Homeರಾಜಕೀಯತುಮಕೂರು : ಜೆಡಿಎಸ್ ಪ್ರಾಬಲ್ಯಕ್ಕೆ ಬೀಳಲಿದೆ ಕೈ ಪೆಟ್ಟು

ತುಮಕೂರು : ಜೆಡಿಎಸ್ ಪ್ರಾಬಲ್ಯಕ್ಕೆ ಬೀಳಲಿದೆ ಕೈ ಪೆಟ್ಟು

- Advertisement -
- Advertisement -

ತುಮಕೂರು ರಾಜಕಾರಣವೆಂದರೇನೆ ಅದು ಜಾತಿ ಆಧಾರಿತ ರಾಜಕಾರಣ. ಒಕ್ಕಲಿಗ ಮತ್ತು ಲಿಂಗಾಯತ ಮತಗಳು ಇಲ್ಲಿ ಹೆಚ್ಚೂಕಮ್ಮಿ ಸೋಲುಗೆಲುವನ್ನು ನಿರ್ಧರಿಸುತ್ತವೆ. ಅದೇ ಕಾರಣಕ್ಕೆ ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ ಜೆಡಿಎಸ್ 6 ಕ್ಷೇತ್ರಗಳನ್ನು ತನ್ನ ವಶ ಮಾಡಿಕೊಂಡಿತ್ತು. ಕಾಂಗ್ರೆಸ್ ಪಾರ್ಟಿಯು ನಾಲ್ಕರಲ್ಲಿ ಗೆದ್ದಿದ್ದರೆ, ಬಿಜೆಪಿ 1 ಸ್ಥಾನದಲ್ಲಿ ಗೆದ್ದಿತ್ತು. ಆದರೆ ಈ ಸಲ ಚುನಾವಣಾ ಲೆಕ್ಕಾಚಾರವೇ ತಲೆಕೆಳಗಾಗುವ ಸಾಧ್ಯತೆಯಿದ್ದು ತುಮಕೂರು ಜಿಲ್ಲೆ ಕಾಂಗ್ರೆಸ್‍ಗೆ ಭರ್ಜರಿ ಫಸಲು ಕೊಡುವ ಸಂಭವವಿದೆ.

ಶ್ರೀನಿವಾಸ್ ಎಸ್. ಆರ್

ಗುಬ್ಬಿಯಲ್ಲಿ ಮೇಲ್ನೋಟಕ್ಕೆ ಮೂರೂ ಪಾರ್ಟಿಗಳ ನಡುವೆ ತ್ರಿಕೋನ ಸ್ಪರ್ಧೆಯಿರುವಂತೆ ಕಂಡುಬಂದರೂ ಜೆಡಿಎಸ್‍ನ ಹಾಲಿ ಶಾಸಕ ಎಸ್.ಆರ್. ಶ್ರೀನಿವಾಸ್, ಬಿಜೆಪಿಯ ಬೆಟ್ಟಸ್ವಾಮಿಯ ನಡುವೆಯೇ ಕತ್ತುಕತ್ತಿನ ಪೈಪೋಟಿ ಇರೋದು ಎದ್ದು ಕಾಣುತ್ತೆ. ಸತತ ಮೂರು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧನೆಗೈದಿರುವ ಶ್ರೀನಿವಾಸ್ ನಾಲ್ಕನೇ ಅದೃಷ್ಟದಾಟಕ್ಕೆ ಕಾತರರಾಗಿದ್ದಾರೆ. ಇವರಿಗೆ ಪೈಪೋಟಿ ಇರೋದು ಬಿಜೆಪಿಯ ಬೆಟ್ಟಸ್ವಾಮಿಯವರಿಂದ. ಆದರೆ ಬಿಜೆಪಿಯ ಟಿಕೆಟ್‍ಗೆ ಪ್ರಯತ್ನಿಸಿ ಈಗ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವ ದಿಲೀಪ್ ಕುಮಾರ್‍ರ ಪ್ರಚಾರದ ವೇಗ ಬೆಟ್ಟಸ್ವಾಮಿಗೆ ಅಡ್ಡಗಾಲು ಹಾಕುತ್ತಿದೆ. ಇನ್ನು ಕಾಂಗ್ರೆಸಿನ ಬಾಲಾಜಿ ಕುಮಾರ್, ಸರ್ಕಾರದ ಜನಪರ ಕೆಲಸಗಳನ್ನು ಮುಂದಿಟ್ಟು ಮತಯಾಚಿಸುತ್ತಿದ್ದಾರಾದರು ಕಳೆದ ಸಲ ಕೈ ಅಭ್ಯರ್ಥಿಯಾಗಿದ್ದ ಹೊನ್ನಗಿರಿಗೌಡರಿಗೆ ದಕ್ಕಿದ ಫಲಿತಾಂಶಕ್ಕಿಂತ ಭಿನ್ನ ರಿಜಲ್ಟೇನೂ ಇವರಿಗೆ ಸಿಕ್ಕದು.

