ಮೂರು ತಿಂಗಳಿಂದ ಕರ್ನಾಟಕದಲ್ಲಿ ಬರುಗಾಳಿ ಎಬ್ಬಿಸಿ ಸರ್ಕಾರ ಬದಲಾವಣೆ ಕಾರಣರಾದ 17 ಅನರ್ಹ ಶಾಸಕರ ವಿಚಾರಣೆ ಅಂತ್ಯಗೊಂಡಿದೆ. ಇಂದು ತೀರ್ಪು ಬರಲಿದ್ದು ಇದು ಇನ್ನೊಂದು ತಿಂಗಳಲ್ಲಿ ಅಂದರೆ ಡಿಸೆಂಬರ್ 5 ರಂದು ನಡೆಯಲಿರುವ ಉಪ ಚುನಾವಣೆ ಮೇಲೆ ನೇರ ಪರಿಣಾಮ ಬೀರಲಿದೆ.
ಮಹತ್ವದ ಅಂಶವೇನೆಂದರೆ ತೀರ್ಪು ನೀಡುವಾಗ ಬಿಎಸ್ವೈ ಆಡಿಯೋ ಕೂಡ ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ಸುಪ್ರೀಂ ತಿಳಿಸಿದೆ. ನಿನ್ನೆ ಆಡಿಯೋ ವಿಚಾರವನ್ನು ಮುನ್ನಲೆಗೆ ತಂದಿದ್ದ ಕಾಂಗ್ರೆಸ್ ನಾಯಕ ಮತ್ತು ಪ್ರಖ್ಯಾತ ವಕೀಲ ಕಪಿಲ್ ಸಿಬಲ್ ಈ ಕುರಿತು ವಾದ ಮಾಡಲು ಮುಂದಾಗುತ್ತಿದ್ದಂತೆಯೇ ತಡೆದ ಸುಪ್ರೀಂ “ಶಾಸಕರ ರಾಜಿನಾಮೆಯಲ್ಲಿ ಅಮಿತ್ ಶಾರವರ ಪಾತ್ರವಿದೆ, ಮುಂಬೈನಲ್ಲಿ ಅವರಿಗೆ ಆಶ್ರಯ ನೀಡಿದ್ದರ ವಿವರ ನಿನ್ನೆಯೇ ತಿಳಿಸಿದ್ದೀರಿ. ಹಾಗಾಗಿ ವಿಚಾರಣೆ ಅಂತ್ಯಗೊಂಡಿರುವಾಗ ಮತ್ತೆ ವಾದ ಬೇಡ. ಆಡಿಯೋವನ್ನು ಸಹ ತೀರ್ಪು ನೀಡುವಾಗ ಪರಿಗಣಿಸುತ್ತೇವೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅನರ್ಹ ಶಾಸಕರ ರಾಜಕೀಯ ಭವಿಷ್ಯ ಮುಂದೇನು?
ಆದರೆ ಇದಕ್ಕೆ ಜೆಡಿಎಸ್ ಪರ ವಕೀಲರಾದ ರಾಜೀವ್ ಧವಂ ರವರು ಆಡಿಯೋ ಮಹತ್ವವನ್ನು ಸುಪ್ರೀಂಗೆ ಒತ್ತಿ ಹೇಳಿದ್ದಾರೆ. ಹಾಗಾಗಿ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದೆ.
ವಿಚಾರಣೆ ಮುಗಿಸಿದ್ದೇವೆ. ತೀರ್ಪು ನೀಡಲು ಅವಕಾಶ ಮಾಡಿಕೊಡಿ ಎಂದು ನ್ಯಾಯಮೂರ್ತಿ ಎನ್.ವಿ ರಮಣರವರು ತಿಳಿಸಿದ್ದಾರೆ. ಇಂದು ಸಂಜೆಯೊಳಗೆ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ.