Homeಅಂಕಣಗಳುಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

ಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

- Advertisement -
- Advertisement -

ಇತ್ತೀಚೆಗೆ ಮಾತನಾಡಿದ ಪತ್ರಕರ್ತರೊಬ್ಬರು ಇಂದಿನ ದಿನಮಾನದ ವಾಸ್ತವದ ಪ್ರತೀಕವೆಂಬಂತೆ ತೋರಿದರು. ಜಾತಿಯ ಕಾರಣಕ್ಕೆ ಅವರು ಸಿದ್ದರಾಮಯ್ಯನವರ ವಿರುದ್ಧ ಕುದಿಯುತ್ತಿದ್ದರು. ಅದು ಯಾವ ಪ್ರಮಾಣಕ್ಕಿತ್ತೆಂದರೆ, ಅವರ ಜೊತೆ ಕೈ ಜೋಡಿಸಿದ್ದಕ್ಕಾಗಿ ಸ್ವಜಾತಿಯ ಗೌಡರ ಕುಟುಂಬದ ವಿರುದ್ಧವೂ ತೀವ್ರ ಅಸಹನೆ ಬೆಳೆಸಿಕೊಂಡಿದ್ದಾರೆ. ತಾನು ಪ್ರಜಾಪ್ರಭುತ್ವದ ಪರವಾಗಿ ಮಾತಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳುವ ಅಗತ್ಯವೂ ಅವರಿಗಿರುವುದರಿಂದ, ತನಗೆ ಸಂಖ್ಯಾಬಲ ಇಲ್ಲದಿರುವ ಈ ಸರ್ಕಾರವು ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಬಾರದು ಎಂದು ಗುಡುಗುತ್ತಿದ್ದರು. ಆದರೆ, ವಿಧಾನಸಭೆ ವಿಸರ್ಜನೆ ಆಗಲಿ ಎಂದು ಅವರು ಅಪ್ಪಿತಪ್ಪಿಯೂ ಹೇಳಲಿಲ್ಲ. ಯಡಿಯೂರಪ್ಪನವರು ಅಥವಾ ಬಿಜೆಪಿಯಿಂದ ಯಾರಾದರೂ ಮುಖ್ಯಮಂತ್ರಿಯಾಗುವುದೇ ನೈತಿಕವಾಗಿ ಸರಿ ಎಂಬುದು ಅವರ ಪ್ರತಿಪಾದನೆ.

ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಬಲವನ್ನು ಕಳೆದುಕೊಂಡಿದೆಯೆಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಆ ಸರ್ಕಾರವನ್ನು ರೂಪಿಸಿರುವ ಎರಡು ಪಕ್ಷಗಳಿಗೆ ಸೇರಿದ 15 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇನ್ನೂ ಅಂಗೀಕಾರವಾಗದಿರುವುದು ತಾಂತ್ರಿಕ ಪ್ರಶ್ನೆ ಮಾತ್ರ. ಆಮಿಷ ಅಥವಾ ಒತ್ತಡಕ್ಕೆ ಒಳಗಾಗಿರಬಹುದಾದರೂ, ಅವರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವವರೂ ಸಹಾ ಆಮಿಷವನ್ನೇ ಒಡ್ಡುತ್ತಿದ್ದಾರೆ. ಆದ್ದರಿಂದ ಸರ್ಕಾರವು ಒಂದು ವೇಳೆ ಉಳಿದುಕೊಂಡರೆ ಅದು ಬಹಳ ನೈತಿಕ ಶಕ್ತಿ ಹೊಂದಿರುವ ಸರ್ಕಾರ ಎಂದು ಯಾರೂ ಹೇಳಲಾಗದು.

