HomeUncategorizedಕೇರಳದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ; ಶಶಿ ತರೂರ್ ಯಾತ್ರೆಯಲ್ಲಿ ಭಾಗಿ

ಕೇರಳದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ; ಶಶಿ ತರೂರ್ ಯಾತ್ರೆಯಲ್ಲಿ ಭಾಗಿ

- Advertisement -
- Advertisement -

ಮಕ್ಕಳು- ಯುವಕರ ಆಕರ್ಷಣೆಯ ಕೇಂದ್ರ ರಾಹುಲ್- ತರೂರು
ಬಿಜೆಪಿ- ಆರ್‌ಎಸ್‌ಎಸ್‌ನಿಂದ ದೇಶ ವಿಭಜನೆ ಎಂದ ಕಾಂಗ್ರೆಸ್

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಪಾದಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಆರನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರಿಗಳು ಭಾನುವಾರ (ಸೆ. 11) ಕೇರಳಕ್ಕೆ ಆಗಮಿಸಿದ್ದು, ಸೋಮವಾರ ತಿರುವನಂತಪುರಂದಿಂದ ಯಾತ್ರೆ ಆರಂಭವಾಗಿದೆ.

ಸೆಪ್ಟೆಂಬರ್ 7ರಂದು 150 ದಿನಗಳ ಯಾತ್ರೆಯನ್ನು ನೆರೆಯ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪ್ರಾರಂಭಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರ ಘೋಷಣೆಯ ನಡುವೆ ಭಾರತ್ ಜೋಡೋ ಯಾತ್ರೆ ಸೋಮವಾರವೂ ಕೇರಳದಲ್ಲಿ ಮುಂದುವರಿದಿದೆ. ಸೋಮವಾರ ಬೆಳಿಗ್ಗೆ ಕೇರಳದ ವೆಲ್ಲಯಾಣಿ ಜಂಕ್ಷನ್‌ನಿಂದ ರಾಹುಲ್‌ ಗಾಂಧಿ ಪಾದಯಾತ್ರೆ ಆರಂಭಿಸಿದರು.

ತಿರುವನಂತಪುರದಿಂದ ಯಾತ್ರೆ

“ಭಾರತ ಮತ್ತು ನಮ್ಮ ಯುವ ಪೀಳಿಗೆಗೆ ಉತ್ತಮ ನಾಳೆಗಳು ಕಾಯುತ್ತಿವೆ ಎಂಬ ಭರವಸೆಯು ಪ್ರತಿದಿನ ನನಗೆ ಹೊಸ ಚೈತನ್ಯ ನೀಡುತ್ತದೆ.  ಭಾರತ್‌ ಜೋಡೋವಿನ ಪ್ರತಿ ಹೆಜ್ಜೆಯು ಭಾರತಕ್ಕಾಗಿ” ಎಂದು ರಾಹುಲ್‌ ಗಾಂಧಿ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ರಾಹುಲ್‌ ಗಾಂಧಿ ನೇತೃತ್ವದ ಪಾದಯಾತ್ರೆಯನ್ನು ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರು. ಕಾಂಗ್ರೆಸ್ ಧ್ವಜವನ್ನು ಸೂಚಿಸುವ ಉಡುಪುಗಳನ್ನು ಧರಿಸಿದ ಯುವಕರು ಸಾಲಾಗಿ ನಿಂತು ಯಾತ್ರಿಗಳಿಗೆ ಸ್ವಾಗತ ಕೋರಿದ್ದಾರೆ.

Colours of #BharatJodoYatra 🇮🇳 pic.twitter.com/LAzGxZAREY

— Srinivas BV (@srinivasiyc) September 11, 2022

“ಭಾರತ್ ಜೋಡೋ ಯಾತ್ರೆಯ 5ನೇ ದಿನವು ಭಾನುವಾರ ಬೆಳಿಗ್ಗೆ 7 ಗಂಟೆಗೆ ತಿರುವನಂತಪುರದ ಹೊರವಲಯದಲ್ಲಿರುವ ವೆಲ್ಲಯಾಣಿ ಜಂಕ್ಷನ್‌ನಿಂದ ಪ್ರಾರಂಭವಾಗಿತ್ತು. ಸೋಮವಾರದ ಪಾದಯಾತ್ರೆಯ ಬೆಳಗಿನ ಪಾಳಿಯಲ್ಲಿ ತಿರುವನಂತಪುರದಿಂದ ಸುಮಾರು 11 ಕಿಲೋಮೀಟರ್‌ ಕ್ರಮಿಸಲಿದೆ” ಎಂದು ಎಐಸಿಸಿಯ ಸಂವಹನದ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.  

