Homeಕರ್ನಾಟಕಜಿಂದಾಲ್ ವಿರುದ್ಧ ಲೋಕಲ್ ಫೈಟ್ ಹತ್ತಿಕ್ಕಿದ ಸರ್ಕಾರದ ಆಡಳಿತ ವ್ಯವಸ್ಥೆ

ಜಿಂದಾಲ್ ವಿರುದ್ಧ ಲೋಕಲ್ ಫೈಟ್ ಹತ್ತಿಕ್ಕಿದ ಸರ್ಕಾರದ ಆಡಳಿತ ವ್ಯವಸ್ಥೆ

ಅತ್ಯಂತ ಬೆಲೆಬಾಳುವ ಭೂಮಿಯನ್ನು ತೀರಾ ಕಡಿಮೆ ರೊಕ್ಕಕ್ಕೆ ಮಾರಿದ ಬಡ ರೈತರು ಇವತ್ತಿಗೂ ಸರಿಯಾದ ಬದುಕು ಕಟ್ಟಿಗೊಂಡಿಲ್ಲ.

- Advertisement -
- Advertisement -

| ನಾನುಗೌರಿ ಡೆಸ್ಕ್ |

2016ರ ಸಂದರ್ಭದಲ್ಲಿ ಸ್ಥಳೀಯರು ಜಿಂದಾಲ್ ವಿರುದ್ಧ ಕಟ್ಟಿದ ಹೋರಾಟವನ್ನು ಪೊಲೀಸ್ ಶಕ್ತಿಯನ್ನು ಬಳಸಿ ಹತ್ತಿಕ್ಕಿದ್ದು ಆಡಳಿತ ವ್ಯವಸ್ಥೆಯೇ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇತರ ಯಾವ ಪಕ್ಷವೂ ಹೋರಾಟ ರೂಪಿಸಿದ ಜನರ ನೆರವಿಗೆ ನಿಲ್ಲಲಿಲ್ಲ. ಇಲ್ಲಿ ಎಲ್ಲ ಪಕ್ಷಗಳನ್ನು, ಅಧಿಕಾರಿಗಳನ್ನು ಜಿಂದಾಲ್ ‘ಒಳ ಹಾಕಿಕೊಂಡಿದೆ’ ಎಂಬುದು ಸ್ಥಳೀಯರ ಆರೋಪ,,,,

‘ಎಲ್ಲ ಪಾರ್ಟಿದವರೂ ಅವ್ರ ಜೊತೆಗಿನ ಅದಾರ್ರಿ. ಈಗ 3,600 ಎಕರೆ ಭೂಮೀನಾ ಜುಜಬಿ ರೇಟಿಗೆ ಸರ್ಕಾರ ಮಾರಾಕ ಹೊಂಟೈತಿ. ಈಗ್ಲೂ ನಾವು ಜನರನ್ನ ಸೇರಿಸೋಕ್ ಟ್ರೈ ಮಾಡ್ತಿದ್ದೀವಿ, ಆದ್ರ 2016ರೊಳಗ ಪ್ರತಿಭಟನೆ ಮಾಡಿದಾಗ, ಪೊಲೀಸರು ಮಂದಿಗೆ ಬಾಳ ಕಾಟ ಕೊಟ್ರು. 42 ಜನರ ಮ್ಯಾಲ ಕೇಸು ಹಾಕಿ ಕೋರ್ಟು ಕಚೇರಿ ಅಡ್ಡಾಡಿಸಿ ಸುಸ್ತು ಮಾಡಿದ್ರು. ಈಗ ಹೋರಾಟಕ್ಕ ಕರೆದ್ರ ಜನ ಯಾಕ್ ಬೇಕಪ್ಪ, ಎಲ್ಲ ಅವ್ರ ಕಡಿಗೆ ಅದಾರ’ ಎನ್ನುವ ಪರಿಸ್ಥಿತಿಯಿದೆ.