ಆದರೆ, ಇದನ್ನು ವಿರೋಧಿಸುತ್ತಿರುವವರು ಸಹಾ ನೈತಿಕ ನಿಲುವನ್ನು ಹೊಂದಿಲ್ಲ. ರಾಮಲಿಂಗಾರೆಡ್ಡಿಯಂತಹ ಹಿರಿಯ ಶಾಸಕರು ರಾಜೀನಾಮೆ ಕೊಟ್ಟರು; ಆದರೆ ಮುಂಬೈಗೆ ಹೋಗಿ ಅವಿತುಕೊಳ್ಳಲಿಲ್ಲ. ಬಹುಶಃ ರೆಡ್ಡಿಯವರಷ್ಟೇ ಹಿರಿಯರಾದ, ಅವರಿಗಿಂತ ಹೆಚ್ಚು ಸಂವಿಧಾನ, ಪ್ರಜಾತಂತ್ರ ಇತ್ಯಾದಿಗಳ ಕುರಿತು ಮಾತನಾಡುವ, ಎರಡು ಪುಸ್ತಕಗಳನ್ನೂ ಬರೆದಿರುವ ಎಚ್.ವಿಶ್ವನಾಥ್ ಮಾತ್ರ ಮುಂಬೈ ಹೋಟೆಲ್‍ಗೆ ಹೋಗಿ ಅವಿತುಕೊಂಡರು. ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಬಂದು ಹೋಟೆಲ್ ಮೇಲೆ ದಾಳಿ ಮಾಡಬಹುದು, ಹಾಗಾಗಿ ರಕ್ಷಣೆ ಬೇಕು ಎಂದು ಪೊಲೀಸರಿಗೆ ಬರೆದ ದೂರಿಗೆ ಅವರ ಸಹಿಯೂ ಇತ್ತು. ಅಂದರೆ, ಆಡಳಿತ ನಡೆಸುತ್ತಿರುವ ಪಕ್ಷಗಳ ಬಲಾಢ್ಯರು ಬಂದು ಒತ್ತಾಯಿಸಿದರೆ ವಾಪಸ್ ಹೋಗಿಬಿಡಬಹುದು (ರಾಮಲಿಂಗಾರೆಡ್ಡಿಯವರ ರೀತಿ) ಎಂಬ ಹೆದರಿಕೆಯಿಂದ ಅವರನ್ನು ಬಚ್ಚಿಟ್ಟುಕೊಳ್ಳುತ್ತಿರುವ ಪಕ್ಷ ಬಿಜೆಪಿ.

ಇದರ ನಂತರದ ಪ್ರಶ್ನೆಯೆಂದರೆ ಸುಪ್ರೀಂಕೋರ್ಟಿನ ತೀರ್ಪಿನದು. ಮೇಲ್ನೋಟಕ್ಕೆ ‘ಶಾಸಕರನ್ನು ಸದನದಲ್ಲಿ ಭಾಗವಹಿಸಲೇಬೇಕೆಂಬ ಒತ್ತಾಯ ಮಾಡಬಾರದು’ ಎಂಬ ತೀರ್ಪಿನಲ್ಲಿ ಅಂತಹ ತಪ್ಪೇನಿಲ್ಲ. ಅದರಲ್ಲೂ ಅವರು ಈಗಾಗಲೇ ರಾಜೀನಾಮೆ ಕೊಟ್ಟಿರುವ ಶಾಸಕರು. ಆದರೆ ಇಲ್ಲಿ ಎರಡು ಪ್ರಶ್ನೆ ಉದ್ಭವಿಸುತ್ತದೆ. ಒಂದು, ಈಗಾಗಲೇ ಚರ್ಚಿತವಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕಾಂಗ ಪಕ್ಷದ ನಾಯಕರ ವಿಪ್ ಚಲಾಯಿಸುವ ಅಧಿಕಾರವನ್ನು ಮೊಟಕುಗೊಳಿಸುವುದು. ಎರಡು, ರಾಜ್ಯದ ಭವಿಷ್ಯಕ್ಕೆ ಸಂಬಂಧಿಸಿದ ಬಹುಮುಖ್ಯ ಸಂಗತಿ ಚರ್ಚೆಯಾಗಬೇಕಾದರೆ ಅಲ್ಲಿ ಹೋಗಿ ಚರ್ಚೆಯಲ್ಲಿ ಭಾಗವಹಿಸಿ (ಪರ ಅಥವಾ ವಿರೋಧವಾಗಿ) ಮತ ಹಾಕುವ ಜವಾಬ್ದಾರಿಯೂ ಈ ಶಾಸಕರಿಗೆ ಬೇಡವೇ? ಈ ಶಾಸಕರು ಅದರಿಂದ ತಪ್ಪಿಸಿಕೊಳ್ಳಲೆಂದೇ ಸುಪ್ರೀಂಕೋರ್ಟಿಗೆ ಬಂದಿದ್ದಾರೆಂದು ಕೋರ್ಟಿಗೆ ಗೊತ್ತಾಗಲಿಲ್ಲವೇ?

ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದು. ಒಂದು ವೇಳೆ ಅಗತ್ಯ ಬಹುಮತ ಇಲ್ಲದಿದ್ದಲ್ಲಿ ಹೇಗಾದರೂ ಮಾಡಿ ಸಂಖ್ಯಾಬಲವನ್ನು ಹೊಂದಿಸಿಕೊಳ್ಳುವುದು – ಇದು ಇಂದಿನ ‘ಪ್ರಜಾಪ್ರಭುತ್ವದ ರೀತಿ’ಯಾಗಿದೆ. ಚುನಾವಣೆಯಲ್ಲಿ ಜನರ ಬದುಕಿನ ವಿಚಾರಗಳನ್ನು ಮುಂದಿಡುವುದು ಅಥವಾ ವಿರೋಧ ಪಕ್ಷಗಳ ನೀತಿಗಳಲ್ಲಿನ ಜನವಿರೋಧಿತನವನ್ನು ಬಯಲುಗೊಳಿಸುವುದು ಇವೆಲ್ಲದರ ಅಗತ್ಯವೇ ಇಲ್ಲ. ಚುನಾವಣೆಗೆ ಮಾರ್ಕೆಟಿಂಗ್ ತಂತ್ರವನ್ನು ಹೊಸೆದು, ಪ್ಯಾಕೇಜ್ ರೂಪಿಸಿ ಜನರ ಮನಸ್ಸಿನಲ್ಲಿ ಗೊಂದಲವನ್ನೋ ಅಥವಾ ಭರವಸೆಯನ್ನೋ ಮೂಡಿಸಲು ಅದರಲ್ಲಿ ಪಳಗಿರುವ ಸಂಸ್ಥೆಗಳನ್ನು ನಿಯೋಜಿಸಿಕೊಳ್ಳುವ ಪ್ರಯತ್ನ ಶುರುವಾಗಿ ಬಹಳ ಕಾಲವಾಗಿದೆ. ಇವೆಲ್ಲವೂ ಪ್ರಜಾತಂತ್ರವನ್ನು ಸೋಲಿಸುತ್ತವೆ.