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ಪಕ್ಷದ ಸಂಸದರಾದ ಶಶಿ ತರೂರ್, ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ಪಾಲ್ಗೊಂಡರು. ಇವರೊಂದಿಗೆ ಮಕ್ಕಳು, ಯುವಕರು, ವೃದ್ಧರೂ ಹೆಜ್ಜೆ ಹಾಕಿದರು. 

In their eyes we see innocence.
In their eyes we see hope.

We will not let that glint fade away because a few have taken the easy path of hate.

India’s dreams will shine on 🇮🇳#BharatJodoYatra pic.twitter.com/yvRkdVBiLt

— Bharat Jodo (@bharatjodo) September 12, 2022

ಬೆಳಿಗ್ಗೆ 10.30ರ ಸುಮಾರಿಗೆ ಯಾತ್ರೆಯು ಇಲ್ಲಿನ ಪಟ್ಟೋಮ್‌ನಲ್ಲಿರುವ ಸೇಂಟ್ ಮೇರಿಸ್ ಶಾಲೆಯಲ್ಲಿ ಯಾತ್ರೆಯು ಕೊನೆಗೊಂಡಿದೆ.  ಸಂಜೆ 5 ಗಂಟೆಗೆ ಯಾತ್ರೆಯು ಮತ್ತೆ ಆರಂಭಗೊಳ್ಳಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. 

ರಾಹುಲ್‌ ಗಾಂಧಿ ಅವರು  ಮಧ್ಯಾಹ್ನದ ಊಟಕ್ಕೆ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಲು ಮತ್ತು ಜವಾಹರ್ ಬಾಲ್ ಮಂಚ್ ಚಿತ್ರಕಲೆ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲು ತೆರಳಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ವೆಲ್ಲಯಾಣಿ ಜಂಕ್ಷನ್‌ನಿಂದ ಪಟ್ಟೋಮ್‌ಗೆ ಸುಮಾರು 12 ಕಿಲೋಮೀಟರ್‌ಗಳಷ್ಟು ದೂರದ ಮೂರು ಗಂಟೆಗಳ ಕಾಲ ನಡೆದ ಯಾತ್ರೆಯಲ್ಲಿ ಹೆಚ್ಚು ಜನರು ಸೇರುತ್ತಿರುವ ದೃಶ್ಯಗಳು ಕಂಡು ಬಂದಿವೆ.  

ಫುಟ್‌ಬಾಲ್ ಪ್ರಿಯ ಮಕ್ಕಳೊಂದಿಗೆ ಹೆಜ್ಜೆ

ರಾಹುಲ್ ಗಾಂಧಿ ಫುಟ್‌ಬಾಲ್ ಪ್ರಿಯರಾದ ಪುಟ್ಟ ಮಕ್ಕಳೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕುವ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ ಜೊತೆಗೆ ನಡೆದಾಡುವ ವಿಡಿಯೋ ಲಗತ್ತಿಸಿ, ತಮ್ಮ ಅಕ್ಕಪಕ್ಕದಲ್ಲಿರುವ ಫುಟ್‌ಬಾಲ್ ಆಟಗಾರರಾದ ಮಕ್ಕಳಲ್ಲಿ ಒಬ್ಬ ‘ಸ್ಟ್ರೈಕರ್’ ಮತ್ತೊಬ್ಬ ‘ಡಿಫೆಂಡರ್‌’ ಎಂದು ಪ್ರಶಂಸಿಸಿದ್ದಾರೆ. ಈ ಮಕ್ಕಳ ಜೊತೆಗೆ ಯಾತ್ರೆಯಲ್ಲಿ ಹೆಜ್ಜೆ ಹಾಕುವುದು ಸಂತಸವೆನಿಸುತ್ತಿದೆ ಎಂದೂ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

Common goals!

