ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, ಮೈತೈ ಬಂಡುಕೋರರು ನಡೆಸಿದ ಗುಂಡಿನ ದಾಳಿಗೆ ಕುಕಿ–ಜೋ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ.
ಹರಾಥೆಲ್ ಮತ್ತು ಕೊಬ್ಶಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್ಬಿ)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಹೆನ್ಮಿನ್ಲೆನ್ ವೈಫೇಯ್ ಮತ್ತು ಅವರ ವಾಹನ ಚಾಲಕ ತಂಗ್ಮಿನ್ಲುನ್ ಹ್ಯಾಂಗ್ಶಿಂಗ್ ಹತ್ಯೆ ನಡೆದಿದೆ. ವಾಹನದ ಮೇಲೆ ಬಂಡುಕೋರರು ನಡೆಸಿರುವ ಗುಂಡಿನ ದಾಳಿ ಹಾಗೂ ಅದರೊಳಗೆ ರಕ್ತಸಿಕ್ತ ಮೃತದೇಹಗಳು ಇರುವ ವಿಡಿಯೊ ವೈರಲ್ ಆಗಿದೆ.
ಗುಂಡಿನ ದಾಳಿಗೆ ಬಲಿಯಾದವರು ಕುಕಿ-ಜೋ ಸಮುದಾಯದ ಸದಸ್ಯರು ಎಂದು ಬುಡಕಟ್ಟು ಐಕ್ಯತೆಯ ಸಮಿತಿ ಹೇಳಿಕೊಂಡಿದೆ. ಕುಕಿ-ಜೋ ಸಮುದಾಯದ ಮೇಲಿನ ಪ್ರಚೋದಿತ ದಾಳಿಯನ್ನು ಖಂಡಿಸಿ ಕಾಂಗ್ಪೊಕ್ಪಿ ಮೂಲದ ಬುಡಕಟ್ಟು ಐಕ್ಯತೆಯ ಸಮಿತಿಯು (COTU)ಕಾಂಗ್ಪೊಕ್ಪಿ ಜಿಲ್ಲೆಯಾದ್ಯಂತ ಬಂದ್ಗೆ ಕರೆ ನೀಡಿದೆ.
ದಾಳಿಯ ನಂತರ ನಡೆದ COTU ಸಭೆಯಲ್ಲಿ ಮಣಿಪುರದಲ್ಲಿ ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಆಡಳಿತ ಮಂಡಳಿಯನ್ನು ಸ್ಥಾಪಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
ಕೇಂದ್ರದಿಂದ ನಿಯೋಜನೆಗೊಂಡಿರುವ ಮಣಿಪುರದ ರಕ್ಷಣಾ ಸಲಹೆಗಾರ ಕುಲದೀಪ್ ಸಿಂಗ್ ಅವರು, ರಾಜಭವನಕ್ಕೆ ತೆರಳಿ ರಾಜ್ಯಪಾಲೆ ಅನುಸೂಯ ಉಯಿಕೆ ಅವರಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ದಾಳಿ ನಡೆದ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಮಣಿಪುರದಲ್ಲಿ ಏಪ್ರೀಲ್ನಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯದ ನಡುವಿನ ಹಿಂಸಾಚಾರದಿಂದ ಕಣಿವೆ ರಾಜ್ಯದಲ್ಲಿ ಇಲ್ಲಿಯವರೆಗೆ 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 60 ಸಾವಿರಕ್ಕೂ ಹೆಚ್ಚು ನಾಗರಿಕರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಇದನ್ನು ಓದಿ: ಒತ್ತೆಯಾಳು ಒಪ್ಪಂದದ ಕುರಿತು ಇಸ್ರೇಲ್ಗೆ 2 ಸಲಹೆಗಳನ್ನು ನೀಡಿದ ಕತಾರ್