ದೆಹಲಿಯಲ್ಲಿ ಪ್ರಸ್ತುತ ಸೋಂಕಿನ ದ್ವಿಗುಣ ದರವನ್ನು ಆಧರಿಸಿ ದೆಹಲಿಯಲ್ಲಿ ಜುಲೈ 31 ರೊಳಗೆ 5.5 ಲಕ್ಷ ಕೊರೊನಾ ವೈರಸ್ ಪ್ರಕರಣಗಳು ಇರಲಿವೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ದೆಹಲಿ ನಿವಾಸಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸುವ ದೆಹಲಿ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಒಂದು ದಿನದ ನಂತರ ಈ ವಿಷಯವನ್ನು ಸಿಸೋಡಿಯಾ ಹೇಳಿದ್ದಾರೆ.
ದೆಹಲಿಯಲ್ಲಿ ಈಗ ಪ್ರತಿ 12-13 ದಿನಗಳಿಗೊಮ್ಮೆ ಕೊರೊನಾ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ ಎಂದು ಸಿಸೋಡಿಯಾ ಅವರು ಇಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಉನ್ನತ ಕೇಂದ್ರ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಹೇಳಿದರು.
ಜುಲೈ 31 ರೊಳಗೆ ದೆಹಲಿಯಲ್ಲಿ 5.5 ಲಕ್ಷ ಕೊರೊನಾ ಪ್ರಕರಣಗಳು ನಿರೀಕ್ಷಿಸಲಾಗಿದೆ. ಆ ಹೊತ್ತಿಗೆ ನಮಗೆ 80,000 ಹಾಸಿಗೆಗಳು ಬೇಕಾಗುತ್ತವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ದೆಹಲಿ ಸರ್ಕಾರದ ಅಂದಾಜಿನ ಪ್ರಕಾರ, ಜೂನ್ 15 ರೊಳಗೆ 44,000 ಪ್ರಕರಣಗಳು, ಜೂನ್ 30 ರೊಳಗೆ ಒಂದು ಲಕ್ಷ ಪ್ರಕರಣಗಳು ಮತ್ತು ಜುಲೈ 15 ರೊಳಗೆ 2.25 ಲಕ್ಷ ಪ್ರಕರಣಗಳು ದಾಖಲಾಗಲಿವೆ ಎಂದಿದ್ದಾರೆ.
ನಗರದ ನಿವಾಸಿಗಳಿಗೆ ಕೇಂದ್ರವು ನಡೆಸುತ್ತಿರುವ ಆಸ್ಪತ್ರೆಗಳನ್ನು ಹೊರತುಪಡಿಸಿ ಆಸ್ಪತ್ರೆಗಳನ್ನು ಕಾಯ್ದಿರಿಸುವ ದೆಹಲಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿರುವುದನ್ನು ಮರುಪರಿಶೀಲಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಒತ್ತಾಯಿಸಿದ್ದೇನೆ ಎಂದು ಸಿಸೋಡಿಯಾ ಹೇಳಿದರು.
ಆದರೆ ಬೈಜಾಲ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ನಿರಾಕರಿಸಿದರಲ್ಲದೆ ಹಾಗೂ ಅದನ್ನು ಸಭೆಯಲ್ಲಿ ಮಾತನಾಡಲು ನಿರಾಕರಿಸಿದರು ಎಂದು ಅವರು ತಿಳಿಸಿದರು.
ದೆಹಲಿಯ ಎಲ್ಲಾ ಹಾಸಿಗೆಗಳಲ್ಲಿ ಶೇಕಡಾ 50 ರಷ್ಟು ಸಾಮಾನ್ಯವಾಗಿ ಹೊರಗಿನಿಂದ ಚಿಕಿತ್ಸೆಗಾಗಿ ಬಂದವರು ದಾಖಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಅಧಿಕಾರಿಗಳ ಪ್ರಕಾರ ದೆಹಲಿಯಲ್ಲಿ ಸೋಂಕು ಸಮುದಾಯ ಪ್ರಸರಣ ಹಂತದಲ್ಲಿಲ್ಲ ಎಂದು ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದರು. ಆದರೆ ದೆಹಲಿ ಆರೋಗ್ಯ ಸಚಿವ, ರಾಜ್ಯದ ಅರ್ಧದಷ್ಟು ವೈರಸ್ ಪ್ರಕರಣಗಳ ಮೂಲವನ್ನು ಕಂಡು ಹಿಡಿಯಲಾಗಿಲ್ಲ ಎಂದು ಹೇಳಿದ್ದಾರೆ.
ಓದಿ: ಸಚಿವ ಸದಾನಂದ ಗೌಡರು ದೆಹಲಿಯಿಂದ ಬಂದಿಳಿದರೂ ಕ್ವಾರಂಟೈನ್ಗೆ ಒಳಗಾಗಿಲ್ಲ ಯಾಕೆ?