HomeUncategorizedಹೂಗಳ ಶವಯಾತ್ರೆಯಲಿ

ಹೂಗಳ ಶವಯಾತ್ರೆಯಲಿ

- Advertisement -
- Advertisement -
   –ಡಾ. ವಿನಯಾ ಒಕ್ಕುಂದ

‘ನಂಗೆ ತಡ ಆಗ್ತಿದೆ. ಏನ್ ನೀನು.. ಬೆಳಿಗ್ಗೆ ಬೆಳಿಗ್ಗೆಯೇ ಫೇಸ್‍ಬುಕ್ಕಾ$’ ಎಂದು ಒಂದಿಷ್ಟು ಜರ್ಬಿನಲ್ಲಿಯೇ ಮಗಳ ರೂಂ ಹೊಕ್ಕಿದ್ದೆ. ಅವಳು ತಾನು ನೋಡುತ್ತಿದ್ದ ಮೊಬೈಲ್‍ನ್ನು ನನ್ನೆದುರು ಹಿಡಿದಳು. ಅಲ್ಲಿ ಮುದ್ದಾದ ಹುಡುಗಿಯೊಬ್ಬಳಿದ್ದಳು. ‘ಹೂಂ ಚಂದಿದ್ದಾಳೆ’ ಅಂದೆ. ಅವಳ ರೇಪ್ ಆಗಿ ಮರ್ಡರ್ ಆಗಿದೆಯಂತಮ್ಮಾ- ಅಂದಳು. ಏನು ಎಲ್ಲಿ ಎಲ್ಲ ಅರೆಬರೆ. ಯಾರೋ ಅಂಟುರಾಳ ಕುದಿಸಿ ಗಂಟಲಿಗೆ ಹೊಯ್ದಿದ್ದಾರೆ ಅನ್ನುವಂತೆ ನೋವಿನ ಅಮಲೇರಿತ್ತು. ತೊಡೆಗುಂಟ ನಡುಕ. ಯಾಕೆ ಇಷ್ಟು ದುರ್ಬಲವಾಗುತ್ತಿದ್ದೇನೆ ಎಂದೂ ತಿಳಿಯದಷ್ಟು. ಸಂಜೆಯಷ್ಟೊತ್ತಿಗೆ ಮಗಳು ಕಥುವಾದ 8 ವರ್ಷದ ಮುದ್ದು ಮಗು ಆಸೀಫಾಳ ಚಿತ್ರ ಬರೆಯುತ್ತ ಕೂತಿದ್ದಳು. ಸ್ನಾನವನ್ನೂ ಮಾಡಿರಲಿಲ್ಲ. ಕೇಳಿದರೆ ‘ಮಾಡಬೇಕು ಅನ್ನಿಸಲಿಲ್ಲ’ ಎಂದಳು. ಯಾತನೆಯನ್ನು ಅದುಮಿಡುವ ಒರಟುತನದಲ್ಲಿ. ಈಗ ಸಂಭಾಳಿಸಿಕೊಂಡಿದ್ದೇವೆ. ನಮನಮಗೆ ನಾವೇ. ಅವಳು ಫೇಸ್‍ಬುಕ್ ವಿಷಯಗಳನ್ನು ಮುಂದೆ ಹಿಡಿಯುತ್ತ ನಾನು ಪೇಪರ್‍ನ ಸುದ್ದಿಗಳನ್ನು ತೋರಿಸುತ್ತ…. ಅಂತ್ಯವೇ ಇಲ್ಲದ ಜುಗಲ್‍ಬಂದಿಯ ತಡಬಡಿಕೆಯಲ್ಲಿ.