2016ರಲ್ಲಿ ಜಿಂದಾಲ್‍ನ ಡಾಂಬರು ಪ್ಲಾಂಟ್ (ECPL ಘಟಕ) ವಿರೋಧಿಸಿ ತೋರಣಗಲ್ಲಿನಲ್ಲಿ ಬೃಹತ್ ಪ್ತತಿಭಟನೆ ಮತ್ತು ಸಭೆ ನಡೆಸಿದ್ದ ಮುಂದಾಳುಗಳ ಪೈಕಿ ಒಬ್ಬರಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶರಣಪ್ಪ ಕೋಟಿಗನಾಳ 2016ರಲ್ಲಿ ನಡೆದ ಸರ್ಕಾರದ ದೌರ್ಜನ್ಯವನ್ನು ನೆನಪಿಸಿದರು.

‘ಆಗ ಜಿಂದಾಲ್ ಸಪೋರ್ಟು ಮಾಡಿದ್ದ ನಮ್ ಸರ್ಕಾರದ ವಿರುದ್ಧವೂ ನಾವು ನಿಂತಿದ್ದೀವಿ’ ಎನ್ನುತ್ತಾರೆ ಕಾಂಗ್ರೆಸ್‍ನಿಂದ ಆ ಭಾಗದಲ್ಲಿ 2011-15ರ ಅವಧಿಯಲ್ಲಿ ಜಿಪಂ ಸದಸ್ಯರಾಗಿದ್ದ ಶರಣಪ್ಪ. ‘ಜನರ ಬದುಕು, ಇಲ್ಲಿನ ಅಗ್ರಿಕಲ್ಚರ್ ಎಲ್ಲ ಎಕ್ಕುಟ್ಟಿ ಹೋಗುವಾಗ ಪಾರ್ಟಿ-ಗೀರ್ಟಿ ನೋಡಬಾರ್ದಲ್ಲರಿ?’ ಎನ್ನುತ್ತಾರೆ.

ಇನ್ಸುರನ್ಸ್ ಉದ್ಯೋಗಿಯಾಗಿದ್ದು ಆ ಹೋರಾಟದಲ್ಲಿ ಭಾಗವಹಿಸಿದ್ದ ಚನ್ನಬಸಯ್ಯ, ‘ಇವತ್ತು ಅದಾ ಪ್ರಾಬ್ಲಂ ಆಗೈತಿ. ಯಾವುದೋ ಪಕ್ಷದ ಸದಸ್ಯರು ಅಂತಾ ತಮಗ ತಾವ ಅನಕೊಂಡಿರುವ ಜನ್ರು ಕೂಡ ಪ್ರತಿಭಟನೆ ಅಂದ್ರ ಹಿಂದಕ್ಕ ಸರಿತಾರ…ಈ ಸಲ ನಾವು ಪ್ರೆಸ್‍ಗೆಲ್ಲ ಮಾಹಿತಿ ಕೊಟ್ಟೀವಿ…ಹೋರಾಟನೂ ಶುರು ಮಾಡ್ತೀವಿ…’ ಎಂದರು.

ಜಿಂದಾಲಿನ ಹೆಡ್ ಆಫೀಸ್ ಇರುವ ತೋರಣಗಲ್ಲಿನ ಈ ಇಬ್ಬರು ನಮ್ಮ ಪೋರ್ಟಲ್ ಮುಂದೆ ತೆರೆದಿಟ್ಟ ಜಿಂದಾಲಿನ ಕತೆ ಮತ್ತು ಜನರ ವ್ಯಥೆ ಇಲ್ಲಿದೆ. ಇಡೀ ರಾಜಕೀಯ ವ್ಯವಸ್ಥೆಯೇ ಹೇಗೆ ಜಿಂದಾಲ್ ಪರ ಎನ್ನುವುದರ ಒಳಸುಳಿಗಲೂ ಇವೆ:

