ಸರ್ ಸಿದ್ಧಪ್ಪ ಕಂಬಳಿಯವರು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಕೀಲಿ ವೃತ್ತಿ ಆರಂಭಿಸಿದಾಗ ಆ ವ್ರತ್ತಿ ಸಂಪೂರ್ಣ ಬ್ರಾಹ್ಮಣರ ಹಿಡಿತದಲ್ಲಿತ್ತು. ಬ್ರಾಹ್ಮಣರಿಗೆ ಸವಾಲು ಹಾಕಿ ಸರ್ ಸಿದ್ದಪ್ಪ ಕಂಬಳಿಯವರು ಆ ವೃತ್ತಿಯಲ್ಲಿ ತಮ್ಮ ಛಾಪನ್ನು ಸ್ಥಾಪಿಸಿದ್ದರು. ಮುಂದೆ ಅವರು ಮುಂಬೈ ಸರಕಾರದಲ್ಲಿ ಏಳು ಖಾತೆಗಳ ಸಚಿವರಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನೌಕರಿ ಕೊಟ್ಟದ್ದು ಮತ್ತು ಪ್ರಥಮ ಬಾರಿಗೆ ಬ್ರಾಹ್ಮಣೇತರ ಐಎಎಸ್ ಅಧಿಕಾರಿಗಳನ್ನು ನೇಮಿಸುವ ಕೆಲಸ ಆರಂಭಿಸಿದ್ದು ಜನಜನಿತ.
ಬ್ರಾಹ್ಮಣೇತರರ ಅಭಿವೃದ್ದಿ ವಿಚಾರದಲ್ಲಿ ಸರ್ ಸಿದ್ದಪ್ಪ ಕಂಬಳಿಯವರು ಅಂದು ಶಾಹು ಮಹಾರಾಜರೊಂದಿಗೆ ಕೂಡಿಕೊಂಡು ಯೋಜನೆ ರೂಪಿಸಿದ್ದರು. ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರ ವಿರುದ್ಧ ಬಹುದೊಡ್ಡ ಬ್ರಾಹ್ಮಣೇತರರ ಆಂದೋಲನವನ್ನೇ ಆರಂಭಿಸಿದ್ದರು. ಶಾಹು ಮಹಾರಾಜರು ಕಂಬಳಿಯವರನ್ನು ನೋಡಲು ಪುಣೆಯ ಅವರ ನಿವಾಸಕ್ಕೆ ಸ್ವತಃ ಹೋದಾಗ ಕಂಬಳಿಯವರಿಗೆ ಆಶ್ಚರ್ಯವಾಗಿತ್ತು.
ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಚಿತ್ಪಾವನ ಬ್ರಾಹ್ಮಣರ ಪುಂಡಾಟಿಕೆಗೆ ತಡೆ ಹಾಕಿದವರು ಸಿದ್ದಪ್ಪನವರು. ಒಮ್ಮೆ ಡೆಕ್ಕನ್ ಕಾಲೇಜಿನಲ್ಲಿ ರಾಜ್ಯಪಾಲರ ಕಾರ್ಯಕ್ರಮಕ್ಕೆ ಮೊದಲು ಬಾಂಬ್ ಸ್ಪೋಟಗೊಂಡಿತ್ತು. ಆಗ ಶಿಕ್ಷಣ ಮಂತ್ರಿಗಳಾಗಿದ್ದ ಕಂಬಳಿಯವರು ಆ ಕಾಲೇಜಿನ ವಿದ್ಯಾರ್ಥಿಗಳ ಸೇರ್ಪಡೆಯ ಕ್ಷಮತೆಯನ್ನು ಕಡಿತಗೊಳಿಸಿದ್ದರು. ಇನ್ನೊಂದು ಪ್ರಕರಣದಲ್ಲಿ ಡೆಕ್ಕನ್ ಕಾಲೇಜಿನ ಪ್ರಯೋಗಾಲಯ ಮತ್ತು ಗ್ರಂಥಾಲಯಗಳನ್ನು ರಾತ್ರೋರಾತ್ರಿ ಟ್ರಕ್ಕಿನಲ್ಲಿ ಸಮರೋಪಾದಿಯಲ್ಲಿ ಧಾರವಾಡಕ್ಕೆ ಕಳಿಸಿದ್ದರು. ಕರ್ನಾಟಕದಲ್ಲಿ ಬ್ರಾಹ್ಮಣೇತರರು ತಲೆ ಎತ್ತಿ ನಿಲ್ಲುವಂತೆ ಮಾಡಲು ಮಹಾರಾಷ್ಟ್ರದ ಮಹಾತ್ಮ ಜ್ಯೋತಿಬಾ ಫುಲೆಯವರ ಬ್ರಾಹ್ಮಣೇತರ ಚಳುವಳಿಯನ್ನು ಕಂಬಳಿಯವರು ಆರಂಭಿಸಿದರು.
1920ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಥಮ ಬ್ರಾಹ್ಮಣೇತರ ಪರಿಷತ್ತು ಸಂಘಟಿಸಿ ಧಾರವಾಡದ ಬ್ರಾಹ್ಮಣೇತರ ಸಂಘದ ಪ್ರಥಮ ಅಧ್ಯಕ್ಷರಾಗಿದ್ದರು. ಕಂಬಳಿಯವರೊಂದಿಗೆ ಸಿದ್ದಪ್ಪ ಹೊಸಮನಿ, ಸಿ ಸಿ ಹುಲಕೋಟಿ, ಪಂಡಿತಪ್ಪ ಚಿಕ್ಕೋಡಿ ಮುಂತಾದವರು ಕೈಜೋಡಿಸಿದ್ದರು.