ಇದು ಆರಂಭವೂ ಅಲ್ಲ. ಅಂತ್ಯವು ಅಲ್ಲ. ದೇಶದಲ್ಲಿ ಸಹಬಾಳ್ವೆಯ ಬಗ್ಗೆ ಆಕಾರಣ ತ್ವೇಷಮಯ ಸ್ಥಿತಿ ಉಲ್ಬಣಿಸತೊಡಗಿದಂತೆ ಆ ಉರಿಕೆನ್ನಾಲಿಗೆಗೆ ಹೆಣ್ಣುಮಕ್ಕಳು ಬಲಿಯಾಗುತ್ತಾರೆ.  ಅಸಹನೆ ವೈಯಕ್ತಿಕವಾಗಿರಲಿ, ಕೌಟುಂಬಿಕವಾಗಿರಲಿ, ಮತೀಯವಾಗಿರಲಿ, ರಾಷ್ಟ್ರೀಯವಾಗಿರಲಿ… ಅದರ ವಿಷಫಲವನ್ನು ಹೆಣ್ಣು ಅನುಭವಿಸಬೇಕಿದೆ. ದುರಂತವೆಂದರೆ, ದಿನದಿಂದ ದಿನಕ್ಕೆ ವಿಕೃತತೆ ಬೆಳೆಯುತ್ತಲೂ ಇದೆ. ನಾಗರಿಕ ಸಮಾಜದಲ್ಲಿ ಬಾಳುತ್ತಿದ್ದೇವೆಯೇ ಎಂದು ಅನುಮಾನಿಸಿಕೊಳ್ಳುವಂತೆ. ಕಥುವಾದ ಮಗುವನ್ನು ದೇವಸ್ಥಾನದಲ್ಲಿ ಬಂಧಿಸಿಟ್ಟು ನಿರಂತರ ಅತ್ಯಾಚಾರ ಮಾಡಿದವರು, ಹಿಂದೂ ಧರ್ಮದ ಭಾರತವನ್ನು ರಕ್ಷಿಸುತ್ತಿದ್ದೇವೆ- ಎಂದು ಭ್ರಮಿಸಿದವರು. ದೇವಸ್ಥಾನದ ಪಾವಿತ್ರ್ಯ, ತಮ್ಮ ನೀಚ ಕೆಲಸ ಹೇಗೆ ತಾಳೆಯಾದೀತೆಂಬ ಅನುಮಾನವೂ ಅವರನ್ನು ಕಾಡಲಿಲ್ಲ. ಈ ಆರೋಪಿಗಳು ಸಮಾಜದ ಮುಖ್ಯವಾಹಿನಿಯಲ್ಲಿರುವ ಸಭ್ಯ ನಾಗರಿಕರು. ಆ ಮಗುವಿನಂಥದೇ ಹೆಣ್ಣು ಮಕ್ಕಳಿರುವ ತಂದೆಯಂದಿರು. ದೂರದ ಊರಿನ ಸಂಬಂಧಿಗೆ- ಹೀಗೊಂದು ರೇಪ್ ಅವಕಾಶವಿದೆ ಬರುತ್ತೀಯಾ? – ಎಂದು ಹಂಚಿಕೊಂಡು ಅನುಭವಿಸುವ ಸಂಸ್ಕøತಿವಂತರು. ಕಡೆಯ ಬಾರಿ ಒಮ್ಮೆ ರೇಪ್ ಮಾಡಿ ಆಮೇಲೆ ಪ್ರಾಣ ತೆಗೆದರಾಯಿತು ಎಂದು ಪೂರ್ಣ ಪ್ರಯೋಜನ ಪಡೆದುಕೊಳ್ಳುವ ತಿಳಿವಳಿಕಸ್ಥರು. ಅವರು ಮಗುವನ್ನು ಹಸಿವಿನಿಂದ ನೀರಡಿಕೆಯಿಂದ ಬಳಲಿಸಿದರು. ಬಲವಂತವಾಗಿ ಮದ್ಯಪಾನ ಮಾಡಿಸಿ ಆ ಪುಟ್ಟ ದೇಹವನ್ನು ಛಿದ್ರ ಮಾಡಿದರು. ಮಗುವಿನ ದೇಹದ ಒಳಹೊರಗುಗಳನ್ನು ರಣಗಾಯವಾಗಿರಿಸಿದರು. ಆ ಪೈಶಾಚಿಕ ವರ್ತನೆಯನ್ನು ಕೇಳಿದರೆ ‘ಸದ್ಯ ಮಗು