“ತೋರಣಗಲ್ ಮತ್ತು ಸುತ್ತಮುತ್ತಲಿನ ಹಳ್ಳಿಗಳೆಲ್ಲ ಇವತ್ತು ಸ್ಲಮ್ ತರಹ ಆಗಿವೆ. ಜನರ ಆರೋಗ್ಯ ಮತ್ತು ಹಳ್ಳಿಗಳ ಬದುಕಿನ ಸ್ವಾಸ್ಥ್ಯವನ್ನೇ ಹಾಳು ಮಾಡುವ ಡಾಂಬರು ಪ್ಲಾಂಟು ಇಲ್ಲಿ ಬೇಡ. ಇಲ್ಲಿನ ಪರಿಸರಕ್ಕೆ ಇದು ಮಾರಕ. ಪ್ಲಾಂಟಿನ ಕಲ್ಮಷ ಅಂತರ್ಜಲಕ್ಕೆ ಸೇರಿದರೆ ದೊಡ್ಡ ಅಪಾಯ ಎಂದು ಹೋರಾಟ ಕಟ್ಟಿದ್ದೆವು. ತೋರಣಗಲ್, ಹಂಸಾಪುರ, ಕುಡತಿನಿ ಜನರೆಲ್ಲ ನಮಗೆ ಸಪೋರ್ಟು ಮಾಡಿದ್ದರು. ಆದರೆ ಈ ಪ್ರತಿಭಟನೆ ನೋಡಿ ದಂಗಾದ ಜಿಂದಾಲ್ ಜಿಲ್ಲೆಯ ಆಡಳಿತ ವ್ಯವಸ್ಥೆಯ ನೆರವು ಪಡೆದು ಜನರಲ್ಲಿ ಭೀತಿ ಉಂಟು ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕಿತು. ಎಲ್ಲ ಪಕ್ಷಗಳ ಪ್ರಮುಖರೂ ಜಿಂದಾಲಿನ ಫಲಾನುಭವಿಗಳೇ ಆಗಿರುವುದರಿಂದ ಹೊರಗಿನ ಸಂಘಟನೆಗಳ ನೆರವನ್ನೂ ಪಡೆದು ಮತ್ತೆ ಹೋರಾಟ ಕಟ್ಟಬೇಕಿದೆ….

1971ರಲ್ಲಿ ಇಲ್ಲಿ ಸರ್ಕಾರಿ ಸ್ವಾಮ್ಯದ ಉಕ್ಕಿನ ಘಟಕ ಸ್ಥಾಪಿಸಲು ನಿರ್ಧರಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು 1972ರಲ್ಲಿ ನೋಟಿಫಿಕೆಷನ್ ಹೊರಡಿಸಿದರು. 1972ರಲ್ಲಿ ಇಲ್ಲಿ ಪ್ರತಿ ಎಕರೆಗೆ ಕೇವಲ 800ರಿಂದ 1,200 ರೂಗೆ ನೀಡಿ ಭೂಸ್ವಾಧಿನ ಮಾಡಿಕೊಳ್ಳಲಾಗಿತ್ತು. 1991-92ರಲ್ಲಿ ಮನಮೋಹನಸಿಂಗ್ ಸರ್ಕಾರದಲ್ಲಿ ಉಕ್ಕು ಖಾತೆಯ ಸಚಿವರಾಗಿದ್ದ ಇಲ್ಲಿನ ಸಂಸದ ಬಸವರಾಜ ಪಾಟೀಲ ಅನ್ವರಿಯವರು ದೆಹಲಿಯಲ್ಲಿ ಒಂದು ಪ್ರೆಸ್ ಮೀಟ್ ಮಾಡಿ, ನಷ್ಟದಲ್ಲಿರುವ ಸರ್ಕಾರಿ ಉಕ್ಕು ಉದ್ಯಮಗಳನ್ನು ಖಾಸಗಿಯವರಿಗೆ ಕೊಡುವ ನಿರ್ಧಾರ ಪ್ರಕಟಿಸಿದರು. ಅವರ ಮೂಲ ಉದ್ದೇಶವೇ ವಿಜಯನಗರ ಸ್ಟೀಲ್ಸ್ ಅನ್ನು ಜಿಂದಾಲ್ಗೆ ನೀಡೋದೇ ಆಗಿತ್ತು….ಕಾರ್ಮಿಕ ಸಂಘಟನೆಗಳ ಹೋರಾಟಗಳನ್ನೆಲ್ಲ ಮುರಿಯಲಾಗಿತು.