ಯಡಿಯೂರಪ್ಪನವರು ಸದನದಲ್ಲಿ ಸ್ಪೀಕರ್‍ರನ್ನು ಉದ್ದೇಶಿಸಿ, ‘ಆಡಳಿತ ಪಕ್ಷದವರಿಗೆ ವಿಶ್ವಾಸಮತದ ಮೇಲೆ ಚರ್ಚೆ ಮಾಡಲು ಎಷ್ಟು ಬೇಕಾದರೂ ಅವಕಾಶ ಕೊಡಿ. ನಾವ್ಯಾರೂ ಮಾತಾಡುವುದಿಲ್ಲ. ಒಂದೈದು ನಿಮಿಷ ಮಾತಾಡಬಹುದಷ್ಟೇ. ಬೇಗನೇ ಮತಕ್ಕೆ ಹಾಕಿ’ ಎಂದು ಹೇಳಿದುದರ ಅರ್ಥವೇನು? ಪ್ರಜಾತಂತ್ರವೆಂದರೆ ಸಂಖ್ಯೆಯಷ್ಟೇ, ಬೇರೇನೂ ಅಲ್ಲ ಎಂದು ಅವರು ಸ್ಪಷ್ಟಪಡಿಸುತ್ತಿದ್ದರು. ಆದರೆ, ಇದೇ ಸಂಖ್ಯೆ ಈ ಹಿಂದೆ ಅವರಿಗೆ ಮುಖ್ಯವಾಗಿರಲಿಲ್ಲ. ಅಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿದಾಗ ಅವರಿಗೆ ಬಹುಮತಕ್ಕೆ ಬೇಕಾದ 113 ಸಂಖ್ಯೆಯ ಶಾಸಕರ ಬೆಂಬಲ ಇತ್ತು. 104 ಶಾಸಕರನ್ನು ಹೊಂದಿದ್ದ ಬಿಜೆಪಿ ಮತ್ತದರ ನಾಯಕ ಯಡಿಯೂರಪ್ಪನವರಿಗೆ ಇರಲಿಲ್ಲ. ಆದರೂ ಇವೆರಡೂ ಪಕ್ಷಗಳು ಸೇರಿ ನಡೆಸಿದ ಸರ್ಕಾರವು ಸಂವಿಧಾನಬದ್ಧ ಎಂದು ಅವರಿಗೆ ಅನಿಸಿಯೇ ಇರಲಿಲ್ಲ. ಬದಲಿಗೆ ಅದು ಪರಸ್ಪರ ಸೆಣೆಸಾಡಿದ್ದ ಎರಡು ಪಕ್ಷಗಳು ಚುನಾವಣೋತ್ತರ ಕಾಲದಲ್ಲಿ ಮಾಡಿಕೊಂಡ ಅನೈತಿಕ ಮೈತ್ರಿ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಈಗ ಸಂಖ್ಯೆಯ ಜೊತೆಗೆ ನೈತಿಕ ಪ್ರಶ್ನೆಗಳನ್ನೆತ್ತಿ ಚರ್ಚಿಸುವುದೂ ಅವರಿಗೆ ಬೇಡವಾಗಿದೆ. ಕೇವಲ ಮತಕ್ಕೆ ಹಾಕುವುದು ಮಾತ್ರವೇ ಮುಖ್ಯ.

ಈ ಸಂದರ್ಭದಲ್ಲಿ ಇನ್ನೂ ಒಂದು ಅಂಶವನ್ನೂ ಗಮನಿಸಬೇಕು. ತಾನು ಸಭ್ಯ ಎಂದು ತೋರಿಸಿಕೊಳ್ಳಬಯಸುವ ರಾಜಾಜಿನಗರ ಶಾಸಕ ಸುರೇಶ್‍ಕುಮಾರ್‍ರ ಆಷಾಢಭೂತಿತನ ಸದನದಲ್ಲಿ ಬೆಳಕಿಗೆ ಬಂದಿತು. ಅವರು ಕುಮಾರಸ್ವಾಮಿಯವರು ಬಹುಮತದ ಕುರಿತು ಸಂದೇಹವಿರುವಾಗ ವಿಶ್ವಾಸಮತ ಯಾಚಿಸುವ ಪ್ರಸ್ತಾಪವನ್ನು ಮಾಡಿದ್ದುದರ ಕುರಿತು ಮಾತನಾಡಿದರು. ಅದನ್ನು ಪ್ರಸ್ತಾಪಿಸಿದ್ದ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಮುಖ್ಯವಾದ ಫೈಲ್‍ಗಳ ವಿಲೇವಾರಿ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಸರಿಯಾದದ್ದು. ಕುಮಾರಸ್ವಾಮಿ ಮತ್ತವರ ಸೋದರ ರೇವಣ್ಣನವರ ಫೈಲ್ ವಿಲೇವಾರಿಯ ಹಿಂದೆ ಹಣದ ಲೂಟಿಯ ಉದ್ದೇಶ ಮಾತ್ರ ಇದೆಯೆಂದು ನಂಬಲು ಕಾರಣಗಳಿವೆ. ಆದರೆ, ಈ ವಿಧಾನಸಭೆಯು ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬಹುಮತವೇ ಇಲ್ಲದೇ, ರಾಜ್ಯಪಾಲರ ಪಕ್ಷಪಾತದ ಕಾರಣದಿಂದಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಮಾಡಿದ್ದು ನೆನಪೇ ಇಲ್ಲದಂತೆ ಸುರೇಶ್‍ಕುಮಾರ್ ವರ್ತಿಸುತ್ತಿದ್ದಾರೆ. ವಿಶ್ವಾಸಮತ ಯಾಚನೆಗೂ ಮುಂಚೆ ಯಡಿಯೂರಪ್ಪನವರು ಅಧಿಕಾರಿಗಳ ವರ್ಗಾವಣೆಯನ್ನೂ ಮಾಡಿದ್ದರು!

