Homeಅಂಕಣಗಳು2019ರ ಚುನಾವಣೆ: ಜವಾನ್ ಔರ್ ಕಿಸಾನ್

2019ರ ಚುನಾವಣೆ: ಜವಾನ್ ಔರ್ ಕಿಸಾನ್

- Advertisement -
- Advertisement -

2014ರ ಲೋಕಸಭಾ ಚುನಾವಣೆ ನಡೆದಾಗ ಬಿಜೆಪಿಯು ರೈತರ ಆದಾಯ ದ್ವಿಗುಣ ಮಾಡುವುದಾಗಿಯೂ, ರೈತರ ಎಲ್ಲಾ ಬೆಳೆಗಳಿಗೂ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆ ಸಿಗುವಂತೆ ಮಾಡುವುದಾಗಿಯೂ ಹೇಳಿತ್ತು. ಆದರೆ, ಆ ಚುನಾವಣೆಯು ಗ್ರಾಮೀಣ ಭಾಗದ ಇಶ್ಯೂಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯಲಿಲ್ಲ. ಯುಪಿಎ ಭ್ರಷ್ಟಾಚಾರ, 10 ವರ್ಷಗಳ ಆಡಳಿತ ವಿರೋಧಿ ಅಲೆ, ಕಪ್ಪುಹಣ, ಹೊಸ ಪರ್ಯಾಯ, ಮೋದಿ ಮಾದರಿ ಮತ್ತು ಗುಜರಾತ್ ಮಾದರಿ, ಅಭಿವೃದ್ಧಿ, ಕೋಮು ಧ್ರುವೀಕರಣ ಹೀಗೆ ಹತ್ತು ಹಲವು ಅಂಶಗಳನ್ನೊಳಗೊಂಡ ಒಂದು ಪ್ಯಾಕೇಜ್‍ಅನ್ನು ಬಿಜೆಪಿಯು ಮುಂದಿಟ್ಟಿತ್ತು. ಮಾಧ್ಯಮಗಳು ಮತ್ತು ಹಣದ ಬಲದೊಂದಿಗೆ ಅತ್ಯಂತ ಚಾಣಾಕ್ಷತೆ ಮತ್ತು ಕಠಿಣ ಶ್ರಮದ ಮೂಲಕ ಅದನ್ನು ಜನರ ಮುಂದಿಟ್ಟು ಸೃಷ್ಟಿಸಿದ ಅಲೆಯು, ಬಿಜೆಪಿಗೆ ಸ್ವಂತ ಬಲದ ಮೇಲೆ ಅಧಿಕಾರ ಪಡೆದುಕೊಳ್ಳುವಷ್ಟು ಜೋರಾಗಿ ಬೀಸಿತ್ತು. ಆದರೆ, 2019ರ ಚುನಾವಣೆಯು ಹಾಗಿರುವುದಿಲ್ಲವೆಂದು ಭಾವಿಸಲು ಕಾರಣಗಳಿವೆ.
2004ರಲ್ಲಿ ವಾಜಪೇಯಿಯವರ ನೇತೃತ್ವದಲ್ಲಿ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯಡಿ ಚುನಾವಣೆಗೆ ಹೊರಟಾಗ, ಜನರಲ್ಲಿ ‘ಫೀಲ್ ಗುಡ್ ಫ್ಯಾಕ್ಟರ್ (ಎಲ್ಲಾ ಚೆನ್ನಾಗಿದೆ ಎಂಬ ಭಾವನೆ)’ ಇದೆ ಎಂಬ ತಪ್ಪು ಲೆಕ್ಕಾಚಾರ ಮಾಡಲಾಗಿತ್ತು. ಗ್ರಾಮೀಣ ಭಾರತವು ಆಗ ತತ್ತರಿಸಿತ್ತು. ಹೀಗಾಗಿ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ-1 ಅಧಿಕಾರಕ್ಕೆ ಬಂದಿತ್ತು. 2009ಕ್ಕೆ ಮತ್ತೆ ಚುನಾವಣೆಗೆ ಹೊರಟಾಗ ಕಾಂಗ್ರೆಸ್ ಮತ್ತು ಯುಪಿಎಗೆ ಕಡಿಮೆ ಸೀಟು ಬರುತ್ತದೆಂದು ಭಾವಿಸಲಾಗಿತ್ತು. ಆರ್‍ಜೆಡಿಯಂತಹ ಕೆಲವು ಪಕ್ಷಗಳು ಚುನಾವಣೆಗೆ ಸ್ವಲ್ಪ ಮುಂಚೆ ಯುಪಿಎ ತೊರೆದಿದ್ದವು. ಆದರೆ, ಚುನಾವಣೆಗೆ ಮುಂಚೆ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಅತೀ ದೊಡ್ಡ ರೈತರ ಸಾಲಮನ್ನಾ ಮಾಡಿತು. ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿತಲ್ಲದೇ, ಹೆಚ್ಚು ಕಷ್ಟವಿಲ್ಲದೇ ಯುಪಿಎ-2ರ ಮುಖಾಂತರ ಮತ್ತೆ ಅಧಿಕಾರ ಹಿಡಿಯಿತು.
