ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮರಿಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಜಕಾರಿಯಾ ಮದರಸಾ ಧ್ವಂಸ ಘಟನೆಯ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು 14 ಜನರನ್ನು ಮತ್ತೆ ಬಂಧಿಸಿದ್ದು, ಈವರೆಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.
ಬಿಜೆಪಿ ಆಡಳಿತದ ಉತ್ತರಾಖಂಡದ ಹಲ್ದ್ವಾನಿಯ ಬನ್ಭೂಲ್ಪುರ ಪ್ರದೇಶದಲ್ಲಿ ಫೆಬ್ರವರಿ 8ರಂದು ಪುರಸಭೆ ಅಕ್ರಮ ಕಟ್ಟಡ ಎಂದು ಇತಿಹಾಸ ಪ್ರಸಿದ್ಧ ಮಸೀದಿ ಮತ್ತು ಮದರಸಾವನ್ನು ಕೆಡವಿತ್ತು. ಈ ಕುರಿತ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ನಡೆದ ಧ್ವಂಸ ಪ್ರಕರಣ ಸ್ಥಳೀಯರ ವಿರೋಧಕ್ಕೆ ಕಾರಣವಾಗಿ ಹಿಂಸಾಚಾರಕ್ಕೆ ತಿರುಗಿತ್ತು.
ಸ್ಥಳೀಯರು ಪುರಸಭೆಯ ಸಿಬ್ಬಂದಿಗಳ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹಿಂಸಾಚಾರದಲ್ಲಿ 6 ಮಂದಿ ಸಾವನ್ನಪ್ಪಿದ್ದರು ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಜಿಲ್ಲಾಡಳಿತ ನೀಡಿದ ಮಾಹಿತಿಯ ಪ್ರಕಾರ ಹಿಂಸಾಚಾರದಲ್ಲಿ ಹಲ್ದ್ವಾನಿ ನಿವಾಸಿಗಳಾದ ಫಹೀಮ್ ಖುರೇಷಿ (30), ಝಾಹಿದ್ (45), ಮಗ ಮೊಹಮ್ಮದ್ ಅನಸ್ (16), ಮೊಹಮ್ಮದ್ ಶಬಾನ್ (22), ಮತ್ತು ಬಿಹಾರ ನಿವಾಸಿ ಪ್ರಕಾಶ್ ಕುಮಾರ್ ಸಿಂಗ್ (24) ಮೃತಪಟ್ಟಿದ್ದರು.
ಘಟನೆ ಬಳಿಕ ಪೊಲೀಸರು ತಮ್ಮ ಮನೆಗಳಿಗೆ ನುಗ್ಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಥಳೀಯ ಮುಸ್ಲಿಂ ನಿವಾಸಿಗಳು ಆರೋಪಿಸಿದ್ದರು. ಪೊಲೀಸರು ಮನೆಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಮತ್ತು ಮನೆಯಲ್ಲಿದ್ದ ಪುರುಷರನ್ನು ಬಂಧಿಸಿದ್ದಾರೆ ಎಂದು ಬಂಬೂಲ್ಪುರದ ನಿವಾಸಿಗಳು ಹೇಳಿದ್ದರು. ಪೋಲೀಸರ ದೌರ್ಜನ್ಯದಿಂದ ಹಲ್ದ್ವಾನಿಯಿಂದ ಮುಸ್ಲಿಮರು ವಲಸೆ ಹೋಗುವ ದೃಶ್ಯವು ಕಂಡು ಬಂದಿತ್ತು. ನೂರಾರು ಜನರು ಉತ್ತರಾಖಂಡದ ಇತರ ನಗರಗಳಿಗೆ ಮತ್ತು ಉತ್ತರಪ್ರದೇಶದ ನೆರೆಯ ಪಟ್ಟಣಗಳು ಮತ್ತು ನಗರಗಳಿಗೆ ತೆರಳಿದ್ದರು.
ಶನಿವಾರ ಬಂಧಿತರಲ್ಲಿ ಶಕೀಲ್ ಅನ್ಸಾರಿ, ಮೌಕೀನ್ ಸೈಫಿ ಮತ್ತು ಜಿಯಾ ಉಲ್ ರಹಮಾನ್ ಸೇರಿದ್ದಾರೆ. ಇತ್ತೀಚೆಗೆ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ವಾಂಟೆಡ್ ಲಿಸ್ಟ್ನಲ್ಲಿದ್ದ 9 ಮಂದಿಯಲ್ಲಿ ಇವರು ಸೇರಿದ್ದರು. ಇವರ ಬಗ್ಗೆ ಪೊಲೀಸರು ಪಟ್ಟಣದಾದ್ಯಂತ ಸಾರ್ವಜನಿಕರಿಂದ ಮಾಹಿತಿ ಕೋರಿ ಪೋಸ್ಟರ್ ಅಂಟಿಸಿದ್ದರು.
ಹಿಂಸಾಚಾರದ ಮಾಸ್ಟರ್ ಮೈಂಡ್ ಎಂದು ಹೇಳಲಾದ ಅಬ್ದುಲ್ ಮಲಿಕ್ ಮತ್ತು ಅವರ ಮಗ ಅಬ್ದುಲ್ ಮೊಯಿದ್ ಇನ್ನೂ ಪರಾರಿಯಾಗಿದ್ದಾರೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಮಲಿಕ್ ಮತ್ತು ಅವರ ಪುತ್ರನ ವಿರುದ್ಧ ಜಾಮೀನು ರಹಿತ ವಾರೆಂಟ್ ಮತ್ತು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಇದಾದ ನಂತರ ಶುಕ್ರವಾರ ಪಟ್ಟಣದಾದ್ಯಂತ ತಂದೆ-ಮಗ ಸೇರಿದಂತೆ ಒಂಬತ್ತು ಆರೋಪಿಗಳ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು.
ಮಲಿಕ್ ಅವರು ಮದರಸಾವನ್ನು ನಿರ್ಮಿಸಿದ್ದರು ಮತ್ತು ಅದನ್ನು ಕೆಡವುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಅವರ ಪತ್ನಿ ಸಫಿಯಾ ಮಲಿಕ್ ಅವರು ತೆರವು ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ನಲ್ಲಿ ಪ್ರಕರಣ ಬಾಕಿ ಇರುವಾಗಲೇ ತ್ವರಿತವಾಗಿ ಮಸೀದಿ ಧ್ವಂಸ ಕಾರ್ಯ ನಡೆದಿತ್ತು.
ಇದನ್ನು ಓದಿ: ಹಲ್ದ್ವಾನಿ ಹಿಂಸಾಚಾರ: ಮಾಹಿತಿ ಬಿಚ್ಚಿಟ್ಟ ಮೃತರ ಸಂಬಂಧಿಕರು..