ಉಳಿಯಲಿಲ್ಲವಲ್ಲ. ಅಷ್ಟು ಸಾಕು’ – ಎಂದು ಉಸಿರಿಡುವಂತಾಗುತ್ತದೆ. ಜಮ್ಮು-ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಂರ ನಡುವೆ ಹೆಚ್ಚುತ್ತಿರುವ ಜನಾಂಗೀಯ ದ್ವೇಷದ ಉರಿಯಿದು ಈ ಮಗು ಬಕ್ರೆವಾಲಾ ಎಂಬ ಕುರಿಗಾಹಿ ಅಲೆಮಾರಿ ಕುಟುಂಬಕ್ಕೆ ಸೇರಿದ್ದು. ಅವರು ಮುಸ್ಲಿಂ ಮತಾನುಯಾಯಿಗಳು. ಭಾರತದ ಯಾವ ಮೂಲೆಯಲ್ಲಿರುವ ಮುಸ್ಲಿಂರನ್ನೂ ಪಾಕಿಸ್ತಾನದ ಏಜೆಂಟರು ಎಂದು ಗುಲ್ಲೆಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಕೋಮುವಾದಿಗಳಿಗೆ ಸಾಧ್ಯವಾಗಿರುವಾಗ ಪಾಕಿಸ್ತಾನದ ಗಡಿಯ ಬಡ ಮುಸ್ಲಿಮರ ಮೇಲೆ ಈ ಆರೋಪ ಹೊರಿಸುವುದು ಅಲ್ಲಿಯ ಹಿಂದೂ ಏಕತಾ ಮಂಚ್ ಮತ್ತು ಭಾರತ ಬಚಾವೊ ರಥಯಾತ್ರೆಯ ಸಂಘಟನೆಗಳಿಗೆ ಕಷ್ಟವಲ್ಲ. ಒಮ್ಮೆ ದೊಡ್ಡದನಿಯಲ್ಲಿ ಆರೋಪವನ್ನು ಹೊರೆಸಿ, ಪ್ರಚಾರಕ್ಕೆ ತಂದರೆ ಮುಕ್ಕಾಲು ಕೆಲಸ ಆಯಿತೆಂದೇ ಲೆಕ್ಕ. ಪ್ರಚಾರವೇ ಅಧಿಕೃತತೆಯಾದ ಕಾಲದಲ್ಲಿ ಶಿಕ್ಷಿಸುವ ಅಧಿಕಾರ ದತ್ತವಾಗುತ್ತದೆ. ಸಂವಿಧಾನಾತ್ಮಕ ಕಾನೂನು ಏನೇ ಹೇಳಲಿ, ಮತೀಯತೆಯೇ ಕಾನೂನಾದವರಿಗೆ ಅದರ ಹಂಗೇ ಇಲ್ಲ. ತಮ್ಮೊಳಗಿನ ಧರ್ಮಾಂಧತೆ ಮತ್ತು ಕಾಮುಕ ವಿಕೃತಿಗೆ ರಾಷ್ಟ್ರಭಕ್ತಿಯ ತೆಳು ಪರದೆ ಹೊದ್ದು ರಕ್ಷಣಾತ್ಮಕ ಯುದ್ಧದ ವರಸೆಗಳನ್ನು ಹಾಕುತ್ತಲೇ ಇದ್ದಾರೆ. ಕಟುವಾದ ಘಟನೆಗೆ ಏನೆಲ್ಲ ಮೊನಚುಗಳಿವೆ. ಎಳೆಯ ಹೂವಿನಂತಹ ಮಗುವಿನ ದೇಹ ಅನುಭವಿಸಿರಬಹುದಾದ ಯಾತನೆಯ ವಿದ್ರಾವಕತೆ, ಮತೀಯ ಭ್ರಮೆ ಮನುಷ್ಯರನ್ನು