ಬಲೂನ್ ಸೇರಿದಂತೆ ವಿವಧ ವಸ್ತುಗಳನ್ನು ವ್ಯಾಪಾರ ಮಾಡುತ್ತಾ ವಿಜಯನಗರ ಟೋಲ್ಗೇಟ್ ಮೆಟ್ರೋ ಕೆಳಗೆ ಟೆಂಟ್ಗಳಲ್ಲಿ ಜೀವನ ಸಾಗಿಸುತ್ತಿದ್ದ 15 ಬಡ ಕುಟುಂಬಗಳು ಈಗ ದಿಕ್ಕುಕಾಣದೇ ನೆಲೆಗಾಗಿ ಅಲೆಯುತ್ತಿದ್ದಾರೆ. ಹತ್ತಾರು ಮಕ್ಕಳನ್ನು ಕಟ್ಟಿಕೊಂಡು ಎಲ್ಲದರೂ ಉಳಿದುಕೊಳ್ಳಲು ಜಾಗ ಸಿಗುತ್ತದೆಯೇ ಎಂದು ಜಾತಕ ಪಕ್ಷಿಗಳಂತೆ ಹುಡುಕಾಡುತ್ತಿದ್ದಾರೆ.
ಮಧ್ಯಪ್ರದೇಶದಿಂದ ವಲಸೆ ಕಾರ್ಮಿಕರಾಗಿ ಬಂದ ಈ ಕುಟುಂಬಗಳು ಹಲವಾರು ವರ್ಷಗಳಿಂದ ಮೆಟ್ರೋ ಪಿಲ್ಲರ್ ಕೆಳಗೆ ಟೆಂಟ್ ಹಾಕಿಕೊಂಡು ಬದುಕುತ್ತಿದ್ದವು. ಬಲೂನ್ ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದರು. ಕೊರೊನಾ ಸಮಯಕ್ಕೆ ಹೇರಲಾದ ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ದೂಕಲ್ಪಟ್ಟಿದ್ದರು. ನಂತರ ಕೆಸಿವಿಟಿ ಜನಸಹಾಯ ವತಿಯಿಂದ ಅವರಿಗೆ ರೇಷನ್ ಕಿಟ್ ನೀಡಿ, ಆರೋಗ್ಯ ತಪಾಸಣೆ ಮಾಡಲು ಮುಂದಾಗಿದ್ದರು. ಆದರೆ ಕಳೆದ 5-6 ದಿನಗಳ ಹಿಂದೆ ಪೊಲೀಸರು ನಮ್ಮನ್ನು ಏಕಾಏಕಿ ಎತ್ತಂಗಡಿ ಮಾಡಿದರು ಎಂದು ಆ ಬಡ ಕುಟುಂಬಗಳು ದೂರಿವೆ.
ಆ ಕುಟುಂಬಗಳು ಸದ್ಯಕ್ಕೆ ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿರುವ ದೋಬಿ ಘಾಟ್ ಸಿಗ್ನಲ್ನಲ್ಲಿ ಕಾಮಗಾರಿ ನಡೆಯುತ್ತಿರುವ ಫ್ಲೈ ಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಆದರೆ ಬಿಬಿಎಂಪಿಯ ಅಧಿಕಾರಿಗಳು ಅಲ್ಲಿಂದಲೂ ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ.. ಎಲ್ಲಾದರೂ ಹೋಗಿ 15 ದಿನ ಈ ಕಡೆ ಕಾಣಿಸಿಕೊಳ್ಳಬೇಡಿ ಎಂದು ಬೆದರಿಸಿದ್ದಾರೆ ಎಂದು ಆ ಕಾರ್ಮಿಕರು ಗೋಳು ತೋಡಿಕೊಂಡಿದ್ದಾರೆ.