ಹಾಗಾದರೆ 2014ರಲ್ಲಿ ಗ್ರಾಮೀಣ ಭಾರತವು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಾತ್ರ ಕಳೆದುಕೊಂಡಿತೇ? ಹಾಗೆ ಹೇಳಲು ಯಾವ ಕಾರಣವೂ ಇಲ್ಲ. ಈ ಮಧ್ಯೆ ಹೆಚ್ಚಾದ ಕೃಷಿ ಬಿಕ್ಕಟ್ಟಿಗೆ ಯುಪಿಎ ಸಹಾ ಯಾವ ವಿಶೇಷ ಕ್ರಮವನ್ನೂ ತೆಗೆದುಕೊಂಡಿರಲಿಲ್ಲ. ನರೇಗಾದಂತಹ ಕ್ರಮಗಳು ಈ ಬಿಕ್ಕಟ್ಟನ್ನು ಮರೆಮಾಚುವಷ್ಟು ಸಮರ್ಥವೂ ಆಗಿರಲಿಲ್ಲ; ಇದ್ದಷ್ಟು ಪ್ರಮಾಣದಲ್ಲಿ ಜಾರಿಯೂ ಆಗಲಿಲ್ಲ. ಇದರಾಚೆಗೂ ಯುಪಿಎ ಸರ್ಕಾರದ ತಂದಿದ್ದ ಕೆಲವು ಕ್ರಮಗಳ ಜನಪರತೆಯನ್ನು ಜನರ ಮುಂದಿಡುವಷ್ಟು ಸಾಮಥ್ರ್ಯ ಕಾಂಗ್ರೆಸ್ಸಿನ ಪ್ರಚಾರ ಯಂತ್ರಾಂಗಕ್ಕೆ ಅಂದೂ ಇರಲಿಲ್ಲ; ಇಂದೂ ಇಲ್ಲ. ಯುಪಿಎ ತಂದಿದ್ದ ಭೂಸ್ವಾಧೀನ ಕಾಯ್ದೆ ಎಷ್ಟು ಜನಪರ ಎಂದು ಗೊತ್ತಾದದ್ದು, ಮೋದಿ ಸರ್ಕಾರ ಬಂದ ಮೇಲೆ ಅದನ್ನು ತಿದ್ದಲು ಯತ್ನಿಸಿದಾಗಲೇ!
2016ರ ಡಿಸೆಂಬರ್‍ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್‍ನ ಗ್ರಾಮೀಣ ಭಾಗ ಮತ್ತು ನಗರ ಭಾಗಗಳು ಭಿನ್ನ ರೀತಿಯಲ್ಲಿ ಮತ ಚಲಾಯಿಸಿದವು ಎಂಬುದನ್ನು ಎಲ್ಲರೂ ಗುರುತಿಸಿದ್ದಾರೆ. ಇದಕ್ಕೆ ಕಾರಣವಿಲ್ಲದಿಲ್ಲ. ಯಾವ ಕಛ್ ಮತ್ತು ಸೌರಾಷ್ಟ್ರದ ಹೆಸರೇಳಿ ನರ್ಮದಾ ನದಿಗೆ ಒಂದಾದ ಮೇಲೆ ಒಂದರಂತೆ ಅಣೆಕಟ್ಟುಗಳನ್ನು ಕಟ್ಟಲಾಯಿತೋ, ಅಲ್ಲಿಗೆ ನೀರೂ ಹೋಗಿರಲಿಲ್ಲ; ಅವರ ಬವಣೆಯೂ ತೀರಿರಲಿಲ್ಲ. ಇಂತಹ ಹಲವು ಕಾರಣಗಳಿಂದ ಅಲ್ಲಿನ ಗ್ರಾಮೀಣ ಭಾಗ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿತು.
