12 ಅಂಕಿಗಳ ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣಗಳ ಅವರವರ ಖಾತೆಗೆ ಕಡ್ಡಾಯವಾಗಿ ಲಿಂಕ್ ಮಾಡಲು ನಿರ್ದೇಶನ ನೀಡಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಆಧಾರ್ ನಂಬರನ್ನು ಸಾಮಾಜಿಕ ಜಾಲತಾಣಗಳ ಖಾತೆಗೆ ಲಿಂಕ್ ಮಾಡುವ ವಿಚಾರದ ಬಗ್ಗೆ ಈಗಾಗಲೇ ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಹಾಗಾಗಿ ಅಂತದ್ದೇ ಪ್ರಕರಣವನ್ನು ನಾನು ಮತ್ತೆ ಕೈಗೆತ್ತಿಕೊಳ್ಳಲಾರೆ. ನೀವು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಎಂದು ದೂರುದಾರರಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಬಹು ದಿನಗಳಿಂದ ಸಾಮಾಜಿಕ ಜಾಲತಾಣಗಳ ಖಾತೆಗೆ ಆಧಾರ್ ನಂಬರ್ ಲಿಂಕ್ ವಿಚಾರ ಸುದ್ದಿಯಲ್ಲಿದೆ. ಆನ್ ಲೈನ್ ಕಿರುಕುಳ, ನಿಂದನೆ, ಸುಳ್ಳು ಸುದ್ದಿ ಹಾಗೂ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಸಮಾಜದ ಸ್ವಾಸ್ಥ್ಯ ಕೆಡಿಸುವ ಪೋಸ್ಟ್ ಹಾಕುವುದನ್ನು ತಡೆಯಲು ಫೇಸ್ ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ್ ಲಿಂಕ್ ಮಾಡಬೇಕೆಂಬುದು ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರ ವಾದವಾಗಿತ್ತು.
`ಎಲ್ಲಾ ಕೇಸ್ ಗಳು, ವಿಷಯಗಳನ್ನು ಸುಪ್ರೀಂಕೋರ್ಟ್ ಗೆ ತರಬೇಕು ಎಂದೇನಿಲ್ಲ. ಆಧಾರ್ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ನೀವು ಅಲ್ಲಿಗೆ ಹೋಗಿ’ ಎಂದು ಅರ್ಜಿದಾರರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮದ್ರಾಸ್ ಹೈಕೋರ್ಟಿನ ಮುಂದೆ ಇದೇ ವಿಷಯಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳು ವಿಚಾರಣೆಯಲ್ಲಿವೆ. ಈಗಾಗಲೇ ‘ಸಾಮಾಜಿಕ ಜಾಲತಾಣಗಳ ಖಾತೆಗೆ ಆಧಾರ್ ಲಿಂಕ್ ಮಾಡುವ ಅಗತ್ಯವಿಲ್ಲ. ಆದರೆ ಕೆಲ ಸಂದೇಶಗಳ ಮೂಲಗಳನ್ನು ಪತ್ತೆ ಹಚ್ಚುವ ಸಂಭಾವ್ಯತೆಗೆ ಸಂಬಂಧಿಸಿದಂತೆ ಅರ್ಜಿಯನ್ನು ವಿಸ್ತರಿಸಬಹುದು’ ಎಂದು ಹೇಳಿರುವ ಹೈಕೋರ್ಟ್ ಆ ದಿಶೆಯಲ್ಲೇ ವಿಚಾರಣೆ ನಡೆಸುತ್ತಿದೆ. ಅಂದಹಾಗೆ, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್ ಗಳ ಮುಂದೆಯೂ ಇಂತಜಹ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ.
ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಫೇಸ್ ಬುಕ್ ಸಂಸ್ಥೆ `ಬೇರೆಬೇರೆ ಹೈಕೋರ್ಟುಗಳಲ್ಲಿ ಒಂದೇ ಬಗೆಯ ಪ್ರಕರಣಗಳು ವಿಚಾರಣೆ ನಡೆದು, ವ್ಯತಿರಿಕ್ತ ತೀರ್ಪುಗಳು ಬರುವುದರ ಬದಲು ಎಲ್ಲವನ್ನೂ ಒಟ್ಟುಗೂಡಿಸಿ ಸರ್ವೋಚ್ಛ ನ್ಯಾಯಾಲಯವೇ ಕೈಗೆತ್ತಿಕೊಳ್ಳಬೇಕು’ ಎಂಬ ಮನವಿ ಮಾಡಿಕೊಂಡಿತ್ತು. ಆದರೆ ಸುಪ್ರೀಂ ಕೋರ್ಟ್ ಅದನ್ನೂ ಪುರಸ್ಕರಿಸಿಲ್ಲ.
ಇನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಮುಂದೆ ಹಾಜರಾಗಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ನಿಯಮಾವಳಿಗಳನ್ನು ರೂಪಿಸುತ್ತಿರುವ ಪ್ರಕ್ರಿಯೆಯನ್ನು ವಿವರಿಸಿದರು, ಆದರೆ ಅದನ್ನು ಅಂತಿಮಗೊಳಿಸಲು ಎಷ್ಟು ಕಾಲಾವಧಿ ಬೇಕಾಗುವುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಾಗದು ಎಂದಿದ್ದಾರೆ. ಇತ್ತ ತಮಿಳುನಾಡು ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು `ಹೈಕೋರ್ಟ್ ನ ಮುಂದೆ ನಡೆಯುತ್ತಿರುವ ವಿಚಾರಣೆಗೆ ಪದೇಪದೇ ಗೈರು ಹಾಜರಾಗುತ್ತಿರುವ ಸೋಶಿಯಲ್ ಮೀಡಿಯಾ ಕಂಪನಿಗಳು ಈಗ ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸಬೇಕೆಂದು ಮನವಿ ಸಲ್ಲಿಸಿವೆ. ಆದರೆ ಹೈಕೋರ್ಟ್ ಗಳೇ ವಿಚಾರಣೆ ನಡೆಸಲು ಸರ್ವೋಚ್ಛ ನ್ಯಾಯಾಲಯ ಅನುವು ಮಾಡಿಕೊಡಬೇಕು’ ಎಂಬ ವಾದ ಮಂಡಿಸಿದ್ದರು. ಅವರ ವಾದವನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ಹೈಕೋರ್ಟುಗಳಿಗೇ ತೆರಳುವಂತೆ ನಿರ್ದೇಶನ ನೀಡಿದೆ.