ಎಂ.ಟಿ.ಕೃಷ್ಣಪ್ಪ

ಇತ್ತ ತುರುವೇಕೆರೆಯಲ್ಲಿ ಜೆಡಿಎಸ್‍ನ ಹುರಿಯಾಳಾಗಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನೇ ಕಣಕ್ಕಿಳಿದಿದ್ದಾರಾದರು ಅವರಿಗೆ ಗೆಲುವು ಕಳೆದ ಬಾರಿಯಷ್ಟು ಸಲೀಸಾಗಿಲ್ಲ. ಯಾಕೆಂದರೆ ಜನರ ನಡುವೆ ಅವರ ಬಗ್ಗೆ ವಿಪರೀತ ಅಸಮಧಾನವಿದೆ. ರಸ್ತೆ, ಒಳಚರಂಡಿ, ಆಸ್ಪತ್ರೆ ಹೀಗೆ ಮೂಲ ಸೌಕರ್ಯಗಳ್ಯಾವುವು ಹೇಳಿಕೊಳ್ಳುವಷ್ಟು ನೆಮ್ಮದಿಯಾಗಿಲ್ಲ. ಇವತ್ತಿಗೂ ಜನ ಆಸ್ಪತ್ರೆಗೆ ಪಕ್ಕದ ಚಿಕ್ಕನಾಯಕನಹಳ್ಳಿಯತ್ತ ಮುಖ ಮಾಡಬೇಕಾದ ಪರಿಸ್ಥಿತಿಯಿದೆ. ಇವೆಲ್ಲವೂ ಕೃಷ್ಣಪ್ಪನ ಓಘಕ್ಕೆ ಬ್ರೇಕ್ ಹಾಕುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ. ಇತ್ತ ಬಿಜೆಪಿಯಲ್ಲಿ ಒಳಬೇಗುದಿ ಆ ಪಕ್ಷವನ್ನು ದಿನದಿಂದ ದಿನಕ್ಕೆ ಮೆತ್ತಗಾಗಿಸುತ್ತಿದೆ. ಕಳೆದ ಸಲ ಯಡ್ಯೂರಪ್ಪನವರ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಸಾಲೆ ಜಯರಾಂಗೆ ಬಿಜೆಪಿಯ ಟಿಕೇಟು ಕೊಟ್ಟಿರೋದು ಹಲವರ ಬೇಸರಕ್ಕೆ ಕಾರಣವಾಗಿದೆ. ಇನ್ನು ಕಾಂಗ್ರೆಸ್‍ನಲ್ಲಿ ಹಿರಿಯ ಮುಖಂಡ ಚೌದ್ರಿ ರಂಗಪ್ಪ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿರುವುದು ನಿಜವಾದರೂ ಪಕ್ಷೇತರ ಸ್ಪರ್ಧಿಗಳಾದ ಎಂ.ಡಿ.ರಮೇಶ್ ಗೌಡ ಮತ್ತು ನಾರಾಯಣಗೌಡ ಫ್ಯಾಕ್ಟರೂ ಗೆಲುವನ್ನು ಅತ್ತಿಂದಿತ್ತ ಹೊಯ್ದಾಡಿಸುತ್ತಿವೆ.

