| ಸೋಮಶೇಖರ್ ಚಲ್ಯ |
ರಾಯಚೂರಿನ ಸುರಕ್ಷಾ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಈ ಯುವಕನ ಹೆಸರು ಭೀಮಣ್ಣ. ಇಪ್ಪತ್ನಾಲ್ಕನೇ ವಯಸ್ಸಿನ ಈತನೇ ಇವನ ಕುಟುಂಬದ ಆಧಾರ ಸ್ತಂಭ. ಇರೋ ನಾಲ್ಕು ಎಕರೆ ಒಣಭೂಮಿಯಲ್ಲಿ ಒಂದಷ್ಟು ದವಸ ಧಾನ್ಯ ಬೆಳೆದುಕೊಂಡು, ಕೆಲಸ ಇಲ್ಲದ ಸಮಯದಲ್ಲಿ ಕೂಲಿನಾಲಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಕುಟುಂಬ ಈತನದು.
ಐದು ತಿಂಗಳ ಹಿಂದೆ ಹುಟ್ಟಿದ ಎರಡನೇ ಮಗು ಸಮಸ್ಯೆಯೊಂದಿಗೇ ಹುಟ್ಟಿತು. ಖಾಸಗಿ ಆಸ್ಪತ್ರೆಯಲ್ಲಿ ಎಷ್ಟೇ ಖರ್ಚು ಮಾಡಿದರೂ ಮಗು ಉಳಿಯಲಿಲ್ಲ. ಇದಾದ ಕೆಲವೇ ದಿನಗಳಲ್ಲಿ ಆತನ ತಂದೆಯೂ ತೀರಿಕೊಂಡರು. ಆಸ್ಪತ್ರೆ, ಮಗು ಮತ್ತು ತಂದೆಯ ಸಂಸ್ಕಾರಕ್ಕಾಗಿ ಹೆಚ್ಚು ಸಾಲದ ಹೊರೆ ಹೆಚ್ಚಾಗಿತ್ತು. ಶವಸಂಸ್ಕಾರದ ನಂತರದ ಕಾರ್ಯಗಳಿಗಾಗಿ ಭೀಮಣ್ಣ ಹುಲಿಗೆಮ್ಮ ಮತ್ತು ಆಕೆಯ ಗಂಡ ಬಾರ್ ಆಂಜನೇಯನಿಂದ ಮೂರು ಸಾವಿರ ರೂಪಾಯಿಗಳನ್ನು ಸಾಲ ಪಡೆದಿದ್ದ.
ಅದಾದ ಕೆಲವು ದಿನಗಳ ನಂತರ ತಮ್ಮ ಮನೆಯಲ್ಲಿ 55,000 ರೂಪಾಯಿ ಕಳ್ಳತನವಾಗಿದೆ, ಕದ್ದಿರುವುದು ಭೀಮಣ್ಣನೇ ಇರಬೇಕೆಂಬ ಅನುಮಾನ ಆತನ ಮೇಲೆ ಇಡಪನೂರು ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಿದರು. ಪೊಲೀಸರು ವಿಚಾರಣೆಗಾಗಿ ಕರೆದಾಗ ಬೀಮಣ್ಣನ ಜೊತೆ ಹೋದ ಊರಿನ ಜನರು ಆತ ಹಣ ಕದ್ದಿಲ್ಲ. ನಾವು ಈ ವಿಷಯವನ್ನು ಊರಿನಲ್ಲೇ ಬಗೆಹರಿಸಿಕೊಳ್ಳುತ್ತೇವೆಂದು ಹೇಳಿ ಬಂದಿದ್ದಾರೆ. ಇದನ್ನು ನಿರಾಕರಿಸಿದ ಬಾರ್ ಆಂಜನೇಯ ಮತ್ತೆ ಅದೇ ಪೊಲೀಸರಿಗೆ ದೂರು ನೀಡಿದ್ದಾನೆ.