ಮುಂದಿನ ಚುನಾವಣೆಗಳಿರುವುದು ಛತ್ತೀಸ್‍ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ. ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಮಹಾರಾಷ್ಟ್ರಗಳು ಸೇರಿದಂತೆ ಇವಿಷ್ಟೂ ರಾಜ್ಯಗಳಲ್ಲಿ ಪಡೆದುಕೊಂಡ ಸೀಟುಗಳೇ ಮೋದಿಯವರನ್ನು ಪ್ರಧಾನಿಯಾಗಿಸಿದ್ದು. ಅಲ್ಲಿ ಬಿಜೆಪಿಯು ಎಷ್ಟು ಸೀಟುಗಳನ್ನು ಪಡೆದುಕೊಂಡಿತ್ತು ಎಂದು ನೋಡುವ ಮುನ್ನ ಉತ್ತರ ಪ್ರದೇಶದ ಈಚಿನ ಒಂದು ವಿದ್ಯಮಾನವನ್ನು ನೋಡೋಣ.
ಕೈರಾನಾ ಎಂಬ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಬಿಜೆಪಿ ಗೆದ್ದಿತ್ತು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಇತರ ಮತಗಳ ಧ್ರುವೀಕರಣ ಬಿಜೆಪಿಗೆ ಸಾಧ್ಯವಾಗಿದ್ದು ಮುಜಫ್ಫರ್‍ನಗರದ ಕೋಮುಗಲಭೆಯಿಂದ. ಈ ಕ್ಷೇತ್ರದ ಬಿಜೆಪಿ ಸಂಸದ ತೀರಿಕೊಂಡಿದ್ದರಿಂದ ಅಲ್ಲಿ ಉಪಚುನಾವಣೆ ನಡೆಯಿತು. ಮತ್ತೆ ಕೋಮು ಧ್ರುವೀಕರಣ ನಡೆಸಲು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಕಾಲದಿಂದಲೂ ಇದ್ದ ಜಿನ್ನಾ ಅವರ ಭಾವಚಿತ್ರದ ವಿಚಾರವನ್ನು ಬಿಜೆಪಿಯು ಬಳಸಿಕೊಂಡಿತು. ಮೇಲಾಗಿ ಈ ಸಾರಿ ಬಿಜೆಪಿಗೆದುರಾಗಿ ನಿಂತ ಮುಸ್ಲಿಂ ಮಹಿಳೆಯ ವಿರುದ್ಧವೂ ಸಾಕಷ್ಟು ಅಪಪ್ರಚಾರ ನಡೆಸಲಾಯಿತು. ಆಕೆ ಐಎಸ್‍ಐ ಏಜೆಂಟ್ ಇತ್ಯಾದಿ ಪೋಸ್ಟ್‍ಗಳನ್ನು ಯಥೇಚ್ಛವಾಗಿ ಹಾಕಲಾಯಿತು.
ಬಿಜೆಪಿಗೆದುರಾಗಿ ನಿಂತಿದ್ದು ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ತಬಸ್ಸುಮ್ ಹಸನ್. ಆಕೆ ವಾಸ್ತವದಲ್ಲಿ ಸಮಾಜವಾದಿ ಪಕ್ಷದ ಕುಟುಂಬದವರು. ಆಕೆಯ ಪತಿ ಎಸ್‍ಪಿಯಿಂದ ಎಂ.ಎಲ್.ಎ ಮತ್ತು ಎಂ.ಪಿ ಆಗಿದ್ದವರು. ಈ ಮುಸ್ಲಿಂ ಅಭ್ಯರ್ಥಿ ನಿಂತಿದ್ದು ಜಾಟ್ ಸಮುದಾಯದ ಪಕ್ಷವೆಂದು ಹೆಸರಾದ ಲೋಕದಳದಿಂದ. ಈಕೆಯ ಪತಿ ಇಲ್ಲಿನ ಕಬ್ಬು (ಹಿಂದಿಯಲ್ಲಿ ಗನ್ನಾ) ಬೆಳೆಗಾರರ ಪರವಾಗಿ ಕೆಲಸ ಮಾಡಿದ್ದವರು. ಇವೆಲ್ಲವೂ ಸೇರಿ ಕೈರಾನಾದಲ್ಲಿ ಬಿಜೆಪಿ ಸೋತಿತು.