ಸುರೇಶ್ ಗೌಡ

ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸುರೇಶ್‍ಗೌಡರಿಗೆ ಜೆಡಿಎಸ್‍ನ ಹಿರಿಯ ಮುಖಂಡ ಚೆನ್ನಿಗಪ್ಪನವರ ಮಗ ಬಿ.ಸಿ.ಗೌರಿಶಂಕರ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಸುರೇಶ್‍ಗೌಡರಿಗೆ ಸ್ಥಳೀಯವಾಗಿ ಒಳ್ಳೆಯ ಹೆಸರಿದೆ. ಆದರೆ ಕ್ಷೇತ್ರದಲ್ಲಿ ಎರಡನೇ ಹಂತದ ನಾಯಕತ್ವವನ್ನು ಬೆಳೆಸದೇ ಇರೋದು ಸುರೇಶ್ ಗೌಡ ವಿರುದ್ಧ ಸ್ವಪಕ್ಷೀಯರೆ ಸಣ್ಣ ಸಂಚು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಜೆಡಿಎಸ್‍ನ ಗೌರಿಶಂಕರ್, ಕುಮಾರಸ್ವಾಮಿ ಮತ್ತು ದೇವೇಗೌಡರ ನಾಮಬಲದ ಮೇಲೆ ಗೆಲುವಿಗಾಗಿ ಹಂಬಲಿಸುತ್ತಿದ್ದಾರೆ. ಕಾಂಗ್ರೆಸ್‍ನಿಂದ ಲಿಂಗಾಯತ ಸಮುದಾಯದ ರಾಯಸಂದ್ರ ರವಿಕುಮಾರ್ ಸ್ಪರ್ಧಿಸಿರೋದು ಬಿಜೆಪಿಗೆ ಇಕ್ಕಟ್ಟು ಸೃಷ್ಟಿಸಿದೆ. ಅಜಮಾಸು 30 ಸಾವಿರದಷ್ಟಿರುವ ಲಿಂಗಾಯತ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇಬ್ಭಾಗವಾಗಲಿದ್ದು ಇದು ಲಾಭ ಜೆಡಿಎಸ್‍ಗೆ ತರಲಿದೆ ಎನ್ನಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿಯಿರುವ ಇಲ್ಲಿ, ಇತ್ತೀಚೆಗೆ ಮಾಜಿ ಶಾಸಕ ನಿಂಗಪ್ಪನವರು ಜೆಡಿಎಸ್ ಸೇರಿರೋದು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಡಿ.ನಾಗರಾಜಯ್ಯ

ಕುಣಿಗಲ್‍ನಲ್ಲಿ ಪೈಪೋಟಿ ಇರೋದು ಜೆಡಿಎಸ್‍ನ ಹಾಲಿ ಶಾಸಕ ಡಿ.ನಾಗರಾಜಯ್ಯ ಮತ್ತು ಕಾಂಗ್ರೆಸ್‍ನ ಡಾ.ರಂಗನಾಥ್ ನಡುವೆ. ಅಂದಹಾಗೆ ಈ ರಂಗನಾಥ್, ಕೈ ಪಾರ್ಟಿಯ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‍ರ ಹತ್ತಿರದ ಸಂಬಂಧಿ. ಕಳೆದ 4 ವರ್ಷಗಳಿಂದಲೇ ಕ್ಷೇತ್ರದಲ್ಲಿ ಓಡಾಡಿಕೊಂಡು ಜನರ ಒಡನಾಟ ಹೊಂದಿರುವ ರಂಗನಾಥ್, ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್‍ರ ಪ್ರಭಾವದ ನೆರಳಲ್ಲೇ ಸ್ಪರ್ಧೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್‍ನ ಮಾಜಿ ಶಾಸಕ ರಾಮಸ್ವಾಮಿಗೌಡರು ಪ್ರಚಾರದಿಂದ ಹಿಂದೆ ಸರಿದಿರುವುದು ರಂಗನಾಥ್‍ಗೆ ಹಿನ್ನಡೆಯಾಗಿದೆ. ಇತ್ತ ನಾಗರಾಜಯ್ಯನವರ ಸರಳ ಸ್ವಭಾವದ ವ್ಯಕ್ತಿತ್ವ ಮತ್ತು ಭರಾಟೆಯ ಪ್ರಚಾರಗಳು ಜೆಡಿಎಸ್‍ಗೆ ಮತ್ತೊಂದು ಗೆಲುವಿನ ಆಸೆ ಚಿಗುರಿಸಿವೆ. ಬಿಜೆಪಿಯ ಡಿ.ಕೃಷ್ಣಕುಮಾರ್ ಸ್ಪರ್ಧೆ ಹೆಚ್ಚೇನೂ ಪರಿಣಾಮ ಬೀರುವಂತದ್ದಲ್ಲ ಎನ್ನಲಾಗುತ್ತಿದೆ.