One is a striker, and the other one a defender. Great to have them on the team 🇮🇳#BharatJodoYatra pic.twitter.com/0TaIdZvOje

— Rahul Gandhi (@RahulGandhi) September 12, 2022

ಶನಿವಾರ (ಸೆ. 9) ಸಂಜೆ ಕೇರಳ ಪ್ರವೇಶಿಸಿದ್ದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 30ರಂದು ಕರ್ನಾಟಕ ಪ್ರವೇಶಿಸುವ ಮೊದಲು 19 ದಿನಗಳ ಅವಧಿಯಲ್ಲಿ ಕೇರಳದ ಏಳು ಜಿಲ್ಲೆಗಳಲ್ಲಿ ಸುಮಾರು 450 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ.

ಭಾನುವಾರ ಇಲ್ಲಿನ ನೆಮೊಮ್‌ನಲ್ಲಿ ದಿನದ ಯಾತ್ರೆ ಮುಕ್ತಾಯಗೊಂಡಿತ್ತು. ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು 150 ದಿನಗಳಲ್ಲಿ ಹಾದು ಹೋಗಲಿದೆ.  22 ಪ್ರಮುಖ ನಗರಗಳಲ್ಲಿ ದೊಡ್ಡ ಮೆರವಣಿಗೆಗಳು ನಡೆಯಲಿವೆ ಎಂದು ಕಾಂಗ್ರೆಸ್‌ ಹೇಳಿದೆ.

LIVE: Shri @RahulGandhi resumes #BharatJodoYatra from Vellayani Junction in Thiruvananthapuram. https://t.co/WuEKWnErAs

— Congress (@INCIndia) September 12, 2022

ಕೇರಳದಲ್ಲಿ ಶಶಿ ತರೂರ್‌ ಆಕರ್ಷಣೆ

ರ್‍ಯಾಲಿಯಲ್ಲಿ ಶಶಿ ತರೂರ್ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಅವರನ್ನು ಮಾತನಾಡಿಸಲು ರಾಷ್ಟ್ರೀಯ ಮಾಧ್ಯಮಗಳು ಹಿಂದೆ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.  

ರಾಷ್ಟ್ರಧ್ವಜವನ್ನು ಬೀಸುತ್ತಾ ರಸ್ತೆಯ ಇಕ್ಕೆಲಗಳಲ್ಲಿ ಮಕ್ಕಳು ಸೇರಿದಂತೆ ನೂರಾರು ಜನರು ಸಾಲುಗಟ್ಟಿ ನಿಂತಿದ್ದರು. ತರೂರ್ ಅವರು ಯಾತ್ರೆಯ ಕೇಂದ್ರಬಿಂದುವಾಗಿದ್ದರು. ಎಲ್ಲರ ಗಮನವು ಯಾತ್ರೆಯ ಮೇಲಿರಬೇಕು ಎಂದು ಅವರು ಹೇಳಿದರು.  

While marching along, found a young girl on the sidelines desperate to meet ⁦@RahulGandhi⁩. Took her to him myself, she handed over a flower and was then safely returned to her father. #BharatJodoYatra in Thiruvananthapuram pic.twitter.com/n0aJJFSlQh

— Shashi Tharoor (@ShashiTharoor) September 12, 2022

ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾರದರ್ಶಕತೆಯ ಕೊರತೆಯ ಬಗ್ಗೆ ಎಐಸಿಸಿ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಸ್ಪಷ್ಟನೆ ನೀಡಿದ ನಂತರ ತಮಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ಹಿರಿಯ ನಾಯಕರಾದ ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ, ಸಂಸದರಾದ ಶಶಿ ತರೂರ್, ಕೆ ಮುರಳೀಧರನ್, ಬೆನ್ನಿ ಬೆಹನನ್, ಎಂ ಕೆ ರಾಘವನ್, ಕೋಡಿಕುನ್ನಿಲ್ ಸುರೇಶ್, ಕೇರಳ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಸೇರಿದಂತೆ ಪ್ರಮುಖರು ರಾಹುಲ್‌ ಗಾಂಧಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.  

ಯಶಸ್ಸಿನಿಂದ ಅಮಿತ್‌ ಶಾ ತಬ್ಬಿಬ್ಬು ಎಂದ ವೇಣುಗೋಪಾಲ್

ಭಾರತ್‌ ಜೋಡೋ ಯಾತ್ರೆಯ ಯಶಸ್ಸಿನಿಂದ ಕೇಂದ್ರ ಸಚಿವ ಅಮಿತ್ ಶಾ ಅವರು ತಬ್ಬಿಬ್ಬಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. 