ಭೀಮಣ್ಣನನ್ನು ವಿಚಾರಣೆ ನಡೆಸಿ ವಾಪಸ್ ಕಳಿಸುವುದಾಗಿ ಹೇಳಿ ಆತನನ್ನು ಎತ್ತಾಕಿಕೊಂಡು ಹೋದ ಪೊಲೀಸರು ಮನಸೋಯಿಚ್ಛೆ ಹೊಡೆದಿದ್ದಾರೆ. ಭೀಮಣ್ಣ ತಾನು ಯಾವ ತಪ್ಪನ್ನೂ ಮಾಡಿಲ್ಲ, ತಾನು ಹಣವನ್ನು ಕದ್ದಿಲ್ಲ. ನೀವು ಹೀಗೆ ಹೊಡೆದರೆ ಸತ್ತು ಹೋಗುತ್ತೇನೆ. ನನ್ನ ಹೆಂಡತಿ, ಮಗು, ಅಮ್ಮನನ್ನು ಯಾರು ಸಾಕ್ತಾರೆ?” ಅಂತೆಲ್ಲಾ ಗೋಗರೆದರೂ ಕರಗದ ಪೊಲೀಸರು ಆತನಿಗೆ ಮತ್ತಷ್ಟು ಚಿತ್ರಹಿಂಸೆ ನೀಡಿದ್ದಾರೆ. ಹಿಂಸೆ ತಾಳಲಾರದೆ ಭೀಮಣ್ಣ ಕಣ್ಣು ಮಂಜಾಗಿ ಕುಸಿದು ಬಿದ್ದಿದ್ದಾನೆ. ಇದನ್ನ ನೋಡಿ ಗಾಬರಿಗೊಂಡ ಪೊಲೀಸರು ಭೀಮಣ್ಣ ಲಾಕಪ್ಪಿನಲ್ಲೇ ಸತ್ತರೆ ತಾವು ತೊಂದರೆಗೆ ಸಿಲುಕಿಕೊಳ್ಳುತ್ತೇವೆಂದು ಸ್ಟೇಷನ್ನಿನಿಂದ ದೂರ ಕಳಿಸಿದ್ದ ಭೀಮಣ್ಣನ ನಾಲ್ವರು ಸಂಬಂಧಿಗಳ ಕೈಗೆ ಭೀಮಣ್ಣನನ್ನು ಒಪ್ಪಿಸಿ, “ಇವನನ್ನು ಸೀದಾ ಊರಿಗೆ ಕರೆದುಕೊಂಡು ಹೋಗಿ. ಅಲ್ಲಿ-ಇಲ್ಲಿ ಹೋಗಿ ನಮ್ಮ ವಿರುದ್ಧ ಏನಾದರೂ ಮಾತಾಡಿದರೆ ಮತ್ತೆ ಅವನನ್ನು ಎತ್ತಾಕಿಕೊಂಡು ಬಂದು ಇವತ್ತು ಮಾಡಿದ್ದರ ಹತ್ತು ಪಟ್ಟು ಮಾಡಿ, ಅವನನ್ನು ಕೊಂದು ಹೆಣ ಕೂಡ ಸಿಗದಂತೆ ಬಿಸಾಕುತ್ತೇವೆ,” ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ ಹೆದರಿಸಿದ್ದಾನೆ.
ಚಿಂತಾಜನಕಸ್ಥಿತಿಯಲ್ಲಿದ್ದ ಭೀಮಣ್ಣನನ್ನು ರಾಯಚೂರಿನ ಸುರಕ್ಷಾ ಎಂಬ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿಗೆ ಬಂದ ಇಡಪನೂರು ಪೊಲೀಸರು ಮೇಲಧಿಕಾರಿಗಳಿಗೆ, ಸರ್ಕಾರಕ್ಕೆ ಈ ಕುರಿತು ಕಂಪ್ಲೇಂಟ್ ಕೊಡಬಾರದೆಂದು ಭೀಮಣ್ಣ ಮತ್ತು ಆತನ ಕುಟುಂಬದವರಿಗೆ ಖಾಸಗಿ ಆಸ್ಪತ್ರೆಗೆ ಸೇರಿದ್ದೀರಾ, ಆಸ್ಪತ್ರೆಯ ಖರ್ಚನ್ನೆಲ್ಲಾ ನಾವು ನೋಡಿಕೊಳ್ಳುತ್ತೇವೆಂದು ಆಮಿಷವನ್ನೂ, ಇದನ್ನು ದೊಡ್ಡ ಇಶ್ಯೂ ಮಾಡಿದರೆ ಮುಂದೆಯೂ ಇಂತಹ ಹಿಂಸೆಗಳನ್ನು ಅನುಭವಿಸಬೇಕಾಗುತ್ತದೆಂದು ಬೆದರಿಕೆಯನ್ನೂ ಒಡ್ಡಿದ್ದಾರೆ.
“ಸಾರ್, ನಾವು ಬಡವರು. ದುಡಿದು ತಿನ್ನುವ ಮಂದಿ. ಏನೂ ತಪ್ಪು ಮಾಡದಿದ್ದರೂ ಈ ಪೊಲೀಸರು ನನಗೆ ಕಳ್ಳತನದ ಹಣೆಪಟ್ಟಿ ಕಟ್ಟಿ ಚಿತ್ರಹಿಂಸೆ ಕೊಟ್ಟರು. ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ. ಹೇಗೋ ಬದುಕಿಬಿಟ್ಟೆ. ತಪ್ಪು ಮಾಡದಿದ್ದ ನನಗೆ ಚಿತ್ರಹಿಂಸೆ ಕೊಟ್ಟ ಪೊಲೀಸರನ್ನು ಸುಮ್ಮನೇ ಬಿಡಬಾರದು ಅನ್ನಿಸುತ್ತೆ. ಆದರೆ, ನಾವು ಬಡವರು. ಪೊಲೀಸರನ್ನು ಎದುರುಹಾಕಿಕೊಂಡರೆ ಮತ್ತೆ ನಾಳೆ ಯಾವ್ಯಾವುದೋ ಕೇಸು ಹಾಕಿ ಠಾಣೆಗೆ ಕರೆತಂದು ಚಿತ್ರಹಿಂಸೆ ಕೊಡಬಹುದು ಅಂತ ಹೆದರಿಕೆಯಾಗುತ್ತದೆ. ಅದಕ್ಕೆ ಸುಮ್ಮನಾಗಿದ್ದೇವೆ” ಎಂದು ತನ್ನ ಅಸಹಾಯಕತೆಗೆ ಬೇಸರ ವ್ಯಕ್ತಪಡಿಸಿದ ಭೀಮಣ್ಣ.