ಅದೆಷ್ಟು ಕ್ರೂರಿಗಳನ್ನಾಗಿಸಬಹುದೆಂಬ ಭೀಕರತೆ, ದೇಶದ ನ್ಯಾಯಾಂಗವನ್ನು ರಕ್ಷಿಸುವ ಹೊಣೆ ಹೊತ್ತ ವಕೀಲರು, ರಕ್ಷಕರಾಗಿರಬೇಕಿದ್ದ ಪೋಲಿಸರು, ಶಾಸಕಾಂಗದ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಆರೋಪಿಗಳ ರಕ್ಷಣೆಗೆ ಪಣತೊಟ್ಟಿರುವ ಅಧಃಪತಗಳೆಲ್ಲ ಸೇರಿದ ಜಟಿಲ ಹೆಣಿಗೆಯಿದು. ರಾಜ್ಯದಲ್ಲಿ ನ್ಯಾಯಸಿಗದು, ಮಗುವಿನ ಸಮಾಧಿಯೂ ಸುರಕ್ಷಿತವಲ್ಲ – ಎಂದು ಬಡ ಕುಟುಂಬ ಕಣ್ಣೀರು ಹಾಕುತ್ತಿದ್ದರೆ; ಇಂತಹ ಹೇಯ ಘಟನೆಗಳಿಗೆ ಮೌನದಿಂದಲೇ ಸ್ಪಂದಿಸುವ, ಕಡೆಗೊಂದು ತೇಪೆಯ ಮಾತು ಹಚ್ಚುವ ಜನನಾಯಕರಿರುವ ರಾಷ್ಟ್ರವಿದು. ಅಲೆಮಾರಿ ಜನಾಂಗದ ಮಗುವಿನ ಈ ಬರ್ಬರ ಹಿಂಸೆಯ ಪಾಪವನ್ನು ಮಾನ್ಯ ಪ್ರಧಾನಿಗಳು ಬುಡಕಟ್ಟು ಮಹಿಳೆಯೊಬ್ಬರ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಪರಿಹರಿಸಿಕೊಳ್ಳಲು ಬಯಸಿದರೇನೋ. ಪಾಪ ಪರಿಹಾರವಾಯಿತೇ? ಗೊತ್ತಿಲ್ಲ. ಜನರ ಮನಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ವಿಚಲಿತಗೊಳಿಸಿ ತಮ್ಮ ಉದಾರ ವ್ಯಕ್ತಿತ್ವದ ನಾಟಕ ಮುಂದುವರಿಸುವಲ್ಲಿಯಂತೂ ಆ ದೃಶ್ಯ ಸಹಾಯ ಮಾಡಿರಬಹುದು. ಒಬ್ಬರು ಸಂವಿಧಾನದ ಸಾಧ್ಯತೆಯನ್ನು ಪ್ರಶ್ನಿಸುತ್ತಾರೆ. ಇನ್ನೊಬ್ಬರು ಅಂಬೇಡ್ಕರರನ್ನು ಸಂತ – ಋಷಿ ಎಂದೆಲ್ಲ ಕರೆದು ಹೂ ಏರಿಸಿ ಮತಬೇಟೆಗೆ ಯತ್ನಿಸುತ್ತಾರೆ. ಎರಡೂ ಕೆಲಸ ಒಂದೇ ಚಿಂತನೆಯ ಜನರದ್ದೇ. ಜನ ಬರೀ ಪ್ರೇಕ್ಷಕರು. ಗೋಣಾಡಿಸುವವರು.