ತಿಪಟೂರಿನಲ್ಲಿ ಕಾಂಗ್ರೆಸ್ ಟಿಕೇಟ್ ಹಂಚಿಕೆಯಲ್ಲಿ ಮಾಡಿಕೊಂಡ ಯಡವಟ್ಟು ಕಾಂಗ್ರೆಸ್‍ಗೆ ಕೊಂಚ ಹಿನ್ನಡೆ ಉಂಟು ಮಾಡಿತ್ತು. ವಯಸ್ಸು, ಅನಾರೋಗ್ಯ ಮತ್ತು ಪರ್ಸನಲ್ ಭಾನ್ಗಡಿಗಳ ಕಾರಣಕ್ಕೆ ಹಾಲಿ ಶಾಸಕ ಷಡಕ್ಷರಿಗೆ ಬಿ ಫಾರಂ ದಯಪಾಲಿಸದೆ ನಂಜಾಮರಿಗೆ ಟಿಕೇಟ್ ಘೋಷಿಸಲಾಗಿತ್ತು. ಆದರೆ ಯಾವಾಗ ಷಡಕ್ಷರಿ ಪಟಾಲಮ್ಮಿನಿಂದ ಪ್ರತಿಭಟನೆಯ ಕಾವು ಹೆಚ್ಚಾಯ್ತೊ, ಆಗ ಎಚ್ಚೆತ್ತುಕೊಂಡ ಪಕ್ಷ ಷಡಕ್ಷರಿಗೆ ಟಿಕೆಟ್ ನಿಕ್ಕಿ ಮಾಡಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ನಂಜಾಮರಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರೋದು ಕಾಂಗ್ರೆಸ್‍ನ ಮತಗಳನ್ನು ವಿಭಜಿಸುವ ಅಪಾಯ ತಂದಿಟ್ಟಿದೆ. ಬಿಜೆಪಿಯಿಂದ ಮಾಜಿ ಶಾಸಕ ಬ್ರಾಹ್ಮಣರ ಬಿ.ಸಿ.ನಾಗೇಶ್ ಮತ್ತು ಜೆಡಿಎಸ್‍ನಿಂದ ಮಾಜಿ ಪೊಲೀಸಪ್ಪ ಲೋಕೇಶ್ವರ್ ಕಣದಲ್ಲಿದ್ದಾರೆ. ಆದರೆ ನೇರ ಸ್ಪರ್ಧೆ ಇರೋದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ.

ಸುರೇಶ್ ಬಾಬು

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 3 ಬಾರಿ ಶಾಸಕರಾಗಿರುವ ಜೆಡಿಎಸ್‍ನ ಸುರೇಶ್‍ಬಾಬು, ಜಿಲ್ಲಾ ಉಸ್ತುವಾರಿ ಮಂತ್ರಿ ಟಿ.ಬಿ.ಜಯಚಂದ್ರರ ಅವರ ಮಗ ಸಂತೋಷ್, ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ನಡುವೆ ತ್ರಿಕೋನ ಪೈಪೋಟಿಯಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರದಿಂದ ಬಂದಿದ್ದ 58 ಸಾವಿರ ಮತಗಳ ಮೇಲೆ ನಂಬಿಕೆಯಿಟ್ಟುಕೊಂಡು ತನ್ನ ವರ್ಚಸ್ಸನ್ನೆಲ್ಲ ಫಣಕ್ಕಿಟ್ಟು ಪ್ರಚಾರ ಮಾಡುತ್ತಿರುವ ಜಯಚಂದ್ರ ಅವರು ತಮ್ಮದೇ ಒಕ್ಕಲಿಗ ಮತ್ತು ಸಿದ್ರಾಮಯ್ಯನವರ ಕುರುಬ ಸಮುದಾಯದ ಮತಗಳನ್ನು ವಿಪರೀತ ನಂಬಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಚುನಾವಣೆಯ ರೇಸಿನಲ್ಲಿ ಜೆಡಿಎಸ್‍ನ ಸುರೇಶ್ ಬಾಬು ಮುಂಚೂಣಿಯಲ್ಲಿ ಕಂಡುಬರುತ್ತಿದ್ದಾರೆ.