1994ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಜಿಂದಾಲ್‍ನ ಭೂಮಿಪೂಜೆ ನಡೆದೇ ಹೋಯ್ತು. ವಿಜಯನಗರ ಸ್ಟೀಲ್ಸ್‍ನ ಭೂಮಿಯೆಲ್ಲ ಜಿಂದಾಲ್ ಪಾಲಾಯಿತು. ಆಗ ರೈತರಿಗೆ ಎಕ್ಸಗ್ರೇಸಿಯಾ ಅಂತ 5 ಸಾವಿರ ಕೊಟ್ಟು ಮರಳು ಮಾಡಿದರು. ಲೀಸ್‍ನಲ್ಲಿರುವ ಈ ಭೂಮಿಯನ್ನು ಹತ್ತು ವರ್ಷಕ್ಕೊಮ್ಮೆ ರಿನೀವಲ್ ಮಾಡಬೇಕು. 2006ರಲ್ಲಿ ರಿನೀವಲ್ ಮಾಡುವಾಗ ಮತ್ತೆ ಭೂಮಿ ಕಳೆದುಕೊಂಡ ರೈತರಿಗೆ 5 ಸಾವಿರ ಎಕ್ಸ್‍ಗ್ರೇಸಿಯಾ ಕೊಟ್ಟು ಹಿಂದಕ್ಕೆ ತಳ್ಳಿದರು. ಫಲವತ್ತಾದ ಭೂಮಿ, ನೀರಿನ ಅನುಕೂಲವನ್ನು ಪಡೆದ ಭೂಮಿಯೂ ಉಕ್ಕಿಗಾಗಿ ನೆಗೆದು ಬಿದ್ದಂತಾಯಿತು…

ವ್ಯಾಪಾರದಲ್ಲಿ ಎಷ್ಟ ಕಿತ್ತಾಟ ಇರ್ಲಿ, ಅದಿರುಗಳ್ಳರೆಲ್ಲ ಇಂತಹಾ ವಿಷ್ಯದೊಳಗ ಒಂದಾಗ್ತಾರ..ಯಡಿಯೂರಪ್ಪ ಇದ್ದಾಗ ಇವರದೇ ಸಾಮ್ರಾಜ್ಯ ಮಾಡಿಕೊಂಡಿದ್ದರಲ್ಲ? ಅಕ್ರಮವಾಗಿ ಅದಿರು ಮಾರಿಕೊಂಡ ಆರೋಪವೂ ಜಿಂದಾಲ್ ಮ್ಯಾಲ ಇದೆ. ಸರ್ಕಾರ ವಶಪಡಿಸಿಕೊಂಡ ಅಕ್ರಮ ಅದಿರನ್ನು ಹರಾಜಿಗೆ ಹಾಕುವಾಗಲೂ ಇಲ್ಲಿ ದಂಧೆ ನಡೆತಾ ಇದೆ. ಉತ್ತಮ ದರ್ಜೇಯ ಅದಿರನ್ನು ಕಡಿಮೆ ದರ್ಜೆಯ ಅದಿರು ಎಂದು ನಮೂದಿಸುವ ಅಧಿಕಾರಿಗಳು ಜುಜುಬಿ ರೇಟಿಗೆ ಜಿಂದಾಲ್‍ನಂತಹ ಕಂಪನಿಗಳಿಗೆ ಮಾರಿ ತಾವೂ ದುಂಡಗಾಗ್ತಾರ…ಎಲ್ಲ ಪಾರ್ಟಿಗಳಿಗೂ ಇದೆಲ್ಲ ಗೊತ್ತು….

