ಭಾರತೀಯ ಜನತಾ ಪಕ್ಷವು ಅಮರಾವತಿ ಮುನ್ಸಿಪಲ್ ಕಾರ್ಪೊರೇಶನ್ನಿಂದ 2019 -2020 ರ ಆರ್ಥಿಕ ವರ್ಷದಲ್ಲಿ 4.80 ಲಕ್ಷ ರೂ. ದೇಣಿಗೆ ಪಡೆದಿದ್ದಾಗಿ ಘೋಷಿಸಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಬುಧವಾರ ವರದಿಯಲ್ಲಿ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
“ಈ ದೇಣಿಗೆಯ ಬಗ್ಗೆ ಪಕ್ಷವು ವಿಳಾಸ, ಬ್ಯಾಂಕ್ ಹೆಸರು, ಪ್ಯಾನ್ ಸೇರಿದಂತೆ ಇತರ ವಿವರಗಳನ್ನು ಬಿಜೆಪಿ ಒದಗಿಸಿಲ್ಲ” ಎಂದು ADR ಹೇಳಿದೆ.
ಇದನ್ನೂ ಓದಿ: ‘ನನಗೆ ಪಕ್ಷ ಮಾಡುತ್ತಿರುವ ದೊಡ್ಡ ಅವಮಾನವಿದು’ – ಹಿರಿಯೂರು ಬಿಜೆಪಿ ಶಾಸಕಿ
“ಅವರ ವೆಬ್ಸೈಟ್ನಲ್ಲಿ ದಾನಿಯು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಎಂದು ಹೇಳಿದೆ. ಈ ಸಂಸ್ಥೆ ಅಮರಾವತಿ ಮುನ್ಸಿಪಲ್ ಕಾರ್ಪೊರೇಶನ್ ಆಗಿದ್ದು, ಅಲ್ಲಿಯ ಮೇಯರ್ ಮತ್ತು ಉಪ ಮೇಯರ್ ಬಿಜೆಪಿಯವರಾಗಿದ್ದಾರೆ. ಸರ್ಕಾರಿ ಸಂಸ್ಥೆಯೊಂದು ರಾಜಕೀಯ ಪಕ್ಷವೊಂದಕ್ಕೆ ಕೊಡುಗೆ ನೀಡುವುದು ಕಾನೂನಾತ್ಮಕವಾಗಿ ಸರಿಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ADR ತಿಳಿಸಿದೆ.
ಬಿಜೆಪಿ ತನ್ನ ಘೋಷಣೆಯಲ್ಲಿ ಕನಿಷ್ಠ ಮೂರು ದಾನಿಗಳಿಂದ 1.516 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಪಡೆಯಲಾಗಿದೆ ಎಂದು ಹೇಳಿದೆ. “ಈ ಮೂರು ದೇಣಿಗೆಗಳು ಬಿಹಾರದ ಝಂಜಾರಪುರದಿಂದ ನೀಡಲಾಗಿದ್ದು, ಒಂದೊಂದು ಭೂಮಿಯು ರೂ. 36.80 ಲಕ್ಷ, ರೂ. 50 ಲಕ್ಷ ಮತ್ತು ರೂ. 64.88 ಲಕ್ಷ ಮೌಲ್ಯದ್ದಾಗಿದೆ” ಎಂದು ADR ವರದಿ ಹೇಳಿದೆ.
ಆದರೆ ಬಿಜೆಪಿ ತನಗೆ ದೇಣಿಗೆ ಅಥವಾ ಭೂಮಿ ನೀಡಿದ ದಾನಿಗಳ ವಿಳಾಸ, ಪ್ಯಾನ್ ಕಾರ್ಡ್ ಮಾಹಿತಿಯನ್ನು ಒದಗಿಸಿಲ್ಲ. ಮಾತ್ರವಲ್ಲದೆ, ತಾವು ಪಡೆದ ಭೂಮಿಯು ಕೃಷಿಭೂಮಿಯೇ ಅಥವಾ ವಾಣಿಜ್ಯ ಭೂಮಿಯೇ ಎಂಬುದನ್ನೂ ಕೂಡ ಬಹಿರಂಗಪಡಿಸಿಲ್ಲ ಎಂದು ಅದು ಹೇಳಿದೆ.
ಇದನ್ನೂ ಓದಿ: ಅಗತ್ಯಬಿದ್ದರೆ ಶಿವಸೇನಾ ಭವನ ಕೆಡವುತ್ತೇವೆ: ಕೋಲಾಹಲವೆಬ್ಬಿಸಿದ ಬಿಜೆಪಿ ಶಾಸಕನ ಹೇಳಿಕೆ
ಮಹಾರಾಷ್ಟ್ರದ ಪ್ರವಾಹ ಪರಿಹಾರಕ್ಕಾಗಿ ಅಮರಾವತಿ ಮುನ್ಸಿಪಲ್ ಕಾರ್ಪೊರೇಶನ್ನಿಂದ ಹಣ ಪಡೆಯಲಾಗಿದೆ. ಈ ಹಣವು ಅಲ್ಲಿನ ಕಾರ್ಪೊರೇಟರ್ಗಳು ಸ್ವಯಂಪ್ರೇರಿತರಾಗಿ ತಮ್ಮ ಸಂಬಳದಿಂದ ನೀಡಿರುವ ಕೊಡುಗೆಯಾಗಿದೆ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಕಾರ್ಪೊರೇಟರ್ಗಳು ಮುನ್ಸಿಪಲ್ ಕಾರ್ಪೊರೇಶನ್ಗೆ ತಮ್ಮ ಸಂಬಳದ ಒಂದು ಭಾಗವನ್ನು ಕಡಿತಗೊಳಿಸಿ, ಅದನ್ನು ಒಟ್ಟಾಗಿ ಅವರ ಪರವಾಗಿ ಬಿಜೆಪಿಗೆ ವರ್ಗಾಯಿಸಲು ವಿನಂತಿಸಿದ್ದರು” ಎಂದು ಅವರು ಹೇಳಿದ್ದಾರೆ.
“ಈ ಮೊತ್ತವು 4,80,000 ರೂ. ಆಗಿದ್ದು, ಕಾರ್ಪೋರೇಟರ್ಗಳಿಂದ ರೂ. 20,000 ಕ್ಕಿಂತ ಕಡಿಮೆ ಸಂಗ್ರಹಿಸಲಾಗಿದೆ. ಅದನ್ನು ಅಮರಾವತಿ ಮುನ್ಸಿಪಲ್ ಕಾರ್ಪೊರೇಶನ್ನಿಂದ ನೇರವಾಗಿ ಪಕ್ಷಕ್ಕೆ ವರ್ಗಾವಣೆ ಮಾಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಜನರಿಗೆ ಹೆಚ್ಚು ‘ಬೀಫ್’ ತಿನ್ನುವಂತೆ ಹೇಳಿದ ಮೇಘಾಲಯದ ಬಿಜೆಪಿ ಸಚಿವ!