ದೇಶದ ತುಂಬ ದ್ವೇಷ ಹರಡುವ ಶಕ್ತಿಗಳು ಹೆಚ್ಚುತ್ತಿವೆ. ಅಸಹಿಷ್ಣುತೆ ಮನೆ ಮಾಡಿದೆ. ಯುದ್ದೋನ್ಮಾದದ ವಾತಾವರಣ ಸೃಷ್ಟಿಯಾಗಿದೆ. ದೇಶದಲ್ಲಿ ಶಾಂತಿ, ಸುವ್ಯವಸ್ಥೆ,, ಜನರ ನಡುವೆ ಪ್ರೀತಿ, ಸಹಬಾಳ್ವೆಯನ್ನು ಬಿತ್ತಬೇಕಾದವರೇ ದ್ವೇಷದ ಮಾತುಗಳನ್ನಾಡುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಾದರೆ ಮಹಾತ್ಮ ಗಾಂಧಿ ಅವರ ಅಹಿಂಸಾ ಮಾರ್ಗ ಅನುಸರಿಸುವುದು ಬಹಳ ಮುಖ್ಯವಾಗಿದೆ. ದ್ವೇಷವನ್ನು ಅಳಿಸಿ ಪ್ರೀತಿಯನ್ನು ಹಂಚುವಂತಹ ಕೆಲಸಕ್ಕೆ ಎಲ್ಲರೂ ಮುಂದಾಗಬೇಕೆಂಬ ಪಣವನ್ನು ಗಾಂಧಿ ಹುತಾತ್ಮ ದಿನವಾದ ಜನವರಿ 30ರಂದು ತೊಟ್ಟರು.
ಜನಪರ ಸಂಘಟನೆಗಳ ಒಕ್ಕೂಟದಿಂದ ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆಯನ್ನು ಮೇಣದ ಬತ್ತಿಗಳನ್ನು ಹಚ್ಚಿ ಮಾನವೀಯತೆ ಸಾಕಾರಗೊಳ್ಳಲಿ. ಶಾಂತಿ ಮತ್ತು ಅಹಿಂಸೆಯೇ ನಮ್ಮ ಧ್ಯೇಯ, ನಮ್ಮಲ್ಲಿರುವುದು ಒಂದೇ ರಕ್ತ ನಾವು ಮನುಷ್ಯರು ಎಂಬ ಘೋಷಣೆಗಳನ್ನು ಕೂಗಿದರು. ಇದು ಬೆಳಕು. ಈ ಬೆಳಕಿನಲ್ಲಿ ಮಾನವೀಯತೆ ಸಾರೋಣ. ಯಾವುದೇ ಜಾತಿ, ಮತ, ಧರ್ಮ ಮತ್ತು ಪ್ರಾದೇಶಿಕತೆ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಶಕ್ತಿಗಳ ಬಗ್ಗೆ ಎಚ್ಚರದಿಂದ ಇರೋಣ ಎಂಬ ಸಂದೇಶಗಳನ್ನು ಸಾರಲಾಯಿತು.
ಭಾಷಣಕಾರರ ಮಾತುಗಳೆಲ್ಲವೂ ಗಾಂಧೀ ಅವರ ಅಹಿಂಸೆ ಕುರಿತಾಗಿದ್ದವು.ನಮ್ಮದು ಕೊಲ್ಲುವ ಸಂಸ್ಕೃತಿಯಲ್ಲ. ದ್ವೇಷದ ಸಂಸ್ಕೃತಿಯಲ್ಲ.ಬದಲಿಗೆ ಪ್ರೀತಿ ಮತ್ತು ಸಹನೆಯ, ಧರ್ಮನಿರಪೇಕ್ಷೆಯ ಸಂವಿಧಾನ ಹೊಂದಿರುವ ದೇಶ. ನಾವು ಬಾಳ್ವೆಯಿಂದ ಬದುಕಬೇಕು. ಯುದ್ದೋನ್ಮಾದಕ್ಕೆ ಅವಕಾಶ ಕೊಡಬಾರದು. ಹಿಂಸೆ ನಮ್ಮ ಸಂಸ್ಕೃತಿಯಲ್ಲ. ಹಿಂಸೆ ಶಾಶ್ವತ ಪರಿಹಾರವನ್ನು ತಂದುಕೊಡುವುದಿಲ್ಲ. ಹಿಂಸೆಯಿಂದ ದುಃಖ ಹೆಚ್ಚುತ್ತದೆ. ಹಿಂಸೆ ನೋವನ್ನು ತರಿಸುತ್ತದೆ. ಹೀಗಾಗಿ ಗಾಂಧೀ ಅವರ ಅಹಿಂಸೆ ಮಾರ್ಗ ಸುಂದರ ಸಮಾಜವನ್ನು ನಿರ್ಮಾಣ ಮಾಡುತ್ತದೆ. ಅತ್ತ ನಾವು ಹೋಗಬೇಕು ಎಂಬುದನ್ನು ಜನಪರ ಚಿಂತಕೆ ಕೆ.ದೊರೈರಾಜ್ ಸಾರಿ ಹೇಳಿದರು.