ಅಂದರೆ, ಪ್ರಜಾಪ್ರಭುತ್ವ, ಸಂವಿಧಾನ, ನೀತಿ ಸಂಹಿತೆ ಇತ್ಯಾದಿಗಳೆಲ್ಲವೂ ಅನುಕೂಲಸಿಂಧು ರಾಜಕಾರಣದ ಅಸ್ತ್ರಗಳಾಗಿ ಮಾತ್ರ ಬಳಕೆಯಾಗುತ್ತಿವೆ. ಇಂದು ಹೇಗಾದರೂ ಮಾಡಿ ಅಧಿಕಾರ ಹಿಡಿದಿರುವ ಬಿಜೆಪಿಯು ತನಗೆ ಜನರ (ಪಬ್ಲಿಕ್) ಬೆಂಬಲವಿದೆ ಎಂದು ಸಾರುತ್ತಿದೆ. ಈ ಜನರ ಬೆಂಬಲವನ್ನು ಗಣರಾಜ್ಯದ ಮೂಲ ಆಶಯಗಳಿಗೆ ವಿರುದ್ಧವಾಗಿ ಅದು ಬಳಸುತ್ತಿದೆ. ಈ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಪಬ್ಲಿಕ್ ವರ್ಸಸ್ ರಿಪಬ್ಲಿಕ್ ಆಗಲಿದೆ ಎಂದು ಖ್ಯಾತ ರಾಜಕೀಯ ಚಿಂತಕ ಯೋಗೇಂದ್ರ ಯಾದವ್ ಹೇಳಿದ್ದು.

ಈ ಪಬ್ಲಿಕ್ ಏನು ಯೋಚಿಸಬೇಕೆಂದು ನಿರ್ದೇಶಿಸುವ, ಏನು ಯೋಚಿಸುತ್ತಾರೆಂದು ಬಿಂಬಿಸುವ ಕೆಲಸ ಮಾಡುವ ಮಾಧ್ಯಮವೂ ರಿಪಬ್ಲಿಕ್‍ನ ಆಶಯಗಳಿಗೆ ಪೂರಕವಾಗಿಲ್ಲ. ಹಾಗಾಗಿ ಅಂತಿಮವಾಗಿ ಇದು ಯಾವ ಜನರು ಓಟು ಹಾಕಿ ಗೆಲ್ಲಿಸಿದ್ದಾರೋ ಆ ಜನರ ವಿರುದ್ಧವೇ ತಿರುಗುತ್ತದೆ. ಇದನ್ನು ಪರಿಹರಿಸುವ ನೈತಿಕ ಶಕ್ತಿಯಾಗಲೀ, ಸಾಧ್ಯತೆಯಾಗಲೀ ಈ ದೇಶದ ವಿರೋಧಪಕ್ಷಗಳಿಗಿಲ್ಲವಾಗಿದೆ. ಇದೇ ಈ ಹೊತ್ತಿನ ದುರಂತ. ಆದ್ದರಿಂದ ಪಬ್ಲಿಕ್ ಮತ್ತು ರಿಪಬ್ಲಿಕ್ ಎರಡೂ ಸೋಲುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...