ಸರ್ಕಾರಿ ನೌಕರನಾದ ನಾತು ಶಂಕರ ಲಮಾಣಿ ಹಾಗೂ ಅರಕೇರಿ ಜಿಲ್ಲಾ ಪಂಚಾಯಿತಿ ಸದಸ್ಯನಾದ ರಾಜಶೇಖರ ಶಂಕರ ಲಮಾಣಿ (ಪವಾರ) ಈ ಸಹೋದರ ಕುಳಗಳು, ಬಡವರಿಗೆ ದೊರಕಬೇಕಿರುವ ಜಿಲ್ಲಾ ಪಂಚಾಯಿತಿ ಅಡಿಯ ಎಲ್ಲ ಯೋಜನೆಗಳನ್ನು ತಾವುಗಳೇ ಬೇನಾಮಿಯಾಗಿ ಪಡೆದುಕೊಂಡು ಸರ್ಕಾರಿ ಬೊಕ್ಕಸಕ್ಕೆ ಕನ್ನ ಹಾಕಿದ್ದಾರೆ.
ಸರ್ಕಾರಿ ಯೋಜನೆ, ಬೇನಾಮಿ ಖಜಾನೆ:
ಅಸಲಿಗೆ ಈ ಸಹೋದರರಿಗೆ ಸರ್ಕಾರಿ ಯೋಜನೆ ಪಡೆದುಕೊಳ್ಳುವ ಯಾವ ಅರ್ಹತೆಯೂ ಇಲ್ಲ. ಆಯಕಟ್ಟಿನ ಸರ್ಕಾರಿ ನೌಕರನಾದ ನಾತು ಶಂಕರ ಲಮಾಣಿ ಸದ್ಯ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ನೀರಾವರಿ ನಿಗಮದ ಇಲಾಖೆಗೆ ವರ್ಗಗೊಂಡಿದ್ದಾನೆ. ಈತ ಈ ಹಿಂದೆ ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರನಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ವಿಜಯಪುರ ಜಿಲ್ಲೆಯ ಜಾಲಗೇರಿಗೆ ಹೊಂದಿಕೊಂಡಂತೆ ಸರ್ವೇ ನಂ.391/1 ಹತ್ತಿರದ ಹಳ್ಳಕ್ಕೆ ಎಸ್ಸಿಪಿ, ಟಿಎಸ್ಪಿ ಯೋಜನೆ ಅಡಿ 25 ಲಕ್ಷ ರೂ.ಗಳ ಮೊತ್ತಗಳಲ್ಲಿ ತೆರೆದ ಬಾವಿಯನ್ನು ಮಂಜೂರಾತಿ ಮಾಡಿಸಿಕೊಂಡಿದ್ದು, ಲೋಗಾಂವಿ ಸರಹದ್ದಿನ ಸರ್ವೇ ನಂ.31/1 ರಲ್ಲಿ ಬಾವಿ ತೋಡುತ್ತಿದ್ದಾನೆ. ಬಾವಿ ತೋಡಲು ಮಂಜೂರು ಮಾಡಿಸಿಕೊಂಡ ಜಾಗವೊಂದಾದರೆ, ಇನ್ನು ಬಾವಿ ತೋಡಿರುವ ಜಾಗವೇ ಬೇರೆ. ಆದರೆ ಅಸಲಿಗೆ ಈ ಯೋಜನೆಗೆ ಈತ ಅರ್ಹನಲ್ಲದಿದ್ದರೂ, ತನ್ನ ಅಧಿಕಾರ ಹಾಗೂ ರಾಜಕೀಯ ಬಲವನ್ನು ಬಳಸಿಕೊಂಡು ಬಡವರಿಗೆ ಲಭಿಸಬೇಕಿರುವ ಲಕ್ಷಾಂತರ ರೂ.ಗಳ ಯೋಜನೆಯನ್ನು ತನ್ನ ಹೆಸರಿನಲ್ಲಿ ಮಾಡಿಕೊಂಡು ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿದ್ದಾನೆ.