ರಾಹುಲ್ ಗಾಂಧಿ ಅವರು ಪಾರಸ್ಸಲದಿಂದ ನೆಯ್ಯಟ್ಟಿಂಕರಾದ ಊರುಟ್ಟುಕಳದವರೆಗೆ 14 ಕಿ ಮೀ ಕ್ರಮಿಸಿದರು. ಬಳಿಕ ಮಧವಿ ಮಂದಿರದಲ್ಲಿ ಬೀಡುಬಿಟ್ಟರು. ಈ ಮುನ್ನ 1937ರ ಜನವರಿ 14ರಂದು ಮಹಾತ್ಮ ಗಾಂಧಿ ಅವರು ತಮ್ಮ ಕನ್ಯಾಕುಮಾರಿ ಭೇಟಿಯ ಸಮಯದಲ್ಲಿ ಮಾಧವಿ ಮಂದಿರದಲ್ಲಿ ಉಳಿದುಕೊಂಡಿದ್ದರು.

ಇದು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಹಾತ್ಮ ಗಾಂಧಿಯವರ ಕಾರ್ಯದರ್ಶಿ ಡಾ ಜಿ ರಾಮಚಂದ್ರನ್ ಅವರ ಮನೆಯಾಗಿತ್ತು. 

ಬಿಜೆಪಿಯಿಂದ ಭಾರತ ಛಿದ್ರ ಎಂದ ಜೈರಾಂ ರಮೇಶ್

ಮಾಧವಿ ಮಂದಿರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದರು.

“ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಕೇಂದ್ರೀಕರಣವನ್ನು ನಿವಾರಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಯಾವಾಗಲೂ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತದೆ. ಇಂದು ಭಾರತ ಛಿದ್ರವಾಗುತ್ತಿದೆ. ಏಕತೆಗೆ ಧಕ್ಕೆ ಬರುತ್ತಿದೆ. ಹಾಗಾಗಿ ವೈವಿಧ್ಯತೆಗೂ ಧಕ್ಕೆ ಉಂಟಾಗಿದೆ. ಆದ್ದರಿಂದ ನಾವು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ. ಈ ಯಾತ್ರೆ 2024ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಲ್ಲ” ಎಂದು ಅವರು ಹೇಳಿದರು.

“ಪಾದಯಾತ್ರೆಯು ಈಗಾಗಲೇ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಇದು ಖಂಡಿತವಾಗಿಯೂ ಅಮಿತ್‌ ಶಾ ಅವರನ್ನು ಅಚ್ಚರಿಗೊಳಿಸಿದೆ” ಎಂದು ಟೀಕಿಸಿದರು.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಸಹೋದರಿಗಾಗಿ ನಿವೇಶನ ಖರೀದಿಸಿದ ದಲಿತನ ಹತ್ಯೆ

“ಬಿಜೆಪಿಯು ರಾಹುಲ್‌ ಗಾಂಧಿ ಅವರ ಟೀ ಶರ್ಟ್‌ನಲ್ಲಿ ಏಕೆ ಸಮಸ್ಯೆ ಹುಡುಕುತ್ತಿದೆ. ಬಿಜೆಪಿಯು ಪಾದಯಾತ್ರೆಯನ್ನು ಹಳಿತಪ್ಪಿಸಲು ಬಯಸುತ್ತಿದೆ. ಅವರು ಬಾಲಿಶ ಮತ್ತು ಮೂರ್ಖತನದ ತಂತ್ರಗಳನ್ನು ರೂಪಿಸುತ್ತಿದ್ದಾರೆ. ನಾವು ಅವರಿಗೆ ಹೆದರುವುದಿಲ್ಲ” ಎಂದು ಅವರು ಹೇಳಿದರು.  

ವೆಂಗನ್ನೂರಿನಲ್ಲಿರುವ ಅಯ್ಯಂಕಾಳಿ ಅವರ ಸ್ಮಾರಕಕ್ಕೂ ರಾಹುಲ್ ಭೇಟಿ ನೀಡಿದರು. ಕೇರಳದಲ್ಲಿ ಯಾತ್ರೆಯ ಅವಧಿಯನ್ನು ಒಂದು ದಿನದಿಂದ 18 ದಿನಗಳವರೆಗೆ ಸಮಯ ನಿಗದಿಗೊಳಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...
Generated by Feedzy