ಈ ಲಾಕ್ಡೌನ್, ಕೊರೊನಾ ಹರಡುವ ಭಯದ ಸಂದರ್ಭದಲ್ಲಿ ಈ ಬಡಕುಟುಂಬಗಳು ಎಲ್ಲಿಗೆ ಹೋಗಲು ಸಾಧ್ಯ? ಅವರು ಮಾಡಿದ ಅಪರಾಧವಾದರೂ ಏನು? ಅವರಿಗೆ ಯಾಕೆ ಈ ಶಿಕ್ಷೆ ದಯವಿಟ್ಟು ಪೊಲೀಸರು ಮತ್ತು ಬಿಬಿಎಂಪಿಯವರು ಈ ಬಡಜನರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಮಾನವೀಯತೆಯ ದೃಷ್ಟಿಯಿಂದ ಆ ಜನರಿಗೆ ಕೂಡಲೇ ಸರ್ಕಾರದ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಆಹಾರದ ಕಿಟ್ಗಳನ್ನು ಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಗಂಡಸರನ್ನು ಜೈಲಿಗೆ ಹಾಕುತ್ತೇವೆ
ನಾವು 15 ವರ್ಷದಿಂದ ಟೋಲ್ಗೇಟ್ನಲ್ಲಿ ಬದುಕುತ್ತಿದ್ದೇವೆ. ನಮ್ಮ ಕುಟುಂಬಗಳ ಕೆಲವು ಮಕ್ಕಳು ಡಾನ್ ಬಾಸ್ಕೊ ಸೇರಿದಂತೆ ವಿವಿದೆಡೆ ಶಿಕ್ಷಣ ಪಡೆಯುತ್ತಿದ್ದಾರೆ. ಹಾಗೆಯೇ ಟೋಲ್ಗೇಟ್ ಸುತ್ತಮುತ್ತಲ ಶಾಲೆಗಳಿಗೆ ನಮ್ಮ ಮಕ್ಕಳನ್ನು ಸೇರಿಸಿದ್ದೇವೆ. ಈಗ ಏಕಾಏಕಿ ನಮ್ಮನ್ನು ಎತ್ತಂಗಡಿ ಮಾಡಿದ್ದಾರೆ. ಇಲ್ಲಿ ನಮಗೆ ಕುಡಿಯುವ ನೀರು, ಶೌಚಾಲಯ ಏನೂ ಇಲ್ಲ. ಪೊಲೀಸರು ಬಂದು ಮಕ್ಕಳನ್ನು ಬಾಲಾಶ್ರಮಕ್ಕೆ, ಮಹಿಳೆಯರನ್ನು ಅನಾಥಶ್ರಮಕ್ಕೆ ಸೇರಿಸುತ್ತೇವೆ, ಗಂಡಸರನ್ನು ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ನಮ್ಮಲ್ಲಿ ಕೆಲವರು ಹೆದರಿ ಊರಿಗೆ ಹೋಗಿದ್ದಾರೆ. ನಮಗೆ ಹೋಗಲು ಸಾಧ್ಯವಿಲ್ಲ ಎಂದು ಅಲ್ಲಿನಿ ನಿವಾಸಿ ಸುಮೇರ್ ಅಳಲು ತೋಡಿಕೊಂಡಿದ್ದಾರೆ.
ಹೆಂಗಸರಿಗೆ ಶೌಚಕ್ಕೆ ಹೋಗಲು ಜಾಗವಿಲ್ಲ, 25 ಕ್ಕೂ ಹೆಚ್ಚು ಮಕ್ಕಳಿವೆ. ಇವನ್ನು ಕಟ್ಟಿಕೊಂಡು ನಾವು ಅಲೆದು ಅಲೆದು ಸುಸ್ತಾಗಿದ್ದೇವೆ. ದಯವಿಟ್ಟು ನಮಗೆ ಮಾಗಡಿ ರೋಡ್ ಟೋಲ್ ಗೇಟ್ ಬಳಿ ಬದುಕಲು ಅವಕಾಶ ನೀಡಿ ಮಹಿಳೆಯರು ಮನವಿ ಮಾಡಿದ್ದಾರೆ.
ಕೂಡಲೇ ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸಿ ಈ ಬಡ ಕುಟುಂಬಗಳನ್ನು ರಕ್ಷಿಸಬೇಕಾಗಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳು ಹೊಟೇಲ್ಗಳ ಜೊತೆ ಸೇರಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ: ಕೇಂದ್ರ ಸರ್ಕಾರ