ಅಂದರೆ, ಕಟು ಕೋಮು ಧ್ರುವೀಕರಣವನ್ನು ದಾಟಿ ಕೃಷಿ ಬಿಕ್ಕಟ್ಟಿನ ಸಮಸ್ಯೆಯ ಪರಿಹಾರ ಗ್ರಾಮೀಣ ಭಾರತಕ್ಕೆ ಮುಖ್ಯವಾಗಿದೆ. ಈ ಸದ್ಯ ಕೃಷಿ ಬಿಕ್ಕಟ್ಟು ಬಾಧಿಸುತ್ತಿರುವ, ರೈತ ಹೋರಾಟವೂ ಗರಿಗೆದರಿರುವ ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆದ್ದಿತ್ತು ಎಂಬುದನ್ನು ನೋಡೋಣ. ಮಧ್ಯಪ್ರದೇಶದ 29 ಸೀಟುಗಳಲ್ಲಿ 27, ಛತ್ತೀಸ್‍ಗಡದ 11 ಸೀಟುಗಳಲ್ಲಿ 10, ರಾಜಸ್ಥಾನದ 25 ಸೀಟುಗಳಲ್ಲಿ 25, ಮಹಾರಾಷ್ಟ್ರದ 42 ಸ್ಥಾನಗಳಲ್ಲಿ ಬಿಜೆಪಿ 18, ಶಿವಸೇನಾ 16 ಮತ್ತು ಅವರ ಇನ್ನೊಬ್ಬ ಎನ್‍ಡಿಎ ಸಂಬಂಧಿ 1 ಸೀಟು. ಈ ಒಂದು ಸೀಟು ಸ್ವಾಭಿಮಾನಿ ಷೇತ್ಕರಿ ಸಂಘಟನೆ (ರೈತ ಸಂಘಟನೆ)ಯ ರಾಜು ಶೆಟ್ಟಿಯವರದ್ದಾಗಿತ್ತು. ರಾಜು ಶೆಟ್ಟಿಯವರು ಈಗ ಎನ್‍ಡಿಎಯಿಂದ ಹೊರಬಂದಿದ್ದಾರೆ ಮತ್ತು ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯ ಭಾಗವಾಗಿದ್ದಾರೆ.
ಅಂದರೆ, ಇದು 2019ರಲ್ಲಿ ಬಿಜೆಪಿಗೆ ಇದು ತಲೆ ನೋವಾಗಲಿದೆ. ಹಾಗಾಗಿಯೇ ಈ ಸಾರಿಯ ಬಜೆಟ್‍ನಲ್ಲಿ ಮತ್ತೆ ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸಾದ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಖಾತರಿ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತು. ಆ ನಿಟ್ಟಿನಲ್ಲಿ ಈವರೆಗೂ ಏನೂ ಆಗಿಲ್ಲ ಎಂಬುದು ಮಾತ್ರ ವಾಸ್ತವ.
ಈ ಮಧ್ಯೆ, ದೇಶದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಆಂದೋಲನದ ಬಗ್ಗೆ ಕೇಳಲಾದ ಪ್ರಶ್ನೆಗೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್, ಇದು ಪ್ರಚಾರಕ್ಕಾಗಿ ಮಾಡುತ್ತಿರುವುದು ಮತ್ತು ಈ ಸಂಘಟನೆಗಳಲ್ಲಿ ಕೆಲವು ಸಾವಿರ ಸದಸ್ಯರಿರಬಹುದು ಅಷ್ಟೇ ಎಂದಿದ್ದಾರೆ. ಕಡಿಮೆ ಸಂಖ್ಯೆಯ ಸದಸ್ಯರಿರುವ ಸಂಘಟನೆಗಳೇ ಮೂವತ್ತು ಸಾವಿರಕ್ಕೂ ಹೆಚ್ಚು ರೈತರನ್ನು ಒಟ್ಟುಗೂಡಿಸಿ ನೂರಾರು ಕಿ.ಮೀ. ದೂರದ ಜಾಥಾ ಮಾಡಿದ್ದು ಎಂಬುದನ್ನು ಅವರು ಮರೆತಂತಿದೆ.
ಇವೆಲ್ಲಾ ಕಾರಣಗಳಿಂದ, ದೇಶದ ಗ್ರಾಮೀಣ ಭಾಗವು 2019ರ ಚುನಾವಣೆಗೆ ಮುಂಚೆ ವಿಶೇಷ ಮಹತ್ವವನ್ನು ಪಡೆದುಕೊಳ್ಳಲಿದೆ. ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿಯ ನೇತಾರರಲ್ಲೊಬ್ಬರಾದ ಯೋಗೇಂದ್ರ ಯಾದವ್‍ರ ಪ್ರಕಾರ ಜವಾನ್ ಮತ್ತು ಕಿಸಾನ್ ಮುಂದಿನ ದಿನಗಳ ದೇಶದ ದಿಕ್ಕನ್ನು ನಿರ್ಧರಿಸುತ್ತಾರೆ. ಇಲ್ಲಿ ಜವಾನ್ ಎಂದರೆ ಸೈನಿಕರಲ್ಲ; ಯುವಜನರು. ಕಿಸಾನ್, ರೈತರು. ಯುವಜನರು ಮತ್ತು ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು ಎಂಬುದು ಮುಂದಿನ ಚುನಾವಣೆಗಳ ದಿಕ್ಕನ್ನೂ ಬದಲಿಸುತ್ತದೆ.

– ಡಾ.ವಾಸು ಎಚ್.ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...