ಉನ್ನಾವ್‍ದ ಘಟನೆಯಂತೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನ ಸಂಪುಟ ಸಚಿವರಿಗೆ ನೇರ ಸಂಬಂಧಿಸಿದ್ದು. ಸುಮಾರು ಒಂದು ವರ್ಷದ ಹಿಂದಿನ ಪ್ರಕರಣವನ್ನು ಮುಚ್ಚಿಹಾಕುವ ರಾಜಕಾರಣ ನಿಚ್ಚಳವಾಗಿದೆ. ಈ ಘಟನೆಗಳಲ್ಲಿ ಭಾರತದ ಆತ್ಮಗೌರವವನ್ನು ಎತ್ತಿಹಿಡಿದ ಎರಡು ಉಳಿಕೆಗಳಿವೆ. ಉನ್ನಾವ್ ಘಟನೆಯನ್ನು ನಿರ್ವಹಿಸುತ್ತಿರುವ ಹೈಕೋರ್ಟ್ ಮತ್ತು ಕಟುವಾ ಪ್ರಕರಣವನ್ನು ತನಿಖೆ ನಡೆಸಿದ್ದ ಉನ್ನತ ಅಧಿಕಾರಿ ರಮೇಶ ಜಾಲ ಅವರು ತಮ್ಮೆಲ್ಲ ಒತ್ತಡಗಳ ನಡುವೆಯೂ ಮಗುವಿನ ನ್ಯಾಯಕ್ಕಾಗಿ ಪ್ರಯತ್ನಿಸಿದ ರೀತಿ. ಅವರು ಉಗ್ರವಾದಿಗಳ ದಾಳಿಗೆ ಒಳಗಾಗಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿದ್ದರು ಮತ್ತು ಅವರು ಹುಟ್ಟಿನಿಂದ ಕಾಶ್ಮೀರಿ ಪಂಡಿತ ಸಮುದಾಯದವರು ಎನ್ನುವುದು ಕಣ್ಣಿವೆಯನ್ನು ಒದ್ದೆಯಾಗಿಸುತ್ತದೆ. ಆದಿತ್ಯನಾಥನನ್ನು ನಾಥ ಪಂಥದಯೋಗಿ ಎನ್ನುವವರಿಗೆ, ನಾಥ ಪಂಥದ ಮೂಲಸತ್ವದ ಅರಿವಿದೆಯೋ? ಎಂದು ಕೇಳಬೇಕೆನಿಸುತ್ತದೆ. ಶಾಲೆ, ಕಾಲೇಜು, ಅಂಗಡಿ, ಮುಂಗಟ್ಟು, ಮಸೀದಿ ಕಡೆಗೆ ಅಂಬೇಡ್ಕರ ಮೂರ್ತಿಗೂ ಕೇಸರಿ ಬಣ್ಣ ಬಳಿವ ದಾಷ್ಟ್ರ್ಯವನ್ನು ತೋರುವ ಸರ್ವಾಧಿಕಾರಿ ಯಾವ ಸಾಧಕ ಸಂಪ್ರದಾಯ ಸೇರಲು ಸಾಧ್ಯ? ನನಗಂತೂ ಆ ವ್ಯಕ್ತಿಯ ಹೆಸರು ಕೇಳಿದಾಗೆಲ್ಲ ಗೋರಖಪುರವೇ ನೆನಪಾಗುತ್ತದೆ. “ನಾನು ಶವಯಾತ್ರೆಯಲಿ ಹೂಗಳನು ಕಂಡಿದ್ದೆ. ನಿನ್ನೆ ಗೋರಖಪುರದಲ್ಲಿ ಹೂಗಳ ಶವಯಾತ್ರೆ ಕಂಡೆ” – ಎಂಬ ಗುಲ್ಜಾರರ ಕವಿತೆಯೂ. ಅದ್ಯಾಕೆ ಒಂದು ನಿರ್ದಿಷ್ಟ ಸಮುದಾಯದ ಬಡವರೇ ಹೆಚ್ಚಿರುವ ಪ್ರದೇಶದ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟುಬಿಟ್ಟಿತು? ಎಂದು ಕೇಳಬೇಕೆನಿಸುತ್ತದೆ. ರಾಜೇಂದ್ರ ಚೆನ್ನಿಯವರು ಉಲ್ಲೇಖಿಸುವ ನಾಓಮಿಕ್ಲೀನ್ ಬರೆದ ಖಿhe shoಛಿಞ ಜoಛಿಣಡಿiಟಿe ಕೃತಿಯಲ್ಲಿ
