ಹೊಸಕೋಟೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತ ಅಭ್ಯರ್ಥಿ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ಸಾವಿರಾರು ಜನರೊಂದಿಗೆ ಬೃಹತ್ ಮೆರವಣಿಗೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ಹೊಸಕೋಟೆಯಲ್ಲಿ ಬಿಜೆಪಿಗೆ 2008ಕ್ಕೆ ಮೊದಲು 3 ರಿಂದ 5 ಸಾವಿರ ಓಟು ಇದ್ದುದ್ದು ಈಗ ಬಿಜೆಪಿ ಗೆಲ್ಲುವ ಮಟ್ಟಕ್ಕೆ ಬಂದಿದೆ. ಅದಕ್ಕೆ ಬಿ.ಎನ್ ಬಚ್ಚೆಗೌಡರು ಕಾರಣರು. ನಾವೆಲ್ಲರೂ ಅವರ ಗರಡಿಯಲ್ಲಿ ಪಳಗಿದ್ದೇವೆ. ನಮಗೆ ನಾಯಕತ್ವ ಬೆಳೆಸಿದವರು ಅವರೆ. ಅವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಆರ್ಶಿವಾದ ನಮ್ಮ ಮೇಲಿದೆ ಎಂದಿದ್ದಾರೆ.
ಯಾರದೋ ದ್ವೇಷದ ರಾಜಕಾರಣಕ್ಕಾಗಿ, ಬೇರೊಬ್ಬ ರಾಜಕಾರಣಿಯ ಪಿತೂರಿಯಿಂದಾಗಿ ನಾವು ಕಟ್ಟಿದ ಪಕ್ಷದಲ್ಲಿ ನಮಗೆ ಜಾಗವಿಲ್ಲವಂತಾಗಿದೆ. ಈಗ ನಮ್ಮ ಸ್ವಾಭಿಮಾನ ಉಳಿಸಿಕೊಳ್ಳುವುದಕ್ಕಾಗಿ ಮೂರು ತಲೆಮಾರುಗಳು ಆರು ದಶಕಗಳ ಪರಿಚಯವಿರುವುದರಿಂದ ಜನರಿಗಾಗಿ ಚುನಾವಣೆಗೆ ನಿಂತಿದ್ದೇನೆ. ನಮಗೆ ರಾಜಕಾರಣ ಮುಖ್ಯವಲ್ಲ. ಜನರ ಕಷ್ಟ ಸುಖ ಮುಖ್ಯ. ಮೂರು ತಲೆಮಾರಿನಿಂದಲೂ ಹೊಸಕೋಟೆ ತಾಲ್ಲೂಕಿನಲ್ಲಿ ಅದೇ ವಿಶ್ವಾಸ ಅದೇ ನಂಬಿಕೆ ಅದೇ ಪ್ರೀತಿಯನ್ನು ಜನ ನಮ್ಮ ಮೇಲೆ ಇಟ್ಟಿದ್ದಾರೆ. ಆ ಸೌಭಾಗ್ಯ ನಮ್ಮದಾಗಿದೆ ಎಂದಿದ್ದಾರೆ.
ಶರತ್ ತಾಯಿ ಹೇಮಾ, ಪತ್ನಿ ಕುಸುಮಾ, ಚಿಕ್ಕಪ್ಪ ಬೈರೇಗೌಡ ಬಿಜೆಪಿ ಮುಖಂಡರಾದ ಹುಲ್ಲುರು ವೆಂಕಟೇಶ್ ಮುಂತಾದವರು ನಾಮಪತ್ರ ಸಲ್ಲಿಸುವ ವೇಳೆ ಜೊತೆಗಿದ್ದರು.