ಆಗ್ರಾ ಅಂದ ತಕ್ಷಣ ನಮ್ಮೆಲ್ಲರಿಗೂ ಜ್ಞಾಪನಕ್ಕೆ ಬರುವುದು ತಾಜ್ ಮಹಲ್. ತುಂಬಾ ಸುಂದರವಾದ, ಪ್ರೇಕ್ಷಣೀಯ ಸ್ಥಳ ಅಲ್ವಾ? ತಾಜ್ ಮಹಲ್ ಬಗ್ಗೆ ನಿಮಗೆಲ್ಲಾ ಗೊತ್ತಿರುತ್ತೆ ಹಾಗಾಗಿ ನಾನಿವತ್ತು ತಾಜ್ ಮಹಲ್ ಗೆ ಹತ್ತಿರದಲ್ಲೇ ಇರುವ ಶಿರೋಸ್ ಕೆಫೆ ಬಗ್ಗೆ ಪರಿಚಯ ಮಾಡಿಕೊಡೋಣ ಅಂದುಕೊಂಡಿದ್ದೀನಿ.
ಇದೇನಿದು ‘ಶಿರೋಸ್ ಕೆಫೆ ಅಂತಾ’ ಯೋಚಿಸ್ತಿದಿರಾ?
ಆಸಿಡ್ ದಾಳಿಗೊಳಗಾದ ಸಂತ್ರಸ್ತರು ತಮ್ಮ ಜೀವನೋಪಾಯಕ್ಕಾಗಿ ಕಟ್ಟಿಕೊಂಡಿರುವ ರೆಸ್ಟೋರೆಂಟ್ ತರಹದ ಚಿಕ್ಕದಾದ ಹೋಟೆಲ್ ‘ಶಿರೋಸ್ ಕೆಫೆ’. ಇತ್ತೀಚೆಗೆ ಆಗ್ರಾದ ಪ್ರಮುಖ ಸ್ಥಳಗಳಲ್ಲಿ ಇದು ಕೂಡ ಹೆಸರುವಾಸಿಯಾಗಿದೆ.
2014ರಲ್ಲಿ ಆರಂಭವಾದ ಈ ಕೆಫೆಯ ರುವಾರು ರುಪಾ(Rupa). 20ರ ಹರೆಯದಲ್ಲಿ ಆಸಿಡ್ ದಾಳಿಗೊಳಗಾಗಿದ್ದಳು. ತನ್ನಂತೆ ಇರುವ ಸಂತ್ರಸ್ತರಿಗೆ ಏನಾದರೂ ಮಾಡಬೇಕು ಎಂಬ ಕನಸು ಅವಳಲ್ಲಿತ್ತು. ಕೆಫೆ ಶುರುವಾದಂದಿನಿಂದ ಪ್ರತಿ ವರ್ಷ ಜನರಿಂದ ಕೆಫೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈಗ ಆಗ್ರಾ ಮಾತ್ರವಲ್ಲದೇ ಲಕ್ನೊ ಮತ್ತು ಉದಯ್ ಪುರದಲ್ಲಿಯೂ ಶಾಖೆಗಳು ಉತ್ತಮವಾಗಿ ನಡಿತಿವೆ.
ಪ್ರೀತಿ ನಿರಾಕರಿಸಿದ್ದಕ್ಕಾಗಿ, ಗಂಡನ ಅನುಮಾನವೆಂಬ ರೋಗದಿಂದ, ಮಾತುಕೇಳುವುದಿಲ್ಲ ಹೀಗೆ ನಾನಾ ಕಾರಣಗಳಿಗಾಗಿ ಆಸಿಡ್ ದಾಳಿಗೆ ಒಳಗಾದ ಮಹಿಳೆಯರೇ ಈ ಕೆಫೆಯ ಉಸ್ತುವಾರಿಗಳು. ಬಂದವರನ್ನು ಪ್ರೀತಿಯಿಂದಲೇ ಬರಮಾಡಿಕೊಳ್ಳುತ್ತಾ ಆತಿಥ್ಯ ಮಾಡುವ ಇವರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು.
ಇದನ್ನು ಓದಿ: ಇಫ್ತಾರ್ ಕೂಟ ಮತ್ತು ಪೇಜಾವರರ ಪೀಕಲಾಟ!!
ಆಸಿಡ್ ದಾಳಿಯ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ರುಪಾ ಶಿರೋಸ್ ಕೆಫೆ ಎಂಬ ಯೋಜನೆಯನ್ನು ಆರಂಭಿಸಿದರು. ಮನೆಯಿಂದ ಹೊರಬರಲಾರದೇ ಮಾನಸಿಕವಾಗಿ ಬಳಲುತ್ತಿದ್ದ ಸಂತ್ರಸ್ತರು ಧೈರ್ಯದಿಂದ ಬಂದು ಇಲ್ಲಿ ಕೆಲಸ ಮಾಡುವಂತಾಗಿದೆ. ಒಬ್ಬರಿಗೊಬ್ಬರು ಜೊತೆಯಾಗಿ ಧೈರ್ಯ ತುಂಬುತ್ತಾ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದಾರೆ.
ಈ ಕೆಫೆಗೆ ಬರುವ ಬಹುಪಾಲು ಗ್ರಾಹಕರು ವಿದೇಶಿಗರೇ ಆಗಿದ್ದು, ಕೆಫೆಯಲ್ಲಿನ ಆತಿಥ್ಯವನ್ನು ಇಷ್ಟಪಡುತ್ತಾರೆ. ಉತ್ತರ ಭಾರತದ ಆಹಾರ ಇಲ್ಲಿ ದೊರಕುತ್ತದೆ. ಗ್ರಾಹಕರಿಗೆ ಇಷ್ಟೆ ಹಣ ನೀಡಬೇಕು ಎಂದೇನಿಲ್ಲ. ಅವರಿಗೆ ಇಷ್ಟ ಬಂದಷ್ಟು ಹಣ ಕೊಡಬಹುದು ಎಂಬುದು ಇಲ್ಲಿನ ವಿಶೇಷ. ಸಾಮಾನ್ಯವಾಗಿ ಪ್ರತಿವರ್ಷ ಉತ್ತಮ ಲಾಭ ಕೆಫೆಯಿಂದ ದೊರೆಯುತ್ತದೆ. ಆಗಾಗಾ ಜನರಿಂದಲೂ ಹಣ ಸಂಗ್ರಹ ಮಾಡುತ್ತಾರೆ.
ಈ ಕೆಫೆಯಿಂದಾದ ಲಾಭವೇನು?
ಈ ಜಾಗೃತಿ ಅಭಿಯಾನದಿಂದಾಗಿ ಆಸಿಡ್ ದಾಳಿಗೊಳಗಾದ ಸಂತ್ರಸ್ತರು ಪರಸ್ಪರ ಪರಿಚಯವಾಗುತ್ತಿದ್ದಾರೆ. ನೊಂದವರಿಗೆ ಸಾಂತ್ವಾನ ಹೇಳುತ್ತಾ ಮುಂದಿನ ಹೆಜ್ಜೆಯ ಬಗ್ಗೆ ತಿಳಿವು ನೀಡುತ್ತಾರೆ. ಹಾಗೂ ಈ ಕೆಫೆ ಜೀವನೋಪಾಯದ ಮಾರ್ಗವಾಗಿದೆ.
| ಆಧಾರ: ಕರ್ಲಿಟೇಲ್ಸ್ ವೆಬ್ |