ಗಾಂಧೀಜಿ ಸುಳ್ಳನ್ನು ಹೇಳಬೇಡಿ ಅಂದ್ರು ಆದರೆ ಸುಳ್ಳುಕೋರರು ಜಾಸ್ತಿಯಾಗಿದ್ದಾರೆ. ಹಿಂಸೆ ಮಾಡಬಾರದು ಅಂದ್ರು, ಆದರೆ ಹಿಂಸೆಯ ಮಾತುಗಳನ್ನಾಡುವವರು ಹೆಚ್ಚಾಗಿದ್ದಾರೆ. ಸತ್ಯವನ್ನು ನುಡಿಯಬೇಕು ಅಂದ್ರು, ಆದರೆ ಅಸತ್ಯವನ್ನೇ ಮನೆಮಾತಾಗಿಸಿಕೊಂಡವರು ಹೆಚ್ಚು. ಗಾಂಧೀ ಚಿಂತನೆಗಳನ್ನು ಹೇಳುತ್ತಲೇ, ಹಿಂಸೆಗೂ ಪ್ರಚೋದಿಸುವ ಶಕ್ತಿಗಳು ಸಮಾಜದಲ್ಲಿ ದ್ವೇಷವನ್ನೂ ಹರಡುತ್ತಾ ಜನರ ನೆಮ್ಮದಿಗೆ ಭಂಗ ತರುತ್ತಿವೆ. ಇದು ಶಾಶ್ವತವಲ್ಲ. ಆದರೂ ಕೋಮುವಾದಿ ಶಕ್ತಿಗಳು ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿವೆ. ನಾವು ಪ್ರೀತಿಯೊಂದನ್ನು ಹಂಚಬೇಕಾಗಿದೆ ಎಂಬಂತಹ ಮಾತುಗಳನ್ನು ಗಣ್ಯರು ಹೇಳಿದರು.
ಟೌನ್ ಹಾಲ್ ನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನೂರಾರು ಕಾರ್ಯಕರ್ತರು ಯುವ ಮುಖಂಡ ತಾಜುದ್ದೀನ್ ಶರೀಪ್ ನೇತೃತ್ವದಲ್ಲಿ ಗಾಂಧೀ ಹುತಾತ್ಮ ದಿನವನ್ನು ಆಚರಿಸಲಾಯಿತು.ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಕೊಂದು ಹಾಕಿದರು. ಗೋಡ್ಸೆ ಸಂತತಿ ಇಂದಿಗೂ ತನ್ನ ಮಸಲತ್ತು ನಡೆಸಿದೆ. ಕೋಮುವಾದಿ ಶಕ್ತಿಗಳು ಆಳ್ವಿಕೆ ನಡೆಸುತ್ತಿದ್ದು ಶಾಂತಿಯುತ ಪ್ರತಿಭಟನೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಕೊಲ್ಲಲಾಗಿದೆ. ಇಂತಹ ಘಟನೆಗಳು ನಡೆಯಬಾರದು. ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಗಾಂಧೀಯ ವಿಚಾರಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ ಎಂಬುದನ್ನು ಭಾಷಣಕಾರರು ಬೊಟ್ಟು ಮಾಡಿ ಹೇಳಿದರು.
CAA, NRC ಮತ್ತು NPR ಕಾಯ್ದೆಗಳು ಒಡೆದು ಆಳುವ ನೀತಿಗೆ ಪೂರಕವಾಗಿವೆ. ಅಲ್ಪಸಂಖ್ಯಾತ ಸಮುದಾಯ, ಬಡವರು, ದಲಿತರಲ್ಲಿ ಆತಂಕವನ್ನುಂಟು ಮಾಡಿದೆ. ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಸಮಾಜವನ್ನು ಛಿದ್ರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಕೇಂದ್ರ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಸಮಾಜವನ್ನು ಒಡೆಯುವ ಕೆಲಸವನ್ನು ಬಿಡಬೇಕು. ಸಂವಿಧಾನದ ಆಶಯಗಳಂತೆ ಸರ್ಕಾರವನ್ನು ನಡೆಸಬೇಕು ಎಂದು ಆಗ್ರಹಿಸಲಾಯಿತು.
ನಮ್ಮ ದೇಶಕ್ಕಿಂದು ಒದಗಿರುವ ವಿಷಮ ಪರಿಸ್ಥಿತಿಯಿಂದ, ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮಾತ್ರ ನಮ್ಮಂನ್ನಿಂದು ಪಾರುಮಾಡಬಲ್ಲವು.