ಅತ್ಯಂತ ಬೆಲೆಬಾಳುವ ಭೂಮಿಯನ್ನು ತೀರಾ ಕಡಿಮೆ ರೊಕ್ಕಕ್ಕೆ ಮಾರಿದ ಬಡ ರೈತರು ಇವತ್ತಿಗೂ ಸರಿಯಾದ ಬದುಕು ಕಟ್ಟಿಗೊಂಡಿಲ್ಲ. ಈಗ ಮತ್ತೆ ಲೀಸ್ ಭೂಮಿಯನ್ನು ತೀರಾ ಕಡಿಮೆ ದರಕ್ಕೆ ಕ್ರಯಪತ್ರ ಮಾಡಾಕ್ ಹೊರಟ ಸರ್ಕಾರದ ವಿರುದ್ಧ ರಾಜ್ಯದ ತುಂಬ ದೊಡ್ಡ ದನಿ ಎತ್ತಬೇಕು. ರಾಜಕೀಯ ಪಕ್ಷಗಳನ್ನು ಈ ಹೋರಾಟದ ಸನಿಹಕ್ಕೂ ಬಿಡಬಾರದು. ಅವೂ ಬರೋದೂ ಇಲ್ಲ ಬಿಡ್ರಿ…

ಆಗೀಗ ಕೊಟ್ಟ ಭೂಮಿ ಲೆಕ್ಕ ಹಾಕಿದ್ರ ಜಿಂದಾಲ್ ಹತ್ರ ಈಗ ಸಾವಿರ ಎಕರೆ ಭೂಮಿನ ಇರಬಹುದು. ಡಾಂಬರು. ಪೇಂಟ್ಸ್ ಅಂತಾ ಕೆಮಿಕಲ್ ವ್ಯಹಾರಕ್ಕ ಅವ್ರು ಬ್ಯಾರೆದಾರ ಜತಿ ಒಪ್ಪಂದ ಮಾಡಿಕೊಂತ ಹೊಂಟಾರ,,,ಇದೂ ಒಂದ ತರಹ ರಿಯಲ್ ಎಸ್ಟೇಟ್ ದಂಧೇನಾ…ಸಿಎಸ್‍ಆರ್ ಯೋಜನೆ ಅಡಿ ಇಲ್ಲಿಯ ಹಳ್ಳಿಗಳ ಶಾಲೆಗಳನ್ನಾದರೂ ದತ್ತು ತಗೋಬಹುದಿತ್ತು.. ಆದರೆ ಪ್ರವಾಸಿಗರು ಬರುವ ಹೊಸಪೇಟೆ ಬಸ್‍ಸ್ಟ್ಯಾಂಡ್ ಸೌಂದರ್ಯೀಕರಣ ಮಾಡ್ಯಾರ…ಇಲ್ಲಿವರೆಗೆ ಇಪ್ಪಂದದಂತೆ ಜಿಂದಾಲ್ ನಡೆದುಕೊಂಡಿದೆಯಾ, ಸ್ಥಳಿಯರಿಗೆ ಎಷ್ಟು ಕೆಲಸ ನೀಡಿದೆ ಇವೆಲ್ಲವನ್ನೂ ಸಾರ್ವಜನಿಕರ ಮುಂದೆ ಇಡುವ ಕೆಲಸವನ್ನು ಸರ್ಕಾರ ಮೊದಲು ಮಾಡ್ಲಿ… ಆಮ್ಯಾಲ ಹ್ಯಂಗ ಭೂಮಿ ಕೊಡ್ತಾರ ನೋಡೋಣಂತ….”

ಇವು ಹೋರಾಟದ ಮುಂಚೂಣಿ ವಹಿಸಿದ್ದ ಹತ್ತಾರು ಮುಂದಾಳುಗಳಲ್ಲಿದ್ದ ಶರಣಪ್ಪ ಮತ್ತು ಚನ್ನಬಸಯ್ಯರ ಮಾತುಗಳು. ಬಳ್ಳಾರಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳೆಲ್ಲ ಸೇರಿ ಒಂದು ದೊಡ್ಡ ಆಂದೋಲನ ಕಟ್ಟುತ್ತಿವೆ ಎಂಬ ಮಾತು ಕೇಳಿ ಬಂದಿವೆ. ಅದೂ ಆದಷ್ಟು ಬೇಗ ಶುರುವಾಗಲಿ… ಗಟ್ಟಿಗೊಳ್ಳಲಿ ಎಂಬುದು ನಮ್ಮ ಆಶಯ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...