ಈಗಾಗಲೇ ಇಲ್ಲಿನ ಲೋಗಾಂವಿ ಸರಹದ್ದಿನಲ್ಲಿ ಸರ್ಕಾರದ ಬಾವಿ ಮತ್ತು ಕೊಳವೆ ಬಾವಿಗಳಿದ್ದು, ಇವುಗಳ ಪಕ್ಕದಲ್ಲಿಯೇ ಭ್ರಷ್ಟ ಇಂಜಿನಿಯರ್ ನಾತು ಶಂಕರ ಲಮಾಣಿ (ಪವಾರ) ಬಾವಿ ತೋಡುತ್ತಿದ್ದಾನೆ. ಸರ್ಕಾರದ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಅಕ್ರಮವಾಗಿ ಬಾವಿ ತೋಡುತ್ತಿರುವುದನ್ನು ಕಂಡ ಗ್ರಾಮದ ಜನರು ಈತನ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈತನ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ.
ಅಣ್ಣ ಭ್ರಷ್ಟ, ತಮ್ಮ ಪರಮಭ್ರಷ್ಟ:
ನಾತು ಶಂಕರ ಲಮಾಣಿ (ಪವಾರ)ಯ ಖಾಸಾ ತಮ್ಮನಾದ ರಾಜಶೇಖರ ಶಂಕರ ಪವಾರ ಅರಕೇರಿ ಜಿಲ್ಲಾ ಪಂಚಾಯಿತಿ ಮತಕ್ಷೇತ್ರದ ಕಾಂಗ್ರೆಸ್ ಸದಸ್ಯನಾಗಿದ್ದು, ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿರುವುದು ಟಾರ್ಚ್ ಹಾಕಿ ಹುಡುಕಿದರೂ ಸಿಗುವುದಿಲ್ಲ. ತನ್ನ ಅಣ್ಣ ನಾತುನಂತೆಯೇ ಜಾಲಗೇರಿಯ ಸರ್ವೇ ನಂ.394/4 ರಲ್ಲಿ ರಾಜಶೇಖರ ಶಂಕರ ಪವಾರ 25 ಲಕ್ಷ ರೂ.ಗಳ ವೆಚ್ಚದಲ್ಲಿ ಎಸ್ಸಿಪಿ, ಟಿಎಸ್ಪಿಯಡಿ ತೆರೆದ ಬಾವಿಯನ್ನು ಮಂಜೂರು ಮಾಡಿಕೊಂಡಿದ್ದಾನೆ. ಇದೂ ಕೂಡ ನಿಯಮ ಬಾಹಿರ. ಈ ಕ್ಷೇತ್ರದ ಜಿಪಂ ಸದಸ್ಯನಾಗಿ ಬಡವರಿಗೆ ದೊರಕಿಸಿಕೊಡಬೇಕಾದ ಯೋಜನೆಗಳನ್ನು ವೈಯಕ್ತಿಕವಾಗಿ ತಾನೇ ಬಳಸಿಕೊಂಡಿರುವುದು ಜಿಲ್ಲಾ ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಭ್ರಷ್ಟರಿಬ್ಬರಿಗೂ ಮಾಜಿ ಸಚಿವ, ಶಾಸಕ ಎಂ.ಬಿ. ಪಾಟೀಲರ ಅಭಯ ಹಸ್ತ ಇದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.
ಅಪರ ಡಿಸಿ ಸೂಚಿಸಿದರು ಕ್ಯಾರೆ ಅನ್ನದ ಸಿಇಒ
ಈ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ವಿಜಯಪುರ ಅಪರ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮೇ- 21, 2019 ರಂದು ಸೂಚನೆ ನೀಡಿದ್ದಾರೆ. ಆದರೆ ಅಪರ ಜಿಲ್ಲಾಧಿಕಾರಿ ಸೂಚನೆಗೆ ಜಿ.ಪಂ. ಸಿಇಒ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಕೂಡಲೇ ಜಿಪಂ ಸಿಇಒ ಕಿಶೋರ ವಿಕಾಸ ಸುರಳಕರ ಎಚ್ಚೆತ್ತುಕೊಂಡು ಈ ಭ್ರಷ್ಟರ ವಿರುದ್ಧದ ತನಿಖೆಗೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.