ಅಮೆರಿಕದ ನಗರವೊಂದನ್ನು ಚಂಡಮಾರುತ ಅಪ್ಪಳಿಸಿ ಕೆಳಮಧ್ಯಮ ವರ್ಗದ ಬಡಾವಣೆಗಳನ್ನು ಗುಡಿಸಿಹಾಕುತ್ತದೆ. ಜನ ಬೀದಿಗೆ ಬೀಳುತ್ತಾರೆ. ರಾಜಕೀಯ ಧುರೀಣರು ಮಾತ್ರ ‘ನಾವು ಮಾಡಲಾಗದ್ದನ್ನು ದೇವರೇ ಮಾಡಿದ’ ಎಂದು ಸಂತಸಪಡುತ್ತಾರೆ. ಅಲ್ಲಿ ಕಾರ್ಪೊರೇಟ್ ಕಂಪನಿಗಳಿಂದ ಟೂರಿಸ್ಟ ರೆಸಾರ್ಟುಗಳ ಯೋಜನೆ ಸಿದ್ಧವಾಗುತ್ತದೆ. “ಒಂದು ಅತ್ಯಾಚಾರವನ್ನು ದೊಡ್ಡದು ಮಾಡಬೇಡಿ ದೇಶದ ಪ್ರವಾಸೋದ್ಯಮಕ್ಕೆ ಧಕ್ಕೆ ಆಗುತ್ತದೆ- ಎಂದು ‘ಅಧಿಕಾರಸ್ಥರು’ ಮಾತಾಡುವಾಗ ಈ ಎಲ್ಲವುಗಳಿಗೆ ಇರುವ ಸಹ ಸಂಬಂಧ ಮನಸ್ಸನ್ನು ಚುಚ್ಚತೊಡಗುತ್ತಿದೆ.
ಇಂದಿನ ಬೆಳಗು, ಸೂರತ್ ಪೊದೆಯಲ್ಲಿ ಹೆಣ್ಣು ಮಗುವೊಂದರ ಮೃತದೇಹ ಪತ್ತೆಯಾಗಿದ್ದು 86 ಗಾಯಗಳಿದ್ದ ಮತ್ತು ಸತತ ಭೀಕರ ಅತ್ಯಾಚಾರಕ್ಕೊಳಗಾದ ದೇಹ ಎನ್ನಲಾಗಿದೆ. ಮಗುವಿನ ದಾತಾರರೂ ಗುರುತಿಲ್ಲ. – ಮನಸ್ಸು ನಡುಗುತ್ತಿದೆ. ನನ್ನ ಮಗಳೀಗ ಚಿತ್ರದ ಯಾವ ರೇಖೆಯಲ್ಲಿದ್ದಾಳೋ, ಅದೇನು ಕೇಳುತ್ತಾಳೋ…. ಅಥವಾ ಜೀವ ರೋಸಿ ವಾಸ್ತವದ ನಿಷ್ಠುರತೆಗೆ ಬೆನ್ನುಹಾಕಿ ಅದೆಂಥದೋ ಮನರಂಜನೆಯ ಚೆನಲ್‍ಗೆ ಕಣ್ಣು ಕೀಲಿಸಿದರೆ…. ಗುಲ್ಜಾರ್, ಹೂಗಳ ಶವಯಾತ್ರೆ ಎಂದು ಕರೆದದ್ದು ಯಾವೆಲ್ಲದ್ದಕ್ಕೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅನೈತಿಕ ಪೊಲೀಸ್‌ಗಿರಿ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ...