ಈ ಚಳುವಳಿಯ ಪರಿಣಾಮದಿಂದ 1921 ರ ನಂತರ ಐಸಿಎಸ್ ಹುದ್ದೆಗೆ ಭಾರತಿಯರನ್ನು ನೇಮಿಸುವ ಕಾರ್ಯ ಆರಂಭಗೊಂಡಿತು. ಎಲ್ಲ ಸಾರ್ವಜನಿಕ ಸೇವೆಗಳಲ್ಲಿ ಹಿಂದುಳಿದ ವರ್ಗದವರಿಗೆ ಸರಿಯಾದ ಪ್ರಾತಿನಿಧ್ಯ ಕೊಡಿಸುವುದೇ ಬ್ರಾಹ್ಮಣೇತರ ಚಳುವಳಿಯ ಉದ್ದೇಶವಾಗಿತ್ತು. ಮುಂಬೈ ವಿಧಾನ ಪರಿಷತ್ತಿನಲ್ಲಿ ಕಂಬಳಿಯವರು ಬ್ರಾಹ್ಮಣೇತರ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.
ಸರ್ ಕಂಬಳಿ ಸಿದ್ಧಪ್ಪನವರು ಬ್ರಾಹ್ಮಣೇತರ ಚಳವಳಿಯ ನಿಮಿತ್ಯ ಹುಬ್ಬಳ್ಳಿಯಲ್ಲಿ ಸಭೆ ಆಯೋಜಿಸುವ ಮೊದಲು ಚಿತ್ಪಾವನ ಬ್ರಾಹ್ಮಣರಾಗಿದ್ದ ಬಾಲಗಂಗಾಧರ್ ತಿಲಕ್ ಅಂದು ಸಿದ್ಧಾರೂಢ ಸ್ವಾಮಿಯವರನ್ನು ಭೇಟಿಯಾಗಿ ಒಂದು ಸಭೆಗೆ ಅಹ್ವಾನಿಸಿದ್ದರು. ಸ್ವಾಮಿಗಳು ಅದರಲ್ಲಿ ಆಸಕ್ತಿ ವಹಿಸಿರಲಿಲ್ಲ. ಅದಾದ ಕೆಲವೇ ದಿನಗಳಲ್ಲಿ ಕಂಬಳಿ ಸಿದ್ದಪ್ಪನವರು ಆಯೋಜಿಸಿದ ಬ್ರಾಹ್ಮಣೇತರ ಪರಿಷತ್ತಿನ ಸಮಾವೇಶಕ್ಕೆ ಸಿದ್ಧಾರೂಢ ಸ್ವಾಮಿಗಳು ಆಗಮಿಸಲು ಒಪ್ಪಿಗೆ ಸೂಚಿಸಿದ್ದರು. ಅಂದು ಆ ಸಮಾವೇಶದಲ್ಲಿ ಕೊಲ್ಹಾಪುರದ ಸಾಮಾಜಿಕ ನ್ಯಾಯದ ಹರಿಕಾರ ಶಾಹು ಮಾಹಾರಾಜ್ ಅವರು ಕೂಡ ಆಗಮಿಸಿದ್ದರು. ಇಂದಿಗೆ ಹುಬ್ಬಳ್ಳಿಯಲ್ಲಿ ಜರುಗಿದ ಆ ಐತಿಹಾಸಿಕ ಬ್ರಾಹ್ಮಣೇತರರ ಸಮ್ಮೇಳನಕ್ಕೆ 100 ವರ್ಷ ತುಂಬಿದೆ.
ತುಳಿತಕ್ಕೊಳಗಾದ ಸಮುದಾಯಗಳ ಬಗ್ಗೆ ಕಂಬಳಿಯವರಿಗಿದ್ದ ಅನನ್ಯ ಕಾಳಜಿಯನ್ನು ಬಹುಶಃ ಇಂದಿನ ಯಾವ ರಾಜಕಾರಣಿಗಳಲ್ಲೂ ನಿರೀಕ್ಷಿಸುವಂತಿಲ್ಲ. ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಸರ್ ಕಂಬಳಿ ಸಿದ್ದಪ್ಪನವರು ಸಾಮಾಜಿಕ ನ್ಯಾಯದ ಹರಿಕಾರರಾಗಿ ಕೆಲಸ ಮಾಡಿದ್ದಾರೆ.
- ಡಾ. ಜೆ ಎಸ್ ಪಾಟೀಲ
(ಲೇಖಕರು ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು. ಔಷಧ ವಿಜ್ಞಾನದಲ್ಲಿ ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ನಾಲ್ಕು ಅಂತರಾಷ್ಟ್ರೀಯ ಔಷಧ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಅಧ್ಯಾಯಗಳನ್ನು ಬರೆದಿದ್ದಾರೆ.)
ಇದನ್ನೂ ಓದಿ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ: #SorryAsif ಎಂದ ನೆಟ್ಟಿಗರು