಾಗಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಬಂಧನವಾಗುತ್ತಿದೆ: ವಿಶ್ವಸಂಸ್ಥೆ ಕಳವಳ