ಬಳ್ಳಾರಿ| ಬಂಡಿಹಟ್ಟಿ-ದಾನಪ್ಪ ಬೀದಿ ಬಡರೈತರ ಮೇಲೆ ದೌರ್ಜನ್ಯ; ಪ್ರತಾಪರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್‌.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 'ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ' ಮುಖಂಡರು ಆಗ್ರಹಿಸಿದರು....

ರೋಹಿತ್ ವೇಮುಲಾ 10ನೇ ಶಹಾದತ್ ದಿನ: ಜ.17ರಂದು ಹೈದರಾಬಾದ್ ವಿವಿಯಲ್ಲಿ ರೋಹಿತ್ ಕಾಯ್ದೆಯ ‘ಜನತಾ ಕರಡು’ ಅನಾವರಣ

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ವಾಂಸ ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ASA) ನಾಯಕ ರೋಹಿತ್ ವೇಮುಲ ಅವರ ಮರಣದ ಹತ್ತು ವರ್ಷಗಳ ನಂತರ, ವಿದ್ಯಾರ್ಥಿ ಗುಂಪುಗಳು ಮತ್ತು ಸಾಮಾಜಿಕ ನ್ಯಾಯ...

ಮಹಾರಾಷ್ಟ್ರವು ಪ್ರಧಾನಿ ಮೋದಿಯನ್ನು ಹೆಚ್ಚು ಅವಲಂಬಿಸಿದೆ: ಸಿಎಂ ಫಡ್ನವೀಸ್

ನಗರ ಪಾಲಿಕೆ ಚುನಾವಣೆಯಲ್ಲಿ ಮಹಾಯುತಿ ಭರ್ಜರಿ ಜಯ ಸಾಧಿಸಿದ ನಂತರ ಮಹಾರಾಷ್ಟ್ರದ ಜನರಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ವಿಜಯವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಅರ್ಪಿಸಿದರು. ರಾಜ್ಯವು ಪ್ರಧಾನಿ...

ಮೆಹುಲ್ ಚೋಕ್ಸಿ ಪುತ್ರ ಕೂಡ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ: ಜಾರಿ ನಿರ್ದೇಶನಾಲಯ

ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ, ಅವರ ಮಗ ರೋಹನ್ ಚೋಕ್ಸಿ ಕೂಡ ಈ ಅಪರಾಧದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೊದಲ ಬಾರಿಗೆ ಹೇಳಿಕೊಂಡಿದೆ....

‘ವೋಟ್ ಚೋರಿ ಒಂದು ರಾಷ್ಟ್ರವಿರೋಧಿ ಕೃತ್ಯ..’; ಬಿಎಂಸಿ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಎಣಿಕೆ ವೇಗ ಪಡೆಯುತ್ತಿದ್ದಂತೆ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ತಮ್ಮ ಮೊದಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ....

ಪುನರಾಭಿವೃದ್ಧಿ ಹೆಸರಿನಲ್ಲಿ ಮಣಿಕರ್ಣಿಕಾ ಘಾಟ್ ಬಳಿ ದೇಗುಲಗಳ ಧ್ವಂಸ: ಮೋದಿ ವಿರುದ್ಧ ಖರ್ಗೆ ಆಕ್ರೋಶ!

ನವದೆಹಲಿ: ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಪುನರಾಭಿವೃದ್ಧಿ ಕಾರ್ಯದ ಭಾಗವಾಗಿ ಬುಲ್ಡೋಜರ್‌ಗಳನ್ನು ಏಕೆ ಓಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ. ಮತ್ತು ಐತಿಹಾಸಿಕ ಪರಂಪರೆಯ ಅನೇಕ ಸ್ಥಳಗಳನ್ನು ಈ...