ರಫೀಕ್

ತುಮಕೂರು ನಗರದಲ್ಲಿ ಕಾಂಗ್ರೆಸ್‍ನ ಹಾಲಿ ಶಾಸಕ ಡಾ.ರಫೀಕ್ ಅಹಮದ್, ಜೆಡಿಎಸ್‍ನ ಗೋವಿಂದರಾಜು ಮತ್ತು ಬಿಜೆಪಿಯ ಜ್ಯೋತಿ ಗಣೇಶ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ರಫೀಕ್ ಅಹಮದ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತ್ತು ದಲಿತ ಮತಗಳನ್ನು ನಂಬಿಕೊಂಡಿದ್ದಾರೆ. ಜೆಡಿಎಸ್‍ನ ಗೋವಿಂದರಾಜು ಒಕ್ಕಲಿಗ ಮತಗಳನ್ನು ಅವಲಂಬಿಸಿದ್ದರೆ, ಮಾಜಿ ಲೋಕಸಭಾ ಸದಸ್ಯ ಬಸವರಾಜ್‍ರವರ ಮಗ ಜ್ಯೋತಿ ಗಣೇಶ್ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಸೊಗಡು ಶಿವಣ್ಣ ಸೇರಿದಂತೆ ಅನೇಕ ಬಿಜೆಪಿಯ ಹಿರಿಯ ನಾಯಕರು ತಟಸ್ಥವಾಗಿರೋದು ಕಾಂಗ್ರೆಸ್‍ಗೆ ನೆರವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಕೊರಟಗೆರೆ ಈ ಸಲ ವಿಶೇಷ ಗಮನ ಸೆಳೆದಿದೆ. ಯಾಕೆಂದರೆ ಇದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ರ ಕರ್ಮಭೂಮಿ. ಕಳೆದ ಸಲ ಅಚ್ಚರಿಯ ಫಲಿತಾಂಶ ಹೊರಬಿದ್ದು ಪರಮೇಶ್ವರ್, ಜೆಡಿಎಸ್‍ನ ಸುಧಾಕರ್ ಲಾಲ್ ಎದುರು ಮುಗ್ಗರಿಸಿದ್ದರು. ಈ ಬಾರಿ ಅವರು ಕ್ಷೇತ್ರವನ್ನೇ ಬಿಟ್ಟು ಬೆಂಗಳೂರಿನತ್ತ ಮುಖ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿಗಳು ಕೇಳಿ ಬಂದವಾದರು ಕೊನೆಗೇ ಕೊರಟಗೆರೆಯಿಂದಲೇ ಕಣಕ್ಕಿಳಿದಿದ್ದಾರೆ. ಜೊತೆಗೆ ಕಳೆದ ಸಲದ ಆಲಸ್ಯದಿಂದ ಹೊರಬಂದಿರುವ ಅವರು ಸ್ಪರ್ಧೆಯಲ್ಲಿ ಜೆಡಿಎಸ್‍ನ ಸುಧಾಕರ್, ಬಿಜೆಪಿಯ ಹುಚ್ಚಯ್ಯನಿಗಿಂತ ಮುಂಚೂಣಿಯಲ್ಲಿದ್ದಾರೆ.

ಮಧುಗಿರಿಯಲ್ಲಿ ಹಾಲಿ ಕೈ ಶಾಸಕ ಕೆ.ಎನ್.ರಾಜಣ್ಣ ಮತ್ತು ಜೆಡಿಎಸ್‍ನ ವೀರಭದ್ರಯ್ಯ ನಡುವೆ ಪೈಪೋಟಿಯಿದೆ. ರಾಜಣ್ಣ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದರೆ, ವೀರಭದ್ರಯ್ಯ ಕಳೆದ ಸಲದ ಸೋಲಿನ ಅನುಕಂಪ ಹಾಗೂ ದೇವೇಗೌಡರ ಕುಟುಂಬದ ವರ್ಚಸ್ಸನ್ನು ನಂಬಿಕೊಂಡು ಪೈಪೋಟಿ ಒಡ್ಡುತ್ತಿದ್ದಾರೆ.

ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್‍ನ ತಿಮ್ಮರಾಯಪ್ಪ, ಕಾಂಗ್ರೆಸ್‍ನ ವೆಂಕಟರಮಣಪ್ಪ ಮತ್ತು ಬಿಜೆಪಿಯ ಬಲರಾಂ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಜೆಡಿಎಸ್‍ಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದೆ. ಒಟ್ಟಾರೆ ತುಮಕೂರು ಜಿಲ್ಲೆಯ ಎಲೆಕ್ಷನ್ ರಾಜಕಾರಣ ಜಾತಿ ಆಧಾರಿತ ಸಮೀಕರಣದಲ್ಲೇ ಸಾಗುತ್ತಿದೆಯಾದರು ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಪ್ರಚೋದಿತ ಮೋದಿ ಮೇನಿಯಾ, ದೇವೇಗೌಡರ ಕೌಟುಂಬಿಕ ವರ್ಚಸ್ಸಿನ ಹಿಡಿತಕ್ಕೂ ಎಡತಾಕುತ್ತಿವೆ. ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಲಾಭವಾಗುವ ಸೂಚನೆಗಳಿದ್ದು ಜೆಡಿಎಸ್ ಎರಡನೇ ಸ್ಥಾನ ಮತ್ತು ಬಿಜೆಪಿ ಮೂರನೇ ಸ್ಥಾನ ಗಳಿಸಬಹುದು. ಆದರೆ ಇದೆಲ್ಲವೂ ಕೊನೇಕ್ಷಣದಲ್ಲಿ ನಡೆಯುವ ಪೊಲಿಟಿಕಲ್ ಹೈಡ್ರಾಮಾದ ನಿಬಂಧನೆಗೆ ಒಳಪಟ್ಟಿರುತ್ತವೆ.

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...