ಕಳೆದ ವಾರ ಲಡಾಕ್ನ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಮುಖಾಮುಖಿಯ ಕುರಿತು “ಜನರನ್ನು ಭಾವನಾತ್ಮಕವಾಗಿ ಮರಳು ಮಾಡುವುದನ್ನು ನಿಲ್ಲಿಸಿ” ಪ್ರಧಾನಿ ನರೇಂದ್ರ ಮೋದಿಯವರಿಗೆ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ.
ಚೀನಾ ಯಾವುದೇ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡಿಲ್ಲ ಅಥವಾ ಗಡಿ ದಾಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದನ್ನು ಖಂಡಿಸಿರುವ ಕಮಲ್ ಹಾಸನ್, ಈ ಕುರಿತು ಮೋದಿ ಪ್ರಶ್ನಿಸುವವರನ್ನು ಸರ್ಕಾರ ದೇಶದ್ರೋಹಿಗಳ ರೀತಿ ನೋಡುವುದು ಸರಿಯಿಲ್ಲ ಎಂದಿದ್ದಾರೆ.
“ಇಂತಹ ಹೇಳಿಕೆಗಳೊಂದಿಗೆ ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವುದರಲ್ಲಿ ಕಿಡಿಗೇಡಿತನವಿದೆ. ಅದನ್ನು ನಿಲ್ಲಿಸುವಂತೆ ನಾನು ಪ್ರಧಾನಿ ಮತ್ತು ಅವರ ಬೆಂಬಲಿಗರಲ್ಲಿ ಪ್ರಾಮಾಣಿಕವಾಗಿ ವಿನಂತಿಸುತ್ತೇನೆ” ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥರು ತಿಳಿಸಿದ್ದಾರೆ.
“ಪ್ರಶ್ನೆಗಳನ್ನು ರಾಷ್ಟ್ರ ವಿರೋಧಿ ಎಂದು ಪರಿಗಣಿಸಲಾಗುವುದಿಲ್ಲ. ಪ್ರಶ್ನೆಗಳನ್ನು ಕೇಳುವ ಹಕ್ಕು ಪ್ರಜಾಪ್ರಭುತ್ವದ ಆಧಾರವಾಗಿದೆ ಮತ್ತು ನಾವು ಸತ್ಯವನ್ನು ತಿಳಿಸುವವರೆಗೂ ಕೇಳುತ್ತಲೇ ಇರುತ್ತೇವೆ” ಎಂದು ಅವರು ಹೇಳಿದ್ದಾರೆ.
ಕೆಲವು ರಕ್ಷಣಾ ಮಾಹಿತಿಯನ್ನು ದೇಶದ ಜನತೆಗೆ ತಿಳಿಸಲಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಆದರೂ ನೀವು ಸೈನ್ಯವನ್ನು ಅನುಮಾನಿಸಬೇಡಿ ಮತ್ತು ದೇಶದ್ರೋಹಿ ಆಗಬೇಡಿ ಎಂದು ಹೇಳುವುದಕ್ಕಿಂತ ಉತ್ತಮ ಸಂವಹನ ವಿಧಾನಗಳನ್ನು ಅಳವಡಿಸಿಕೊಳ್ಳಿ. ನಾವೆಲ್ಲರೂ ಇದ್ದೇವೆ, ಸ್ವಲ್ಪ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ವರ್ತಿಸಿ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಕಳೆದ ವಾರ ನಡೆದ ಹಿಂಸಾಚಾರದ ಅರ್ಥವೇನೆಂದರೆ, ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಪ್ರಧಾನಿ ಮೋದಿ ಮತ್ತು ಚೀನಾದ ಕ್ಸಿ ಜಿನ್ಪಿಂಗ್ ನಡುವಿನ ಸಭೆಯ ನಂತರ ಸರ್ಕಾರವು ಹೇಳಿಕೊಂಡ ರಾಜತಾಂತ್ರಿಕ ಯಶಸ್ಸು ಟೊಳ್ಳಾಗಿತ್ತು ಅಲ್ಲವೇ ಎಂದು ಅವರು ಪ್ರಶ್ನಸಿದ್ದಾರೆ.
“ಎಂಟು ತಿಂಗಳ ನಂತರ, ನಮ್ಮ ನಿರಾಯುಧ ಸೈನಿಕರನ್ನು ಕೊಲ್ಲುವ ಮೂಲಕ ಚೀನಿಯರು ನಮ್ಮನ್ನು ಬೆನ್ನಿಗೆ ಇರಿದಿದ್ದಾರೆ. ಅದು ಸರ್ಕಾರದ ರಾಜತಾಂತ್ರಿಕತೆಯ ಫಲಿತಾಂಶವಾಗಿದ್ದರೆ, ಅವರ ತಂತ್ರವು ಶೋಚನೀಯವಾಗಿ ವಿಫಲವಾಗಿದೆ ಮತ್ತು ಅವರು ಚೀನೀಯರ ಉದ್ದೇಶಗಳನ್ನು ಸರಿಯಾಗಿ ಗ್ರಹಿಸಲು ವಿಫಲರಾಗಿದ್ದಾರೆ” ಎಂದು ಅವರು ಹೇಳಿದರು.
ಭಾರತೀಯ ಸೈನಿಕರ ಜೀವನವನ್ನು ಹೇಗೆ ಕಾಪಾಡಲಾಗುತ್ತಿದೆ ಎಂದು ತಿಳಿಸಬೇಕೆಂದು ಒತ್ತಾಯಿಸಿದ ಕಮಲ್ ಹಾಸನ್, ರಾಷ್ಟ್ರದ ಸಶಸ್ತ್ರ ಪಡೆಗಳು ವಿಶ್ವದ ಅತ್ಯುತ್ತಮವಾದವುಗಳಾಗಿವೆ. ಆದರೂ ಅವರ ಜೀವನವನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಈ ಚಿತ್ರ ಭಾರತ-ಚೀನಾ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧನದ್ದೇ ?